ETV Bharat / state

ಕಾಂಗ್ರೆಸ್ ಘಟಾನುಘಟಿಗಳ ಅವಧಿಯೇ ಮುಕ್ತಾಯ; ಪರಿಷತ್​ನಲ್ಲಿ ಕಾಡಲಿದೆಯೇ ಹಿರಿತನದ ಕೊರತೆ?!

author img

By

Published : Nov 10, 2021, 3:16 AM IST

ಬಿಜೆಪಿ ಆಡಳಿತ ಪಕ್ಷವಾಗಿದೆ ಸಾಕಷ್ಟು ಪ್ರಭಾವವನ್ನು ಬೀರಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನ ನಡೆಸಲಿದೆ. ಇದುವರೆಗೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಈಗ ಆ ಸ್ಥಾನವನ್ನೂ ಕಳೆದುಕೊಂಡು ವರ್ಷವಾಗಿದೆ. ಮರಳಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ದೊಡ್ಡ ಸಾಹಸವನ್ನೇ ಮಾಡಬೇಕಾದ ಅನಿವಾರ್ಯತೆ ಇದೆ. ಈ ಮಧ್ಯೆ ಪಕ್ಷದ ಘಟಾನುಘಟಿ ನಾಯಕರುಗಳು ಸೇರಿದಂತೆ ಒಟ್ಟು 13 ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗುತ್ತಿದೆ.

ಪರಿಷತ್​ನಲ್ಲಿಕಾಂಗ್ರೆಸ್ ಘಟಾನುಘಟಿಗಳ ಅವಧಿಯೇ ಮುಕ್ತಾಯ
ಪರಿಷತ್​ನಲ್ಲಿಕಾಂಗ್ರೆಸ್ ಘಟಾನುಘಟಿಗಳ ಅವಧಿಯೇ ಮುಕ್ತಾಯ

ಬೆಂಗಳೂರು: ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್​ಗೆ ಈ ಸಾರಿಯ ವಿಧಾನಪರಿಷತ್ ಚುನಾವಣೆ ನಿಜಕ್ಕೂ ಸವಾಲಿನದ್ದಾಗಿ ಪರಿಣಮಿಸಿದೆ.

ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಾ ಬಂದಿದ್ದ ಹಾಗೂ ಹಾಲಿ ಆಯಕಟ್ಟಿನ ಸ್ಥಾನದಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಸದಸ್ಯರೇ ನಿವೃತ್ತಿ ಹೊಂದುತ್ತಿದ್ದಾರೆ. ಸಾಕಷ್ಟು ಮಂದಿಗೆ ಇನ್ನೊಮ್ಮೆ ಸ್ಪರ್ಧಿಸುವ ಹಾಗೂ ಗೆಲ್ಲುವ ಅವಕಾಶ ಇದೆ. ಆದರೆ ಗೆಲುವಿನ ಬಗ್ಗೆ ಖಚಿತತೆ ಇಲ್ಲ.

ಬಿಜೆಪಿ ಆಡಳಿತ ಪಕ್ಷವಾಗಿದೆ ಸಾಕಷ್ಟು ಪ್ರಭಾವವನ್ನು ಬೀರಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನ ನಡೆಸಲಿದೆ. ಇದುವರೆಗೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಈಗ ಆ ಸ್ಥಾನವನ್ನೂ ಕಳೆದುಕೊಂಡು ವರ್ಷವಾಗಿದೆ. ಮರಳಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ದೊಡ್ಡ ಸಾಹಸವನ್ನೇ ಮಾಡಬೇಕಾದ ಅನಿವಾರ್ಯತೆ ಇದೆ. ಈ ಮಧ್ಯೆ ಪಕ್ಷದ ಘಟಾನುಘಟಿ ನಾಯಕರುಗಳು ಸೇರಿದಂತೆ ಒಟ್ಟು 13 ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗುತ್ತಿದೆ.

2022ರ ಜನವರಿ 5ಕ್ಕೆ ಸದಸ್ಯರ ಕಾಲಾವಧಿ ಮುಕ್ತಾಯವಾಗಲಿದ್ದು ಇದಕ್ಕೂ ಮುಂಚೆ ಚುನಾವಣೆ ನಡೆಯಬೇಕಿದ್ದು, ಚುನಾವಣಾ ಆಯೋಗ ದಿನಾಂಕವನ್ನು ಸಹ ಇಂದು ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು 14ರಂದು ಫಲಿತಾಂಶ ಪ್ರಕಟವಾಗಲಿದೆ. ನೂತನ ಸದಸ್ಯರು ಜನವರಿ 5ರ ನಂತರ ವಿಧಾನಪರಿಷತ್​ನಲ್ಲಿ ತಮ್ಮ ಅಧಿಕೃತ ಕಾರ್ಯನಿರ್ವಹಣೆ ಆರಂಭಿಸಲಿದ್ದಾರೆ.

ಆಡಳಿತ ಪಕ್ಷವಾಗಿರುವ ಬಿಜೆಪಿ ಸಹಜವಾಗಿ ತನ್ನ ಪ್ರಭಾವ ಬೀರಿ ಅತಿ ಹೆಚ್ಚು ಸ್ಥಾನ ಗಳಿಸಲು ಪ್ರಯತ್ನ ನಡೆಸಲಿದೆ. ಸ್ಥಳೀಯ ಸಂಸ್ಥೆ ಜನ ಪ್ರತಿನಿಧಿಗಳ ಮೂಲಕ ಪರಿಷತ್ ಅಭ್ಯರ್ಥಿಯ ಆಯ್ಕೆ ಆಗಲಿದ್ದು, ಕಾಂಗ್ರೆಸ್​ಗಿಂತ ದೊಡ್ಡ ಮಟ್ಟದಲ್ಲಿ ಬಿಜೆಪಿ ತನ್ನ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ. ಸ್ಥಳೀಯ ಸಂಸ್ಥೆ ಹೃದಯಿಗಳು ಯಾರನ್ನ ಆಯ್ಕೆ ಮಾಡುವುದಕ್ಕೆ ಉತ್ಸಾಹ ತೋರಿಸುತ್ತಾರೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಸುದೀರ್ಘ ಅವಧಿಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಹಾಗೂ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಗೆಲ್ಲುವ ಅವಕಾಶವನ್ನು ಹೊಂದಿದ್ದರಾದರೂ, ವಯಸ್ಸಿನ ಆಧಾರದ ಮೇಲೆ ಒಂದೊಮ್ಮೆ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೆ ಈ ಹಿರಿಯ ಸದಸ್ಯರ ಸ್ವಯಂಪ್ರೇರಣೆಯಿಂದ ಹೊಸ ಮುಖಗಳಿಗೆ ಅವಕಾಶ ನೀಡಲು ತಮ್ಮ ಅವಕಾಶವನ್ನು ತ್ಯಾಗ ಮಾಡುವ ಸಾಧ್ಯತೆಯೂ ಇದೆ ಎಂಬ ಮಾತು ಕೇಳಿಬರುತ್ತಿದೆ. ಪಕ್ಷದ ಸದಸ್ಯರಾಗಿ ವಿಧಾನಪರಿಷತ್ತಿನಲ್ಲಿ ಬಹುತೇಕ ಅಧಿಕಾರವನ್ನು ಅನುಭವಿಸಿರುವ ಸದಸ್ಯರು ಇನ್ನೊಂದು ಸುತ್ತಿನ ಆಯ್ಕೆಯನ್ನು ಬಯಸುವ ಸಾಧ್ಯತೆ ಕಡಿಮೆ ಇದೆ ಎಂಬ ಮಾತು ಸಹ ಕೇಳಿಬರುತ್ತಿದೆ. ಒಂದೊಮ್ಮೆ ಈ ಸಾಧ್ಯತೆ ನಿಜವಾದರೆ ಅತ್ಯಂತ ಹಿರಿಯ ಹಾಗೂ ಅನುಭವಿ ಸದಸ್ಯರ ಕೊರತೆ ಕಾಂಗ್ರೆಸ್​ಗೆ ಎದುರಾಗಲಿದೆ.

ಇನ್ನು ಇವರಲ್ಲದೆ ಆರ್ ಧರ್ಮಸೇನ, ಬಸವರಾಜ ಪಾಟೀಲ್ ಇಟಗಿ, ಕೆಸಿ ಕೊಂಡಯ್ಯ, ಆರ್ ಪ್ರಸನ್ನ ಕುಮಾರ್, ಹಾಗೂ ಹಾಲಿ ಕಾಂಗ್ರೆಸ್ ಪಕ್ಷದ ಸಚೇತಕರಾಗಿರುವ ಎಂ ನಾರಾಯಣಸ್ವಾಮಿ ಅವಧಿ ಕೂಡ ಮುಕ್ತಾಯವಾಗುತ್ತಿದೆ. ರಘು ಆಚಾರ್ ಶ್ರೀಕಾಂತ ಲಕ್ಷ್ಮಣ್ ಘೋಟ್ನೇಕರ್, ಶ್ರೀನಿವಾಸ್ ಮಾನೆ, ವಿಜಯ್ ಸಿಂಗ್, ಎಸ್ ರವಿ ಮತ್ತಿತರ ಸದಸ್ಯತ್ವ ಸಹ ಮುಕ್ತಾಯವಾಗುತ್ತಿದೆ. ಇವರಲ್ಲಿ ಹೆಚ್ಚಿನವರಿಗೆ ಗೆಲ್ಲುವ ಅವಕಾಶ ಇದೆಯಾದರೂ ಬಿಜೆಪಿ ತನ್ನ ಕಾರ್ಯತಂತ್ರವನ್ನು ಯಾವ ರೀತಿ ಬೀರಲಿದೆ ಎನ್ನುವುದರ ಮೇಲೆ ಇವರ ಗೆಲುವು ನಿರ್ಧಾರವಾಗಲಿದೆ.

ವಿಧಾನಪರಿಷತ್​ನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಸಂಪೂರ್ಣ ಬಹುಮತಕ್ಕೆ ಅಗತ್ಯವಿರುವ 38 ಸದಸ್ಯರು ಇಲ್ಲದೆ ಜೆಡಿಎಸ್​ನ ಬೆಂಬಲದೊಂದಿಗೆ ಆಡಳಿತ ಪಕ್ಷವಾಗಿ ಅಧಿಕಾರ ಮುನ್ನಡೆಸುತ್ತಿದೆ. ಈ ಚುನಾವಣೆಯಲ್ಲಿ ತನ್ನ ಸಂಖ್ಯಾಬಲವನ್ನು 33 ರಿಂದ 38ಕ್ಕೆ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲೂ ಬಿಜೆಪಿ ಇದೆ. ಇದೆಲ್ಲದರ ನಡುವೆ ಪ್ರಮುಖ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ತನ್ನ ಸದಸ್ಯರ ನೆಲೆ ಭದ್ರಪಡಿಸಿಕೊಳ್ಳಲು ಯಾವ ರೀತಿಯ ತಂತ್ರಗಾರಿಕೆ ರೂಪಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಪರಿಷತ್ ಅಭ್ಯರ್ಥಿಗಳ ಪಟ್ಟಿಯನ್ನು ಎರಡು ದಿನದಲ್ಲಿ ಹೈಕಮಾಂಡ್​​ಗೆ ಕಳಿಸುತ್ತೇವೆ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.