ETV Bharat / state

ಕೋವಿಡ್ ಮರಣ ನಿಖರವಾಗಿ ದಾಖಲಿಸಿ, ಪರೀಕ್ಷಾ ಪ್ರಮಾಣ ಹೆಚ್ಚಿಸಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ

author img

By

Published : May 16, 2021, 11:56 AM IST

EX CM  Siddaramaiah wrote letter to SM BSY
ಸಿಎಂಗೆ ಸಿದ್ದರಾಮಯ್ಯ ಆಗ್ರಹ

ಕೋವಿಡ್ ಪರೀಕ್ಷೆಯನ್ನು ಕಡಿಮೆ ಮಾಡಿ ಪ್ರಕರಣದ ಸಂಖ್ಯೆ ಇಳಿಸುವ ಮೂಲಕ ಸರ್ಕಾರ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂಗೆ ಪತ್ರ ಬರೆದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರು: ಕೊರೊನಾ ಪರೀಕ್ಷೆ ಮತ್ತು ಸೋಂಕಿತರ ಸಾವಿನ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ಪರೀಕ್ಷೆ ಪ್ರಮಾಣವನ್ನು ಕೂಡಲೇ ಹೆಚ್ಚಿಸಿ ಕೋವಿಡ್​ನಿಂದಾದ ಮರಣಗಳನ್ನು ನಿಖರವಾಗಿ ದಾಖಲಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಅವರು ಪತ್ರ ಬರೆದಿದ್ದು, ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ಎಂದು ಮಾತನಾಡುತ್ತಿದ್ದಾರೆ. ತಜ್ಞರ ಪ್ರಕಾರ ವೈರಸ್​ನ ಅಲೆ ಕಡಿಮೆಯಾಗುವುದೆಂದರೆ ಟೆಸ್ಟ್​ ನಡೆಸಿದಾಗ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆಯಾಗಬೇಕು. ವಾಸ್ತವದಲ್ಲಿ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುವುದರ ಬದಲು ಹೆಚ್ಚಾಗುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಳ್ಳಾರಿ, ಹಾಸನ, ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮುಂತಾದ ಜಿಲ್ಲೆಗಳ ಪಾಸಿಟಿವಿಟಿ ದರ ಶೇ. 50ಕ್ಕಿಂತ ಹೆಚ್ಚಿಗೆ ಇದೆ. ಇನ್ನುಳಿದ ಜಿಲ್ಲೆಗಳಲ್ಲೂ ಪಾಸಿಟಿವಿಟಿ ದರ ಶೇ. 35ರ ಆಸುಪಾಸಿನಲ್ಲೇ ಇದೆ. ಶೇ. 20ಕ್ಕಿಂತ ಕಡಿಮೆ ಇರುವ ಜಿಲ್ಲೆಗಳು ಒಂದೆರಡಷ್ಟೇ. ಹೀಗಿರುವಾಗ ಸೋಂಕು ಕಡಿಮೆಯಾಗುತ್ತಿದೆ ಎಂದರೆ ಸುಳ್ಳು ಹೇಳಲಾಗುತ್ತಿದೆ ಎಂದರ್ಥ ಎಂದಿದ್ದಾರೆ.

ಕಡಿಮೆಯಾದ ಟೆಸ್ಟ್​:

ಟೆಸ್ಟ್, ಸಾವು, ಚಿಕಿತ್ಸೆ ಎಲ್ಲದರಲ್ಲೂ ಸುಳ್ಳು ಹೇಳಲಾಗ್ತಿದೆ. ಟೆಸ್ಟ್​ ವಿಚಾರವನ್ನೇ ನೋಡಿದರೂ ಕೂಡ ಏಪ್ರಿಲ್ ತಿಂಗಳ ಕಡೆಯ ವಾರದಲ್ಲಿ ಪ್ರತಿದಿನ ಸರಾಸರಿ 1.75 ಲಕ್ಷ ಟೆಸ್ಟ್​ ಮಾಡಲಾಗುತ್ತಿತ್ತು. ಈಗ ಶೇ. 30ರಷ್ಟು ಕಡಿಮೆಯಾಗಿ ದಿನಕ್ಕೆ ಸರಾಸರಿ 1.15 ಲಕ್ಷದಿಂದ 1.24 ಲಕ್ಷಕ್ಕೆ ಇಳಿಕೆಯಾಗಿದೆ. ಮೇ 6, 2021ರಂದು 2,64,441 ಜನರಿಗೆ ಟೆಸ್ಟ್ ಮಾಡಲಾಗಿದ್ದರೆ, ಮೇ 11, 2021ರಂದು ಕೇವಲ 1,16, 238 ಜನರಿಗೆ ಟೆಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಲಸಿಕೆ ಹಾಕಿಸಿಕೊಳ್ಳಲು ಸಮರ್ಪಕ ವ್ಯವಸ್ಥೆ ಮಾಡದೆ, ಅಲ್ಲೂ ಕಿ.ಮೀ.ಗಟ್ಟಲೆ ಕ್ಯೂ ನಿಲ್ಲಿಸುವುದು, ಪಡಿತರ ಪಡೆಯಲು ಅಂಗಡಿಗಳ ಮುಂದೆ ಕ್ಯೂ ನಿಲ್ಲಿಸುವುದೂ ನಡೆಯುತ್ತಿದೆ. ಈ ರೀತಿಯ ಅವ್ಯವಸ್ಥೆಗಳಿಂದ ಕೊರೊನಾ ನಿಯಂತ್ರಿಸಲು ಸಾಧ್ಯವೇ? ಸರ್ಕಾರ ಈ ಎಲ್ಲ ತಪ್ಪುಗಳನ್ನು ಮುಚ್ಚಿಕೊಳ್ಳಲು ಟೆಸ್ಟ್​ ಕಡಿಮೆ ಮಾಡಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಲಸಿಕೆ ಕುರಿತ ಯೋಜನೆ ಏನು?

ಕೋವಿಡ್ ಲಸಿಕೆ ಹಾಕುವುದರ ವಿಚಾರದಲ್ಲೂ ಹೀಗೆ ಆಗಿದೆ. ಲಸಿಕೆಗಳ ಪೇಟೆಂಟನ್ನು ರದ್ದುಪಡಿಸಿ ಹೆಚ್ಚು ಕಂಪನಿಗಳಿಗೆ ಉತ್ಪಾದನೆ ಮಾಡಲು ಅವಕಾಶ ಮಾಡಿಕೊಡಿ ಎಂದು ಸುಮಾರು ದಿನಗಳಿಂದ ಒತ್ತಾಯಿಸುತ್ತಿದ್ದೆವು. ಈ ಕುರಿತು ನಾನು ಪ್ರಧಾನಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದೆ. ಇಷ್ಟೆಲ್ಲ ಮಾಡಿದ ಮೇಲೆ ಈಗ ನಿಧಾನಕ್ಕೆ ಸರ್ಕಾರದ ಅಧೀನದ ಮೂರು ಕಂಪನಿಗಳಿಗೆ ಕೋವ್ಯಾಕ್ಸಿನ್ ಲಸಿಕೆ ತಯಾರಿಸಲು ಅವಕಾಶ ನೀಡಲಾಗಿದೆ. ನನ್ನ ಪ್ರಕಾರ ಪ್ರತಿ ರಾಜ್ಯಕ್ಕೆ ಕನಿಷ್ಠ ಒಂದೊಂದು ಕಂಪನಿಗಳಿಗೆ ಉತ್ಪಾದನೆ ಮಾಡಲು ಅವಕಾಶ ನೀಡಬೇಕು. ಅಮೆರಿಕದಲ್ಲಿ ಈಗಾಗಲೇ 12 ವರ್ಷ ತುಂಬಿದ ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಕೊರೊನಾದ ಮೂರನೇ ಅಲೆಯಲ್ಲಿ ಹೆಚ್ಚು ಬಾಧಿತರಾಗುವವರು ಮಕ್ಕಳೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪೋಷಕರು ಹೆಚ್ಚು ಆತಂಕಕ್ಕೆ ಒಳಗಾಗುತ್ತಿದ್ದಾರೆ. ನಮ್ಮಲ್ಲೂ ಮುಂದಿನ ಎರಡು ಮೂರು ತಿಂಗಳಲ್ಲಿ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿ ಮುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಓದಿ : ರಾಜ್ಯಕ್ಕೆ 500 ಪ್ಲಾಸ್ಮಾ ಘಟಕ ದೇಣಿಗೆ ನೀಡಲು ಮುಂದಾದ ಝೆಕ್ ರಿಪಬ್ಲಿಕ್

“ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ’ ಎಂದು ಬುರುಡೆ ಬಿಟ್ಟು ಜನರನ್ನು ಯಾಮಾರಿಸಿದ ಮೋದಿಯವರ ಸರ್ಕಾರ ಮತ್ತು ಅವರ ಪಟಾಲಮ್ಮಿಗೆ ಬಹುಶಃ ಈಗಲಾದರೂ ಅರ್ಥವಾಗಬೇಕು. ಸರ್ಕಾರದ ಅಧೀನದಲ್ಲಿರುವ ಕಂಪನಿ, ಕಾರ್ಖಾನೆಗಳು ಮಾತ್ರ ಇಂತಹ ತುರ್ತು ಪರಿಸ್ಥಿತಿಯಲ್ಲಿ ದೇಶದ ರಕ್ಷಣೆಗೆ ನಿಲ್ಲುತ್ತವೆ ಎಂದು ಸಾರಾಸಗಟಾಗಿ ಸರ್ಕಾರದ ಅಧೀನದಲ್ಲಿದ್ದ ಕಾರ್ಖಾನೆ, ಕಂಪನಿ, ಸಂಸ್ಥೆಗಳನ್ನು ಕಾರ್ಪೋರೇಟ್ ಧಣಿಗಳಿಗೆ ಮಾರಾಟ ಮಾಡಿ ಅದರ ಮೂಲಕ ಜನರ ಸಂಪತ್ತನ್ನೆಲ್ಲ ದೋಚುವ ಭೀಕರ ಭ್ಟಷ್ಟಾಚಾರಕ್ಕೆ ಅವಕಾಶ ಕೊಡುವ ಕೇಂದ್ರ ಸರ್ಕಾರಕ್ಕೆ ಕೇವಲ ಒಬ್ಬನೇ ಒಬ್ಬ ವ್ಯಾಕ್ಸಿನ್ ತಯಾರಕನನ್ನು ನಿಯಂತ್ರಿಸಲಾಗದ ದುಸ್ಥಿತಿ ಬಂದೊದಗಿದೆ. ಸಾರ್ವಜನಿಕ ಕಂಪನಿಗಳನ್ನು ಯಾವ ಕಾರಣಕ್ಕೂ ಖಾಸಗಿಯವರಿಗೆ ನೀಡಬಾರದೆಂದು ಒತ್ತಾಯಿಸುವ ಠರಾವನ್ನು ಮಾಡಿ ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಾವು-ನೋವು: 2019ಕ್ಕೆ ಹೋಲಿಸಿದರೆ 2020ರ ಡಿಸೆಂಬರ್ 31ರವರೆಗೆ ಹೃದಯಾಘಾತದಿಂದ 38,583, ವಯಸ್ಸಿನ ಕಾರಣದಿಂದ 28,647, ಪ್ಯಾರಾಲಿಸಿಸ್​ನಿಂದ 4,262ಕ್ಕೂ ಹೆಚ್ಚು ಜನ ಮರಣ ಹೊಂದಿದ್ದಾರೆ. ಕೋವಿಡ್​ನಿಂದ ಮರಣ ಹೊಂದಿದವರು ಡಿಸೆಂಬರ್​ವರೆಗೆ 12,090 ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಮಾಹಿತಿಯ ಪ್ರಕಾರ 22,320. ಈ ನಾಲ್ಕು ಕಾಯಿಲೆಗಳಿಂದಲೇ 2019ಕ್ಕೆ ಹೋಲಿಸಿದರೆ 93,812ಕ್ಕೂ ಹೆಚ್ಚು ಜನ ಮರಣ ಹೊಂದಿದ್ದಾರೆ. ಇವೆಲ್ಲವೂ ಕೊರೊನಾ ಸಂಬಂಧಿತ ಸಾವುಗಳು ಎಂಬುದರಲ್ಲಿ ಯಾವ ಅನುಮಾನಗಳೂ ಉಳಿದಿಲ್ಲ. ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹೃದಯಾಘಾತದಿಂದ ಮರಣ ಹೊಂದುತ್ತಿರುವವರಲ್ಲಿ ಅರ್ಧಕ್ಕೂ ಹೆಚ್ಚು ಜನರಿಗೆ ಕೊರೊನಾ ಇರುವುದು ದೃಢಪಟ್ಟಿದೆ ಎಂದು ಇತ್ತೀಚೆಗೆ ಹೇಳಿದ್ದಾರೆ. ಇದೇ ಮಾತನ್ನೇ ನಾನು ಪದೇ ಪದೆ ಹೇಳುತ್ತಾ ಬಂದಿದ್ದೆ. ಸರ್ಕಾರ ನನ್ನ ಮಾತುಗಳಿಗೆ ಉತ್ತರಿಸುವ ಧೈರ್ಯವನ್ನು ಇದುವರೆಗೂ ಮಾಡಿಲ್ಲ ಎಂದಿದ್ದಾರೆ.

ಮರಣ ಪ್ರಮಾಣಪತ್ರ ಪ್ರಕಟಿಸಿ: ಇಷ್ಟೆಲ್ಲದರ ನಡುವೆ ಸರ್ಕಾರದಲ್ಲಿನ ಅನೇಕರು, ಬಿಜೆಪಿಯ ಮುಖಂಡರುಗಳು ಜಗತ್ತಿನ ದೇಶಗಳಿಗಿಂತ ನಮ್ಮಲ್ಲಿ ಕಡಿಮೆ ಸಾವುಗಳಾಗಿವೆ. ಇದು ಮೋದಿಯವರ ಸಾಧನೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಬಿಜೆಪಿಯು ಸುಳ್ಳು ಹೇಳುವುದಕ್ಕಾಗಿಯೇ ಸೋಷಿಯಲ್ ಮೀಡಿಯಾ ಎಂಬ ಕಾರ್ಖಾನೆಯನ್ನು ತೆರೆದು ಕೂತಿದೆ. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಧೈರ್ಯವಿದ್ದರೆ ಪ್ರತಿ ತಿಂಗಳು ಸಂಭವಿಸಿದ ಮರಣಗಳನ್ನು ಮತ್ತು ವಿತರಿಸಿದ ಮರಣ ಪ್ರಮಾಣಪತ್ರಗಳ ವಿವರಗಳನ್ನು ಪ್ರಕಟಿಸಬೇಕು. ಈ ಎಲ್ಲ ಅಂಶಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಟೆಸ್ಟ್​ ಹೆಚ್ಚಿಸಬೇಕು. ಗರಿಷ್ಠ 24 ಗಂಟೆಗಳ ಒಳಗೆ ಫಲಿತಾಂಶ ಸಿಗುವಂತೆ ಮಾಡಬೇಕು. ಮುಂಬೈ ಮಾದರಿಯಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕಿಸಿ ಆರೈಕೆ ಮಾಡಬೇಕು. ಮಕ್ಕಳಿಗೂ ಲಸಿಕೆ ಹಾಕಲು ಸಮರೋಪಾದಿಯಲ್ಲಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕು. ಕೋವಿಡ್​ನಿಂದಾದ ಮರಣಗಳನ್ನು ನಿಖರವಾಗಿ ದಾಖಲಿಸಿ, ಪ್ರತಿ ತಿಂಗಳು ನೀಡಿದ ಮರಣ ಪ್ರಮಾಣಗಳ ವಿವರಗಳ ಕುರಿತು ದಾಖಲೆ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.