ETV Bharat / state

ಸರ್ಕಾರ ಕೂಡಲೇ ಜಾತಿ ಗಣತಿ ವರದಿ ಪಡೆದು ನಿಯಮಾವಳಿ ರೂಪಿಸಲಿ: ಬಸವರಾಜ ರಾಯರೆಡ್ಡಿ

author img

By ETV Bharat Karnataka Team

Published : Oct 10, 2023, 9:07 PM IST

ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ
ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ

ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರ ಕೂಡಲೇ ಜಾತಿ ಜನಗಣತಿ ವರದಿ ಪಡೆದುಕೊಂಡು ಬಿಡುಗಡೆ ಮಾಡಲಿ. ಆ ವರದಿಯಂತೆ ನಿಯಮಾವಳಿಗಳನ್ನೂ ರೂಪಿಸಲಿ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದರು.

ವಿಕಾಸಸೌಧದಲ್ಲಿ ಜಾತಿ ಜನಗಣತಿ ವರದಿ ವಿಚಾರವಾಗಿ ಮಂಗಳವಾರ ಮಾತನಾಡಿದ ಅವರು, ಸಿದ್ದರಾಮಯ್ಯನವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ರಚಿಸಿದ್ದ ಆಯೋಗಕ್ಕೆ ನಮ್ಮೆಲ್ಲರ ಸ್ವಾಗತವಿದೆ. ಈ ವರದಿ 2018 ರಲ್ಲೇ ಬಿಡುಗಡೆ ಆಗಬೇಕಿತ್ತು. ಆದರೆ, ಕೆಲ ಕಾರಣಗಳಿಂದ ಆಗಲಿಲ್ಲ. ಈಗ ಮತ್ತೊಂದು ಅವಕಾಶ ಬಂದಿದೆ. ರಾಜ್ಯೋತ್ಸವ ದಿನದಂದು ಈ ವರದಿಯನ್ನು ಪಡೆಯಲಿ. ವರದಿ ಸ್ವೀಕರಿಸಿದ ಮೇಲೆ ಅದರ ಮೇಲೆ ಚರ್ಚೆ ಆಗುತ್ತೆ. ಆ ನಂತರ ವರದಿ ಮೇಲೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿ ಎಂದರು.

ಜಾತಿ ಜನಗಣತಿಗೆ ವಿರೋಧ ಬರುತ್ತಿರುವುದು ಸಹಜ. ಅದೆಲ್ಲ ಅವರವರ ಅಭಿಪ್ರಾಯ. ಈ ವರದಿ ಬಿಡುಗಡೆ ಆದರೆ ಕೆಲವು ಸಮುದಾಯಗಳ ಸಂಖ್ಯೆ ಕಮ್ಮಿ ಆಗುತ್ತೆ ಅನ್ನೋದು ಸುಳ್ಳು. ಅದು ಮಾನಸಿಕ ಭ್ರಮೆ. ಲಿಂಗಾಯತರು, ಒಕ್ಕಲಿಗರು ತಲೆತಲಾಂತರದಿಂದ ಈ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ವರದಿ ಬಿಡುಗಡೆಯಾದರೆ ನಾವು ಕಮ್ಮಿ ಆಗಬಹುದು ಅನ್ನೋ ಕೀಳರಿಮೆ ಯಾರಿಗೂ ಬೇಡ. ಇದೊಂದೇ ಮಾನದಂಡ ಆಗಲ್ಲ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಗುರುತಿಸಿಕೊಳ್ಳಬೇಕು ಅನ್ನೋದು ಲಿಂಗಾಯತರ ಪ್ರಮುಖ ಬೇಡಿಕೆ. ಈ ಸಂಬಂಧ ನಾನೂ ಕೂಡಾ ಸಿದ್ದರಾಮಯ್ಯ ಅವರಿಗೆ ಆಗ್ರಹ ಮಾಡುತ್ತೇನೆ. ಕೂಡಲೇ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆಯಲಿ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಲಿಂಗಾಯತರಿಗೆ ಸ್ಥಾನ ಕೊಡುವಂತೆ ಪತ್ರದ ಮೂಲಕ ಮನವಿ ಮಾಡಲಿ ಎ‌ಂದು ಒತ್ತಾಯಿಸಿದರು.

ಲಿಂಗಾಯತ ಅಧಿಕಾರಿಗಳ ಕಡೆಗಣನೆ ಬಗ್ಗೆ ಶಾಮನೂರು ಶಿವಶಂಕರಪ್ಪನವರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಲಿಂಗಾಯತ ಅಧಿಕಾರಿಗಳ ವಿಚಾರ ರಾಜ್ಯಕ್ಕೆ ಬಾಧಿಸುವಂಥದ್ದಲ್ಲ. ಶಾಮನೂರು ಅವರು ಅವರ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಸರ್ಕಾರದ ಬದಲಾವಣೆ ಆದಾಗ ಯಾರ್ಯಾರೋ ಯಾರ್ಯಾರನ್ನೋ ಹಾಕ್ಕೊಳ್ಳುವುದು ಸಹಜ. ಇದು ಸಣ್ಣ ವಿಷಯ. ಈ ವಿಚಾರ ಈಗ ಶಾಮನೂರು ಅವರಿಗೂ ಮನವರಿಕೆ ಆಗಿದೆ. ಅವರು ಮುಖ್ಯಮಂತ್ರಿ ಜತೆ ಮಾತನಾಡುವೆ ಅಂದಿದ್ದಾರೆ ಎಂದರು.

ಇದನ್ನೂ ಓದಿ: ಜಾತಿಗಣತಿ ವರದಿ ವಿಚಾರ ಇಟ್ಟುಕೊಂಡು ಸರ್ಕಾರ ರಾಜಕೀಯ ಮಾಡುತ್ತಿದೆ: ಹೆಚ್ ಡಿ ಕುಮಾರಸ್ವಾಮಿ

ಬಿಡದಿಯ ತಮ್ಮ ತೋಟದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್​ನವರು ಒಂದು ಕಡೆ ಜಾತ್ಯತೀತ ಎನ್ನುತ್ತಾರೆ. ಇನ್ನೊಂದು ಕಡೆ ಜಾತಿಗಣತಿ ವರದಿ ಇಟ್ಟುಕೊಂಡು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಲು ಹೊರಟಿದ್ದಾರೆ ಎಂದಿದ್ದಾರೆ.

ಜಾತಿಗಣತಿ ವರದಿ ವಿಚಾರ ಇಟ್ಟುಕೊಂಡು ಸರ್ಕಾರವು ರಾಜಕೀಯ ಮಾಡುತ್ತಿದೆ. ಕಾಂತರಾಜು ಎಂಬುವರಿಂದ ವರದಿ ಕೊಡಿಸಿದ್ದೀವಿ. ಕುಮಾರಸ್ವಾಮಿ ಅವರು ಒಪ್ಪಲಿಲ್ಲ ಎಂದು ಹಾಲಿ ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ, ಸದಸ್ಯ ಕಾರ್ಯದರ್ಶಿ ಸಹಿ ಇಲ್ಲದೆ ಆ ವರದಿಯನ್ನು ಸ್ವೀಕಾರ ಮಾಡುವುದು ಹೇಗೆ? ಎನ್ನುವ ಅರಿವು ಸಿಎಂ ಆದವರಿಗೆ ಇಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.