ETV Bharat / state

ಮತ ಪ್ರಚಾರದಲ್ಲಿ ದಿವ್ಯಾಂಗರಿಗೆ ಧಕ್ಕೆ ತರುವ ಭಾಷೆ ಬಳಸುವಂತಿಲ್ಲ: ಚುನಾವಣಾ ಆಯೋಗ

author img

By ETV Bharat Karnataka Team

Published : Dec 21, 2023, 9:45 PM IST

ಚುನಾವಣಾ ಆಯೋಗ
ಚುನಾವಣಾ ಆಯೋಗ

ರಾಜಕೀಯ ಪಕ್ಷಗಳ ಮುಖಂಡರು ಮತ ಪ್ರಚಾರದಲ್ಲಿ ದಿವ್ಯಾಂಗರಿಗೆ ಧಕ್ಕೆ ತರುವಂತಹ ಭಾಷೆ ಬಳಸುವಂತಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.

ಬೆಂಗಳೂರು: ಪ್ರಜಾಪ್ರಭುತ್ವದ ತಳಹದಿಯಾದ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯವಿದ್ದು, ಅದರಂತೆ ದಿವ್ಯಾಂಗರಿಗೂ ಸಮಾನ ಭಾಗವಹಿಸುವಿಕೆಯನ್ನು ಭಾರತೀಯ ಚುನಾವಣಾ ಆಯೋಗ ಪ್ರೋತ್ಸಾಹಿಸುತ್ತದೆ. ಈ ನಿಟ್ಟಿನಲ್ಲಿ ಯಾವುದೇ ರಾಜಕೀಯ ಪಕ್ಷಗಳ ಸದಸ್ಯರು ಅಥವಾ ಅವರ ಅಭ್ಯರ್ಥಿಗಳು ಭಾಷಣ, ಪ್ರಚಾರದಲ್ಲಿ ದಿವ್ಯಾಂಗರಿಗೆ ಧಕ್ಕೆ ತರುವಂತಹ ಭಾಷೆ ಬಳಸುವಂತಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಮಾರ್ಗಸೂಚಿ ಹೊರಡಿಸಿದೆ.

ಯಾವುದೇ ರಾಜಕೀಯ ಪಕ್ಷಗಳ ಸದಸ್ಯರು ಅಥವಾ ಅವರ ಅಭ್ಯರ್ಥಿಗಳು ಭಾಷಣ, ಪ್ರಚಾರದಲ್ಲಿ ದಿವ್ಯಾಂಗರಿಗೆ ಧಕ್ಕೆ ತರುವಂತಹ ಭಾಷೆಯನ್ನು ಬಳಸುವಂತಿಲ್ಲ. ಉದಾಹರಣೆಗೆ ಮೂಕ (ಗುಂಗಾ), ರಿಟಾರ್ಡೆಡ್ (ಪಾಗಲ್, ಸಿರ್ಫಿರಾ), ಕುರುಡು (ಅಂಧ, ಕನಾ), ಕಿವುಡ (ಬೆಹ್ರಾ), ಕುಂಟ (ಲಂಗ್ಡಾ, ಲೂಲಾ, ಅಪಹಿಜ್) ಮುಂತಾದ ಪದಗಳ ಬಳಕೆ ಮಾಡುವಂತಿಲ್ಲ.

ಪಕ್ಷಗಳು ಮತ್ತು ಅವರ ಪ್ರತಿನಿಧಿಗಳು ತಮ್ಮ ಬರಹಗಳು, ಲೇಖನಗಳು ಸೇರಿದಂತೆ ಪ್ರಚಾರದ ಸಂದರ್ಭಗಳಲ್ಲಿ ಅಥವಾ ರಾಜಕೀಯ ಪ್ರಚಾರದಲ್ಲಿ ಯಾವುದೇ ಸಾರ್ವಜನಿಕ ಹೇಳಿಕೆ, ಭಾಷಣದ ಸಮಯದಲ್ಲಿ ದಿವ್ಯಾಂಗರ ಅಂಗವೈಕಲ್ಯ ಅಥವಾ ಅಂಗವಿಕಲತೆಯನ್ನು ಆಡಿಕೊಳ್ಳುವ, ಅವಹೇಳನಕಾರಿ, ಅವಮಾನಕರ ಪದಗಳನ್ನು ಬಳಸಬಾರದು. ರಾಜಕೀಯ ಪಕ್ಷಗಳು ಮತ್ತು ಪಕ್ಷದ ಪ್ರತಿನಿಧಿಗಳು ದಿವ್ಯಾಂಗರ ಅಂಗವಿಕಲತೆ, ಭಾಷೆ, ಪರಿಭಾಷೆ, ಸಂದರ್ಭ, ಅಪಹಾಸ್ಯ, ಅವಹೇಳನಕಾರಿ ಉಲ್ಲೇಖಗಳು ಮತ್ತು ಅವರನ್ನು ಅವಮಾನಿಸುವ ಯಾವುದೇ ರೀತಿಯ ಬಳಕೆಯು 2016ರ ದಿವ್ಯಾಂಗರ ಹಕ್ಕುಗಳ ಕಾಯಿದೆಯ ಸೆಕ್ಷನ್ 92ರಡಿ ನಿಬಂಧನೆಗಳಿಗೆ ಒಳಪಡುತ್ತಾರೆ.

ರಾಜಕೀಯ ಪಕ್ಷಗಳು ದಿವ್ಯಾಂಗರ ಕುರಿತು ತಮ್ಮ ಪಕ್ಷಗಳ ಮಟ್ಟದಲ್ಲಿ ಪರಿಶೀಲಿಸಿ ಅಂಗೀಕರಿಸಲ್ಪಟ್ಟ ನಂತರ ಭಾಷಣ ಅಥವಾ ವಿಷಯವನ್ನು ಪ್ರಚುರಪಡಿಸುವುದು ಉತ್ತಮ. ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ದಿವ್ಯಾಂಗರ ಕುರಿತು ತರಬೇತಿ ಮಾಡ್ಯೂಲ್‍ ಅನ್ನು ಒದಗಿಸಬಹುದು ಮತ್ತು ಸಮರ್ಥ ಭಾಷೆಯ ಬಳಕೆಗೆ ಸಂಬಂಧಿಸಿದಂತೆ ದಿವ್ಯಾಂಗ ವ್ಯಕ್ತಿಗಳಿಂದ ದೂರುಗಳನ್ನು ಕೇಳಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಪಕ್ಷ ಮತ್ತು ಸಾರ್ವಜನಿಕರ ವರ್ತನೆಯ ತಡೆಗೋಡೆಯನ್ನು ತೊಡೆದುಹಾಕಲು ಮತ್ತು ಸಮಾನ ಅವಕಾಶಗಳನ್ನು ಒದಗಿಸಲು ರಾಜಕೀಯ ಪಕ್ಷಗಳು ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರಂತಹ ಹಂತಗಳಲ್ಲಿ ಹೆಚ್ಚಿನ ದಿವ್ಯಾಂಗರನ್ನು ಸೇರಿಸಿಕೊಳ್ಳಬಹುದು ಎಂದು ಸಲಹೆ ನೀಡಿದೆ.

ಮತದಾನ ಕೇಂದ್ರಗಳಲ್ಲಿ ವಿಶೇಷ ಸ್ಥಾನಮಾನ: ದಿವ್ಯಾಂಗರು ತಮ್ಮ ಮತ ಚಲಾಯಿಸಲು ಮತದಾನ ಕೇಂದ್ರಗಳಲ್ಲಿ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಚುನಾವಣಾ ಆಯೋಗವು ಮಾರ್ಗದರ್ಶಿ ಸೂತ್ರಗಳು ಮತ್ತು ಸೌಲಭ್ಯಗಳನ್ನು ಕಾಲಕಾಲಕ್ಕೆ ವಿಸ್ತರಿಸುತ್ತಿದೆ ಹಾಗೂ ಉತ್ತಮಗೊಳಿಸುತ್ತಿದೆ. ನೆಲ ಮಹಡಿಯಲ್ಲಿ ಮತದಾನ ಕೇಂದ್ರದ ಸ್ಥಾಪನೆ, ಇವಿಎಂನ ಬ್ಯಾಲೆಟ್ ಯೂನಿಟ್‍ನಲ್ಲಿ ಬ್ರೈಲ್ ಚಿಹ್ನೆಗಳು, ಸರಿಯಾದ ಗ್ರೇಡಿಯಂಟ್‍ನೊಂದಿಗೆ ರ‍್ಯಾಂಪ್​ಗಳ ನಿರ್ಮಾಣ, ದಿವ್ಯಾಂಗರಿಗಾಗಿ ಪ್ರತ್ಯೇಕ ಸರತಿ ಸಾಲುಗಳು(ಆದ್ಯತಾ ಪ್ರವೇಶ), ವೀಲ್‍ಚೇರ್‍ಗಳು, ಅವಶ್ಯಕತೆ ಇರುವ ದಿವ್ಯಾಂಗರ ಸಹಾಯಕ್ಕಾಗಿ ಜೊತೆಯಲ್ಲಿ ಒಡನಾಡಿಗೆ ಅನುಮತಿ ನೀಡುವುದು. ದಿವ್ಯಾಂಗರು ಪ್ರವೇಶಿಸಬಹುದಾದ ವಿಶೇಷ ಶೌಚಾಲಯಗಳು ಸೇರಿದಂತೆ ಮತದಾನದ ಪ್ರಕ್ರಿಯೆಯನ್ನು ವಿವರಿಸುವ ಸಾಕಷ್ಟು ಫಲಕಗಳು ಇತ್ಯಾದಿ ಕ್ರಮಗಳನ್ನು ಕೈಗೊಂಡಿದೆ.

ಮತದಾರರು ಮತಗಟ್ಟೆಗೆ ಬರಲು ಮತ್ತು ಸುರಕ್ಷಿತ, ಆರಾಮದಾಯಕ ಮತ್ತು ಆಹ್ಲಾದಕರ ಮತದಾನದ ಅನುಭವವನ್ನು ಹೊಂದಲು ಮತದಾರರನ್ನು ಪ್ರೋತ್ಸಾಹಿಸುವ ಪ್ರಯತ್ನವಾಗಿದ್ದರೂ, ಆಯೋಗವು ಮನೆಯಲ್ಲೇ ಮತದಾನದ ಸೌಲಭ್ಯವನ್ನು ಪರಿಚಯಿಸಿದೆ. ಶೇ. 40ರಷ್ಟು ಅಂಗವೈಕಲ್ಯ ಹೊಂದಿರುವ ವಿಶೇಷಚೇತನ ಮತದಾರರು ಈ ಸೌಲಭ್ಯವನ್ನು ಪಡೆಯಲು ಆಯ್ಕೆ ಮಾಡಬಹುದು. ಇತ್ತೀಚಿನ ಚುನಾವಣೆಗಳಲ್ಲಿ ಈ ಸೌಲಭ್ಯದ ಜನಪ್ರಿಯತೆ ಹೆಚ್ಚುತ್ತಿದ್ದು, ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕೆಕೆಆರ್​ಟಿಸಿ ಸಿಬ್ಬಂದಿಗೆ ₹1.20 ಕೋಟಿ ಮೊತ್ತದ ಅಪಘಾತ ಪರಿಹಾರ‌ ವಿಮಾ ಯೋಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.