ETV Bharat / state

ಕೊರೊನಾ ಬಂದು ಸಾಯೋದಲ್ಲ, ಊಟ ಇಲ್ಲದೇ ಸಾಯ್ತೇವೆ: ಅಳಲು ತೋಡಿಕೊಂಡ ಸಣ್ಣಪುಟ್ಟ ವ್ಯಾಪಾರಿಗಳು

author img

By

Published : Jun 16, 2021, 3:29 PM IST

Updated : Jun 16, 2021, 3:50 PM IST

covid effects on petty business
ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ಕೋವಿಡ್​ ಎಫೆಕ್ಟ್​​

ಕೋವಿಡ್​ ತಡೆಗೆ ಹೇರಲಾಗಿದ್ದ ಲಾಕ್​ಡೌನ್​ ನಿಯಮಗಳನ್ನು ಸಡಿಲಿಕೆ ಮಾಡುತ್ತಾ ಬರಲಾಗುತ್ತಿದೆ. ಆದರೆ ಮೊದಲಿದ್ದಂತೆ ವ್ಯಾಪಾರ - ವಹಿವಾಟಿಗೆ ಅವಕಾಶವಿಲ್ಲ. ಹೌದು, ಕೋವಿಡ್​ ನಿಯಮಗಳನ್ನು ಯಾರೂ ಮರೆಯುವಂತಿಲ್ಲ. ಪರಿಣಾಮ ಸಣ್ಣಪುಟ್ಟ ವ್ಯಾಪಾರಸ್ಥರು ಇನ್ನೂ ಸಮಸ್ಯೆ ಎದುರಿಸುತ್ತಿದ್ದಾರೆ. ಜೀವನ ನಿರ್ವಹಣೆ ಹೇಗೆ ಎಂಬ ಆತಂಕದಲ್ಲಿದ್ದಾರೆ.

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಯಲು ಪ್ರಮುಖವಾಗಿ ಮಾರುಕಟ್ಟೆಗಳನ್ನು ಬಂದ್ ಮಾಡುವ ನಿರ್ಧಾರ ಬಿಬಿಎಂಪಿ ಕೈಗೊಂಡಿತ್ತು. ಚಿಕ್ಕಪುಟ್ಟ ಮಾರುಕಟ್ಟೆ ಆವರಣದಲ್ಲಿ ಮಾರ್ಷಲ್​​​ಗಳನ್ನು ನಿಯೋಜಿಸಿ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್​ ನಿಯಮಗಳನ್ನು ಪಾಲನೆಯಾಗುವಂತೆ ನೋಡಿಕೊಳ್ಳಲಾಗ್ತಿತ್ತು.

ಇದೀಗ ನಗರದ ಬೃಹತ್ ಮಾರುಕಟ್ಟೆಗಳಾದ ಕೆ.ಆರ್. ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆಗಳ ಆರಂಭಕ್ಕೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಏಪ್ರಿಲ್ 23 ರಿಂದ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ. ಕೆ.ಆರ್ ಮಾರುಕಟ್ಟೆಯಲ್ಲೂ ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಿಲ್ಲ.

ಆರಂಭದಲ್ಲಿ ಕೋವಿಡ್ ಕರ್ಫ್ಯೂ, ನೈಟ್ ಕರ್ಫ್ಯೂ, ನಂತರ ಸೆಮಿ ಲಾಕ್​ಡೌನ್ ದಿನಗಳಲ್ಲಿ ಮಾರುಕಟ್ಟೆಗಳು ಬಂದ್ ಆಗಿತ್ತು. ಜನಸಂದಣಿ ಆಗಿ ಕೋವಿಡ್ ಹರಡುವಿಕೆಯನ್ನು ತಪ್ಪಿಸುವ ಸಲುವಾಗಿ ಮಾರುಕಟ್ಟೆಗಳನ್ನು ವಿಕೇಂದ್ರಿಕರಣ ಮಾಡಲಾಗಿದೆ.

ಸಣ್ಣಪುಟ್ಟ ವ್ಯಾಪಾರಿಗಳ ಸಮಸ್ಯೆ

ಕಲಾಸಿಪಾಳ್ಯ ಮಾರುಕಟ್ಟೆಯು ಸಿಂಗೇನ ಅಗ್ರಹಾರಕ್ಕೆ ಶಿಫ್ಟ್ ಆಗಿದೆ. ಕೆ.ಆರ್. ಮಾರುಕಟ್ಟೆ ವಿಕೇಂದ್ರಿಕರಣ ಆಗಿ ಅವೆನ್ಯೂ ರೋಡ್, ಚಿಕ್ಕಪೇಟೆ, ಕಲಾಸಿಪಾಳ್ಯ, ಫ್ಲೈಓವರ್ ಕಡೆಗಳಲ್ಲಿ 4 ಕಡೆಗೆ ವಿಕೇಂದ್ರಿಕರಣ ಆಗಿದೆ.

ನಾಲ್ಕು ‌ಗುಂಪುಗಳಾಗಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಹಿನ್ನಲೆ ಮಾರುಕಟ್ಟೆಗಳ ಚಿತ್ರಣವೇ ಬದಲಾಗಿದ್ದು, ಬಂದ್ ವಾತಾವರಣ ಇದೆ. ಫ್ಲೈ ಓವರ್ ಅಡಿಯಲ್ಲಿ ತಳ್ಳುವ ಗಾಡಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಫುಟ್​ಪಾತ್, ರಸ್ತೆಗಳಲ್ಲಿ ವ್ಯಾಪಾರಕ್ಕೆ ಬ್ರೇಕ್ ಹಾಕಲಾಗಿದೆ.

ಇನ್ನು ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರ ಕೇವಲ 3 ಸಾವಿರ ರೂ. ಸಹಾಯ ಧನ ಘೋಷಿಸಿದೆ. ಕೆ.ಆರ್. ಮಾರುಕಟ್ಟೆ ಸಂಪೂರ್ಣ ಬಂದ್ ಆಗಿ ಒಂದೂವರೆ ತಿಂಗಳೇ ಕಳೆದಿವೆ. ಒಟ್ಟು 300 ಹೂವಿನ ಅಂಗಡಿಗಳಿದ್ದು, ವಿವಿಧ ವ್ಯಾಪಾರಗಳ 2,200 ಅಂಗಡಿಗಳಿವೆ. 1,200 ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಕೋವಿಡ್​ನಿಂದಾಗಿ ಎಲ್ಲರೂ ನಷ್ಟಕ್ಕೆ ಸಿಲುಕುವಂತಾಗಿದೆ.

ಮಧ್ಯಾಹ್ನ 2 ರವರೆಗೆ ಮಾತ್ರ ಅವಕಾಶ

ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್‌. ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆಗಳು ಬಂದ್ ಆಗಿದೆ.‌ ಇನ್ನು ಯಶವಂತಪುರ, ರಸೆಲ್‌ ಮಾರುಕಟ್ಟೆ, ಬನಶಂಕರಿ ಮಾರುಕಟ್ಟೆಗಳು ಅಲ್ಪ ಪ್ರಮಾಣದಲ್ಲಿ ನಡೆಯುತ್ತಿವೆ.‌ ಈ ಮಾರುಕಟ್ಟೆಗಳಲ್ಲಿ ತರಕಾರಿ ವ್ಯಾಪಾರಕ್ಕೆ ಮಧ್ಯಾಹ್ನ ಎರಡು ಗಂಟೆಯವರೆಗೆ ಅವಕಾಶ ನೀಡಲಾಗಿದೆ.

ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸಿಂಗೇನ ಅಗ್ರಹಾರಕ್ಕೆ (ಹೊಸೂರು ರಸ್ತೆ, ಹುಸ್ಕೂರು ರಸ್ತೆ) ಶಿಫ್ಟ್ ಆಗಿದೆ. ಶೇ. 60ರಷ್ಟು ಜನರಿಗೆ ಕೆಲಸ ಇಲ್ಲದಂತಾಗಿದೆ. 2 ಸಾವಿರ ಹಮಾಲಿಗಳು, 430 ಮಂಡಿ ಹಾಗೂ ಫುಟ್ ಪಾತ್​ನ ವ್ಯಾಪಾರಿಗಳು ಸೇರಿ 3 ಸಾವಿರ ಜನರು ಇದನ್ನೇ ಅವಲಂಬಿಸಿದ್ದು, ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: ಜುಲೈ ಕೊನೆ ವಾರ ಎಸ್ಎಸ್ಎಲ್​​ಸಿ ಪರೀಕ್ಷೆ.. ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ

ಬಾಳೆಹಣ್ಣಿನ ತಳ್ಳುವಗಾಡಿ ವ್ಯಾಪಾರಿ ತ್ಯಾಗರಾಜ್ ಮಾತನಾಡಿ, ಈಗ ವ್ಯಾಪಾರ ನಡೆಸೋದು ಬಹಳ ಕಷ್ಟ ಆಗಿದೆ. ಇಡೀ ದಿನ ಗಾಡಿ ತಳ್ಳಿಕೊಂಡು ಹೋಗಿ ವ್ಯಾಪಾರ ಮಾಡಬೇಕು.

ಮೊದಲಿನಂತೆ ಹೆಚ್ಚಿನ ಗ್ರಾಹಕರೂ ಸಹ ಇಲ್ಲ ಎಂದರು. ಸೊಪ್ಪಿನ ವ್ಯಾಪಾರಿ, ಹೂವಿನ ವ್ಯಾಪಾರಿಗಳು ಮಾತನಾಡಿ, ನಾವು ಹೊಟ್ಟೆಪಾಡಿಗೆ ಏನು ಮಾಡಬೇಕು? ಕೊರೊನಾ ಬಂದು ಸಾಯೋದಲ್ಲ, ಊಟ ಇಲ್ಲದೇ ಸಾಯ್ತೇವೆ. ಕೆಲ ಪೊಲೀಸರು ಹೊಡೆಯುತ್ತಾರೆ.

ಕೆಟ್ಟ ಕೆಟ್ಟ ಮಾತುಗಳನ್ನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ದಿನದ ದುಡಿಮೆ ನಂಬಿ ಬದುಕುವವರು. ನಮಗೆ ಬೇರೆ ಸಂಬಳ ಬರೋದಿಲ್ಲ, ಜೀವನ ಹೇಗೆ ನಡೆಸೋದು ಎಂದು ಅಳಲು ತೋಡಿಕೊಂಡರು.

Last Updated :Jun 16, 2021, 3:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.