ETV Bharat / state

ಬಿಟ್ ಕಾಯಿನ್ ವಿಚಾರವಾಗಿ ಸಿಎಂ ಇಡಿಗೆ ವಹಿಸಿದ ತನಿಖೆ ವಿವರ ನೀಡಲಿ: ಡಿಕೆಶಿ

author img

By

Published : Nov 10, 2021, 4:17 PM IST

'ಕಾಂಗ್ರೆಸ್ ಲೀಡರ್ ಮಗನ ಹೆಸರಿದೆ ಅಂತ ಹೋಮ್ ಮಿನಿಸ್ಟರ್ ಹೇಳ್ತಾರೆ. ಯಾರೇ ಇದ್ರೂ ಅವರನ್ನು ಅರೆಸ್ಟ್ ಮಾಡಿ. ಧಮ್ ಇದ್ರೆ ಅರೆಸ್ಟ್ ಮಾಡಿಸಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (Kpcc President D.K Shivakumar) ಕಿಡಿಕಾರಿದ್ದಾರೆ.

d-k-shivakumar
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್

ಬೆಂಗಳೂರು: ಬಿಟ್ ಕಾಯಿನ್ (Bitcoin) ವಿಚಾರದಲ್ಲಿ ಸಿಎಂ ಇಡಿಗೆ (ED) ಯಾವ ತನಿಖೆ ವಹಿಸಿದ್ದಾರೆ ಎಂಬ ಮಾಹಿತಿಯನ್ನು ಜನರ ಮುಂದಿಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಎಷ್ಟು ಬಿಟ್ ಕಾಯಿನ್ ರಿಕವರಿ ಆಗಿದೆ ಎಂಬುದರ ಮಾಹಿತಿ ಜನರ ಮುಂದಿಡಿ. ಕಾಂಗ್ರೆಸ್ ಲೀಡರ್ ಮಗನ ಹೆಸರಿದೆ ಅಂತ ಹೋಮ್ ಮಿನಿಸ್ಟರ್ ಹೇಳ್ತಾರೆ. ಯಾರೇ ಇದ್ರೂ ಅವರನ್ನ ಅರೆಸ್ಟ್ ಮಾಡಿ. ಎಷ್ಟು ಜನ ಹೆಸರು ಹೊರಬರುತ್ತೆ ಹೋಮ್ ಮಿನಿಸ್ಟರ್​ಗೆ ಗೊತ್ತಿದೆಯಾ?. ಆಫಿಸರ್ಸ್ ಎಷ್ಟು ಜನ ಇದ್ದಾರೆ ಗೊತ್ತಾ? ಏಕೆ ಹೋಮ್ ಮಿನಿಸ್ಟರ್ ಆಫಿಸರ್ಸ್ ರಕ್ಷಣೆ ಮಾಡ್ತಿದ್ದಾರೆ? ಎಂದು ಪ್ರಶ್ನಿಸಿದರು.


ಬಿಟ್ ಕಾಯಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ತಲೆದಂಡವಾಗುತ್ತದೆ ಎಂಬ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಿಟ್ ಕಾಯಿನ್ ಹಗರಣದಲ್ಲಿ ಪಕ್ಷದ ನಿರ್ಧಾರವನ್ನು ನಾನು ಈಗಾಗಲೇ ಹೇಳಿದ್ದೇನೆ. ಪ್ರಕರಣದ ತನಿಖೆಯಾಗಿದೆ. ಇದನ್ನು ಇ.ಡಿಗೆ ಹಸ್ತಾಂತರಿಸಲಾಗಿದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ.

ಅವರು ನಡೆಸಿರುವ ತನಿಖೆ ಏನು? ಸಿಕ್ಕಿರುವ ಮಾಹಿತಿ ಏನು? ಏನೆಲ್ಲಾ ಸೀಜ್ ಮಾಡಿದ್ದಾರೆ? ಸೀಜ್ ಮಾಡಿಕೊಂಡ ಬಿಟ್ ಕಾಯಿನ್ ಯಾರ ವಾಲೆಟ್ ನಲ್ಲಿದೆ? ಹಗರಣದಲ್ಲಿ ಯಾರ ಹೆಸರು ಕೇಳಿಬಂದಿದೆ? ಇ.ಡಿ. ತನಿಖೆ ಸಂಬಂಧ ಪ್ರಧಾನಿಗಳಿಗೆ ಪತ್ರ ಬರೆದಿದ್ದು ಯಾರು? ಪೊಲೀಸ್ ಅಧಿಕಾರಿಗಳ ಹೇಳಿಕೆಗಳೇನು? ಎಷ್ಟು ಎಫ್ಐಆರ್ ದಾಖಲಾಗಿದೆ? ಎಂದು ಸರ್ಕಾರ ಮೊದಲು ಮಾಹಿತಿ ನೀಡಲಿ ಎಂದರು.

ಯಾವುದೋ ಗಲಾಟೆಯಲ್ಲಿ ಕಾಂಗ್ರೆಸ್ ನಾಯಕರ ಜತೆ ಆತ ಗುರುತಿಸಿಕೊಂಡಿದ್ದ ಎಂದು ಹೇಳುತ್ತಾರೆ?. ಆ ಪ್ರಕರಣದಲ್ಲಿ ಏನಾಗಿತ್ತು? ಈಗ ಏನಾಗಿದೆ? ಎಂದು ಸರ್ಕಾರವೇ ಹೇಳಬೇಕು. ಮಾಧ್ಯಮಗಳಲ್ಲಿ ಯಾರ ಹೆಸರು ಹೇಳದೆಯೇ ಅನೇಕ ವಿಚಾರಗಳನ್ನು ವರದಿ ಮಾಡಲಾಗುತ್ತಿದೆ. ಹೀಗಾಗಿ, ನಾನು ಬೇರೆ ನಾಯಕರ ವೈಯಕ್ತಿಕ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಈ ವಿಚಾರವಾಗಿ ನಾನು, ನಮ್ಮ ನಾಯಕರು ಮಾಹಿತಿ ಕಲೆಹಾಕುತ್ತಿದ್ದೇವೆ. ಮೊದಲು ಸರ್ಕಾರ ತನ್ನ ಬಳಿ ಇರುವ ಮಾಹಿತಿಯನ್ನು ನೀಡಲಿ. ನಾವು ವಿರೋಧ ಪಕ್ಷವಾಗಿ ನಮ್ಮ ಮಾಹಿತಿಯನ್ನು ಜನರ ಮುಂದೆ ಇಡುತ್ತೇವೆ. ನ್ಯಾಯಾಲಯಕ್ಕೆ ಮಾಹಿತಿ, ದಾಖಲೆ ಒದಗಿಸಬೇಕಾದ ಜವಾಬ್ದಾರಿ ಸರ್ಕಾರದ್ದು ಎಂದರು.

ಸಿ.ಟಿ.ರವಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅಧಿಕಾರದಲ್ಲಿಲ್ಲ. ಅಧಿಕಾರದಲ್ಲಿದ್ದಿದ್ದರೆ ಇಷ್ಟು ಹೊತ್ತಿಗೆ ಎಲ್ಲ ಮಾಹಿತಿ ಬಹಿರಂಗಪಡಿಸುತ್ತಿದ್ದೆ. ಕಾಂಗ್ರೆಸ್ ನಾಯಕರ ಮಗನ ವಿಚಾರ ಮಾತನಾಡುವುದಾದರೆ, ಆತ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಆತನನ್ನು ಬಂಧಿಸಲಿ. ಯಾವ ಆಧಾರದ ಮೇಲೆ ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ತರುತ್ತಿದ್ದಾರೆ. ತಪ್ಪು ಮಾಡಿದವರನ್ನು ಸುಮ್ಮನೆ ಬಿಡುವುದೇಕೆ? ಎಂದು ಪ್ರಶ್ನಿಸಿದರು.

ನಮಗೆ ಈಗ ಬಂದಿರುವುದು ಪೊಲೀಸ್ ಇಲಾಖೆ ಹಾಗೂ ಬಿಜೆಪಿ ನಾಯಕರು, ಅಧಿಕಾರಿಗಳು ಕೊಟ್ಟಿರುವ ಹಿಂಬಾಗಿಲಿನ ಮಾಹಿತಿ. ಹೀಗಾಗಿ, ಅಧಿಕಾರದಲ್ಲಿರುವ ಬಿಜೆಪಿ ನ್ಯಾಯಾಲಯಕ್ಕೆ ದಾಖಲೆ ನೀಡಲಿ, ಜನರ ಮುಂದೆ ಬಹಿರಂಗಪಡಿಸಲಿ ಎಂದರು.

ಮುಖ್ಯಮಂತ್ರಿಗಳ ದೆಹಲಿ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಎಂದ ಮೇಲೆ ರಾಜಕೀಯ, ಸರ್ಕಾರದ ಅಧಿಕೃತ ವಿಚಾರಗಳಿರುತ್ತವೆ. ನಾನು ಮಾಧ್ಯಮಗಳಲ್ಲಿ ನೋಡಿದ ಪ್ರಕಾರ ಮುಖ್ಯಮಂತ್ರಿಗಳು ತಾವು ಪ್ರಧಾನಿ ಹಾಗೂ ಬಿಜೆಪಿ ಅಧ್ಯಕ್ಷ ನಡ್ಡಾ ಅವರ ಭೇಟಿಗೆ ಸಮಯಾವಕಾಶ ಕೇಳಿರುವುದಾಗಿ ಹೇಳಿಕೆ ನೀಡಿದ್ದಾರೆ.

ಅವರು ಯಾಕೆ ಹೋಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರ ಅಧಿಕೃತ, ವೈಯಕ್ತಿಕ ಪ್ರವಾಸದ ಬಗ್ಗೆ ನಾನು ಮಾತನಾಡುವುದಿಲ್ಲ. ಆ ರೀತಿ ಏನಾದರೂ ಮಾಹಿತಿ ಬಂದರೆ ನಾನು ಮಾತನಾಡುತ್ತೇನೆ ಎಂದರು.

ಪ್ರಧಾನಿ ಕಾರ್ಯಾಲಯ ಬಿಟ್ ಕಾಯಿನ್ ಹಗರಣ ಸಂಬಂಧ ಮಾಹಿತಿ ಪಡೆದಿದೆಯಂತೆ ಎಂಬ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಬಿಟ್ ಕಾಯಿನ್ ಸಂಬಂಧ ದಾಖಲಾಗಿರುವ ಪ್ರಕರಣ ಸಾರ್ವಜನಿಕ ದಾಖಲೆಯಾಗಿದೆ. ಬಿಟ್ ಕಾಯಿನ್ ಹೆಸರಲ್ಲೇ ಎಫ್ಐಆರ್ ದಾಖಲಾಗಿದೆ. ಕೆಲವರು ನಮ್ಮ ತಂದೆಯವರನ್ನು ಕರೆದುಕೊಂಡು ಹೋಗಿ ಕೂರಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ.

ನ್ಯಾಯಾಲಯ ಮೆಡಿಕಲ್ ರಿಪೋರ್ಟ್ ನೀಡಿ ಎಂದು ಹೇಳಿದ್ದರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡುವುದಿಲ್ಲ ಎಂದು ಹೇಳುತ್ತಾರೆ. ಮೊನ್ನೆ ಒಬ್ಬ ಹುಡುಗನನ್ನು ಕರೆದುಕೊಂಡು ಹೋಗಿ ಒಂದು ತಾಸಿನಲ್ಲೇ ಬಂಧಿಸಿದ್ದಾರೆ ಎಂದು ಹೇಳಿದರು.

ಹಗರಣದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಹೆಸರು ಕೇಳಿ ಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರ ಮಕ್ಕಳ ಹೆಸರು ಕೇಳಿ ಬರುತ್ತದೆಯೋ ಬರಲಿ. ನಾನು ದಾಖಲೆ ಇಲ್ಲದೇ ಬೇರೆಯವರಂತೆ ಬೇಕಾಬಿಟ್ಟಿ ಮಾತನಾಡಲು ಸಾಧ್ಯವಿಲ್ಲ ಎಂದರು.

ಈ ಹಗರಣದ ಮಟ್ಟ ಎಷ್ಟು ಎಂಬ ಪ್ರಶ್ನೆಗೆ, ಈ ಹಗರಣದ ಪ್ರಮಾಣ ಲೆಕ್ಕ ಹಾಕಲು ನನಗೆ ಸಾಧ್ಯವಾಗುತ್ತಿಲ್ಲ. ಅದರ ಅಂಕಿ-ಅಂಶಗಳನ್ನು ನೋಡಿದರೆ ನಾನೇ ಮೂರ್ಛೆ ಬೀಳಬಹುದು ಎಂದು ಸುಮ್ಮನಿದ್ದೇನೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ‘ನ. 14 ರಂದು ಪಕ್ಷದ ಸದಸ್ಯತ್ವ ಅಭಿಯಾನದ ಉದ್ಘಾಟನೆ ಕಾರ್ಯಕ್ರಮವಿದೆ. ಆ ನಂತರ ಸಭೆ ಕರೆದಿದ್ದೇನೆ. ರಾಜ್ಯಮಟ್ಟದ ನಾಯಕರು, ಪರಾಜಿತ ಅಭ್ಯರ್ಥಿಗಳನ್ನು ಕರೆದಿದ್ದು, ಅರ್ಜಿ ಹಾಕಿರುವವರ ಪಟ್ಟಿಯನ್ನು ಇಟ್ಟುಕೊಂಡು ಚರ್ಚೆ ಮಾಡಿ, ಅಭಿಪ್ರಾಯ ಸಂಗ್ರಹಿಸುತ್ತೇವೆ ಎಂದರು.

ಇದನ್ನೂ ಓದಿ: 'ನಾವು ಸತ್ತಿಲ್ಲ, ಬದುಕಿದ್ದೀವಿ ಅಂತಾ ತೋರಿಸೋಕೆ ಕಾಂಗ್ರೆಸ್​​ನವರು ಮಾತನಾಡುತ್ತಿದ್ದಾರೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.