ಬೆಂಗಳೂರು : ಕೇಂದ್ರೀಯ ತನಿಖಾ ದಳಕ್ಕೆ ತಾವು ಹೊಂದಿರುವ ಆಸ್ತಿ ಪಾಸ್ತಿ ಬಗ್ಗೆ ಈ ಮೊದಲೇ ಎಲ್ಲ ಅಗತ್ಯ ದಾಖಲೆಗಳನ್ನು ನೀಡಿದ್ದಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ದಾಳಿ ನಡೆಸಿದ ಬಗ್ಗೆ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನಿಡಿರುವ ಅವರು, ತಹಶೀಲ್ದಾರ್ ಅವರ ಜತೆಗೂಡಿ ಸಿಬಿಐ ಅಧಿಕಾರಿಗಳ ತಂಡವು ದಾಳಿ ನಡೆಸಿದ ಬಗ್ಗೆ ಮನೆಯಿಂದ ದೂರವಾಣಿಯಲ್ಲಿ ಕರೆ ಬಂದಿದ್ದಾಗಿ ಹೇಳಿದರು.
ದಾಳಿ ವೇಳೆ ಸಿಬಿಐ ಅಧಿಕಾರಿಗಳು ಕನಕಪುರ, ದೊಡ್ಡಆಲಹಳ್ಳಿ, ಸಂತೆ ಕೋಡಿಹಳ್ಳಿ ಮನೆ, ತೋಟದ ಮನೆ - ಜಮೀನು ಮತ್ತಿತರರ ಸ್ಥಳಗಳಿಗೆ ಭೇಟಿ ನೀಡಿ ಆಸ್ತಿ-ಪಾಸ್ತಿ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು. ನಿಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆಯಾ ಎಂದು ಕೇಳಿದ ಪ್ರಶ್ನೆಗೆ, ನಮ್ಮ ಹಣೆಬರಹ ಇದು. ಸಿಬಿಐಗೆ ನಮ್ಮ ಮೇಲೆ ಪ್ರೀತಿ ಜಾಸ್ತಿ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ನಾನು ಕಾನೂನಿಗೆ ಗೌರವ ಕೊಡುವವ. ಬಿಜೆಪಿಯವರದ್ದೂ ಪ್ರಕರಣಗಳಿವೆ. ಅವರದ್ದೆಲ್ಲ ಎಸಿಬಿನಲ್ಲಿವೆ. ನನ್ನ ಮೇಲೆ ಇರುವ ಪ್ರಕರಣವನ್ನು ಸ್ಪೀಕರ್ ತನಿಖೆಗೆ ನೀಡಿದ್ದಾರೆ. ನಾನು ತನಿಖೆಗೆ ಸಹಕರಿಸುತ್ತೇನೆ, ಸಮಯ ಕೊಡಿ, ಇದು ಎಲೆಕ್ಷನ್ ಟೈಂ ಎಂದಿದ್ದೇನೆ ಎಂದು ಡಿಕೆಶಿ ತಿಳಿಸಿದರು.
ಮೊದಲಿನಿಂದಲೂ ಮಾನಸಿಕವಾಗಿ ಹಿಂಸೆಯಾಗುತ್ತಿದೆ. ಆದಾಯ ತೆರಿಗೆ ಅಧಿಕಾರಿಗಳು, ಇಡಿ ಅವರಿಗೆ ದಾಖಲೆ ಕೊಟ್ಟಿದ್ದೇವೆ. ನನ್ನ ಒಬ್ಬನ ಮೇಲೆ ಮಾತ್ರ ಯಾಕೆ ಹೀಗೆ? ಸರ್ಕಾರ, ಲೋಕಯುಕ್ತದವರು ಆಸ್ತಿ ಬಗ್ಗೆ ಪ್ರಶ್ನೆ ಮಾಡಬಹುದು. ಇಡಿ ಅಧಿಕಾರಿಗಳು ಮತ್ತೆ ವಿಚಾರಣೆಗೆ ಕರೆದಿದ್ದಾರೆ ಎಂದರು.
ಇದನ್ನೂ ಓದಿ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ