ETV Bharat / state

ಗಣೇಶ ಚತುರ್ಥಿ ಅದ್ಧೂರಿಯಾಗಿ ಆಚರಿಸಲು ಭರದ ಸಿದ್ಧತೆ: ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಹೂವು, ಹಣ್ಣು, ತರಕಾರಿಗಳು..

author img

By ETV Bharat Karnataka Team

Published : Sep 17, 2023, 8:36 PM IST

flowers-and-vegetables-at-affordable-prices-for-customers-in-ganesh-chaturthi-bengaluru
ಗಣೇಶ ಚತುರ್ಥಿಯನ್ನು ಅದ್ದೂರಿಯಾಗಿ ಆಚರಿಸಲು ಭರದ ಸಿದ್ಧತೆ: ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಹೂವು, ಹಣ್ಣು, ತರಕಾರಿಗಳು..

ಗೌರಿ ಹಾಗೂ ಗಣೇಶ ಚತುರ್ಥಿ ಆಚರಣೆಗೆ ಬೆಂಗಳೂರು ನಗರ ಸಜ್ಜಾಗಿದ್ದು, ಈ ಬಾರಿ ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಹಾಗೂ ತರಕಾರಿಗಳು ನಗರದ ವಿವಿಧ ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಗೆ ಗ್ರಾಹಕರಿಗೆ ಸಿಗುತ್ತಿವೆ.

ಬೆಂಗಳೂರು: ನಾಳೆ ಗೌರಿ ಹಾಗೂ ಗಣೇಶ ಚತುರ್ಥಿಯನ್ನು ನಗರದಲ್ಲಿ ಅದ್ಧೂರಿಯಾಗಿ ಆಚರಿಸಲು ನಾಗರಿಕರು, ಗಣೇಶ ಮೂರ್ತಿ ಪ್ರತಿಷ್ಠಾಪಕರು ಸಿದ್ಧತೆ ನಡೆಸಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೂವು, ಹಣ್ಣು ಹಾಗೂ ತರಕಾರಿ ಬೆಲೆ ಕಡಿಮೆ ಇದೆ. ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರು ಕೆಜಿಗಟ್ಟಲೆ ಹೂವು ಹಣ್ಣುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬರುತ್ತಿವೆ. ಹಬ್ಬದ ನಿಮಿತ್ತ ನಗರದ ಕೆಆರ್ ಮಾರುಕಟ್ಟೆ, ಮಲ್ಲೇಶ್ವರ, ಬಸವನಗುಡಿ, ಜಯನಗರ ಸೇರಿದಂತೆ ಇತರೆ ಮಾರುಕಟ್ಟೆಯಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಜನದಟ್ಟಣೆ ಇದೆ. ಗೌರಿ, ಗಣೇಶನ ಮೂರ್ತಿಗಳ ಖರೀದಿ ಜೊತೆಗೆ ಹಬ್ಬಕ್ಕೆ ಬೇಕಾದ ಪದಾರ್ಥಗಳನ್ನು ಜನ ಖರೀದಿಸುತ್ತಿದ್ದಾರೆ.

Flowers  and Vegetables at  affordable prices for customers in  Ganesh Chaturthi bengaluru
ತರಕಾರಿ ಕೊಳ್ಳುತ್ತಿರುವ ಗ್ರಾಹಕರು

ಸಾಮಾನ್ಯವಾಗಿ ಹಬ್ಬದ ಸಂದರ್ಭಗಳಲ್ಲಿ ಎಲ್ಲೆಡೆ ಹೂವು-ಹಣ್ಣುಗಳ ಬೆಲೆ ಗಗನಕ್ಕೇರುತ್ತಿತ್ತು. ಆದರೆ, ಈ ಬಾರಿ ಸರಿಯಾದ ಸಮಯಕ್ಕೆ ಮಳೆ ಬರದೆ, ಫಸಲು ತಡವಾಗಿ ಬಂದ ಕಾರಣ ದರದಲ್ಲಿ ಭಾರಿ ಕುಸಿತ ಕಂಡಿದೆ. ಒಂದು ಕೆಜಿ ಸೇವಂತಿಗೆ ನೂರಾರು ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈಗ ಕೇವಲ 40 ರಿಂದ 50 ರೂ.ಗೆ ದೊರೆಯುತ್ತಿದೆ.

Flowers  and Vegetables at  affordable prices for customers in  Ganesh Chaturthi bengaluru
ಬಗೆಬಗೆ ಹೂಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರು

ಕೆಆರ್ ಮಾರುಕಟ್ಟೆಯ ಸಗಟು ಹೂವು ಮಾರಾಟಗಾರರ ಸಂಘದ ಅಧ್ಯಕ್ಷ ಜಿ ಎಂ ದಿವಾಕರ್ ಮಾತನಾಡಿ, ಈ ಬಾರಿ ಬಹುತೇಕ ರೈತರು ವರಮಹಾಲಕ್ಷ್ಮೀ ಹಬ್ಬದ ದೃಷ್ಟಿ ಇಟ್ಟುಕೊಂಡು ಹೂ ಬೆಳೆದಿದ್ದರು. ಮಳೆ ಇಲ್ಲದ ಕಾರಣ ಸರಿಯಾದ ಫಸಲು ಬರಲಿಲ್ಲ. ವಾರದಿಂದಲೂ ಎಲ್ಲೆಡೆ ಮಳೆಯಾದ ಕಾರಣ ನಿರೀಕ್ಷೆಗೂ ಮೀರಿ ಹೂ ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಬ್ಬದಲ್ಲಿ ಹೂ ಇಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವುದಕ್ಕೆ ಬೆಳೆಗಾರರಿಗೆ ಭಾರೀ ನಷ್ಟ ಉಂಟು ಮಾಡಿದೆ. ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂವು ಹೆಚ್ಚು ಬಾರದಿರುವ ಕಾರಣ ಅದರ ಬೆಲೆ ತುಸು ಜಾಸ್ತಿ ಇದೆ. ಕೆ.ಜಿ. ಮಲ್ಲಿಗೆಗೆ 800ರಿಂದ 1000ರೂ. ಇದ್ದು, ಸಂಜೆ ಅಥವಾ ನಾಳೆ ಹಬ್ಬದ ದಿನ 1,200ರಿಂದ 1,400ರೂ.ಗೆ ಏರುವ ಸಾಧ್ಯತೆ ಇದೆ ಎಂದು ತಿಳಿಸಿದರು.

Flowers  and Vegetables at  affordable prices for customers in  Ganesh Chaturthi bengaluru
ಗಣೇಶ ಮೂರ್ತಿಗಳ ಮಾರಾಟ

ಹೂವುಗಳ ದರ (ಪ್ರತಿ ಕೆಜಿಗೆ):
ಸೇವಂತಿಗೆ 50 ರಿಂದ 60 ರೂ.
ಚೆಂಡು ಹೂ 30 ರೂ.
ಮಲ್ಲಿಗೆ 800 ರಿಂದ 1000 ರೂ.
ಸುಗಂಧರಾಜ 300 ರೂ.
ಕನಕಾಂಬರ 700 ರೂ.

ಹಣ್ಣುಗಳ ಬೆಲೆ(ಪ್ರತಿ ಕೆಜಿಗೆ):
ಏಲಕ್ಕಿ ಬಾಳೆಹಣ್ಣು 90 ರಿಂದ 110 ರೂ.
ಮೂಸಂಬಿ 70 ರೂ.
ದಾಳಿಂಬೆ 150 ರೂ.
ಸೇಬು 120 ರಿಂದ 150 ರೂ.
ಸೀಬೆ ಹಣ್ಣು 50 ರೂ.

ಹಬ್ಬಕ್ಕೆ ಬೆಂಗಳೂರು ನಗರ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ: ರಾಜ್ಯಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಬೆಂಗಳೂರು ನಗರದಲ್ಲಿ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶ ಕೂರಿಸುವ ವಿಚಾರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕ್ರಮ ವಹಿಸಿದ್ದು, ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ನಗರ ಪೊಲೀಸ್ ಇಲಾಖೆ ಶನಿವಾರ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಈ ಮಾರ್ಗಸೂಚಿಯಲ್ಲಿ ಕಾರ್ಯಕ್ರಮದ ಆಯೋಜಕರು ಪಾಲಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಸ್ಥಳೀಯ ಪೊಲೀಸ್ ಠಾಣೆಯ ಅನುಮತಿ ಕಡ್ಡಾಯವಾಗಿದೆ.

ಇದನ್ನೂ ಓದಿ: ರಾಜಧಾನಿಯಲ್ಲಿ ಗಣೇಶ ಹಬ್ಬದ ತಯಾರಿ ಜೋರು: ನಿಮಜ್ಜನ ಸ್ಥಳಗಳಲ್ಲಿ ನುರಿತ ಈಜುಗಾರರನ್ನು ನಿಯೋಜಿಸುತ್ತಿರುವ ಪಾಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.