ETV Bharat / state

KPSCಯಲ್ಲಿನ ಸಮನ್ವಯತೆ ಸರಿಪಡಿಸಿ: ಸಿಎಂಗೆ ಪತ್ರ ಬರೆದ ಎಸ್‌.ಸುರೇಶ್ ಕುಮಾರ್

author img

By

Published : Jul 28, 2023, 1:32 PM IST

Updated : Jul 28, 2023, 9:19 PM IST

Suresh Kumar and Siddaramaiah
ಸುರೇಶ್​ ಕುಮಾರ್​ ಹಾಗೂ ಸಿದ್ದರಾಮಯ್ಯ

Suresh Kumar letter to CM: ಕೆಪಿಎಸ್​ಸಿ ಒಳಗಿನ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಜಿ ಸಚಿವ ಸುರೇಶ್ ಕುಮಾರ್​ ಪತ್ರ ಬರೆದು ಮನವಿ ಮಾಡಿದ್ದಾರೆ.

ಬೆಂಗಳೂರು: ಆಯೋಗ ಮತ್ತು ಕಾರ್ಯದರ್ಶಿಯ ನಡುವೆ ಸಮನ್ವಯ ಇಲ್ಲದೇ ಇರುವುದು ಕೆಪಿಎಸ್‌ಸಿಯ ದೊಡ್ಡ ಸಮಸ್ಯೆಯಾಗಿದ್ದು, ಪರಿಣಾಮಕಾರಿಯಾಗಿ ನೇಮಕಾತಿ ಪರೀಕ್ಷಾ ಫಲಿತಾಂಶ ಹೊರ ಬೀಳುತ್ತಿಲ್ಲ. ಇದರಿಂದ ಉದ್ಯೋಗಾಕಾಂಕ್ಷಿಗಳು ಹತಾಶರಾಗುತ್ತಿದ್ದಾರೆ. ಇವರೆಲ್ಲ ಇನ್ನಷ್ಟು ಹತಾಶ ಸ್ಥಿತಿಗೆ ಹೋಗುವ ಮುನ್ನ ತಾವು ಮಧ್ಯ ಪ್ರವೇಶಿಸಿ, ಕೆಪಿಎಸ್‌ಸಿಯ ಕಾರ್ಯವೈಖರಿ ಸಮನ್ವಯತೆಯಿಂದ ಕೂಡಿ ಚುರುಕಾಗಿ ನಡೆಯುವಂತೆ ಹಾಗೂ ವಿಶ್ವಾಸಾರ್ಹತೆ ಗಳಿಸುವಂತೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗ (KPSC) ರಾಜ್ಯ ಸರ್ಕಾರದ ಆಡಳಿತ ಯಂತ್ರದ ವಿವಿಧ ಕ್ಷೇತ್ರಗಳಿಗೆ ಅರ್ಹ, ಯೋಗ್ಯ, ದಕ್ಷ ಅಧಿಕಾರಿಗಳನ್ನು ಒದಗಿಸುವ ಮಹತ್ವ ಜವಾಬ್ದಾರಿವುಳ್ಳದ್ದಾಗಿದೆ. ಕೆಪಿಎಸ್‌ಸಿ ಯಾವಾಗಲೂ ನಕಾರಾತ್ಮಕ ಕಾರಣಗಳಿಂದಲೇ ಸುದ್ದಿಯಲ್ಲಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಆಯೋಗದ ವಿಳಂಬದಿಂದ ಕೂಡಿದ ಕಾರ್ಯವೈಖರಿಯಿಂದ ರಾಜ್ಯದ ಉದ್ಯೋಗಾಕಾಂಕ್ಷಿ ಯುವಕ-ಯುವತಿಯರು ಹತಾಶರಾಗಿದ್ದಾರೆ. ಉದ್ಯೋಗಕ್ಕೆ ಸೇರುವ ಮುನ್ನವೇ ಈ ಯುವ ಸಮೂಹ, ವ್ಯವಸ್ಥೆಯ ಕುರಿತು ಇಷ್ಟು ಸಿನಿಕರಾದರೆ ಮುಂದೆ ಬಹುಕಾಲ ಆಡಳಿತ ವ್ಯವಸ್ಥೆ ಕಾರ್ಯ ಮಾಡಬೇಕಾದ ಇವರಿಂದ ಏನು ಬಯಸಲು ಸಾಧ್ಯ ಎಂದು ಸಿಎಂಗೆ ಬರೆದಿರುವ ಪತ್ರದಲ್ಲಿ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.

S Suresh Kumar Letter
ಎಸ್​ ಸುರೇಶ್​ ಕುಮಾರ್​ ಪತ್ರ

ಈ ಕುರಿತು ನಾನು ಹಲವಾರು ಸಲ ವಿವಿಧ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಲೇ ಬಂದಿದ್ದೇನೆ. ಚರ್ಚೆಯೂ ಮಾಡಿದ್ದೇನೆ. ಹಲವು ಸಲ ಆಯೋಗದ ಮುಂದೆ ಧರಣಿ ಸತ್ಯಾಗ್ರಹ ಮಾಡಿದ್ದೇನೆ. ಹತ್ತಾರು ಸಲ ಕೆಪಿಎಸ್‌ಸಿ ಅಧ್ಯಕ್ಷರನ್ನು ಮತ್ತು ಕಾರ್ಯದರ್ಶಿಯವರನ್ನು ಈ ಯುವ ಸಮೂಹ ಪರವಾಗಿ ಭೇಟಿ ಮಾಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದೇನೆ, ಆದರೆ ಏನೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಪಿಎಸ್‌ಸಿಯ ಒಂದು ದೊಡ್ಡ ಸಮಸ್ಯೆ ಎಂದರೆ, ಆಯೋಗ ಮತ್ತು ಕಾರ್ಯದರ್ಶಿ ನಡುವೆ ಸಮನ್ವಯ ಇಲ್ಲದಿರುವುದು. ಈಗಿರುವ ಕಾರ್ಯದರ್ಶಿ ಚುರುಕಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದರೂ ಈ ಸಮನ್ವಯ ಕೊರತೆಯಿಂದ ಪರಿಣಾಮಕಾರಿ ಫಲಿತಾಂಶ ಹೊರ ಬೀಳುತ್ತಿಲ್ಲ. ಆಯೋಗಕ್ಕೆ ಹೋದ ಕಡತಗಳಿಗೆ ನಿಗದಿತ ಸಮಯದಲ್ಲಿ ಮುಕ್ತಿಯೂ ಸಿಗುತ್ತಿಲ್ಲ. ಇದರಿಂದ ನಿಜಕ್ಕೂ ಶ್ರಮವಹಿಸಿ ಅಧ್ಯಯನ ಮಾಡಿರುವ, ಆಡಳಿತ ವ್ಯವಸ್ಥೆಯ ಭಾಗವಾಗ ಬಯಸುತ್ತಿರುವ ಅನೇಕ ಯುವಕ-ಯುವತಿಯರಿಗೆ ಭ್ರಮನಿರಸನವಾಗುತ್ತಿದ್ದಾರೆ. ಯುವಕರು ಇನ್ನಷ್ಟು ಹತಾಶ ಸ್ಥಿತಿಗೆ ಹೋಗುವ ಮುನ್ನ ತಾವು ಮಧ್ಯ ಪ್ರವೇಶಿಸಿ, ಆಯೋಗದ ಕಾರ್ಯವೈಖರಿ ಸಮನ್ವಯತೆಯಿಂದ ಕೂಡಿ ಚುರುಕಾಗಿ ನಡೆಯುವಂತೆ ಹಾಗೂ ವಿಶ್ವಾಸಾರ್ಹತೆ ಗಳಿಸುವಂತೆ ಮಾಡಲು ತಮ್ಮನ್ನು ಕೋರುತ್ತೇನೆ ಎಂದು ಸುರೇಶ್ ಕುಮಾರ್ ಪತ್ರದ ಮೂಲಕ ಸಿಎಂಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: CM Siddaramaiah: ಬೇಕೆಂದೇ ದಾರಿ ತಪ್ಪಿಸುವ ಕೆಲಸ ಮಾಡ್ತಾರೆ, ಹುಷಾರಾಗಿರಿ: ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು

Last Updated :Jul 28, 2023, 9:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.