ETV Bharat / state

ರಾಮಕೃಷ್ಣ ಹೆಗಡೆಗೆ ಪ್ರಧಾನಿ ಆಗಬೇಕಿತ್ತು, ಆ ಅರ್ಹತೆಯೂ ಅವರಿಗಿತ್ತು: ಸಿದ್ದರಾಮಯ್ಯ

author img

By

Published : Aug 30, 2022, 9:06 AM IST

ರಾಮಕೃಷ್ಣ ಹೆಗಡೆಗೆ
ರಾಮಕೃಷ್ಣ ಹೆಗಡೆಗೆ

ರಾಮಕೃಷ್ಣ ಹೆಗಡೆ ಜನ್ಮದಿನ ಕಾರ್ಯಕ್ರಮದಲ್ಲಿ ಹಳೆ ದಿನಗಳನ್ನು ಸಿದ್ದರಾಮಯ್ಯ ನೆನೆದು, ರಾಮಕೃಷ್ಣ ಹೆಗಡೆ ಅವರನ್ನು ಶ್ಲಾಘಿಸಿದರು.

ಬೆಂಗಳೂರು: ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಪ್ರಧಾನಿ ಆಗಬೇಕಿತ್ತು, ಅಷ್ಟೊಂದು ಬುದ್ಧಿ, ರಾಜಕೀಯ ಅನುಭವ, ಜನಪರ ಬಗ್ಗೆ ಕಾಳಜಿ ಇತ್ತು. ಎಲ್ಲ ಅನುಭವ, ಅರ್ಹತೆ ಇತ್ತು. ಆದರೆ, ಆಗಲಿಲ್ಲ, ನಮ್ಮ ನಮ್ಮ ಜಗಳದಿಂದ ಜನತಾದಳ ಹೋಯಿತು. ಇಲ್ಲದಿದ್ದಲ್ಲಿ ಬಹಳ ಕಾಲ ಇರುತ್ತಿತ್ತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯಿಂದ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ನಡೆದ ರಾಮಕೃಷ್ಣ ಹೆಗಡೆ ಅವರ 96ನೇ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ ಎಡಪಕ್ಷಗಳ ಜೊತೆ ರಾಜಕೀಯ ಮೈತ್ರಿ ಇತ್ತು, ಸಿಪಿಐ ಮತ್ತು ಸಿಪಿಐಎಂನಲ್ಲಿ ತಲಾ ಮೂರು ಜನ ಶಾಸಕರಿದ್ದರು.

ಸದನದಲ್ಲಿ ಎಡ - ಬಲ ಎಲ್ಲ ಇರಬೇಕು: ಆದರೆ, ಇಂದು ಒಬ್ಬರೂ ಇಲ್ಲ, ಎಡ ಪಕ್ಷದ ಶಾಸಕರೂ ಸದನದಲ್ಲಿ ಇರಬೇಕು. ಎಡ ಪಕ್ಷದವರು ಒಂದು ಸಿದ್ಧಾಂತಕ್ಕೆ ಕಟ್ಟು ಬಿದ್ದು ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಬದಲಾವಣೆ ತರಬೇಕು ಎನ್ನುವುದು ಸಂವಿಧಾನದ ಆಶಯ, ಇದೇ ಆಶಯ ಎಲ್ಲಾ ರಾಜಕೀಯ ಪಕ್ಷಗಳದ್ದೂ ಆಗಬೇಕು ಎಂದರು.

ನಮ್ಮ ಸಮಾಜದಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ಅಸಮಾನತೆ ಇದೆ. ಸಂವಿಧಾನದ ಮೂಲಕ ನಮಗೆಲ್ಲಾ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಎಲ್ಲರಿಗೂ ಮತದಾನ ಹಕ್ಕು ಸಿಕ್ಕಿದೆ, ಒಂದು ಮತ ಒಂದು ಮೌಲ್ಯ ವ್ಯವಸ್ಥೆ ಸಿಕ್ಕಿದೆ. ಆದರೆ, ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿಲ್ಲ, ಇದು ಸಿಕ್ಕಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದಕ್ಕೆ ಸಾರ್ಥಕ ಎಂದು ಅಂಬೇಡ್ಕರ್ ಹೇಳಿದ್ದರು.

ರಾಮಕೃಷ್ಣ ಹೆಗಡೆ ಪ್ರಜಾಪ್ರಭುತ್ವವಾದಿ ಆಗಿದ್ದರು: ಇಲ್ಲದೇ ಇದ್ದರೆ ಪ್ರಜಾಪ್ರಭುತ್ವ ಸೌಧವನ್ನೇ ನಾಶ ಮಾಡುವ ದಿನ ಬರಲಿದೆ ಎಂದಿದ್ದರು. ಇಂದು ಅಂತಹ ಸನ್ನಿವೇಶ ನಿರ್ಮಾಣ ಆಗುತ್ತಿದೆಯಾ ಎನ್ನುವ ಅನುಮಾನ ಕಾಡುತ್ತಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಹೆಗಡೆ ಅವರು ಸಂವಿಧಾನದ ಬಗ್ಗೆ ಅಪಾರ ಗೌರವ ಇರಿಸಿಕೊಂಡಿದ್ದರು, ನಿಜವಾದ ಪ್ರಜಾಪ್ರಭುತ್ವವಾದಿ ಆಗಿದ್ದರು.

ರಾಜಕಾರಣಿಯಾದವರು ಪ್ರಜಾಪ್ರಭುತ್ವವಾದಿ, ದೇಶದ ಸಂವಿವಿಧಾನಕ್ಕೆ ಗೌರವ ಕೊಡುವವರಾಗಬೇಕು, ಅಧಿಕಾರ ಸಿಕ್ಕಾಗ ಸಂವಿಧಾನಬದ್ಧ ಕೆಲಸ ಮಾಡುವ ಬದ್ಧತೆ ಎಲ್ಲರಿಗೂ ಇರಬೇಕು. ಈ ಬದ್ಧತೆ ಇದ್ದ ನಾಯಕರಲ್ಲಿ ಹೆಗಡೆ ಒಬ್ಬರು. ಹೆಗಡೆ ಅವರಿಗೆ ಸ್ವಾತಂತ್ರ್ಯದ ಬೆಲೆ ಗೊತ್ತಿತ್ತು. ಸ್ವಾತಂತ್ರ್ಯ, ಸಮಾನತ, ಭ್ರಾತೃತ್ವ ಎಲ್ಲರಿಗೂ ಸಿಗಬೇಕು ಎನ್ನುವ ಆಶಯ ಅಂಬೇಡ್ಕರ್ ಅವರದ್ದಾಗಿತ್ತು ಆದರೆ ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳಿಗೆ ಇಂದು ಧಕ್ಕೆ ಬಂದಿದೆ, ಪ್ರಜಾಪ್ರಭುತ್ವ, ಸಂವಿಧಾನ ಉಳಿದರೆ ನಾವೆಲ್ಲಾ ಉಳಿಯಲಿದ್ದೇವೆ, ಇಲ್ಲದೇ ಇದ್ದಲ್ಲಿ ನಾವು ಯಾರೂ ಉಳಿಯಲ್ಲ ಎಂದರು.

ಕೆಟ್ಟವರ ಕೈಯಲ್ಲಿ ಸಂವಿಧಾನ: ಹೆಗಡೆ, ನೆಹರೂ, ಗಾಂಧಿ, ಪಟೇಲ್ ಮಹಾನ್ ಪ್ರಜಾಪ್ರಭುತ್ವ ವಾದಿಯಾಗಿದ್ದರು. ಒಳ್ಳೆಯವರ ಕೈಯಲ್ಲಿದ್ದರೆ ಒಳ್ಳೆಯ ಸಂವಿಧಾನವಾಗಲಿದೆ. ಕೆಟ್ಟವರ ಕೈಯಲ್ಲಿದ್ದರೆ ಕೆಟ್ಟ ಸಂವಿಧಾನವಾಗಲಿದೆ ಎಂದು ಅಂಬೇಡ್ಕರ್ ಹೇಳಿದ್ದರು. ಇಂದ ದುರಾದೃಷ್ಟವಶಾತ್ ಕೆಟ್ಟವರ ಕೈಯಲ್ಲಿ ಸಂವಿಧಾನ ಸಿಲುಕಿಕೊಂಡಿದೆ, ರಾಜಕೀಯವಾಗಿ ನಾನು ಇದನ್ನು ಹೇಳುತ್ತಿಲ್ಲ, ಇಂದಿನ ರಾಜಕಾರಣದ ಸ್ಥಿತಿ ಎಲ್ಲರಿಗೂ ಗೊತ್ತಿದೆ ಎಂದು ಕೇಂದ್ರ ಸರ್ಕಾರವನ್ನು ಕುಟುಕಿದರು.

ಹೆಗಡೆ ಮೊದಲ ಬಾರಿ ಬಹಳ ಸರ್ಕಸ್ ಮಾಡಿ ಎರಡು ವರ್ಷ ಮುಖ್ಯಮಂತ್ರಿ ಆಗಿದ್ದರು. ಬಿಜೆಪಿ, ಎಡಪಕ್ಷ, ಪಕ್ಷೇತರರ ಬೆಂಬಲದ ಸರ್ಕಾರ ರಚಿಸಿದ್ದರು, ನಾವೆಲ್ಲಾ ಅಂದು ಅಲಯನ್ಸ್ ಮಾಡಿಕೊಂಡಿದ್ದೆವು, ಮೈತ್ರಿಯಡಿ ನಮಗೆ ಟಿಕೆಟ್ ಕೇಳಿದ್ದೆ. ಅದರಂತೆ ಹೆಗಡೆ ಬಿ ಫಾರಂ ಕೊಟ್ಟರು, ಆದರೆ, ನಮ್ಮ ಪಕ್ಷದ ಮುಖಂಡ ಗುರುಸ್ವಾಮಿ ಕೈಯಲ್ಲಿ ಖಾಲಿ ಬಿ ಫಾರಂ ಕೊಟ್ಟರು, ಗುರುಸ್ವಾಮಿ ಅವರಿಗೆ ಬೇಕಾದವರಿಗೆ ಟಿಕೆಟ್ ಕೊಟ್ಟರು. ಹಾಗಾಗಿ ನಾನು ಪಕ್ಷೇತರನಾಗಿ ನಿಲ್ಲಬೇಕಾಯಿತು.

ನಾನು ಗೆದ್ದ ನಂತರ ನೇರವಾಗಿ ರಾಜಭವನಕ್ಕೆ ಹೋಗಿ ಹೆಗಡೆ ಅವರಿಗೆ ಬೆಂಬಲ ನೀಡಿ ರಾಜ್ಯಪಾಲರಿಗೆ ಪತ್ರ ಕೊಟ್ಟಿದ್ದೆ, ನಂತರ ಹೆಗಡೆ ನನ್ನನ್ನು ಕರೆದು ಕನ್ನಡ ಕಾವಲು ಸಮಿತಿ ಅಧ್ಯಕ್ಷ ಸ್ಥಾನ ನೀಡಿದರು. ಪಕ್ಷೇತರನಾಗಿ ಗೆದ್ದಿದ್ದರೂ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದರು. ಮತ್ತೊಮ್ಮೆ ಕರೆದರು ಆಗ ನನ್ನನ್ನು ಕೇಳದೇ ಸಚಿವ ಸ್ಥಾನ ನೀಡಿ ರೇಷ್ಮೆ ಖಾತೆ ಕೊಟ್ಟರು. ನನ್ನಂತೆ ಅನೇಕರನ್ನು ತಮ್ಮ ಸಂಪುಟದಲ್ಲಿ ಸಚಿವರನ್ನಾಗಿ ಮಾಡಿಕೊಂಡಿದ್ದರು ಎಂದು ಸ್ಮರಿಸಿದರು.

ಪಂಚಾಯತ್ ರಾಜ್ ವ್ಯವಸ್ಥೆಗೆ ಹೊಸ ರೂಪ: ಹೆಗಡೆ ಅಧಿಕಾರ ವಿಕೇಂದ್ರೀಕರಣದಲ್ಲಿ ಬದ್ಧತೆ ಇದ್ದ ವ್ಯಕ್ತಿ, ಪಂಚಾಯತ್ ರಾಜ್ ವ್ಯವಸ್ಥೆಗೆ ಹೊಸ ರೂಪ ಕೊಡಬೇಕು, ನಿಜವಾದ ಅರ್ಥದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಬೇಕು ಎಂದು ಚರ್ಚಿಸಿದರು. ನಜೀರ್ ಸಾಬ್​​ರಿಗೆ ಗ್ರಾಮೀಣಾಭಿವೃದ್ಧಿ ಖಾತೆ ಕೊಟ್ಟರು, ವಿಕೇಂದ್ರೀಕರಣದ ಬಿಲ್ ಸಿದ್ಧಪಡಿಸಿದರು, ಈ ಬಿಲ್​ಗೆ ಕೇಂದ್ರ ಸರ್ಕಾರ ಒಪ್ಪಿರಲಿಲ್ಲ, ಧರಣಿ ಮಾಡುವ ಎಚ್ಚರಿಕೆ ನೀಡಿದ ನಂತರವೇ ಬಿಲ್​ಗೆ ಕೇಂದ್ರ ಒಪ್ಪಿತು. ಬಹಳ ಉತ್ತಮ ಕಾಯ್ದೆ ಅದಾಗಿತ್ತು.

ಮಂಡಲ್ ಪಂಚಾಯತ್, ಜಿಲ್ಲಾ ಪರಿಷತ್​ಗೆ ಅಧಿಕಾರ ಕೊಡಲು ಮುಖ್ಯಮಂತ್ರಿಗಳು ಸಮಾನ್ಯವಾಗಿ ಒಪ್ಪಲ್ಲ, ಆದರೆ ತಮ್ಮ ಬಳಿ ಇದ್ದ ಅಧಿಕಾರವನ್ನು ಮಂಡಲ್, ಜಿಲ್ಲಾ ಪಂಚಾಯತ್​​ಗೆ ವರ್ಗಾವಣೆ ಮಾಡಿದ್ದರು. ಜಿಪಂ ಅಧ್ಯಕ್ಷರಿಗೆ ಮಂತ್ರಿ ಸ್ಥಾನದ ಸ್ಥಾನಮಾನ ನೀಡಿದ್ದರು. ಇದನ್ನು ಜಾರಿಗೆ ತಂದವರು ಹೆಗಡೆ. ಬಳಿಕ 1984 ರಲ್ಲಿ ಲೋಕಸಭೆ ಚುನಾವಣೆ ನಡೆಯಿತು, ನಾವು ನಾಲ್ಕು ಸ್ಥಾನ ಗೆದ್ದೆವು, ಆದರೂ ಹೆಗಡೆ ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋದರು, ಸಂಸತ್ ಚುನಾವಣೆಯಲ್ಲಿ ಸೋತಿದ್ದಕ್ಕೆ ಜನರ ಬಳಿ ಹೋಗಿ ಮತ್ತೆ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದೆವು. ಎರಡು ವರ್ಷ ಅವರು ಮಾಡಿದ್ದ ಜನಪರ ಕೆಲಸ ಅವರನ್ನು ಮತ್ತೆ ಅಧಿಕಾರಕ್ಕೆ ತಂದಿತು, ಹೆಗಡೆ ಜನಪ್ರಿಯತೆಯಿಂದಾಗಿಯೇ ಜನತಾಪರಿವಾರ ಅಧಿಕಾರಕ್ಕೆ ಬಂತು ಎಂದರು.

ನಮ್ಮ ನಮ್ಮ ಜಗಳದಿಂದ ದಳ ಹೋಳು: ನಮ್ಮ ನಮ್ಮ ಜಗಳದಿಂದ ಜನತಾದಳ ಹೋಯಿತು. ಇಲ್ಲದಿದ್ದಲ್ಲಿ ಬಹಳ ಕಾಲ ಇರುತ್ತಿತ್ತು, ಹೆಗಡೆ ಮುತ್ಸದ್ದಿ ರಾಜಕಾರಣಿ, ಪ್ರಾಮಾಣಿಕ ವ್ಯಕ್ತಿ, ರಾಜಕಾರಣದಲ್ಲಿ ಅಂದು ಇಂದಿನ ರಾಜಕಾರಣಿಗಳಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು.

(ಇದನ್ನೂ ಓದಿ: ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಟಾಪ್ 5 ಹಣಕಾಸು ಸಚಿವರು/ಸಿಎಂಗಳು ಯಾರು?)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.