ETV Bharat / state

ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಎರಡೂ ಪಕ್ಷಗಳ ನಾಯಕರು ಕಾಂಗ್ರೆಸ್‌ಗೆ : ಡಿ ಕೆ ಶಿವಕುಮಾರ್

author img

By ETV Bharat Karnataka Team

Published : Oct 2, 2023, 3:22 PM IST

dk shivakumar
ಡಿ ಕೆ ಶಿವಕುಮಾರ್

ಜೆಡಿಎಸ್​ ಹಾಗೂ ಬಿಜೆಪಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಒಂದಾಗಿದ್ದಾರೆ. ಎರಡೂ ಪಕ್ಷದ ನಾಯಕರು ಮೈತ್ರಿಗೆ ಅಸಮಾಧಾನಗೊಂಡು ಕಾಂಗ್ರೆಸ್​ ಸೇರಲು ಮುಂದಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಹೇಳಿದ್ದಾರೆ.

ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಒಂದಾಗಿದ್ದಾರೆ. ಸರ್ಕಾರ ತೆಗೆದವರ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಅಪವಿತ್ರ ಮೈತ್ರಿ ಸರಿಯಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿಯಿಂದಾಗಿ ಆ ಎರಡೂ ಪಕ್ಷಗಳ ನಾಯಕರು ಕಾಂಗ್ರೆಸ್ ಸೇರಲು ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ನಾಯಕತ್ವ ಬೆಳೆಸಿಕೊಳ್ಳಲು ಸಿದ್ಧರಾಗಬೇಕು. ಕಾರ್ಯಕರ್ತರೆಲ್ಲ ಸೇರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೀರಿ. ನಿಮ್ಮ ಮುಂದೆ ಬಹಳ ದೊಡ್ಡ ಜವಾಬ್ದಾರಿ ಇದೆ. ಶಾಸಕರಾಗುವ ಮುನ್ನ ಸ್ಥಳೀಯ ಮಟ್ಟದಲ್ಲಿ ನಾಯಕರಾಗಬೇಕು. ಕಾರ್ಯಕರ್ತರ ಭಾವನೆ ಬಗ್ಗೆ ನಮಗೆ ಅರಿವಿದೆ. ನಾವು ನುಡಿದಂತೆ ನಡೆಯಲು ಕೊಟ್ಟ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಆ ಮೂಲಕ ನೀವು ಜನರ ಬಳಿ ಹೋಗಲು, ಪಕ್ಷ ಸಂಘಟನೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.

ಸಾವಿರಾರು ನಾಯಕರ ಪ್ರಾಣತ್ಯಾಗದಿಂದ ಸ್ವಾತಂತ್ರ್ಯ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ನಾಯಕರುಗಳು ಬ್ರಿಟಿಷರ ಗುಂಡಿಗೆ ಎದೆಕೊಟ್ಟು ಪ್ರಾಣತ್ಯಾಗ ಮಾಡಿದ ಪರಿಣಾಮ ಇಂದು ದೇಶದಲ್ಲಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಿತವಾಗಿದೆ ಎಂದು ಶಿವಕುಮಾರ್ ತಿಳಿಸಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಮ್ಮ ಪಕ್ಷ 60 ವರ್ಷಗಳ ಕಾಲ ಆಡಳಿತ ಮಾಡಿ ಸಂವಿಧಾನ, ತ್ರಿವರ್ಣ ಧ್ವಜ, ರಾಷ್ಟ್ರಗೀತೆ, ಅನೇಕ ತಿದ್ದುಪಡಿಗಳು, ನೂರಾರು ಕಾನೂನುಗಳನ್ನು ನೀಡಿದೆ. ಆ ಮೂಲಕ ಸರ್ವರಿಗೂ ಸಮಬಾಳು ಸಮಪಾಲು ತತ್ವದ ಮೂಲಕ ಕಾರ್ಯಕ್ರಮ ರೂಪಿಸಿದ್ದೇವೆ‌ ಎಂದು ಹೇಳಿದರು.

“ದೇವರಿಗೆ ಯಾವುದೇ ಧರ್ಮವಿಲ್ಲ, ಸಬ್ಕೋ ಸನ್ಮತಿ ದೇ ಭಗವಾನ್” ಎಂದು ಗಾಂಧೀಜಿ ಹೇಳಿದ್ದರು. ಗಾಂಧೀಜಿ ಅವರು ಮುನ್ನಡೆಸಿದ ಪಕ್ಷದಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಹೆಗಲ ಮೇಲೆ ಹಾಕಿಕೊಂಡು ಕೆಲಸ ಮಾಡುತ್ತಿರುವ ನಾವೆಲ್ಲರೂ ಹೆಮ್ಮೆಪಡಬೇಕು. ಗಾಂಧೀಜಿ ಅವರು ದೇಶದ ಪ್ರಧಾನಿ ಆಗಬಹುದಿತ್ತು. ಆದರೆ ಅವರು ಮಹಾತ್ಮರಾಗಿ ಉಳಿದು, ತಮ್ಮ ದೂರದೃಷ್ಟಿಯಿಂದ ಪಂಡಿತ್ ಜವಾಹರ್ ಲಾಲ್ ನೆಹರೂ ಅವರಿಗೆ ಜವಾಬ್ದಾರಿ ವಹಿಸಿದರು.

ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ : ಅಲ್ಲದೆ ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ” ಎಂಬ ಸಂದೇಶವನ್ನು ಗಾಂಧೀಜಿ ಅವರು ಕೊಟ್ಟಿದ್ದಾರೆ. ನಾನು ಅನೇಕ ಸಂದರ್ಭದಲ್ಲಿ ಗಾಂಧೀಜಿ ಅವರ ಮಾತನ್ನು ಹೇಳುತ್ತಿರುತ್ತೇನೆ. “ನಾವು ನಮ್ಮನ್ನು ನಿಯಂತ್ರಿಸಿಕೊಳ್ಳಬೇಕಾದರೆ ಬುದ್ಧಿಯನ್ನು ಪ್ರಯೋಗಿಸಬೇಕು, ನಾವು ಬೇರೆಯವರನ್ನು ನಿಯಂತ್ರಿಸಬೇಕಾದರೆ ಪ್ರೀತಿಯನ್ನು ಪ್ರಯೋಗಿಸಬೇಕು ಎಂದು ಡಿಕೆಶಿ ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ತ್ಯಾಗವನ್ನು ನಾವೆಲ್ಲರೂ ಸ್ಮರಿಸಬೇಕು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಾಂಧೀಜಿ ಅವರು 18 ಬಾರಿ ಕರ್ನಾಟಕಕ್ಕೆ ಬಂದಿದ್ದರು. 1924ರಲ್ಲಿ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ನಂಜನಗೂಡಿನ ಬದನಾಳು ಗ್ರಾಮಕ್ಕೆ ಗಾಂಧಿ ಅವರು ಎರಡು ಬಾರಿ ಭೇಟಿ ನೀಡಿದ್ದರು ಎಂದು ತಿಳಿಸಿದರು.

ಸುಮಾರು 30-40 ವರ್ಷಗಳಿಂದ ಇಲ್ಲಿ ಸವರ್ಣಿಯರು ಹಾಗೂ ದಲಿತರ ನಡುವೆ ಬಿರುಕು ಮೂಡಿತ್ತು. ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಎರಡೂ ಸಮುದಾಯವನ್ನು ಒಂದುಗೂಡಿಸಿ ಎರಡೂ ಕೇರಿಗಳ ನಡುವಣ ರಸ್ತೆಯನ್ನು ಮತ್ತೆ ತೆರೆದು ಅದಕ್ಕೆ ಭಾರತ ಜೋಡೋ ರಸ್ತೆ ಎಂದು ನಾಮಕರಣ ಮಾಡಿದರು. ಆ ಮೂಲಕ ಇತಿಹಾಸ ಬರೆಯಲಾಯಿತು. ಇದು ಕಾಂಗ್ರೆಸ್ ಪಕ್ಷದ ಶಕ್ತಿ ಹಾಗೂ ಇತಿಹಾಸ. ಕಾಂಗ್ರೆಸ್ ಪಕ್ಷ ಸದಾ ಹೃದಯಗಳನ್ನು ಬೆಸೆಯುವ ಕೆಲಸ ಮಾಡಿಕೊಂಡು ಬಂದಿದೆ. ಪ್ರತಿ ಹಳ್ಳಿಯಲ್ಲಿ ಶಾಲೆ, ಸಹಕಾರ ಸಂಸ್ಥೆ ಇರಬೇಕು ಎಂದು ವಾದ ಮಾಡುತ್ತಿದ್ದೇವೆ. ನಿಜವಾದ ಭಾರತ ಅದರ ಪ್ರಜೆಗಳಲ್ಲಿ ಅಲ್ಲ. ಇಲ್ಲಿರುವ 7 ಲಕ್ಷ ಹಳ್ಳಿಗಳಲ್ಲಿ ಅಡಗಿದೆ ಎಂದು ಗಾಂಧಿ ಅವರು ಅಂದೇ ಸಂದೇಶ ನೀಡಿದ್ದರು ಎಂದರು.

ಗ್ರಾಮ ಸ್ವರಾಜ್ಯ ಗಾಂಧೀಜಿ ಕೊಟ್ಟ ದೊಡ್ಡ ಕೊಡುಗೆ. ರಾಜೀವ್ ಗಾಂಧಿ ಅವರ ನೇತೃತ್ವದ ಸರ್ಕಾರ ಸಂವಿಧಾನಕ್ಕೆ 73, 74ನೇ ತಿದ್ದುಪಡಿ ತಂದು ಶಕ್ತಿ ನೀಡಿದೆವು. ಜೆ ಹೆಚ್ ಪಟೇಲ್ ಅವರ ಕಾಲದಲ್ಲಿ ಪಂಚಾಯ್ತಿಗಳಿಗೆ 1 ಲಕ್ಷ ಅನುದಾನ ನೀಡಲಾಗಿತ್ತು. ಕೃಷ್ಣ ಅವರ ಕಾಲದಲ್ಲಿ ಜಿಲ್ಲಾ ಪಂಚಾಯಿತಿಗೆ 23 ಇಲಾಖೆಗಳನ್ನು ಸೇರಿಸಿ ಹೆಚ್ಚಿನ ಅನುದಾನ ನೀಡಿ ಶಕ್ತಿ ತುಂಬಿದರು. ಪರಿಣಾಮ ಇಂದು ಪಂಚಾಯ್ತಿಗಳೇ ಸರ್ಕಾರವಾಗಿ ಆಡಳಿತ ನಡೆಸುವಂತೆ ಮಾಡಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ಗಾಂಧಿ ಅವಹೇಳನಕ್ಕೆ ಅವಕಾಶ ನೀಡಲ್ಲ, ಅವಹೇಳನ ಮಾಡಿದಲ್ಲಿ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.