ಜ.5 ರಿಂದ 7ರ ವರೆಗೆ ಸಿರಿಧಾನ್ಯ, ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ: ಸಚಿವ ಚಲುವರಾಯಸ್ವಾಮಿ

author img

By ETV Bharat Karnataka Team

Published : Jan 2, 2024, 4:47 PM IST

Updated : Jan 2, 2024, 5:11 PM IST

ಸಚಿವ ಚೆಲುವರಾಯಸ್ವಾಮಿ

ಜ.5 ರಿಂದ ಮೂರು ದಿನ ಅರಮನೆ ಮೈದಾನದಲ್ಲಿ ಕೃಷಿ ಇಲಾಖೆಯಿಂದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವನ್ನು ಆಯೋಜನೆ ಮಾಡಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ

ಬೆಂಗಳೂರು : ನಗರದ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿಯಲ್ಲಿ ಜನವರಿ 5 ರಿಂದ 7ರ ವರೆಗೆ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2024 ವನ್ನು ಕೃಷಿ ಇಲಾಖೆಯಿಂದ ಆಯೋಜನೆ ಮಾಡಲಾಗಿದೆ. ಈ ಮೇಳ ರಾಜ್ಯದ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಂಪರ್ಕವನ್ನು ಕಲ್ಪಿಸಲು ಮತ್ತು ರೈತರು ಖರೀದಿದಾರರು, ಮಾರಾಟಗಾರರು, ರಫ್ತುದಾರರಿಗೆ ವಿಪುಲ ಅವಕಾಶಗಳನ್ನು ಒದಗಿಸುವ ಉದ್ದೇಶ ಹೊಂದಿದೆ.

ನಗರದ ಖಾಸಗಿ ತಾರಾ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ, 2017, 2018, 2019 ಮತ್ತು 2023 ರ ಸಾವಯವ ಮತ್ತು ಸಿರಿಧಾನ್ಯಗಳ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಭಾಗವಹಿಸಿದ ಹೆಚ್ಚಿನ ಸಂಖ್ಯೆಯ ಪಾಲುದಾರರನ್ನು ಆಕರ್ಷಿಸಿ, ಆಸಕ್ತಿ ಹುಟ್ಟು ಹಾಕುವ ಮೂಲಕ ಉತ್ತಮ ಯಶಸ್ಸನ್ನು ಕಂಡಿದೆ. ಇದೇ ಆಸಕ್ತಿಯನ್ನು ಉಳಿಸಿ ಮುಂದಿನ ಮಟ್ಟಕ್ಕೆ ಕೊಂಡೊಯ್ಯಲು ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವನ್ನು ಈ ಬಾರಿಯೂ ಆಯೋಜನೆ ಮಾಡಲಾಗಿದೆ.

ಜನವರಿ 5 ರಿಂದ ಮೂರು ದಿನಗಳ ಕಾಲ ನಡೆಯುವ ಮೇಳವು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಸಂಸ್ಥೆಯ ಆಯೋಜನೆ Nodal Agency ಯಾಗಿರುತ್ತದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ GIZ, CFTRI IMR ಸಂಶೋಧನಾ ಸಂಸ್ಥೆಗಳು ಮೇಳದ ಆಯೋಜನೆಯಲ್ಲಿ ಸಹಭಾಗಿಗಳಾಗಿರುತ್ತಾರೆ. ಮೂರು ದಿನದ ಸಿರಿಧಾನ್ಯ & ಸಾವಯವ ಮೇಳವು ಈ ಕೆಳಗಿನ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.

ವಸ್ತುಪ್ರದರ್ಶನ : ಸಾವಯವ ಮತ್ತು ಸಿರಿಧಾನ್ಯಗಳ ಸಂಸ್ಥೆಗಳು, ಮಾರುಕಟ್ಟೆದಾರರು, ರಫ್ತುದಾರರು, ಚಿಲ್ಲರೆ ಮಾರಾಟಗಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಸಾವಯವ ಪರಿಕರಗಳ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ. ಮೇಳದಲ್ಲಿ ಉತ್ತರ ಪ್ರದೇಶ, ಪಂಜಾಬ್, ಆಂಧ್ರ ಪ್ರದೇಶ, ಮಹಾರಾಷ್ಟ್ರ ಒಡಿಸ್ಸಾ, ತಮಿಳುನಾಡು ಮತ್ತು ಮೇಘಾಲಯ ಮುಂತಾದ ರಾಜ್ಯಗಳು ಭಾಗವಹಿಸುತ್ತಿವೆ. ವಸ್ತು ಪ್ರದರ್ಶನದಲ್ಲಿ 281 ಮಳಿಗೆಗಳು ಇದ್ದು ಈಗಾಗಲೇ 248 ಮಳಿಗೆಗಳು ನೋಂದಣಿಯಾಗಿರುತ್ತದೆ ಎಂದರು.

ಕರ್ನಾಟಕ ಪೆವಿಲಿಯನ್ : ಕರ್ನಾಟಕದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು "Millets beyond boarders: Karnataka welcomes the world" ಎಂಬ ಶೀರ್ಷಿಕೆ (Theme) ಯೊಂದಿಗೆ ಪ್ರದರ್ಶಿಸಲಿದ್ದು, ICRISAT, IIMR, CFTRI, NIFTEM, UAS millet center of excellence ಈ ಮುಂತಾದ ಸಂಸ್ಥೆಗಳಿಂದ ಉತ್ತೇಜನಗೊಂಡಿರುವ ಕರ್ನಾಟಕದ ನವೋದ್ಯಮಿಗಳು (startups) ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ. ಸಿರಿಧಾನ್ಯ / ಸಾವಯವ ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ಸೇರಿದಂತೆ ಒಟ್ಟು 81 ಮಳಿಗೆಗಳು ಇರುತ್ತವೆ ಎಂದು ಚೆಲುವರಾಯಸ್ವಾಮಿ ಮಾಹಿತಿ ನೀಡಿದರು.

ಉತ್ಪಾದಕರು-ಮಾರುಕಟ್ಟೆಗಾರರ ಸಭೆ : ರಾಜ್ಯದ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮೇಳದಲ್ಲಿ ಉತ್ಪಾದಕರ- ಮಾರುಕಟ್ಟೆದಾರರ ಸಮಾಲೋಚನಾ ಸಭೆಗಳನ್ನು ಏರ್ಪಡಿಸಲಾಗುತ್ತದೆ. ಬಿ2ಬಿ ಸಭೆಗೆ ಈಗಾಗಲೇ 61 - Buyers and 54 sellers ನೋಂದಣಿ ಮಾಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಮಾರುಕಟ್ಟೆದಾರರು, FPO/ಒಕ್ಕೂಟಗಳು ಭಾಗವಹಿಸಲಿದ್ದಾರೆ.

ಅಂತಾರಾಷ್ಟ್ರೀಯ ಸಮ್ಮೇಳನ : ಅಂತಾರಾಷ್ಟ್ರೀಯ ಸಮ್ಮೇಳನವನ್ನು GIZ, IIMR ಹಾಗೂ ICCOA ಸಂಸ್ಥೆಯ ಸಹಯೋಗದೊಂದಿಗೆ "Transformation into organic and agroecology- based agriculture in Karnataka" ಎಂಬ ಶೀರ್ಷಿಕೆಯಡಿ ಸಮ್ಮೇಳನದಲ್ಲಿ 35ಕ್ಕಿಂತ ಹೆಚ್ಚು ಉಪನ್ಯಾಸಕರು ಮಾಹಿತಿ ನೀಡಲಿದ್ದಾರೆ. ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರು/ವಿದ್ಯಾರ್ಥಿಗಳು ಹಾಗೂ ಇತರ ಪಾಲುದಾರರು ಭಾಗವಹಿಸುವರು ಎಂದು ಚಲುವರಾಯಸ್ವಾಮಿ ತಿಳಿಸಿದರು.

ರೈತರ ಕಾರ್ಯಾಗಾರ : ರಾಜ್ಯದ ಸಾವಯವ ಮತ್ತು ಸಿರಿಧಾನ್ಯ ಬೆಳೆಯುವ ರೈತರಿಗಾಗಿ ಕನ್ನಡ ಭಾಷೆಯಲ್ಲಿ ಮೂರು ದಿನಗಳ ಕಾರ್ಯಗಾರವನ್ನು ಕೃ.ವಿ.ವಿ ಸಂಶೋಧನಾ ವಿಭಾಗದಿಂದ ಆಯೋಜಿಸಲಾಗುತ್ತದೆ. ಸಾವಯವ ಮತ್ತು ಸಿರಿಧಾನ್ಯ ಪರಿಣಿತರು/ ತಜ್ಞರು ಈ ಕಾರ್ಯಾಗಾರದಲ್ಲಿ ಸಾವಯವ ಪದ್ಧತಿ, ಸಾವಯವ ಮಾರುಕಟ್ಟೆ, ಪ್ರವೃತ್ತಿ, ಬೇಡಿಕೆ, ಸಾವಯವ ಪ್ರಮಾಣೀಕರಣ ಪ್ರಕ್ರಿಯೆ, ನೈಸರ್ಗಿಕ ಕೃಷಿ, ಸಿರಿಧಾನ್ಯಗಳ ಬಗ್ಗೆ, ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ ಎಂದು ಚೆಲುವರಾಯಸ್ವಾಮಿ ವಿವರಿಸಿದರು.

ಖಾನಾವಳಿ(ಫುಡ್ ಕೋರ್ಟ್) : ಮೂರು ದಿನಗಳ ಮೇಳದ ಅವಧಿಯಲ್ಲಿ ಸುಮಾರು 10 ವಿವಿಧ ಸಿರಿಧಾನ್ಯ ಹೋಟೆಲ್/ ರೆಸ್ಟೋರೆಂಟ್‌ಗಳ ಮಳಿಗೆಗಳಲ್ಲಿ ವೈವಿಧ್ಯಮಯ ಮತ್ತು ರುಚಿಕರವಾದ ಸಿರಿಧಾನ್ಯಗಳ ಊಟ ಮತ್ತು ಉಪಹಾರಗಳನ್ನು ಸವಿಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಮೇಳದ ಪ್ರಚಾರದಲ್ಲಿ ಪೂರ್ವಬಾವಿ ಕಾರ್ಯಕ್ರಮಗಳು : ಸಿರಿಧಾನ್ಯ ನಡಿಗೆ, ಸಿರಿಧಾನ್ಯ ಅಡುಗೆ ಸ್ಪರ್ಧೆ, ಕ್ರೀಡಾಕೂಟ ಸೇರಿದಂತೆ ಸಿರಿಧಾನ್ಯ ಮೇಳವನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿರುತ್ತದೆ. ಗ್ರಾಹಕರಲ್ಲಿ ಅರಿವು ಮೂಡಿಸುವ ಉದ್ದೇಶದೊಂದಿಗೆ ಡಿಸೆಂಬರ್ 17 ರಂದು ಕಬ್ಬನ್ ಪಾರ್ಕ್ ನಲ್ಲಿ ಸಿರಿಧಾನ್ಯ ನಡಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಕ್ರೈಸ್ಟ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಡಿಸೆಂಬರ್ 20 ರಂದು ಸಿರಿಧಾನ್ಯಗಳ ಪಾಕಶಾಸ್ತ್ರ ವಿಚಾರ ಸಂಕಿರಣ “ಸಿರಿಧಾನ್ಯ ತಿಂತೀರಾ?” ವನ್ನು ನಡೆಸಲಾಗಿದೆ. ದಿನ ನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳ ಪುನರುತ್ಥಾನ ಪ್ಯಾನಲ್ ಚರ್ಚೆಯನ್ನು ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಡಿಸೆಂಬರ್ 21 ರಂದು ನಡೆಸಲಾಗಿದೆ. ಡಿಸೆಂಬರ್ 23 ರಂದು ಜಿಲ್ಲಾಮಟ್ಟದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ರಾಜ್ಯ ಮಟ್ಟದಲ್ಲಿ ಸಿರಿಧಾನ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಇದೀಗ ಇಂದು ರಫ್ತುದಾರರ ಸಮಾವೇಶವನ್ನು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣ ನಿಗಮ ನಿಯಮಿತ (KAPPEC) ಸಂಸ್ಥೆಯು APEDA, FIEO, VTPC, IIM ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಿದೆ ಎಂದು ಚೆಲುವರಾಯಸ್ವಾಮಿ ವಿವರ ನೀಡಿದರು.

2022-23 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ ರೂ. 36.00 ಕೋಟಿ ಮೌಲ್ಯದ 7764 ಮಿಲಿಯನ್ ಟನ್ ಪ್ರಮಾಣದ ಸಿರಿಧಾನ್ಯ ಮತ್ತು ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳನ್ನು ರಫ್ತು, ಮಾಡಲಾಗಿದೆ. ಅಮೇರಿಕಾ, ಆಸ್ಟ್ರೇಲಿಯ, ಯುಎಇ, ಕೆನಡಾ, ಕತಾರ್, ಥೈಲ್ಯಾಂಡ್, ಸಿಂಗಾಪುರ ಮುಂತಾದವು ಸಿರಿಧಾನ್ಯಗಳ ಪ್ರಮುಖ ರಫ್ತು, ತಾಣಗಳಾಗಿವೆ. ರಫ್ತು, ಮಾಡಲಾಗುತ್ತಿರುವ ಜೋಳ, ಸಜ್ಜೆ, ರಾಗಿ ಮತ್ತು ಇತರೆ ಸಿರಿಧಾನ್ಯಗಳನ್ನು ಪ್ರಮುಖವಾಗಿ ಬಳ್ಳಾರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಹಾವೇರಿ, ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ಪಡೆಯಲಾಗುತ್ತಿದೆ.

ಸಿರಿಧಾನ್ಯಗಳ ಪೈಕಿ ಪ್ರಸ್ತುತ ಪೌಷ್ಟಿಕಭರಿತ ಹಾಗೂ ಗ್ಲುಟನ್ ಮುಕ್ತ ಸಜ್ಜೆ ಹಿಟ್ಟಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆಯಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಪರಿಗಣಿಸಲಾಗಿದೆ. ಅಲ್ಲದೇ ಗೋಧಿ ಹಿಟ್ಟಿಗೆ ಪರ್ಯಾಯವಾಗಿ ಇದನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ. ಸಜ್ಜೆಯ ಜೊತೆಗೆ ಜೋಳ ಮತ್ತು ರಾಗಿಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ Ready to eat ಸಿರಿಧಾನ್ಯ ತಿಂಡಿಗಳ ಬೇಡಿಕೆ ಇದ್ದು, ಒಟ್ಟಾರೆಯಾಗಿ ಸಿರಿಧಾನ್ಯಗಳ ಉತ್ಪನ್ನಗಳನ್ನು ಹಾಗೆಯೇ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳ ರಫ್ತಿಗಾಗಿ ಜಾಗತಿಕ ಮಟ್ಟದಲ್ಲಿ ಇರುವ ಅವಕಾಶ/ಸವಾಲುಗಳ ಬಗ್ಗೆ ಇಂದಿನ ಕಾರ್ಯಕ್ರಮದಲ್ಲಿ ವಿಚಾರ ವಿನಿಮಯ ನಡೆಸಲಾಯಿತು ಎಂದು ವಿವರಿಸಿದರು.

ಇದನ್ನೂ ಓದಿ : ವಿಶ್ವಕರ್ಮ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

Last Updated :Jan 2, 2024, 5:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.