ETV Bharat / state

ಐದು ವರ್ಷಗಳ ಪ್ರೀತಿ, ಮದುವೆ ನಿರಾಕರಿಸಿದ ಯುವತಿ.. 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದ ಪಾಗಲ್​ ಪ್ರೇಮಿ

author img

By

Published : Mar 1, 2023, 6:30 AM IST

Updated : Mar 1, 2023, 2:11 PM IST

ಕೊಲೆ ಮಾಡಿದ ಆರೋಪಿ
ಕೊಲೆ ಮಾಡಿದ ಆರೋಪಿ

ಐದು ವರ್ಷಗಳಿಂದ ಪರಸ್ಪರ ಪ್ರೀತಿ - ನಂತರ ಅಂತರ ಕಾಯ್ದುಕೊಂಡ ಯುವತಿ - ಮದುವೆ ಪ್ರಸ್ತಾಪ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ಕೊಂದ ಪಾಗಲ್​ ಪ್ರೇಮ

ಪ್ರಕರಣದ ಬಗ್ಗೆ ಡಿಸಿಪಿ ಮಾಹಿತಿ

ಬೆಂಗಳೂರು: ಮದುವೆ ಪ್ರಸ್ತಾಪ ನಿರಾಕರಿಸಿದ ಯುವತಿಯನ್ನು ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ ಪಾಗಲ್‌ ಪ್ರೇಮಿ ಬಳಿಕ ಶವದ ಪಕ್ಕ ಕುಳಿತು‌ ಕಣ್ಣೀರಿಟ್ಟ ಘಟನೆ ನಗರದಲ್ಲಿ ಮಂಗಳವಾರದ ಸಂಜೆ ನಡೆದಿದೆ. ಮೃತದೇಹದೊಂದಿಗೆ ಆರೋಪಿಯನ್ನು ಕಂಡ ಸ್ಥಳಿಯರು ಬೆಚ್ಚಿಬಿದ್ದಿದ್ದಾರೆ. ಲೀಲಾ ಪವಿತ್ರ (28) ಕೊಲೆಯಾದ ಯುವತಿ. ಜೀವನಭೀಮಾ ನಗರ ಠಾಣೆ ವ್ಯಾಪ್ತಿಯ ವಿಂಡ್ ಟನಲ್ ರಸ್ತೆಯಲ್ಲಿ ನಡೆದಿದ್ದು, ಘಟನೆ ಸಂಬಂಧ ದಿವಾಕರ್ ಎಂಬಾತನನ್ನು ಪೊಲೀಸರು ವಶಕ್ಕೆ‌‌ ಪಡೆದುಕೊಂಡಿದ್ದಾರೆ. ಮೃತ ಯುವತಿ ಹಾಗೂ ಆರೋಪಿ ಆಂಧ್ರಪ್ರದೇಶ ಮೂಲದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಐದು ವರ್ಷಗಳ ಪ್ರೀತಿ ಬಳಿಕ ಅಂತರ ಕಾಯ್ದುಕೊಂಡಿದ್ದ ಯುವತಿ: ಆಂಧ್ರಪ್ರದೇಶದ ಕಾಕಿನಾಡ ಮೂಲದ ಲೀಲಾ ಪವಿತ್ರ ಕಳೆದ ಏಪ್ರಿಲ್​ನಿಂದ ಜೀವನ್ ಭೀಮಾ ನಗರದ ಖಾಸಗಿ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದಳು. ಅಂತೆಯೇ, ಆಂಧ್ರದ ಶ್ರೀಕಾಕುಳಂ ಮೂಲದ ದಿವಾಕರ್ ಸಹ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಲೀಲಾ ಪವಿತ್ರ ಹಾಗೂ ದಿವಾಕರನ ಐದು ವರ್ಷದ ಪ್ರೀತಿಗೆ ಯುವತಿಯ ಕುಟುಂಬ ಜಾತಿಯ ಕಾರಣ ನೀಡಿ ನಿರಾಕರಿಸಿತ್ತು. ಆದ್ದರಿಂದ ಕಳೆದ ಕೆಲ ದಿನಗಳಿಂದಲೂ ಲೀಲಾ ಪವಿತ್ರ ದಿವಾಕರನಿಂದ ಅಂತರ ಕಾಪಾಡಿಕೊಂಡಿದ್ದಳು ಎನ್ನಲಾಗಿದೆ.

ಇದರಿಂದ‌ ಸಿಟ್ಟಿಗೆದ್ದಿದ್ದ ದಿವಾಕರ್ ನಿನ್ನೆ ಸಂಜೆ ಲೀಲಾಳನ್ನ ಭೇಟಿಯಾಗಲು ಆಕೆ ಕೆಲಸ ಮಾಡುತ್ತಿದ್ದ ಕಂಪನಿ ಬಳಿ‌ ಬಂದಿದ್ದ. ಮದುವೆಗೆ ಪೀಡಿಸುತ್ತಿದ್ದ ದಿವಾಕರನಿಗೆ ಲೀಲಾ ಪವಿತ್ರ ಒಲ್ಲೆ ಎಂದಿದ್ದಳು. ರೊಚ್ಚಿಗೆದ್ದ ದಿವಾಕರ್ ತಾನು ತಂದಿದ್ದ ಚಾಕುವಿನಿಂದ ಲೀಲಾಳಿಗೆ 10ಕ್ಕಿಂತ ಹೆಚ್ಚು ಬಾರಿ ಮನಸೋ ಇಚ್ಚೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಶವದ ಮುಂದೆ ಕುಳಿತು ಕಣ್ಣೀರಿಟ್ಟಿದ್ದ. ಆರೋಪಿಯ ಸುಪರ್ದಿಯಿಂದ ಲೀಲಾಳನ್ನ ಬಿಡಿಸಿದ್ದ ಸ್ಥಳಿಯರು ಆಕೆಯನ್ನ ಸಮೀಪದ ‌ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಳು. ಸದ್ಯ ಘಟನೆ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಇಂದು ಭೇಟಿ‌ ನೀಡಿದ ಪೂರ್ವ ವಿಭಾಗದ ಡಿಸಿಪಿ‌ ಡಾ.ಭೀಮಾಶಂಕರ ಗುಳೇದ್ ಯುವತಿಯ ಸಹೋದ್ಯೋಗಿಗಳಿಂದ ಮಾಹಿತಿ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಜೀವನ್ ಭೀಮಾನಗರ ಪೊಲೀಸರು ಆತನನ್ನ ಹೆಚ್ಚಿನ ವಿಚಾರಣೆಗೊಳಪಡಿಸಿದ್ದು, ತನಿಖೆ ಮುಂದುವರೆದಿದೆ ಎಂದು‌ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ತಂದೆಯಿಂದಲೇ ಮಗನ ಬರ್ಬರ ಹತ್ಯೆ!

Last Updated :Mar 1, 2023, 2:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.