ETV Bharat / state

4 ವಲಯಗಳ 29 ಸ್ಥಳಗಳಲ್ಲಿ ಒತ್ತುವರಿ ತೆರವು: ಬಿಬಿಎಂಪಿ

author img

By

Published : Sep 15, 2022, 10:40 PM IST

clearance-of-encroachments-at-29-places-in-4-zones
4 ವಲಯಗಳ 29 ಸ್ಥಳಗಳಲ್ಲಿ ಒತ್ತುವರಿ ತೆರವು: ಬಿಬಿಎಂಪಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ನಡೆಯುತ್ತಿದ್ದು, ಇಂದು 4 ವಲಯಗಳ ಒಟ್ಟು 29 ಸ್ಥಳಗಳಲ್ಲಿ ಒತ್ತುವರಿ ತೆರವು ಕಾರ್ಯ ಮಾಡಲಾಗಿದೆ.

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಯ ಒತ್ತುವರಿಗಳ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಇಂದು ದಾಸರಹಳ್ಳಿ, ಯಲಹಂಕ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯ ಸೇರಿದಂತೆ ಒಟ್ಟು 29 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಹೇಳಿದೆ.

ದಾಸರಹಳ್ಳಿ ವಲಯದಲ್ಲಿ ತೆರವು ಕಾರ್ಯ: ದಾಸರಹಳ್ಳಿ ವಲಯ ನೆಲಗದರನಹಳ್ಳಿ ರಸ್ತೆ ರುಕ್ಮಿಣಿ ನಗರದಲ್ಲಿ 3 ಕಾಲು ಗುಂಟೆ ಜಾಗದಲ್ಲಿ ಒತ್ತುವರಿ ಮಾಡಿಕೊಂಡಿದ್ದ 11 ಒತ್ತುವರಿಗಳಲ್ಲಿ, 4 ತಡೆಗೋಡೆ, 1 ಮೆಟ್ಟಿಲು ಜಾಗ, 1 ಶೌಚಾಲಯ, 1 ಎಲೆಕ್ಟ್ರಿಕಲ್ ಬಾಕ್ಸ್ ರೂಂ ಹಾಗೂ ಕಾಲುವೆಯ ಮೇಲಿದ್ದ ಮನೆಯ ಮೂಲೆ ಭಾಗಗಳ ಒತ್ತುವರಿಗಳನ್ನು 1 ಜೆಸಿಬಿ ಹಾಗೂ 1 ಹಿಟಾಚಿ ಮೂಲಕ ತೆರವುಗೊಳಿಸಿ ಸಂಗ್ರಹವಾಗುತ್ತಿರುವ ಕಟ್ಟಡ ಭಗ್ನಾವಶೇಷಗಳನ್ನು 2 ಟ್ರ್ಯಾಕ್ಟರ್ ಗಳ ಮೂಲಕ ತೆರವುಗೊಳಿಸಲಾಗಿದೆ.

ಜೆಸಿಬಿ ಹೋಗಲು ಸಾಧ್ಯವಾಗದಿರುವ ಕಡೆ ಸಿಬ್ಬಂದಿಯ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಅದಕ್ಕಾಗಿ 20 ಸಿಬ್ಬಂದಿಯು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸ್ಥಳದಲ್ಲಿ ನಾಳೆಯೂ ಒತ್ತುವರಿ ತೆರವು ಕಾರ್ಯಾಚರಣೆ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದೆ.

ಯಲಹಂಕ ವಲಯದಲ್ಲಿ ಒತ್ತುವರಿ ತೆರವು: ಯಲಹಂಕ ವಲಯಲ್ಲಿ ಇಂದು 2 ಒತ್ತುವರಿಗಳನ್ನು ತೆರವುಗೊಳಿಸಿದ್ದು, ಈ ಪೈಕಿ ಕುವೆಂಪುನಗರ ವಾರ್ಡ್ ಸಿಂಗಾಪುರ ಲೇಔಟ್ ನಲ್ಲಿ ಸರ್ವೇ ಸಂಖ್ಯೆ 97 ಹಾಗೂ 100 ರಲ್ಲಿ ಸಿಂಗಾಪುರ ಕೆರೆ ಹಿಂಭಾಗದಲ್ಲಿರುವ ಲ್ಯಾಂಡ್ ಮಾರ್ಕ್ ಅಪಾರ್ಟ್ಮ್ಂಟ್ ನಿಂದ 2.4 ಅಡಿ ಅಗಲ ಹಾಗೂ 75 ಮೀಟರ್ ಉದ್ದದ ತೂಬುಗಾಲುವೆ ಒತ್ತುವರಿ ಮಾಡಿಕೊಂಡಿದ್ದು, ತೂಬುಗಾಲುವೆ ಮೇಲ್ಭಾಗದಲ್ಲಿ ನಿರ್ಮಿಸಿದ್ದ ಸೆಕ್ಯುರಿಟಿ ಕೊಠಡಿ ತೆರವುಗೊಳಿಸಲಾಗಿದೆ ಎಂದು ಹೇಳಿದೆ.

ಸಿಂಗಾಪುರ ಕೆರೆಯ ಬಳಿ ಸರ್ವೇ ಸಂಖ್ಯೆ 95 ರಲ್ಲಿ ಬಿಲ್ಡರೊಬ್ಬರು ಮಳೆ ನೀರುಗಾಲುವೆ ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಾಣ ಮಾಡಿದ್ದು, ಮಳೆ ನೀರು ಜಾಗವನ್ನು ಪಾಲಿಕೆ ವಶಕ್ಕೆ ಪಡೆದಿದೆ ಎಂದು ಮಾಹಿತಿ ನೀಡಿದೆ.

ಬೊಮ್ಮನಹಳ್ಳಿ ವಲಯದಲ್ಲಿ ಒತ್ತುವರಿ ತೆರವು : ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಣನಕುಂಟೆ ವ್ಯಾಪ್ತಿಯ ಸರ್ವೇ ಸಂಖ್ಯೆ 29 ರಲ್ಲಿ ಒತ್ತುವರಿ ಮಾಡಿಕೊಂಡಿದ್ದ 11 ಒತ್ತುವರಿಗಳಲ್ಲಿ, 1 ಕಮರ್ಷಿಯಲ್ ಆರ್‌ಸಿಸಿ ಕಟ್ಟಡದ ಭಾಗ, 8 ಶೆಡ್ ಹಾಗೂ 2 ಜಿಂಕ್ ಶೀಟ್ ಶೆಡ್ ಸೇರಿದಂತೆ ಸುಮಾರು 15 ಅಡಿ ಅಗಲ ಹಾಗೂ 330 ಅಡಿ ಉದ್ದದಷ್ಟು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದು, 1 ಜೆಸಿಬಿ, 1 ಹಿಟಾಚಿ, 2 ಟ್ರ್ಯಾಕ್ಟರ್ ಹಾಗೂ 15ಕ್ಕೂ ಹೆಚ್ಚು ಸಿಬ್ಬಂದಿಯ ಸಹಯೋಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಹೇಳಿದೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಹೊಂಗಸಂದ್ರದಲ್ಲಿ 3 ಒತ್ತುವರಿಗಳ ಪೈಕಿ, 7.5 ಮೀಟರ್ ಜಾಗದಲ್ಲಿ 160 ಚದರ ಅಡಿಯಷ್ಟು 1 ಕಟ್ಟಡ, 10 ಅಡಿಯ ಕಾಂಪೌಂಡ್ ಗೋಡೆ ಹಾಗೂ 4 X 10 ನ ಶೆಡ್ ಅನ್ನು 1 ಜೆಸಿಬಿ ಹಾಗೂ 10 ಸಿಬ್ಬಂದಿಯ ಸಹಯೋಗದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದಿದೆ.

ಮಹದೇವಪುರ ವಲಯದಲ್ಲಿ ಒತ್ತುವರಿ ತೆರವು : ಮಹದೇವಪುರ ವಲಯ ಯಮಲೂರು ಬಳಿಯ ಎಪ್ಸಿಲಾನ್ ಹಿಂಭಾಗ ಬಳಿಯಿರುವ ಮುನೇಶ್ವರ ದೇವಸ್ಥಾನದ ಬಳಿ ಚರಂಡಿಯ ಮೇಲೆ ಅನಧಿಕೃತವಾಗಿ ಅಳವಡಿಸಿದ್ದ ಸ್ಲ್ಯಾಬ್ ಅನ್ನು ಮತ್ತು ಮುನ್ನೆನಕೊಳಲು ಶಾಂತಿನಿಕೇತನ ಲೇಔಟ್​ ನಲ್ಲಿದ್ದ 2 ಒತ್ತುವರಿಗಳ ಪೈಕಿ ರಾಜಕಾಲುವೆ ಸ್ಥಳದಲ್ಲಿ ನಿರ್ಮಿಸಿದ್ದ 2 ಶೆಡ್ ಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದೆ.

ಸರ್ವೇ ಕಾರ್ಯ ಚುರುಕು : ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ವಾಗ್ದೇವಿ ಲೇಔಟ್, ಮುನ್ನೇನಕೊಳಲು, ಕಸವನಹಳ್ಳಿ ಗ್ರಾಮ, ಎಬಿಕೆ ಗ್ರಾಮ, ಪ್ರೆಸ್ಟೀಜ್ ಟೆಕ್ ಪಾರ್ಕ್, ವಿಪ್ರೋ, ಸನ್ನಿ ಬ್ರೂಕ್ಸ್ ದೊಡ್ಡಕನ್ನಹಳ್ಳಿ, ಬೆಳ್ಳತ್ತೂರು ಗ್ರಾಮ, ಸದ್ರಮಂಗಲ ಗ್ರಾಮ, ಬೊಳ್ಳೆನಿನಿ ಸಾಸಾ ಅಪಾರ್ಟ್ಮೆಂಟ್ ಒಳಭಾಗ ಹಾಗೂ ಸಾಯಿಗಾರ್ಡನ್ ಲೇಔಟ್ ನಲ್ಲಿ ಪಾಲಿಕೆಯ ಅಧಿಕಾರಿಗಳು, ಭೂಮಾಪಕ ಇಲಾಖೆಯ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡುವ ಸಲುವಾಗಿ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಪಾಲಿಕೆ ತಿಳಿಸಿದೆ.

ಇದನ್ನೂ ಓದಿ : ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ವೇಗ: ಪಾಲಿಕೆಗೆ ಜಿಲ್ಲಾಡಳಿತ ಸಾತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.