ETV Bharat / state

ಸಿ.ಡಿ. ಕೇಸ್: ತನಿಖಾ ವರದಿಯನ್ನು ಎಸ್ಐಟಿ ಮುಖ್ಯಸ್ಥರಿಗೆ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

author img

By

Published : Nov 10, 2021, 6:41 AM IST

CD case
ರಮೇಶ್ ಜಾರಕಿಹೊಳಿ ಸಿಡಿ ಕೇಸ್

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರ ಸಿಡಿ ಪ್ರಕರಣದ ತನಿಖಾ ವರದಿಯನ್ನು ಎಸ್​ಐಟಿ ಮುಖ್ಯಸ್ಥರಿಗೆ ಸಲ್ಲಿಸುವಂತೆ ಹೈಕೋರ್ಟ್​ ನಿರ್ದೇಶನ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಪಿಐಎಲ್ ಗಳು ಹಾಗೂ ನ್ಯಾಯಾಲಯದ ನಿಗಾವಣೆಯಲ್ಲಿ ಎಸ್‌ಐಟಿ ರಚಿಸಿ ಅದರ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಂತ್ರಸ್ತೆ ಎನ್ನಲಾದ ಯುವತಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖಾ ವರದಿಯನ್ನು ತಂಡದ ಮುಖ್ಯಸ್ಥರಾಗಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಅವರ ಮುಂದೆ ಸಲ್ಲಿಸುವಂತೆ ಹೈಕೋರ್ಟ್ ವಿಶೇಷ ತನಿಖಾ ತಂಡ(ಎಸ್‌ಐಟಿ)ಕ್ಕೆ ನಿರ್ದೇಶಿಸಿದೆ.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಪಿಐಎಲ್ ಗಳು ಹಾಗೂ ನ್ಯಾಯಾಲಯದ ನಿಗಾವಣೆಯಲ್ಲಿ ಎಸ್‌ಐಟಿ ರಚಿಸಿ ಅದರ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಂತ್ರಸ್ತೆ ಎನ್ನಲಾದ ಯುವತಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಯುವತಿ ಪರ ವಾದಿಸಿದ ವಕೀಲೆ ಇಂದಿರಾ ಜೈಸಿಂಗ್ ಅವರು, ಎಸ್‌ಐಟಿ ವರದಿಗೆ ವಿರೋಧ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಮುಗಿಸಿದೆ. ಅದನ್ನು ನ್ಯಾಯಾಲಯದ ಮುಂದೆ ಮಂಡಿಸಲು ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ ಎಂದು ಪ್ರಶ್ನಿಸಿತು.

ಜೈಸಿಂಗ್ ವಾದಿಸಿ, ಆರೋಪಿ ಕೋರಿಕೆ ಮೇರೆಗೆ ಅಂದಿನ ಗೃಹ ಸಚಿವರು ಎಸ್‌ಐಟಿ ರಚಿಸಲು ಬೆಂಗಳೂರು ಪೊಲೀಸ್ ಕಮಿಷನರ್​ಗೆ ಆದೇಶಿಸಿದ್ದರು. ಹೀಗಾಗಿ ಎಸ್ಐಟಿ ನಲ್ಲಿಸಿರುವ ತನಿಖಾ ವರದಿಯನ್ನು ವಜಾಗೊಳಿಸಬೇಕು. ಹೈಕೋರ್ಟ್ ಉಸ್ತುವಾರಿಯಲ್ಲಿ ಎಸ್‌ಐಟಿ ಪ್ರಕರಣದ ತನಿಖೆ ನಡೆಸಬೇಕು. ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ತನಿಖೆ ನಡೆಸಿಲ್ಲ. ವರದಿಯನ್ನೂ ಪರಿಶೀಲಿಸಿಲ್ಲ. ಮತ್ತೊಬ್ಬ ಅಧಿಕಾರಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ ಎಂದರು.

ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿ ಮಾಧ್ಯಮಗಳಿಗೆ ಸೋರಿಕೆ ಆಗಿದೆ. ಮಾಧ್ಯಮ ವರದಿಯಲ್ಲಿ ಸಂತ್ರಸ್ತೆಯ ದೂರು ಸ್ವೀಕೃತಿಗೆ ಅರ್ಹವಾಗಿಲ್ಲ. ರಮೇಶ್​ ಜಾರಕಿಹೊಳಿ ಅವರ ದೂರು ಸ್ವೀಕೃತಿಗೆ ಅರ್ಹವಾಗಿದೆ ಎಂದು ಹೇಳಲಾಗಿದೆ. ಹೀಗಾಗಿ, ಎಸ್‌ಐಟಿ ರಚನೆ ಕಾನೂನಿನ ಪ್ರಕಾರ ಸಿಂಧು ಹೇಗಾಗುತ್ತದೆ ಎಂಬ ಪ್ರಶ್ನೆ ಎತ್ತಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಎಸ್‌ಐಟಿ ವರದಿಗೆ ಸದಸ್ಯರು ಸಹಿ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿತು. ಎಸ್‌ಐಟಿ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ವಾದಿಸಿ, ಹಲವು ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಿಲಾಗಿದ್ದು, ಮುಖರ್ಜಿ ಸುದೀರ್ಘ ರಜೆಯಲ್ಲಿದ್ದರು. ಹೀಗಾಗಿ, ಉಸ್ತುವಾರಿ ಹೊತ್ತಿದ್ದ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಒಬ್ಬರೇ ವರದಿಗೆ ಸಹಿ ಮಾಡಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಎಸ್‌ಐಟಿ ಮುಖ್ಯಸ್ಥ ಮುಖರ್ಜಿ ಅವರು ವರದಿಗೆ ಸಹಿ ಹಾಕಿಲ್ಲ ಎಂದಾದರೆ ಎಸ್‌ಐಟಿಯನ್ನು ಏತಕ್ಕಾಗಿ ರಚಿಸಲಾಗಿದೆ? ಎಂದು ಪ್ರಶ್ನಿಸಿತು. ಇದಕ್ಕೆ ಹಾರನಹಳ್ಳಿ ಸಮಜಾಯಿಷಿ ನೀಡುವ ಯತ್ನ ಮಾಡಿದರೂ ನ್ಯಾಯಾಲಯದ ಒಪ್ಪಲಿಲ್ಲ.

ಅಂತಿಮವಾಗಿ, ಮಾರ್ಚ್ 29ರಂದು ಬೆಂಗಳೂರು ಪೊಲೀಸ್ ಆಯುಕ್ತರು ಸಂತ್ರಸ್ತೆಯ ದೂರಿಗೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್ 173ರ ಅಡಿ ಎಸಿಪಿ ಕವಿತಾ ಅವರಿಗೆ ಪ್ರಕರಣದ ತನಿಖೆ ನಡೆಸುವಂತೆ ಆದೇಶಿಸಿದ್ದರು. ಇದರ ಅನ್ವಯ ಅವರು ತನಿಖೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿ ಅದೇ ಸ್ಥಿತಿಯಲ್ಲಿ ಇಡಲಾಗಿದೆ. ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ ಬಳಿಕ ಕವಿತಾ ಅವರು ಸಿದ್ಧಪಡಿಸಿದ ವರದಿಯನ್ನು ಎಸ್‌ಐಟಿಯ ಮುಂದೆ ಮಂಡಿಸಿ ನಂತರ ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಹೀಗಾಗಿ ವರದಿಯನ್ನು ಎಸ್ಐಟಿ ಮುಖ್ಯಸ್ಥರ ಮುಂದೆ ಸಲ್ಲಿಸಿ, ಪರಿಶೀಲಿಸಿ ಅವರು ಸಹಿ ಮಾಡಿದ ನಂತರ ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದು ಸೂಚಿಸಿತು. ಹಾಗೆಯೇ, ಹೈಕೋರ್ಟ್ ಅನುಮತಿ ಪಡೆಯದೇ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತಿಲ್ಲ ಎಂಬ ಮಧ್ಯಂತರ ಆದೇಶವನ್ನು ವಿಸ್ತರಿಸಿ, ವಿಚಾರಣೆಯನ್ನು ನ.29ಕ್ಕೆ ಮುಂದೂಡಿತು.

ಇದನ್ನು ಓದಿ:ಕಾಂಗ್ರೆಸ್ ಘಟಾನುಘಟಿಗಳ ಅವಧಿಯೇ ಮುಕ್ತಾಯ; ಪರಿಷತ್​ನಲ್ಲಿ ಕಾಡಲಿದೆಯೇ ಹಿರಿತನದ ಕೊರತೆ?!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.