ETV Bharat / state

ಭಿನ್ನಮತೀಯರಿಗೆ ಸಿಎಂ ಆಪರೇಷನ್: ಕುರ್ಚಿಗೆ ಕುತ್ತು ತರಲು ಸ್ಕೆಚ್ ಹಾಕಿದವರಿಗೆ ಬಿಎಸ್​ವೈ ಮಾಡಿದ್ದೇನು?

author img

By

Published : Jan 14, 2021, 4:18 AM IST

CM BSY given ministerial post to dissident MLAs
ಭಿನ್ನಮತೀಯರಿಗೆ ಸಿಎಂ ಆಪರೇಷನ್

ಮಂತ್ರಿಗಿರಿ ಸಿಗದೇ ಸಮಾನ ದು:ಖಿಗಳಾಗಿದ್ದ ಹಿರಿಯ ಶಾಸಕರಾದ ಬಸನಗೌಡ ಯತ್ನಾಳ್, ಮುರುಗೇಶ ನಿರಾಣಿ, ಉಮೇಶ ಕತ್ತಿ, ಅರವಿಂದ ಬೆಲ್ಲದ ಹಾಗು ಉತ್ತರ ಕರ್ನಾಟಕದ ಇತರ ಅತೃಪ್ತ ಶಾಸಕರ ಗುಂಪು ದಿನದಿಂದ ದಿನಕ್ಕೆ ಬೆಳೆದು ಅಪಾಯದ ಮುನ್ಸೂಚನೆ ನೀಡುತ್ತಿರುವುದನ್ನು ಮನಗಂಡ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲು ಬಂಡಾಯ ಶಾಸಕರ ಗುಂಪಿನಿಂದ ಉಮೇಶ ಕತ್ತಿ ಯನ್ನು ಬೇರ್ಪಡಿಸಿ ಸಚಿವ ಸ್ಥಾನದ ಭರವಸೆ ನೀಡಿ ತಮ್ಮ ವಿಶ್ವಾಸಕ್ಕೆ ತಗೆದುಕೊಂಡಿದ್ದಾರೆ.

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಾರಿ ಯಾರೂ ನಿರೀಕ್ಷಿಸದ ರಾಜಕೀಯ ಜಾಣ್ಮೆ ಮೆರೆದಿದ್ದಾರೆ .ತೆರೆಮರೆಯಲ್ಲಿ ತಮ್ಮ ವಿರುದ್ಧ ನಾಯಕತ್ವ ಬದಲಾವಣೆಗಾಗಿ ಹೋರಾಡುತ್ತಿದ್ದ ಭಿನ್ನಮತೀಯ ಶಾಸಕರ ಗುಂಪನ್ನು ಛಿದ್ರಮಾಡಿದ್ದಾರೆ.

ರಹಸ್ಯವಾಗಿ ದಿನದಿಂದ ದಿನಕ್ಕೆ ಸಂಘಟಿತರಾಗಿ ಸಿಎಂ ಕುರ್ಚಿಗೇ ಕಂಟಕ ತರುವ ಅಪಾಯದ ಮುನ್ಸೂಚನೆ ನೀಡಿದ್ದ ಸಚಿವ ಸ್ಥಾನ ವಂಚಿತ ಶಾಸಕರಲ್ಲಿ ಪ್ರಬಲ ಮುಖಂಡರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವ ಮೂಲಕ ಬಂಡಾಯದ ಧ್ವನಿಯನ್ನ ಅಡಗಿಸುವ ಚಾಣಾಕ್ಷ ನಡೆಯನ್ನು ಅನುಸರಿಸಿದ್ದಾರೆ. ಆಪರೇಷನ್ ಕಮಲದಲ್ಲಿ ಅಪಾರ ಅನುಭವ ಇರುವ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವದ ವಿರುದ್ಧ ಧ್ವನಿಯೆತ್ತಿ ತಮ್ಮನ್ನು ಪದಚ್ಯುತಗೊಳಿಸುವ ಪ್ರಯತ್ನದಲ್ಲಿ ನಿರತರಾಗಿದ್ದ ಬಂಡಾಯ ಶಾಸಕರಲ್ಲಿ ಅಪಾಯಕಾರಿ ಎನಿಸಿದವರಿಗೆ ಮಂತ್ರಿ ಭಾಗ್ಯ ನೀಡಿ ಭಿನ್ನಮತವನ್ನು ತೊಡೆದುಹಾಕುವ ಕೆಲಸ ಮಾಡಿದ್ದಾರೆ.

ಕಳೆದೆರಡು ಬಾರಿ ನಡೆದ ಮಂತ್ರಿಮಂಡಲ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗದೇ ಅತೃಪ್ತರಾಗಿ ಭಿನ್ನಮತೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರನ್ನಲಾದ ಹಿರಿಯ ಶಾಸಕರಾದ ಉಮೇಶ ಕತ್ತಿ, ಮುರುಗೇಶ ನಿರಾಣಿ ಹಾಗು ಬಿಜೆಪಿ ಸರಕಾರ ರಚನೆಯಲ್ಲಿ ಶ್ರಮಿಸಿದ ಸಿಪಿ ಯೋಗೀಶ್ವರ್ ಅವರ ವಿರುದ್ಧ ರಾಜಕೀಯ ಹಗೆ ಸಾಧಿಸದೇ ಸಿಎಂ ಯಡಿಯೂರಪ್ಪನವರು ಸಚಿವ ಸ್ಥಾನ ನೀಡುವ ಮೂಲಕ ಬೂದಿ ಮುಚ್ಚಿದ ಕೆಂಡದಂತಿದ್ದ ಬಂಡಾಯದ ಬೆಂಕಿಯನ್ನು ಸದ್ಯದ ಮಟ್ಟಿಗೆ ಆರಿಸಿದ್ದಾರೆಂದೇ ಹೇಳಬಹುದು.

ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ನಾಯಕರಲ್ಲವೆಂದು ಬಹಿರಂಗವಾಗಿ ಹೇಳಿಕೆ ನೀಡಿ ಅತೃಪ್ತ ಶಾಸಕರ ತಂಡವನ್ನುಕಟ್ಟುತ್ತಿದ್ದ ಮಾಜಿ ಕೇಂದ್ರ ಸಚಿವ ಬಸನಗೌಡ ಯತ್ನಾಳ್ ಮತ್ತವರ ಜತೆ ಸತತ ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆಂದು ಹೇಳಲಾಗಿದ್ದ ಉಮೇಶ ಕತ್ತಿ, ಮುರುಗೆಶ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಿ ಬಂಡಾಯ ಶಾಸಕರ ಗುಂಪಿನಿಂದ ಪ್ರತ್ಯೇಕಿಸುವಲ್ಲಿಬಿಎಸ್ ವೈ ಯಶ ಕಂಡಿದ್ದಾರೆಂದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.

ಮಂತ್ರಿಗಿರಿ ಸಿಗದೇ ಸಮಾನ ದು:ಖಿಗಳಾಗಿದ್ದ ಹಿರಿಯ ಶಾಸಕರಾದ ಬಸನಗೌಡ ಯತ್ನಾಳ್, ಮುರುಗೇಶ ನಿರಾಣಿ, ಉಮೇಶ ಕತ್ತಿ, ಅರವಿಂದ ಬೆಲ್ಲದ ಹಾಗು ಉತ್ತರ ಕರ್ನಾಟಕದ ಇತರ ಅತೃಪ್ತ ಶಾಸಕರ ಗುಂಪು ದಿನದಿಂದ ದಿನಕ್ಕೆ ಬೆಳೆದು ಅಪಾಯದ ಮುನ್ಸೂಚನೆ ನೀಡುತ್ತಿರುವುದನ್ನು ಮನಗಂಡ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲು ಬಂಡಾಯ ಶಾಸಕರ ಗುಂಪಿನಿಂದ ಉಮೇಶ ಕತ್ತಿ ಯನ್ನು ಬೇರ್ಪಡಿಸಿ ಸಚಿವ ಸ್ಥಾನದ ಭರವಸೆ ನೀಡಿ

ತಮ್ಮ ವಿಶ್ವಾಸಕ್ಕೆ ತಗೆದುಕೊಂಡಿದ್ದಾರೆ.

ಬಂಡಾಯ ಚಟುವಟಿಕೆಗಳ ನಾಯಕತ್ವ ವಹಿಸಬೇಕಿದ್ದ ಉಮೇಶ ಕತ್ತಿ ಉಲ್ಟಾ ಹೊಡೆದ ನಂತರ ಒಂದು ಹಂತದಲ್ಲಿ ಭಿನ್ನ ಶಾಸಕರ ಹೋರಾಟಕ್ಕೆ ಹಿನ್ನಡೆಯಾಯಿತು. ಮುರುಗೇಶ ನಿರಾಣಿ ಮತ್ತು ಯತ್ನಾಳ್ ತೆರೆಯ ಮರೆಯಲ್ಲಿ ನಡೆಸುತ್ತಿದ್ದ ರಾಜಕೀಯ ಚಟುವಟಿಕೆಗಳ ಬಗ್ಗೆ ಅರಿವಿದ್ದ ಸಿಎಂ ಯಡಿಯೂರಪ್ಪನವರು ತಮ್ಮ ರಾಜಕೀಯ ಅನುಭವದಿಂದ ಎದುರಿಸುತ್ತಲೇ ಬಂದರು. ಕೆಲವೊಮ್ಮೆ ಹೈಕಮಾಂಡ್ ಕಡೆಯಿಂದಲೂ ತೊಂದರೆಯಾದಾಗಲೂ ಸಹ ಧೈರ್ಯ ಗುಂದದೇ ಅದಕ್ಕೆ ಪ್ರತಿ ತಂತ್ರ ಹೆಣೆದು ಸಿಎಂ ಕುರ್ಚಿಗೆ ಸಂಚಕಾರ ತರಲೆತ್ನಿಸಿದ ಪಕ್ಷದೊಳಗಿನ ರಾಜಕೀಯ ವಿರೋಧಿಗಳ ತಂತ್ರಗಾರಿಕೆಗಳನ್ನು ವಿಫಲಗೊಳಿಸುತ್ತಿದ್ದರು.

ಬಂಡಾಯಕ್ಕೆ ಡೈನಮೆಟ್ ಇಟ್ಟರಾ ಸಿಎಂ..?

ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದ ಬಸನಗಾವಡ ಯತ್ನಾಳ್ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಏಕಾಂಗಿಯಾಗಿ ಮಾಡುವ ಪ್ರಯತ್ನ ನಡೆಸಿದ್ದಾರೆ. ಸಚಿವರಾಗಿ ನೇಮಕವಾಗಿರುವ ಹಿರಿಯ ಶಾಸಕರಾದ ಉಮೇಶ ಕತ್ತಿ , ಮುರುಗೇಶ ನಿರಾಣಿ ಮುಂದಿಟ್ಟುಕೊಂಡು ಉತ್ತರ ಕರ್ನಾಟಕ ಭಾಗದ ಅತೃಪ್ತ ಶಾಸಕರ ಬಂಡಾಯವನ್ನು ಶಮನಗೊಳಿಸುವ ಆಲೋಚನೆಯೂ ಯಡಿಯೂರಪ್ಪನವರ ಬಳಿ ಇದೆಯೆಂದು ಹೇಳಲಾಗುತ್ತಿದೆ.

ಸಚಿವ ಸ್ಥಾನ ವಂಚಿತ ಶಾಸಕರಿಗೆ ಭವಿಷ್ಯದಲ್ಲಿ ಮಂತ್ರಿ ಭಾಗ್ಯ ನೀಡುವ ಭರವಸೆ, ಸದ್ಯಕ್ಕೆ ನಿಗಮ - ಮಂಡಳಿಯಲ್ಲಿ ಅಧಿಕಾರ ನೀಡುವ ತಂತ್ರಗಾರಿಕೆಯನ್ನು ಬಿಎಸ್​ವೈ ಪ್ರಯೋಗಿಸುತ್ತಾ ಭಿನ್ನಮತೀಯ ಶಾಸಕರ ಶಕ್ತಿಯನ್ನು ಕುಂದಿಸುತ್ತಾ ಸಿಎಂ ಕುರ್ಚಿಯನ್ನು ಭದ್ರಪಡಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ.

ಒಂದು ಹಂತದಲ್ಲಿ ಮುಖ್ಯಮಂತ್ರಿಗಳು ಬದಲಾಗುತ್ತಾರೆ. ಸಿಎಂ ಪದಚ್ಯುತಿಯಾಗುತ್ತದೆ ಎಂದು ನಿರ್ಮಾಣವಾಗುತ್ತಿದ್ದ ರಾಜಕೀಯ ವಾತಾವರಣವನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಗೊಳಿಸಿರುವುದು ಈ ಸಚಿವ ಸಂಪುಟ ವಿಸ್ತರಣೆಯಲ್ಲಿ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.