ETV Bharat / state

ರಾಜಕಾರಣದಲ್ಲಿ ಎಲ್ಲರೂ ಸಮಾನರು, ಸಮುದಾಯವನ್ನು ತುಳಿಯುವ ಕೆಲಸ ಕಾಂಗ್ರೆಸ್ ಮಾಡುವುದಿಲ್ಲ: ಡಿ.ಕೆ.ಶಿವಕುಮಾರ್

author img

By

Published : Jul 23, 2023, 6:56 AM IST

dcm dk shivakumar
ಡಿಸಿಎಂ ಡಿ ಕೆ ಶಿವಕುಮಾರ್

ರಾಷ್ಟ್ರೀಯ ಈಡಿಗ, ಬಿಲ್ಲವ, ನಾಮಧಾರಿ, ದೀವರ ಮಹಾಮಂಡಳಿಯ ವಿಶೇಷ ಸಭೆಯಲ್ಲಿ ಬಿ.ಕೆ.ಹರಿಪ್ರಸಾದ್​ ಅವರು ನೀಡಿದ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : "ರಾಜಕಾರಣದಲ್ಲಿ ಎಲ್ಲರೂ ಸಮಾನರು, ಯಾವ ಅಸಮಾಧಾನವೂ ಇಲ್ಲ. ಯಾವ ಸಮುದಾಯವನ್ನೂ ತುಳಿಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಮಾಡುವುದಿಲ್ಲ. ಬಿ.ಕೆ.ಹರಿಪ್ರಸಾದ್ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಸರಿಯಾಗಿ ಗೊತ್ತಿಲ್ಲ. ಹೀಗಾಗಿ, ಆ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಆ ಬಗ್ಗೆ ವಿಚಾರಿಸಿ ಮಾತನಾಡುತ್ತೇನೆ" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ : ಕಾದು ನೋಡಿ ರಾಜಕಾರಣ ಇನ್ನೂ ಮಜವಾಗಿರುತ್ತೆ: ಬಿ ಕೆ ಹರಿಪ್ರಸಾದ್

ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಸಚಿವರು ಮಾತನಾಡಿದರು. ಇದೇ ವೇಳೆ ಹಾಲಿನ ಬೆಲೆ ಏರಿಕೆ ಕುರಿತಾದ ಪ್ರಶ್ನೆಗೆ ಉತ್ತರಿಸಿ, "ನಾನು ರೈತನ ಮಗ, ಪಶು ಆಹಾರ, ಹಾಲಿನ ಉತ್ಪಾದನಾ ವೆಚ್ಚ ಜಾಸ್ತಿಯಾಗಿದೆ. ಹೀಗಾಗಿ, 5 ರೂಪಾಯಿ ಹೆಚ್ಚಳ ಮಾಡಬೇಕು ಎಂದು ನಾನೇ ದೊಡ್ಡಬಳ್ಳಾಪುರದಲ್ಲಿ ಭಾಷಣ ಮಾಡಿದ್ದೆ. ಹಾಲು ಒಕ್ಕೂಟದವರು ಸಹ ಪ್ರಸ್ತಾಪ ಮಾಡಿದ್ದರು. ಈ ಕುರಿತು ಚರ್ಚಿಸಿ 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹೆಚ್ಚಿನ ಹಣ ರೈತರಿಗೆ ಸೇರಬೇಕು. ಈಗಲೂ ಸಹ ನಷ್ಟವಾಗುತ್ತಿದೆ. ಆದರೂ ಸರಿದೂಗಿಸಿಕೊಂಡು ಹೋಗಬೇಕಲ್ಲ?. ಬೆಲೆ ಹೆಚ್ಚಳ ಎಂದು ಬಿಜೆಪಿಯವರು ಟೀಕೆ ಮಾಡಲಿ, ಅವರು ಇರುವುದೇ ಟೀಕೆ ಮಾಡೋಕೆ" ಎಂದರು.

ಇದನ್ನೂ ಓದಿ : ಹಾಲಿನ ಬೆಲೆ ಲೀಟರಿಗೆ 3 ರೂಪಾಯಿ ಹೆಚ್ಚಿಸಿ ಶ್ರಮಜೀವಿಗಳ ಕಿಸೆಗೆ ಕನ್ನ.. ಕಾಂಗ್ರೆಸ್ಸಿಗರು ಜನರ ತಲೆಯ ಮೇಲೆ ಫ್ಲವರ್ ಪಾಟ್ ಇಡುತ್ತಿದ್ದಾರೆ: ಕುಮಾರಸ್ವಾಮಿ ಕಿಡಿ

ಪಿಎಸ್ಐ ಹಗರಣದ ನ್ಯಾಯಾಂಗ ತನಿಖೆಯ ಕುರಿತ ಪ್ರಶ್ನೆಗೆ, "ಪಿಎಸ್‌ಐ ಹಗರಣದ ಬಗ್ಗೆ ನಾವು ಹಿಂದೆ ಹೋರಾಟ ಮಾಡಿದ್ದೆವು, ಸರ್ಕಾರ ಈಗ ತನಿಖೆಗೆ ಒಳಪಡಿಸಿದೆ. ನಾವು ಸುಮ್ಮನಿದ್ದರೂ ಅವರೇ ಕೇಳ್ತಾ ಇದ್ದರು. ಎರಡು ದಿನಗಳ ಹಿಂದೆ, ಎರಡು ತಿಂಗಳಾಯಿತು ಎಂದು ಸಿಎಂ ಅವರನ್ನು ಕೇಳಿದ್ದಾರೆ. ಒಂದೊಂದೇ ಕೆಲಸ ಮಾಡ್ತಾ ಹೋಗುತ್ತೇವೆ. ಬಿಜೆಪಿಯವರ ಕೈಯಲ್ಲೇ ಅಧಿಕಾರ ಇತ್ತಲ್ಲ, ಆಗ ಆವರೇನು ಮಾಡಿದರು, ಸೋರಿಕೆ ತಡೆಯಬಹುದಿತ್ತಲ್ಲವೇ? ಅಶ್ವತ್ಥ್​ ನಾರಾಯಣ್​ ಅವರ ಸೋರಿಕೆಯನ್ನು ಹೊರ ತೆಗೆಯಲೇ?" ಎಂದರು. ಬಿಜೆಪಿ ಹೋರಾಟಕ್ಕೆ ಕುಮಾರಸ್ವಾಮಿ ಬೆಂಬಲ ವಿಚಾರವಾಗಿ ಕೇಳಿದಾಗ, "ಪಾಪ ಚೆನ್ನಾಗಿರಲಿ ಬಿಡಿ" ಎಂದಷ್ಟೇ ಪ್ರತಿಕ್ರಿಯಿಸಿದರು.

ಇದನ್ನೂ ಓದಿ : ಗ್ರಾಹಕರಿಗೆ ಶಾಕ್​... Milk Price Hike: ಆಗಸ್ಟ್ 1ರಿಂದ ಪ್ರತಿ ಲೀಟರ್ ನಂದಿನಿ ಹಾಲಿನ ದರ 3 ರೂ. ಹೆಚ್ಚಳ

ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 21ರಂದು ರಾಜ್ಯದಲ್ಲಿನ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್‌ ಅಧ್ಯಕ್ಷರ ಸಭೆ ನಡೆಸಿ, ಪ್ರತಿ ಲೀಟರ್ ಹಾಲಿಗೆ ಕನಿಷ್ಠ 3 ರೂ. ಹೆಚ್ಚಳ ಮಾಡಲು ಸಮ್ಮತಿಸಿದ್ದರು. ಕೆಎಂಎಫ್ ಅಧ್ಯಕ್ಷರಾಗಿ ಶಾಸಕ ಭೀಮಾ ನಾಯಕ್ ಆಯ್ಕೆಯಾಗಿದ್ದ ದಿನದಂದೇ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳ ಮಾಡುವ ಘೋಷಣೆಯಾಗಿತ್ತು. ಅದರೆ, ಹಾಲು ಖರೀದಿಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸಿಎಂ 3 ರೂ. ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದಾರೆ. ಆದ್ದರಿಂದ ಆಗಸ್ಟ್ 1ರಿಂದ ಹಾಲಿನ ದರ 3 ರೂ. ಹೆಚ್ಚಳವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.