ETV Bharat / state

ಜಾತಿಗಣತಿ ವರದಿ ವಿಚಾರದಲ್ಲಿ ಕಾಂಗ್ರೆಸ್​ ನಡೆ ಮಗು ಚಿವುಟಿ, ತೊಟ್ಟಿಲು ತೂಗುವ ಹಾಗಿದೆ: ಸಿ.ಟಿ ರವಿ

author img

By ETV Bharat Karnataka Team

Published : Nov 22, 2023, 5:57 PM IST

ಜಾತಿಜನಗಣತಿ ವರದಿ ಬಗ್ಗೆ ಸಿಟಿ ರವಿ ಪ್ರತಿಕ್ರಿಯೆ
ಜಾತಿಜನಗಣತಿ ವರದಿ ಬಗ್ಗೆ ಸಿಟಿ ರವಿ ಪ್ರತಿಕ್ರಿಯೆ

ಜಾತಿಗಣತಿ ವಿಚಾರದಲ್ಲಿ ಕಾಂಗ್ರೆಸ್​ ನಡೆ ಕುರಿತು ಬಿಜೆಪಿ ಮುಖಂಡ ಸಿ.ಟಿ ರವಿ ಮತ್ತು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು: ಜಾತಿಗಣತಿ ವರದಿ ವಿಚಾರದಲ್ಲಿ ಮಗುವನ್ನೂ ಚಿವುಟಿ, ತೊಟ್ಟಿಲು ತೂಗುವುದು ಎಂಬ ಗಾದೆಯಂತೆ ಈಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮಗು ಚಿವುಟುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಟಿ. ರವಿ ಟೀಕಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂತರಾಜು ವರದಿಗೆ ಸಂಬಂಧಿಸಿದಂತೆ ಅದರ ಪ್ರಿನ್ಸಿಪಲ್ ಸೆಕ್ರೇಟರಿಯೇ ಸಹಿ ಹಾಕಿಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಒಂದೂವರೆ ಕೋಟಿ ಜನರ ಉಲ್ಲೇಖವೇ ಇಲ್ಲ. ಹಾಗಿರುವಾಗ ಎಷ್ಟರ ಮಟ್ಟಿಗೆ ಕಾಂತರಾಜು ವರದಿ ಇದೆ ಎಂದು ಹೇಳಿದರು. ನಮ್ಮ ಕಡೆ ಗಾದೆ ಇದೆ. ಮಗುವನ್ನು ಚಿವುಟಿ, ತೊಟ್ಟಿಲು ತೂಗುವುದು. ಹಾಗೆ ಕಾಂಗ್ರೆಸ್ ನಡೆ ಇದೆ‌. ಹಿಂದೆ ಅಧಿಕಾರದಲ್ಲಿದ್ದಾಗಲೇ ವರದಿ ಸಿಕ್ಕಿತ್ತು. ಆಗಲೇ ಯಾಕೆ ಮಾಡಲಿಲ್ಲ‌? ಡಿಸಿಎಂ ಡಿ.ಕೆ. ಶಿವಕುಮಾರ್ ಇಲ್ಲಿ ಸಹಿ ಹಾಕುವ ಅವಶ್ಯಕತೆ ಇರಲಿಲ್ಲ.

ವರದಿ ಬಗ್ಗೆ ವಿರೋಧ ಇದ್ದರೆ ಒಂದೇ ಸಾಲಲ್ಲಿ ರಾಜೀನಾಮೆ ಕೊಟ್ಟು ಹೊರಗೆ ಬಂದು ಹೋರಾಟದಲ್ಲಿ ಭಾಗಿಯಾಗಬೇಕು. ಈಗಾಗಲೇ ವೀರಶೈವ ಸಮಾಜ, ಒಕ್ಕಲಿಗ ಸಮಾಜ ವೈಜ್ಞಾನಿಕವಾಗಿ ಸರಿ ಇಲ್ಲ ಎಂದು ವರದಿಯನ್ನು ವಿರೋಧಿಸಿದೆ. ಜಾತಿ ಗಣತಿ ಅಲ್ಲ ಅಂತಾದ್ರೆ ವರದಿ ಎಲ್ಲಿ ಹೋಯ್ತು?. ಒಂದೂವರೆ ಕೋಟಿ ಜನ ಎಲ್ಲಿ ಹೋದ್ರು. ಆಯೋಗದ ಅಧ್ಯಕ್ಷರ ಸಹಿಯೇ ಇಲ್ಲ. ಜಾತಿ ಗಣತಿ, ಸಮೀಕ್ಷೆ ಆಗಬೇಕು. ತುಳಿತಕ್ಕೊಳಗಾದ ಜನರಿಗೆ ಅನ್ಯಾಯ ಆಗಬಾರದು. ಪೊಲಿಟಿಕಲ್ ಫುಟ್ ಬಾಲ್ ಆಗಬಾರದು ಎಂದರು.

ಮೂಲ ಕಡತ ನಾಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರ ಸಹಿ ಇಲ್ಲದ ಆದೇಶ ಅಂತ ಕೆ.ಎಸ್. ಈಶ್ವರಪ್ಪ ಹೇಳಿದ್ದರು. ಹಾಗೆ ಆಯೋಗದ ಅಧ್ಯಕ್ಷರ ಸಹಿ ಇಲ್ಲದ ವರದಿ ಇದಾಗಿದೆ. ರಿಸರ್ವ್ ಬ್ಯಾಂಕ್ ಅಧ್ಯಕ್ಷರ ಸಹಿ ಇಲ್ಲದ ನೋಟ್ ತರ ಈ ವರದಿ ಆಗಿದೆ. ತುಳಿತಕ್ಕೊಳಗಾದ ಜನರಿಗೆ ನ್ಯಾಯ ಸಿಗಬೇಕು ಅನ್ನೋದು ನಮ್ಮ ಪಕ್ಷದ ಆಶಯ. ಅವಕಾಶ ವಂಚಿತ ಸಮಾಜ ಇದೆ. ಅಂತ ಸಮಾಜಕ್ಕೆ ಶೇ.50 ರಷ್ಟು ಮೀಸಲಾತಿ ಸಿಗಬೇಕು ಅನ್ನೋದು ನನ್ನ ಅಭಿಪ್ರಾಯ ಎಂದು ಹೇಳಿದರು.

ಮಾಜಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಪ್ರತಿಕ್ರಿಯೆ: ಎಚ್.ಕಾಂತರಾಜು ವರದಿ ಸಮಾಜದಲ್ಲಿ ಸಮಸ್ಯೆ ಬಗೆಹರಿಸುವುದಕ್ಕಿಂತ ರಾಜಕೀಯ ಪ್ರೇರಿತವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗಾಗಲಿ, ಕಾಂಗ್ರೆಸ್ ನವರಿಗಾಗಲಿ ದುರುದ್ದೇಶ ಇದೆ. ಇದರದಲ್ಲಿ ಸದುದ್ದೇಶ ಇದ್ದರೆ ಭ್ರಷ್ಟಾಚಾರ ರಹಿತ ಸರ್ಕಾರ ನೀಡುತ್ತಿದ್ದರು ಎಂದು ಮಾಜಿ ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ.

ತಮ್ಮ ನಿವಾಸದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಡಳಿತದಲ್ಲಿ ಪಾರದರ್ಶಕತೆ ಇಲ್ಲ. ಗುಣಮಟ್ಟದ ಶಿಕ್ಷಣ, ಸೌಲಭ್ಯ ಇಲ್ಲ. ಯಾವುದೇ ಪ್ರಶ್ನೆಗಳಿಗೂ ಅವರ ಬಳಿ ಉತ್ತರ ಇಲ್ಲ. ಅಧಿಕಾರಕ್ಕೆ ಬಂದ ಬಳಿಕವಾದರೂ ಜನ ಕೊಟ್ಟ ಬೆಂಬಲಕ್ಕೆ ಕೆಲಸ‌ಮಾಡಬೇಕಿತ್ತು. ಆದರೆ, ಕಾಂತರಾಜು ವರದಿ ಕೇವಲ ಸಮೀಕ್ಷೆ ಅಂತಾರೆ. ಜಾತಿ ಜನಗಣತಿ ಸಮೀಕ್ಷೆ ಸರಿಯಾಗಿ ಆಗಿಲ್ಲ ಅನ್ನುವ ಮಾತು ಕೇಳಿಬರುತ್ತಿದೆ. ಹಸ್ತಪ್ರತಿ ಇಲ್ಲ, ಕಾರ್ಯದರ್ಶಿ ಸಹಿ ಇಲ್ಲ ಅಂತಿದ್ದರೂ ಈಗ ವರದಿ ಬಿಡುಗಡೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ವರಿಗೂ ಸಮಪಾಲು, ಸಮಬಾಳು ಅಂತಿದ್ದಾರೆ, ಬರೀ ಸ್ವಾರ್ಥ, ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಜನರ ಮೇಲೆ ಎಳ್ಳಷ್ಟು ವಿಶ್ವಾಸ ಇಲ್ಲ. ವಿಷ ತುಂಬುವ ಕೆಲಸ‌ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಪರಿಶಿಷ್ಟ ಪಂಗಡಕ್ಕೆ ಸೇರಿದ ಹಳೆ ಮೈಸೂರು ಭಾಗದ ಪರಿವಾರ ಸಮುದಾಯ: ಗೊಂದಲ ನಿವಾರಣೆಗೆ ಸಿಎಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.