ಬೆಂಗಳೂರು: ನಗರದಲ್ಲಿ ಕ್ರಿಯಾಶೀಲರಾಗಿರುವ ಬವೇರಿಯಾ ಗ್ಯಾಂಗ್ ಸರಗಳ್ಳರ ಹಾವಳಿ ಮಿತಿ ಮೀರಿದೆ. ಐಷಾರಾಮಿ ಜೀವನ ನಡೆಸುವುದಕ್ಕೆ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಪೊಲೀಸರಿಗೆ ಗ್ಯಾಂಗ್ ಹಿಂದೆ ಸೂತ್ರಧಾರನೊಬ್ಬ ಕಳ್ಳತನದ ನೀಲನಕ್ಷೆ ರೂಪಿಸಿರುವುದು ಬೆಳಕಿಗೆ ಬಂದಿದೆ.
ವಿಮಾನದ ಮೂಲಕ ಬೆಂಗಳೂರಿಗೆ ಬರುವ ಸರಗಳ್ಳರಿಗೆ ದೆಹಲಿಯಿಂದಲೇ ಕಿಂಗ್ ಪಿನ್ ಜೋಗಿಂದರ್ ಸಿಂಗ್ ಎಂಬಾತ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದ್ದ. ದೇಶದ ಬೇರೆ ಬೇರೆ ನಗರಗಳಿಗೆ ಕೃತ್ಯ ಎಸಗಲು ಸರಗಳ್ಳರನ್ನು ಕಳುಹಿಸುತ್ತಿದ್ದ. ಬೆಂಗಳೂರಿನಲ್ಲಿ ಈತನ ವಿರುದ್ಧ 20ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಕತರ್ನಾಕ್ ಕಿಂಗ್ ಪಿನ್
ಕಳೆದ ಮೂರು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರೂ ಪೊಲೀಸರ ಕೈಗೆ ಸಿಗದೇ ಅಜ್ಞಾತವಾಗಿದ್ದಾನೆ. ದೆಹಲಿ, ಉತ್ತರ ಪ್ರದೇಶ, ಮುಂಬೈ ಸೇರಿ ಹಲವೆಡೆ ಜೋಗಿಂದರ್ ಸಿಂಗ್ಗಾಗಿ ನಗರ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಉತ್ತರಪ್ರದೇಶ, ಮುಂಬೈ, ದೆಹಲಿ ಪೊಲೀಸರು ಸಹ ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ನಗರದಿಂದ ವಿವಿಧ ಪೊಲೀಸ್ ಠಾಣೆಯ 20 ತಂಡಗಳು ಈತನ ಹಿಡಿಯಲು ಹೋಗಿ ಬರಿಗೈಲಿ ಬಂದಿದ್ದಾರೆ.
ಮಾಸ್ಟರ್ ಪ್ಲಾನರ್ ಬಗ್ಗೆ ಬಾಯಿಬಿಟ್ಟ ಸರಗಳ್ಳರು
ಇತ್ತೀಚೆಗೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಲ್ಮೆಟ್, ಮಾಸ್ಕ್ ಧರಿಸಿ ಬೈಕ್ನಲ್ಲಿ ಬಂದ ಆರೋಪಿಗಳು ಶೋಭಾ ಆಸ್ಪತ್ರೆ ಬಳಿ ಒರ್ವ ವೃದ್ದೆಯ ಸರಗಳವು ಮಾಡಿ ಎಸ್ಕೇಪ್ ಆಗಿದ್ದರು. ಪ್ರಕರಣ ಬೆನ್ನತ್ತಿದ್ದ ಪೊಲೀಸರು 12 ಕಿ.ಮೀ ವ್ಯಾಪ್ತಿಯ ಸುಮಾರು 100 ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲಿಸಿದ್ದರು. ನೂರಾರು ವಾಹನಗಳ ನಡುವೆ ಹೆಲ್ಮೆಟ್ ಮೇಲಿನ ಎರಡು ಗೆರೆಗಳನ್ನ ಗುರುತಿಟ್ಟುಕೊಂಡಿದ್ದ ಪೊಲೀಸರು ಪ್ರತಿಯೊಂದು ಕ್ಯಾಮರಾವನ್ನ ಚೆಕ್ ಮಾಡಿದ್ದರು.
ನಂತರ ಸುಬ್ರಹ್ಮಣ್ಯಪುರದ ಬಳಿ ಯಾವುದೇ ಸಿಸಿಟಿವಿಯಲ್ಲಿ ಆರೋಪಿಗಳು ಪತ್ತೆಯಾಗಿಲ್ಲ. ಹಾಗಾಗಿ ಆರೋಪಿಗಳು ಇಲ್ಲೆ ಇದ್ದಾರೆಂಬುದು ಪಕ್ಕಾ ಆಗಿತ್ತು. ಅಲ್ಲಿದ್ದಂತಹ ಮತ್ತಷ್ಟು ಸಿಸಿಟಿವಿಯನ್ನ ಪರಿಶೀಲಿಸಿದಾಗ ರಿಜಿಸ್ಟ್ರೇಷನ್ ಆಗದ ಬೈಕ್ ನಿಲ್ಲಿಸಿರೋದು ಕಂಡು ಬಂದಿತ್ತು.
ಇದನ್ನು ಗಮನಿಸಿದ ಪೊಲೀಸರು, ಸ್ವಲ್ಪ ಹೊತ್ತಿನ ಬಳಿಕ ಹೊರ ಬಂದಿದ್ದ ಆರೋಪಿಗಳ ಬಗ್ಗೆ ಅಕ್ಕ ಪಕ್ಕದ ಮನೆಯವರ ಬಳಿ ಮಾಹಿತಿ ಪಡೆದು ತಾಂತ್ರಿಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದದ್ದರು. ತನಿಖೆಯಲ್ಲಿ ಜೋಗಿಂದರ್ ಸಿಂಗ್ ಎಂಬ ಮಾಸ್ಟರ್ ಪ್ಲಾನ್ರ್ ಇದ್ದಾನೆ ಎಂದು ಸರಗಳ್ಳರು ಬಾಯ್ಬಿಟ್ಟಿದ್ದಾರೆ. ಸದ್ಯ ಖಾಕಿ ಪಡೆ ಜೋಗಿಂದರ್ ಪತ್ತೆಗೆ ಬಲೆ ಬೀಸಿದೆ.