ETV Bharat / state

ಗುತ್ತಿಗೆದಾರರ ಆರೋಪದ ಹಿಂದೆ ಕಾಂಗ್ರೆಸ್‌ ರಾಜಕೀಯ ಇದೆ : ಸಚಿವ ಸುಧಾಕರ್‌

author img

By

Published : Aug 24, 2022, 7:10 PM IST

Etv Bharatcongress-politics-behind-contractors-allegation-minister-sudhakar
Etv Bharatಗುತ್ತಿಗೆದಾರರ ಆರೋಪ ಹಿಂದೆ ಕಾಂಗ್ರೆಸ್‌ ರಾಜಕೀಯ ಇದೆ : ಸಚಿವ ಸುಧಾಕರ್‌

ಕೆಂಪಣ್ಣ ಅವರಿಗೆ ಇನ್ನೂ ಏನಾದರೂ ಸಹಾಯ ಮಾಡಬೇಕೆಂದರೆ ಸರ್ಕಾರ ಆ ಕೆಲಸ ಮಾಡಲು ಸಿದ್ಧವಿದೆ. ಅವರಿಗೆ ಸಾಮಾಜಿಕ ಕಳಕಳಿ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಬಹುದಿತ್ತು. ಆದರೆ ಇವೆಲ್ಲ ಕಾಂಗ್ರೆಸ್‌ ಸ್ಪಾನ್ಸರ್‌ ಆಗಿದ್ದು, ಇದನ್ನೇ ಚುನಾವಣೆಯ ಅಜೆಂಡಾ ಮಾಡಿಕೊಳ್ಳಲು ಹೊರಟಿದ್ದಾರೆ. ಕಾಂಗ್ರೆಸ್‌ ಭ್ರಷ್ಟಾಚಾರ ಮಾಡಿದ್ದಕ್ಕೆ ಜನರು ಅವರನ್ನು ಇಡೀ ದೇಶದಿಂದ ಕಿತ್ತೊಗೆದಿದ್ದಾರೆ ಎಂದು ಕಮಿಷನ್​ ಆರೋಪದ ಬಗ್ಗೆ ಸಚಿವ ಸುಧಾಕರ್​ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕ್ಷಣದಿಂದ ಏನೇನೋ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಭ್ರಷ್ಟಾಚಾರ ನಡೆಸಿ ಜನರಿಂದ ಕಿತ್ತೊಗೆಯಲ್ಪಟ್ಟ ಕಾಂಗ್ರೆಸ್‌, ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೆಂಪಣ್ಣನವರು ವಯಸ್ಸು ಹಾಗೂ ಅನುಭವದಲ್ಲಿ ಹಿರಿಯರು. ಅವರು ಬಯಸಿದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿ ಅವರ ಸಲಹೆ, ದೂರು, ಅಹವಾಲುಗಳನ್ನು ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರ ಸಲಹೆಗಳನ್ನೂ ಜಾರಿ ಮಾಡಿದ್ದಾರೆ. ಟೆಂಡರ್‌ಗಳ ಪರಿಶೀಲನೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದರು.

ಇದನ್ನೂ ಓದಿ: ಮುಖ್ಯಮಂತ್ರಿ ಸೇರಿ ಎಲ್ಲರೂ ಭ್ರಷ್ಟರು, ಕಮಿಷನ್ ಬಗ್ಗೆ ಮೋದಿಗೆ ಮತ್ತೊಮ್ಮೆ ಪತ್ರ: ಕೆಂಪಣ್ಣ

ಯಾವ ಸರ್ಕಾರವೂ ಇಂತಹ ಉತ್ತಮ ಕ್ರಮ ಜಾರಿ ಮಾಡಿಲ್ಲ. ಹಾಗೆಯೇ ವಿವಿಧ ಇಲಾಖೆಗಳಲ್ಲಿ ಬಾಕಿ ಇದ್ದ ಬಿಲ್‌ಗಳನ್ನು ವಿಲೇವಾರಿ ಮಾಡಲಾಗಿದೆ. ಇದುವರೆಗೆ ಕೆಂಪಣ್ಣ ದೇವರಂತೆ ಇದ್ದರು. ಆದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಏನಾಯ್ತು ಅಂತ ಗೊತ್ತಿಲ್ಲ. ಅವರಿಬ್ಬರ ನಡುವೆ ಏನು ಚರ್ಚೆಯಾಗಿದೆ ಹಾಗೂ ಚರ್ಚೆ ಬಳಿಕ ಏಕೆ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.

ಬಿಜೆಪಿ ಪ್ರಾಮಾಣಿಕತೆಗೆ ಕಾಂಗ್ರೆಸ್‌ ತಿರುಮಂತ್ರ : ಕೆಂಪಣ್ಣ ಅವರಿಗೆ ಇನ್ನೂ ಏನಾದರೂ ಸಹಾಯ ಮಾಡಬೇಕೆಂದರೆ ಸರ್ಕಾರ ಆ ಕೆಲಸ ಮಾಡಲು ಸಿದ್ಧವಿದೆ. ಅವರಿಗೆ ಸಾಮಾಜಿಕ ಕಳಕಳಿ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಬಹುದಿತ್ತು. ಆದರೆ ಇವೆಲ್ಲ ಕಾಂಗ್ರೆಸ್‌ ಸ್ಪಾನ್ಸರ್‌ ಆಗಿದ್ದು, ಇದನ್ನೇ ಚುನಾವಣೆಯ ಅಜೆಂಡಾ ಮಾಡಿಕೊಳ್ಳಲು ಹೊರಟಿದ್ದಾರೆ. ಕಾಂಗ್ರೆಸ್‌ ಭ್ರಷ್ಟಾಚಾರ ಮಾಡಿದ್ದಕ್ಕೆ ಜನರು ಅವರನ್ನು ಇಡೀ ದೇಶದಿಂದ ಕಿತ್ತೊಗೆದಿದ್ದಾರೆ. ಈಗ ಬಿಜೆಪಿಯ ಪ್ರಾಮಾಣಿಕತೆಗೆ ತಿರುಮಂತ್ರ ಹಾಕಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಇದು ಕೇವಲ ರಾಜಕೀಯ ಪ್ರೇರಿತ ಯತ್ನ. ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್‌ ಈ ವಿಚಾರವನ್ನು ಹೆಚ್ಚು ಸುದ್ದಿ ಮಾಡುತ್ತದೆ. ಈ ಮೂಲಕ ಬಿಜೆಪಿಯ ಬಗ್ಗೆ ಜನರಲ್ಲಿ ನಕಾರಾತ್ಮಕ ಭಾವನೆ ಉಂಟು ಮಾಡಿ ಮತ ಕೇಳಲಾಗುತ್ತದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಕಮಿಷನ್ ಆರೋಪ ಬಗ್ಗೆ ಸರ್ಕಾರದ ವಿರುದ್ಧ ನ್ಯಾಯಾಂಗ ತನಿಖೆ ಮಾಡಿ: ಸಿದ್ದರಾಮಯ್ಯ ಆಗ್ರಹ

ಕೆಂಪಣ್ಣ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳ ಬಗ್ಗೆ ಹೇಳಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡುವುದಾದರೆ, ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗಬೇಕೆಂದರೆ ಲೋಕಾಯುಕ್ತಕ್ಕೆ ದೂರು ನೀಡಬಹುದು. ಆದರೆ ಮಾಧ್ಯಮದ ಮುಂದೆ ಬಂದು ಹೇಳಿಕೆ ನೀಡುವುದನ್ನು ನೋಡಿದರೆ ಅವರ ಉದ್ದೇಶ ಏನೆಂಬುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್‌ ಪಕ್ಷ ಕೆಂಪಣ್ಣನವರನ್ನು ಬಲಿಪಶು ಮಾಡುವ ಪ್ರಯತ್ನ ಮಾಡುತ್ತಿದೆ. ಅವರ ಹಿರಿತನ, ಅನುಭವವನ್ನು ಕಾಂಗ್ರೆಸ್‌ ಬಳಸಿಕೊಳ್ಳುತ್ತಿದೆ. ಕೆಂಪಣ್ಣನವರು ಇದಕ್ಕೆ ಬಲಿಯಾಗುವುದು ಬೇಡ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಕಮಿಷನ್​ ಆರೋಪ: ಲೋಕಾಯುಕ್ತಕ್ಕೆ ದೂರು ಕೊಡಲಿ, ತನಿಖೆಯಾಗಲಿ ಎಂದ ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.