ETV Bharat / state

ಏಕರೂಪದ ನಾಗರಿಕ ಸಂಹಿತೆ ಜಾರಿ, BPL ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ಹಾಲು, 3 ಗ್ಯಾಸ್ ಸಿಲಿಂಡರ್‌ ಫ್ರೀ!- ಬಿಜೆಪಿ ಪ್ರಣಾಳಿಕೆ

author img

By

Published : May 1, 2023, 11:05 AM IST

Updated : May 1, 2023, 1:41 PM IST

bjp
ಬಿಜೆಪಿ ಚುನಾವಣೆ ಪ್ರಣಾಳಿಕೆ

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಇಂದು ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯ ಪ್ರಮುಖ ಅಂಶಗಳು ಹೀಗಿವೆ..

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲ ಪಕ್ಷಗಳ ನಾಯಕರು ಭರ್ಜರಿ ಮತ ಪ್ರಚಾರ ಕೈಗೊಂಡಿದ್ದಾರೆ. ಈ ಮಧ್ಯೆ ಮತದಾರರನ್ನು ಸೆಳೆಯಲು ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದೆ. ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ 'ಪ್ರಜಾ ಪ್ರಣಾಳಿಕೆ' ಬಿಡುಗಡೆ ಮಾಡಿದರು.

ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ 3 ಅಡುಗೆ ಸಿಲಿಂಡರ್, ಪ್ರತಿ ನಿತ್ಯ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು 5 ಕೆಜಿ ಅಕ್ಕಿ ಜೊತೆ ಸಿರಿಧಾನ್ಯ ವಿತರಣೆ ಹಾಗೂ ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿ ಸೇರಿ ಹಲವು ಭರವಸೆಗಳು ಪ್ರಜಾ ಪ್ರಣಾಳಿಕೆಯಲ್ಲಿವೆ.

ಪ್ರಣಾಳಿಕೆಯ ಪ್ರಮುಖ ಅಂಶಗಳು ಹೀಗಿವೆ:

  1. ಬಿಪಿಎಲ್‌ ಕುಟುಂಬಗಳಿಗೆ ಪ್ರತಿ ವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬಗಳಿಗೆ ತಲಾ ಒಂದರಂತೆ 3 ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಣೆ
  2. ಕೈಗೆಟುಕುವ ದರದಲ್ಲಿ ಗುಣಮಟ್ಟದ ಮತ್ತು ಅರೋಗ್ಯಕರ ಆಹಾರ ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್​​ಗಳಲ್ಲಿ 'ಅಟಲ್ ಆಹಾರ ಕೇಂದ್ರ' ಸ್ಥಾಪನೆ
  3. 'ಪೋಷಣೆ' ಯೋಜನೆಯ ಮೂಲಕ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು 5 ಕೆಜಿ ಅಕ್ಕಿ- ಸಿರಿಧಾನ್ಯ ಒಳಗೊಂಡ ಪಡಿತರ ಕಿಟ್.
  4. ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ.
  5. ರಾಜ್ಯಾದ್ಯಂತ ನಿವೇಶನ ರಹಿತ/ವಸತಿ ರಹಿತ ನಿವಾಸಿಗಳಿಗೆ ಸರ್ವರಿಗೂ ಸೂರು ಯೋಜನೆ'ಯಡಿ 10 ಲಕ್ಷ ವಸತಿ ನಿವೇಶನಗಳನ್ನು ಕಂದಾಯ ಇಲಾಖೆ ಮೂಲಕ ಹಂಚಿಕೆ.
  6. 'ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ' ಯೋಜನೆಯನ್ನು ಪ್ರಾರಂಭ. ಈ ಯೋಜನೆಯಡಿ ಎಸ್‌ಸಿ, ಎಸ್‌ಟಿ ಸಮುದಾಯದ ಮಹಿಳೆಯರು ಐದು ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿಗಳ ಮೇಲೆ – 10 ಸಾವಿರ ರೂ.ವರೆಗೆ ತಾಳಿಯಾಗುವ ಠೇವಣಿ.
  7. ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ 'ಸುಲಲಿತ ಜೀವನ'ಕ್ಕೆ ಕರ್ನಾಟಕ ಅಪಾರ್ಟ್ ಮೆಂಟ್ ಮಾಲೀಕತ್ವ ಕಾಯಿದೆ 1972ಕ್ಕೆ ಸೂಕ್ತ ತಿದ್ದುಪಡಿ. ಕುಂದುಕೊರತೆಗಳ ಪರಿಹಾರಕ್ಕೆ ಆನ್‌ಲೈನ್ ವ್ಯವಸ್ಥೆ ಅನುಷ್ಠಾನ.
  8. “ವಿಶ್ವೇಶ್ವರಯ್ಯ ವಿದ್ಯಾ ಯೋಜನೆ' ಇದರಡಿ ಸರ್ಕಾರಿ ಶಾಲೆಗಳನ್ನು ಅತ್ಯುನ್ನತ ಶ್ರೇಣಿಗೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಬುದ್ಧರು ಹಾಗೂ ಸಂಸ್ಥೆಗಳ ಜತೆ ಸಹಭಾಗಿತ್ವ.
  9. 'ಸಮನ್ವಯ ಯೋಜನೆ' ಇದರಡಿ ತ್ವರಿತಗತಿಯಲ್ಲಿ SME ಗಳು ಮತ್ತು ITI ಗಳ ನಡುವೆ ಸಮನ್ವಯತೆ. ಪ್ರತಿಭಾವಂತ ಯುವ ವೃತ್ತಿಪರರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕ್ರಿಯಾತ್ಮಕ ಪರಿಸರ ವ್ಯವಸ್ಥೆ ನಿರ್ಮಾಣ.
  10. ಐಎಎಸ್/ಕೆಎಎಸ್/ಬ್ಯಾಂಕಿಂಗ್/ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ತರಬೇತಿ ಪಡೆಯಲು ಆರ್ಥಿಕ ಪ್ರೋತ್ಸಾಹ ನೀಡುವ ಮೂಲಕ ಮಹತ್ವಾಕಾ೦ಕ್ಷೆಯ ಯುವಜನರಿಗೆ ವೃತ್ತಿ ಬೆಂಬಲ.
  11. 'ಮಿಷನ್ ಸ್ವಾಸ್ಥ್ಯ ಕರ್ನಾಟಕ'ದ ಅಡಿ ಸರ್ಕಾರಿ ಆಸ್ಪತ್ರೆ /ಆರೋಗ್ಯ ಕೇಂದ್ರಗಳಲ್ಲಿನ ಮೂಲಸೌಕರ್ಯಗಳ ಸುಧಾರಣೆ. ಮಹಾನಗರ ಪಾಲಿಕೆಯ ಪ್ರತಿ ವಾರ್ಡ್‌ನಲ್ಲಿ ಲ್ಯಾಬೊರೇಟರಿ ಸೌಲಭ್ಯ ಹೊಂದಿರುವ ನಮ್ಮ ಕ್ಲಿನಿಕ್ ಸ್ಥಾಪನೆ. ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಉಚಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ಸೌಲಭ್ಯ.
  12. ಮುಂದಿನ ಪೀಳಿಗೆಗಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಿ, ಅದನ್ನು 'ರಾಜ್ಯ ರಾಜಧಾನಿ ಪ್ರದೇಶ' ಎಂದು ಗುರುತಿಸಲಾಗುತ್ತದೆ. ತಂತ್ರಜ್ಞಾನ ಆಧಾರಿತ ನಗರ ಅಭಿವೃದ್ಧಿ ಕಾರ್ಯಕ್ರಮ ಕಾರ್ಯಗತ. ಸುಲಲಿತ ಜೀವನಕ್ಕೆ ಅನುವು ಮಾಡಿಕೊಡುವ ಸುಸಂಘಟಿತ ಸಾರಿಗೆ ಜಾಲ ಸೃಷ್ಟಿ. ಅಲ್ಲದೇ, ಬೆಂಗಳೂರನ್ನು ಡಿಜಿಟಲ್ ಇನ್ನೋವೇಶನ್‌ನ ಜಾಗತಿಕ ಕೇಂದ್ರವಾಗಿ ರೂಪಿಸಲು ಪೂರಕ ಪರಿಸರ ವ್ಯವಸ್ಥೆ.
  13. ಕರ್ನಾಟಕವನ್ನು ಎಲೆಕ್ನಿಕ್ ವಾಹನಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುತ್ತೇವೆ. ಪೂರಕವಾಗಿ, ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ, 1,000 ಸ್ಟಾರ್ಟ್ ಅಪ್‌ಗಳಿಗೆ ಪ್ರೋತ್ಸಾಹ, ಹಾಲಿ ಇರುವ ಬಿಎಂಟಿಸಿ ಬಸ್ ಗಳನ್ನು ಎಲೆಕ್ನಿಕ್ ಬಸ್‌ಗಳಾಗಿ ಪರಿವರ್ತನೆ. ಬೆಂಗಳೂರಿನ ಹೊರವಲಯದಲ್ಲಿ 'ಇಬಿ ಸಿಟಿ' ಅಭಿವೃದ್ಧಿ.
  14. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಿರು ಶೀತಲೀಕರಣ ಸೌಲಭ್ಯಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು 2,30,000 ಕೋಟಿ ಮೊತ್ತದ 'ಕೆ-ಅಗಿ ಫಂಡ್' ಸ್ಥಾಪನೆ. ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣ. ಕೃಷಿ ಯಾಂತ್ರೀಕರಣಕ್ಕೆ ಒತ್ತು. 5 ಹೊಸ ಕೃಷಿ ಆಧಾರಿತ ಕೈಗಾರಿಕಾ ಕ್ಲಸ್ಟರ್‌ಗಳು ಮತ್ತು 3 ಹೊಸ ಆಹಾರ ಸಂಸ್ಕರಣಾ ಪಾರ್ಕ್ ಸ್ಥಾಪನೆ.
  15. ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸಿ ಕರ್ನಾಟಕವನ್ನು ದೇಶದ ಅತ್ಯಂತ ಮೆಚ್ಚಿನ ಪ್ರವಾಸಿ ತಾಣವನ್ನಾಗಿ ರೂಪಿಸಲು ಕಲ್ಯಾಣ ಸರ್ಕ್ಯೂಟ್‌ ಬನವಾಸಿ ಸರ್ಕ್ಯೂಟ್, ಪರಶುರಾಮ ಸರ್ಕ್ಯೂಟ್ ಮತ್ತು ಕಾವೇರಿ ಸರ್ಕ್ಯೂಟ್ ಗಾಣಗಾಪುರ ಕಾರಿಡಾರ್ ಅಭಿವೃದ್ಧಿಪಡಿಸಲು 91,500 ಕೋಟಿ ವಿನಿಯೋಗ.
  16. ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಬೆಂಗಳೂರಿನ ಆಚೆ ಸೃಷ್ಟಿಸುವ ಲಾಜಿಸ್ಟಿಕ್ಸ್‌ ಕೈಗಾರಿಕಾ ಕ್ಲಸ್ಟರ್‌ಗಳು, ಸಂಪರ್ಕ ಮತ್ತು ರಫ್ತು ಸೌಲಭ್ಯಗಳನ್ನು ಒಳಗೊಂಡ ಸಮಗ್ರ ಯೋಜನೆಯನ್ನು ಸಂಯೋಜಿಸುವ ಮೂಲಕ 'ಉತ್ಪಾದನಾ ಆಧರಿತ ಪ್ರೋತ್ಸಾಹ' ಯೋಜನೆಯ ವ್ಯಾಪ್ತಿ ವಿಸ್ತರಣೆ.
  17. ಮೈಸೂರಲ್ಲಿ ದಿವಂಗತ ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಫಿಲ್ಮ್ ಸಿಟಿ ಘೋಷಣೆ
  18. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಇಸ್ರೇಲ್ ಮಾದರಿಯಲ್ಲಿ ಹನಿ ನೀರಾವರಿ ಯೋಜನೆ ಮೂಲಕ ಜಮೀನಿಗಳಿಗೆ ನೀರು ತಲುಪಿಸುವ ಯೋಜನೆ
  19. IAS, KAS, ಬ್ಯಾಂಕಿಂಗ್, ಮತ್ತು ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಆರ್ಥಿಕ ಪ್ರೋತ್ಸಾಹ
  20. ದೆಹಲಿ ಸರ್ಕಾರದ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲಿ ನಮ್ ಕ್ಲೀನಿಕ್ ಮಾಡುವ ಭರವಸೆ
  21. ಮಿಷನ್ ಸ್ವಾಸ್ಥ್ಯ ಕರ್ನಾಟಕ ಯೋಜನೆ ಯಡಿ ಪ್ರತಿ ವಾರ್ಡ್​ನಲ್ಲಿ ಲ್ಯಾಬೋರೇಟರಿ ಸೌಲಭ್ಯ ವ್ಯವಸ್ಥೆ
  22. ವಿಧವೆಯರ ಪಿಂಚಣಿ ಹಣ 800 ರೂನಿಂದ 2000 ರೂಗೆ ಏರಿಕೆ
  23. ಗರ್ಭಿಣಿಯರಿಗೆ ಒಟ್ಟು 21 ರೂ ಮೌಲ್ಯದ 6 ಪೌಷ್ಠಿಕಾಂಶಗಳ ಕಿಟ್

ಪ್ರಣಾಳಿಕೆಯಲ್ಲಿ ವಲಯಾವಾರು ಭರವಸೆ:

  • ಬೆಂಗಳೂರಲ್ಲಿ ಮಲ್ಟಿ ಮಾಡಲ್ ಟ್ರಾನ್ಸ್​ಪೋರ್ಟ್ ಹಬ್ ಕಾನ್ ಕಾರ್ಡ್ ಸ್ಥಾಪನೆ
  • ಬೆಂಗಳೂರು ಏಕಿಕೃತ ಟ್ರಾನ್ಸಿಟ್ ನೆಟ್ವರ್ಕ್ ರಚನೆ
  • ಒನ್ ಸಿಟಿ ಒನ್ ಕಾರ್ಡ್ ಅಡಿ ಯುನಿವರ್ಸಲ್ ಟ್ರಾವಲ್ ಕಾರ್ಡ್ ಘೋಷಣೆ
  • ಜರ್ಮನಿ ಜಪಾನ್ ನಂತರ ಗಿಗಾ ಬಿಟ್ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಸ್ಥಾಪನೆ
  • ಹಾಲಿ ಇರುವ ಬಿಎಂಟಿಸಿ ಬಸ್ಸುಗಳನ್ನು ಎಲೆಕ್ಟ್ರಿಕಲ್ ಬಸ್ಸುಗಳಾಗಿ ಪರಿವರ್ತನೆ
  • ವರ್ಚುವಲ್ ವಿದ್ಯಾಯೋಜನೆ ಆರಂಭ
  • ಸಮರ್ಪಕ ನೀರು ಬಳಕೆಗಾಗಿ ಸ್ಮಾರ್ಟ್ ವಾಟರ್ ಯೋಜನೆ
  • ರಾಜಕಾಲುವೆಗಳ ಪುನಶ್ಚೇತನಕ್ಕೆ ಮೀಶನ್ ರಾಜಕಾಲುವೆ
  • ಮಹಿಳಾ ಸುರಕ್ಷತೆಗೆ ಎಲ್ಲಾ ಬೀದಿಗಳಲ್ಲಿ ಸಿಸಿಟಿವಿ

ಮದ್ಯ ಕರ್ನಾಟಕಕ್ಕೆ ನೀಡಿದ ಭರವಸೆಗಳು:

  • ಭದ್ರಾ ಮೇಲ್ದಂಡೆ ಸೇರಿ ಪ್ರಮುಖ ನೀರಾವರಿ ಯೋಜನೆ ಪೂರ್ಣ
  • ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಏಮ್ಸ್ ಮಾದರಿಯಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆ
  • ದಾವಣಗೆರೆಯಲ್ಲಿ ಆಹಾರ ಸಂಸ್ಕರಣಾ ಪಾರ್ಕ್
  • ಕೆರೆಗಳ ಉತ್ತೇಜನಕ್ಕೆ 500 ಕೋಟಿ ಘೋಷಣೆ
  • ಬೆಂಗಳೂರು ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಎಕ್ಸ್​ಪ್ರೆಸ್ ವೇ ಆಗಿ ಪರಿವರ್ತನೆ

ಕರಾವಳಿ ಕರ್ನಾಟಕ:

  • 12ಸಾವಿರ ಕೋಟಿ ವೆಚ್ಚದಲ್ಲಿ ಕರಾವಳಿ ನವೋತ್ಥಾನ ಯೋಜನೆ
  • ಪರಿಸರ ಸ್ನೇಹಿ ದೋಣಿ ಯೋಜನೆ
  • ಉತ್ತರ ಕನ್ನಡದಲ್ಲಿ ಏಮ್ಸ್ ಮಾದರಿ ಆಸ್ಪತ್ರೆ
  • 9 ಮೀನುಗಾರಿಕಾ ಬಂದರು ಮೇಲ್ದರ್ಜೆಗೆ

ಕಿತ್ತೂರು ಕರ್ನಾಟಕ: ಕಿತ್ತೂರು ಕರ್ನಾಟಕ ಲಾಜಿಸ್ಟಿಕ್ ಮತ್ತು ವೇರ್ ಹೌಸ್ ಹಬ್ ಆಗಿ ಪರಿವರ್ತನೆ

  • ಬ್ಯಾಡಗಿಯಲ್ಲಿ ಸ್ಪೈಸ್ ಪಾರ್ಕ್
  • ಪ್ರತಿ ತಾಲೂಕಿನಲ್ಲಿ ಎರಡು ಪಿಎಂ ಶ್ರೀ ಶಾಲೆ ಸ್ಥಾಪನೆ
  • ನೀರಾವರಿ ಮತ್ತು ಕುಡಿಯುವ ನೀರು ಸೌಲಭ್ಯಕ್ಕೆ ಕೃತಕ ಕೆರೆಗಳ ನಿರ್ಮಾಣ
  • ಬಾಗಲಕೋಟೆಯಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ

ಕಲ್ಯಾಣ ಕರ್ನಾಟಕ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 7500 ಕೋಟಿ ಅನುದಾನ

  • ಕೊಪ್ಪಳ ಮತ್ತು ಯಾದಗಿರಿಯಲ್ಲಿ ಏಮ್ಸ್ ಮಾದರಿ ಆಸ್ಪತ್ರೆ
  • ಕೃಷ್ಣ ಮೇಲ್ದಂಡೆ ಸೇರಿ ನೀರಾವರಿ ಯೋಜನೆ ಪೂರ್ಣ
  • ಹತ್ತು ಗೀಗಾ ವ್ಯಾಟ್ ಸಾಮರ್ಥ್ಯದ ಮೇಗಾ ಸೋಲಾರ್ ಪಾರ್ಕ್ ಘೋಷಣೆ
  • ಬೀದರ್​ ನಲ್ಲಿ ಆಹಾರ ಸಂಸ್ಕರಣಾ ಪಾರ್ಕ್
  • ಶುದ್ಧ ಜಲಯೋಜನೆಯಡಿ ಸಾವೀರ ಕೋಟಿ ಅನುದಾನ
  • ಕೊಪ್ಪಳದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ

ಹಳೆ ಮೈಸೂರು ಕರ್ನಾಟಕ: ಮೈಸೂರಲ್ಲಿ ಆಹಾರ ಪಾರ್ಕ್, ಎಲೆಕ್ಟ್ರಾನಿಕ್ ಉತ್ಪಾದನಾ ಕ್ಲಸ್ಟರ್

  • ತುಮಕೂರಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ
  • ಚಿಕ್ಕಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಪಿ ಪಿ ಪಿ ಮಾದರಿ ಶೀತಲಿಕರಣ ಘಟಕ
  • ರೇಷ್ಮೆ ಕೃಷಿಕರಿಗಾಗಿ ಫಾರ್ಮ್ ಟು ರಿಟೇಲ್ ಯೋಜನೆ
  • ತೆಂಗು ಉತ್ಪನ್ನಗಳ ರಫ್ತು ಉತ್ತೇಜನಕ್ಕೆ 50 ಕೋಟಿ
  • ತ್ರಿವೇಣಿ ಸಂಗಮ ಕುಂಬಮೇಳಕ್ಕೆ ಅಗತ್ಯ ಸೌಲಭ್ಯ
  • ಚಾಮರಾಜನಗರದಲ್ಲಿ ಏಮ್ಸ್ ಮಾದರಿಯಲ್ಲಿ ಆಸ್ಪತ್ರೆ

ಮಲೆನಾಡು ಕರ್ನಾಟಕ: ಕಾಫಿ ಬೋರ್ಡ್ ಮಾದರಿಯಲ್ಲಿ ಅಡಕೆ ಮಂಡಳಿ ಘೋಷಣೆ

  • ಕೊಡಗು ಚಿಕ್ಕಮಗಳೂರಿನಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ
  • ಶೃಂಗೇರಿಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ
  • ಶಿವಮೊಗ್ಗ, ಶೃಂಗೇರಿ ನಡುವೆ ಚತುಷ್ಪತ ರಸ್ತೆ
  • ಶಿವಮೊಗ್ಗದಲ್ಲಿ ಆಯುರ್ವೇದ ಸಂಶೋಧನಾ ಮತ್ತು ತರಬೇತಿ ಸಂಸ್ಥೆ

ಇತರ ಭರವಸೆಗಳು:

  • ಇಸ್ರೇಲ್ ಮಾದರಿಯಲ್ಲಿ ಹನಿ ನೀರಾವರಿ ಯೋಜನೆ ಮೂಲಕ ಜಮೀನಿಗಳಿಗೆ ನೀರು ತಲುಪಿಸುವ ಯೋಜನೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅನುಷ್ಠಾನಗೊಳಿಸಿ ಜಮೀನುಗಳಿಗೆ ನೀರು ಪೂರೈಕೆ. ಕೃಷಿ ಉತ್ಪನ್ನ ಸಾಗಾಟ ಮಾಡುವ ರೈತರಿಗೆ ಉಚಿತ ಬಸ್ ಟಿಕೆಟ್ ಸೌಲಭ್ಯ
  • ಕುಸುಮ್ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ಬಳಸುವ ರೈತರಿಗೆ 80 ಪರ್ಸೆಂಟ್ ಸಬ್ಸಿಡಿ
  • ಮಿಷನ್ ಕರ್ನಾಟಕ ಕನೆಕ್ಟ್ ಯೋಜನೆಯಡಿ ಮೈಸೂರು, ಹುಬ್ಬಳ್ಳಿ-ಧಾರವಾಢ ಮತ್ತು ಬೆಳಗಾವಿ ಯಲ್ಲಿ ಮೆಟ್ರೋ ರೈಲು ಯೋಜನೆ ವಿಸ್ತರಣೆ
  • ಲೋಕಸೇವಾ ಆಯೋಗ ನಡೆಸುವ ಪರೀಕ್ಷಾ ಸ್ಥಳಗಳಿಗೆ ತೆರಳುವ ಅಭ್ಯರ್ಥಿಗಳಿಗೆ ಉಚಿತ ಬಸ್ಸು ಪ್ರಯಾಣ ಸೌಲಭ್ಯ

ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕ ಮತ್ತು ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, "ಪ್ರಣಾಳಿಕೆ ಸಿದ್ಧಪಡಿಸಲು 38 ವಿವಿಧ ವಿಭಾಗ, 178 ಕ್ಷೇತ್ರಗಳಲ್ಲಿ ಸಲಹೆ ಪಡೆಯಲಾಗಿದೆ. ಮಿಸ್ ಕಾಲ್ ಮೂಲಕ 29,306 ಸಲಹೆ ಸೇರಿ ಒಟ್ಟು 6 ಲಕ್ಷ ಸಲಹೆ ಬಂದಿವೆ. ಎಲ್ಲವನ್ನೂ ಪರಿಶೀಲನೆ ನಡೆಸಿದ್ದೇವೆ. 17 ರಾಷ್ಟ್ರೀಯ ನಾಯಕರು ಪ್ರಣಾಳಿಕೆ ಸಿದ್ಧಪಡಿಸಲು ಸಹಕರಿಸಿದ್ದಾರೆ. ತಜ್ಞರ ಕಡೆಯಿಂದ 900 ಸಲಹೆ ಬಂದಿವೆ, 50 ಕ್ಷೇತ್ರ ತಜ್ಞರ ಸಲಹೆ ಬಂದಿದೆ" ಎಂದರು.

"ಆರೋಗ್ಯಯುಕ್ತ ನಾಡು, ಯುವಕರ ಸಬಲೀಕರಣ, ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಲು ಮತ್ತು ವೃದ್ಧರು, ಅಂಗವಿಕಲರು, ವಿಧವೆಯರಿಗೆ ಅನುಕೂಲಕರ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಸಿಲಿಂಡರ್ ಬೆಲೆ ಬಗ್ಗೆಯೂ ಪ್ರಣಾಳಿಕೆಯಲ್ಲಿದೆ" ಎಂದು ಅವರು ಹೇಳಿದರು.

"ಬೇರೆ ಪಕ್ಷದ ರೀತಿ ಸುಳ್ಳು ಭರವಸೆ ಕೊಡದೆ ಈಡೇರಿಸುವ ಭರವಸೆ ಕೊಡುತ್ತಿದ್ದೇವೆ. ಕಾಂಗ್ರೆಸ್ 13 ರಾಜ್ಯದಲ್ಲಿ ಭರವಸೆ ನೀಡಿದ್ದರೂ ಜನರು ತಿರಸ್ಕಾರ ಮಾಡಿದ್ದಾರೆ. ಜನರಿಗೆ ಅವರ ಮೇಲೆ ವಿಶ್ವಾಸ ಇಲ್ಲ, ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ಭರವಸೆ ಈಡೇರಿಸಲಾಗಿಲ್ಲ, ಹಾಗಾಗಿ ಅವರನ್ನು ಜನ ನಂಬಲ್ಲ" ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

"ಇಡೀ ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿದಿರುವ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ, ದೇಶದ ಆಡಳಿತದಲ್ಲಿ ದಿಕ್ಸೂಚಿ ಪಾತ್ರ ವಹಿಸುತ್ತಿದೆ. ದೇಶವನ್ನು, ರಾಜ್ಯವನ್ನು ಗಮನದಲ್ಲಿರಿಸಿಕೊಂಡು ಪ್ರಣಾಳಿಕೆ ಮಾಡಬೇಕು, ಆಡಳಿತ ನಡೆಸಬೇಕಿದೆ. ಅತ್ಯಂತ ಪ್ರಬಲ ರಾಜ್ಯಗಳ ಒಕ್ಕೂಟವೇ ದೇಶದ ಬಲ. ಕರ್ನಾಟಕದ ಅಭ್ಯುದಯಕ್ಕೆ ಪೂಕರವಾಗಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ" ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕ ಡಾ.ಕೆ.ಸುಧಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಅಮಿತ್ ಶಾ ರೋಡ್ ಶೋ: ಎಲ್ಲೆಲ್ಲಿ? ಸಂಪೂರ್ಣ ವಿವರ..

Last Updated :May 1, 2023, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.