ETV Bharat / state

ಡಿ ಜೆ ಹಳ್ಳಿ ಪ್ರಕರಣದಲ್ಲಿ ಅಮಾಯಕರಿಗೆ ಅನ್ಯಾಯವಾಗಿದೆ, ಕಾನೂನು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ: ಡಿಕೆಶಿ

author img

By ETV Bharat Karnataka Team

Published : Jan 6, 2024, 6:48 PM IST

DCM DK Shivakumar spoke to the media.
ಡಿಸಿಎಂ ಡಿ ಕೆ ಶಿವಕುಮಾರ್ ಮಾಧ್ಯಮದವರ ಜೊತೆ ಮಾತನಾಡಿದರು.

ಕೆ ಜಿ ಹಳ್ಳಿ, ಡಿಜೆ ಹಳ್ಳಿ ಬಂಧಿತರ ಬಿಡುಗಡೆಯಲ್ಲಿ ಏನೇ ಮಾಡಿದರೂ ಕಾನೂನು ವ್ಯಾಪ್ತಿ ಮಾಡಬೇಕು. ಬಿಜೆಪಿ ಸರ್ಕಾರ ಕೆಲವು ಸೆಕ್ಷನ್​​ಗಳನ್ನು ಪ್ರಯೋಗ ಮಾಡಿರುವುದರಿಂದ ಕೆಲ ಅಮಾಯಕರು ಹೊರಬರಲು ಆಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಗೊಂದಿಗೆ ಚರ್ಚಿಸುವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು: ಡಿ.ಜೆ.ಹಳ್ಳಿ ಪ್ರಕರಣದ ಅಮಾಯಕರಿಗೆ ಅನ್ಯಾಯವಾಗಿದೆ. ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ಶಿವಾಜಿ ನಗರದಲ್ಲಿ ಮಾತನಾಡಿದ ಅವರು, ಕೆ ಜಿ ಹಳ್ಳಿ, ಡಿಜೆ ಹಳ್ಳಿ ಬಂಧಿತರ ಬಿಡುಗಡೆ ವಿಚಾರವಾಗಿ ಕುಟುಂಬಸ್ಥರ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಏನೇ ಮಾಡಿದರೂ ಕಾನೂನು ವ್ಯಾಪ್ತಿ ಮಾಡಬೇಕು. ಈ ಬಗ್ಗೆ ಹೆಚ್ಚು ಮಾತನಾಡಲು ಆಗುವುದಿಲ್ಲ. ಬಿಜೆಪಿ ಸರ್ಕಾರ ಕೆಲವು ಸೆಕ್ಷನ್​​ಗಳನ್ನು ಪ್ರಯೋಗ ಮಾಡಿರುವುದರಿಂದ ಅವರು ಹೊರಬರಲು ಆಗುತ್ತಿಲ್ಲ.

ಕಾನೂನಿನ ಅಡಿಯಲ್ಲಿ ನ್ಯಾಯ ಒದಗಿಸಿಕೊಡಬೇಕು. ಈ ಬಗ್ಗೆ ಶಾಸಕರು ನಮ್ಮ ಬಳಿ ಚರ್ಚೆ ಮಾಡಿದ್ದು ಕಾನೂನು ತಂಡದ ಜತೆ ಮಾತನಾಡಿ ತೀರ್ಮಾನ ಮಾಡುತ್ತೇವೆ. ಕಾನೂನು ಕೈಗೆತ್ತಿಕೊಂಡವರ ವಿರುದ್ಧದ ಕ್ರಮಕ್ಕೆ ನಮ್ಮ ಅಭ್ಯಂತರವಿಲ್ಲ. ಕೆಲವು ಅಮಾಯಕರು ಇದರಲ್ಲಿ ಸಿಲುಕಿದ್ದಾರೆ ಎಂಬ ಕೂಗು ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಡಿಸಿಎಂ ವಿಚಾರದಲ್ಲಿ ಹೈಕಮಾಂಡ್ ಉತ್ತರ ನೀಡಲಿದೆ: ಸರ್ಕಾರದಲ್ಲಿ ಮೂವರು ಡಿಸಿಎಂ ಮಾಡಬೇಕು ಎಂಬ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಬಗ್ಗೆ ಕೇಳಿದಾಗ, ಹೆಚ್ಚುವರಿ ಡಿಸಿಎಂ ವಿಚಾರಕ್ಕೆ ಹೈಕಮಾಂಡ್ ನಾಯಕರು ಉತ್ತರ ನೀಡುತ್ತಾರೆ. ನಾನು ಆ ಬಗ್ಗೆ ಉತ್ತರ ನೀಡುವುದಿಲ್ಲ. ಸಂಸತ್ ಚುನಾವಣೆಯನ್ನು ಗೆಲ್ಲಬೇಕು. ಅದಕ್ಕಾಗಿ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಡಿಕೆಶಿ ತಿಳಿಸಿದರು.

ಕನ್ನಡದ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇದೆ: ಸಚಿವ ಸಂಪುಟ ಸಭೆಯಲ್ಲಿ ಕನ್ನಡ ನಾಮಫಲಕ ವಿಚಾರವಾಗಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಇದು ಕರ್ನಾಟಕ ಸರ್ಕಾರಕ್ಕೆ ಕನ್ನಡ ಭಾಷೆ ಬಗ್ಗೆ ಇರುವ ಬದ್ಧತೆ, ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆ ಇರಬೇಕು. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಮಾಡುತ್ತಿದ್ದು, ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ. ಉಳಿದಂತೆ ಅವರು ಯಾವುದೇ ಭಾಷೆಯಲ್ಲಿ ಹಾಕಿಕೊಳ್ಳಲಿ. ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಬೇಕು. ವ್ಯಾಪಾರ ಮಾಡುವವರು ಕನ್ನಡ ತಾಯಿ ಹಾಗೂ ಭೂಮಿಗೆ ಗೌರವ ನೀಡಬೇಕು ಎಂದರು.

ತೆರಿಗೆ ಪಾವತಿಗೆ ಕಾಲಾವಕಾಶ, ಚರ್ಚೆ: ಆಸ್ತಿ ತೆರಿಗೆಗೆ ಹೆಚ್ಚಿನ ಕಾಲಾವಕಾಶ ಹಾಗೂ ಅದರಲ್ಲಿರುವ ತೊಡಕುಗಳನ್ನು ನಿವಾರಣೆ ಮಾಡಲು ಅನೇಕ ಅರ್ಜಿಗಳು ಬಂದಿವೆ. ಹೀಗಾಗಿ ತೆರಿಗೆ ಪಾವತಿಗೆ ಕಾಲಾವಕಾಶ ಕಲ್ಪಿಸಿ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳ ಜತೆ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಆರ್ ಬಿಎಎನ್ಎಂಎಸ್ ಹೈಸ್ಕೂಲ್ ಮೈದಾನದಲ್ಲಿ ನಡೆದಿದ್ದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ದು, ಇಂದು ಅಹವಾಲು ತಂದಿರುವವರ ಪೈಕಿ ಅನೇಕರು ವಸತಿ ನಿವೇಶನಗಳಲ್ಲಿ ಮಾಣಿಜ್ಯ ಕಟ್ಟಡಗಳನ್ನು ಕಟ್ಟಿದ್ದಾರೆ. ಇದಕ್ಕೆ ತೆರಿಗೆ ಹಾಗೂ ದಂಡ ಹೆಚ್ಚಾಗಿದೆ. ನಮಗೆ ಸಮಯಾವಕಾಶ ಬೇಕು ಎಂದು ಮನವಿ ಸಲ್ಲಿಸುತ್ತಿದ್ದಾರೆ.

ನಾಗರಿಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಅವರಿಗೆ ಮತ್ತಷ್ಟು ಸಮಯಾವಕಾಶ ನೀಡುತ್ತೇವೆ. ಸರಳ ವ್ಯವಸ್ಥೆ ಜಾರಿಗೆ ತರಲು ಅಗತ್ಯ ಕಾನೂನು ತಿದ್ದುಪಡಿ ಮಾಡುತ್ತೇವೆ. ನಾಗರಿಕರು ಕೂಡ ನಮಗೆ ಸಹಾಯ ಮಾಡಬೇಕು. ವಸತಿ ನಿವೇಶನಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಜನರು ಕೂಡ ತಮ್ಮ ಆಸ್ತಿಗೆ ತಕ್ಕಂತೆ ತೆರಿಗೆ ಪಾವತಿ ಮಾಡಿ ಸಹಕಾರ ನೀಡಬೇಕು. ಆಗ ನಾವು ಕೂಡ ಜನರಿಗೆ ಸಹಾಯ ಮಾಡಬಹುದು ಎಂದು ತಿಳಿಸಿದರು.

ಕೆಲವರಿಗೆ ಮೂರು ದಿನ, ಒಂದು ವಾರದಲ್ಲಿ ಪಾವತಿ ಮಾಡುವಂತೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳು ಕಾನೂನಿನಡಿ ಕೆಲಸ ಮಾಡುತ್ತಿದ್ದರೂ ನಾವು ಹೋದ ಕಡೆಗಳಲ್ಲಿ ಜನರು ಈ ಬಗ್ಗೆ ತಮ್ಮ ನೋವು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂಓದಿ:1992ರ ಪ್ರಕರಣ: ಶ್ರೀಕಾಂತ್ ಪೂಜಾರಿ ಜೈಲಿನಿಂದ ಬಿಡುಗಡೆ, ಬಿಜೆಪಿ ಮುಖಂಡರಿಂದ ಸ್ವಾಗತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.