ಬೆಂಗಳೂರು: ಹೂವಿನ ಬಗ್ಗೆ ಅದೆಷ್ಟು ವರ್ಣಿಸಿದರೂ ಸಾಲದು. ಅದರಲ್ಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಂತೂ ಹೂ ಬಹಳ ಪ್ರಾಮುಖ್ಯ ಪಡೆದುಕೊಂಡಿದೆ. ಈ ಕಾರಣಕ್ಕಾಗೆ ಹೂವಿಗೆ ಅಷ್ಟೊಂದು ಮೌಲ್ಯ. ನಾವೂ ದಿನಂಪ್ರತಿ ಹಲವಾರು ವಿದಧ ಹೂ ಗಳನ್ನು ನೋಡಿರುತ್ತೇವೆ. ಆದರೆ, ಈ ಹೂವನ್ನು ನೋಡಬೇಕೆಂದರೆ ವಿಶೇಷ ಸಮಯವನ್ನು ಮೀಸಲಿಡಬೇಕು.
ಹೌದು.., ಬಹುತೇಕ ಎಲ್ಲಾ ಹೂಗಳು ಬೆಳಗಿನ ಸೂರ್ಯನ ಕಿರಣಗಳಿಗೆ ಅರಳಿದರೆ. ಇನ್ನೂ ಕೆಲವು ಹೂಗಳು ಸಂಜೆ ವೇಳೆ ಅರಳುತ್ತವೆ. ಆದರೆ ಚಂದ್ರನ ತಂಪಿನಲ್ಲಿ ಅರಳುವ ಏಕೈಕ ಹೂ ಅಂದ್ರೆ ಅದು ಬ್ರಹ್ಮಕಮಲ ಮಾತ್ರ. ಈ ಹೂ ಅರಳುವುದು ರಾತ್ರಿ ಸುಮಾರು 11 ರಿಂದ 12 ಗಂಟೆಯ ಸುಮಾರಿಗೆ. ಮತ್ತೆ ಬೆಳಗಾಗುವುದರೊಳಗೆ ಕಮರಿ ಹೋಗುತ್ತದೆ.
ಇಂತಹ ಅಲ್ಪಾಯುಷಿ ಸುಂದರ ಹೂವು ಮೊಗ್ಗಾಗಿ ಹೂವಾಗಿ ಅರಳಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಮದ ಉಷಾ ಅವರ ಮನೆಯಲ್ಲಿ. ಇವರ ಮನೆಯಲ್ಲಿ ಹೂ ಬಿಡುತ್ತಿದ್ದಂತೆ ಅಕ್ಕಪಕ್ಕದ ಮನೆಯವರೆಲ್ಲ ಬಂದು ನೋಡಿ ಖುಷಿಪಟ್ಟಿದ್ದಾರೆ. ಇದಲ್ಲದೇ ಹೂವಿಗೆ ಪೂಜೆ ಮಾಡಿ ಸುತ್ತಮುತ್ತಲಿನ ಜನರಿಗೆ ಸಿಹಿ ಹಂಚಿದ್ದಾರೆ. ಇದರಿಂದ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆಯಂತೆ.
ಇವರೊಬ್ಬರ ಮನೆಯಲ್ಲಿ ಮಾತ್ರವಲ್ಲದೇ ಇತ್ತೀಚಿನ ದಿನಗಳಲ್ಲಿ ಈ ಭಾಗದ ಹಲವಾರು ಜನರು ತಮ್ಮ ಮನೆಗಳಲ್ಲಿ ಈ ಗಿಡವನ್ನು ಬೆಳೆಸಿದ್ದಾರೆ. ಈ ಬ್ರಹ್ಮಕಮಲ ಹೂವು ಅರಳುವುದು ಸಾಮಾನ್ಯವಾಗಿ ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಮಾತ್ರ. ಈ ಹೂ ರಾತ್ರಿಯ ವೇಳೆಯಲ್ಲಿ ಅರಳುವುದರಿಂದ ಇದಕ್ಕೆ ರಾತ್ರಿ ರಾಣಿ ಎಂದು ಮತ್ತೊಂದು ಹೆಸರಿದೆ. ಈ ಹೂವಿನ ಗಿಡದಲ್ಲಿ ಏಕಕಾಲಕ್ಕೆ 10-15 ಮೊಗ್ಗುಗಳು ಹೂವಾಗಿ ಅರಳುತ್ತವೆ ಒದೇ ಇದರ ವಿಸ್ಮಯತೆ.
ಬ್ರಹ್ಮ ಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ ಆ ಮನೆಯ ಒಡೆಯರು ಶ್ರೀಮಂತರಾಗುತ್ತಾರೆ. ಯವುದೇ ಸಮಸ್ಯೆ ಎದುರಾಗುವುದಿಲ್ಲ ಎಂಬ ನಂಬಿಕೆಯೂ ಮನೆಮಾಡಿದೆ.