ETV Bharat / state

ಉದಯನಿಧಿ ಅದೃಷ್ಟವಂತ, ಅರಬ್, ಇರಾನ್, ಇರಾಕ್​ನಲ್ಲಿ ಇಂತಹ ಪ್ರಶ್ನೆ ಮಾಡಿದ್ದರೆ ಏನಾಗ್ತಿತ್ತು : ಸಿಟಿ ರವಿ ಪ್ರಶ್ನೆ

author img

By ETV Bharat Karnataka Team

Published : Sep 6, 2023, 4:20 PM IST

Updated : Sep 6, 2023, 6:48 PM IST

bjp-leader-ct-ravi-slams-udayanidhi-stalin-on-sanathana-dharma-row
ಉದಯನಿಧಿ ಸ್ಟಾಲಿನ್ ಅದೃಷ್ಟವಂತ, ಅರಬ್, ಇರಾನ್, ಇರಾಕ್​ನಲ್ಲಿ ಅಲ್ಲಿಯ ಮತದ ಪ್ರಶ್ನೆ ಮಾಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು : ಸಿಟಿ ರವಿ

ತಮಿಳುನಾಡು ಸಚಿವ ಉದಯನಿಧಿ ಹೇಳಿಕೆಗೆ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಿರುಗೇಟು ನೀಡಿದ್ದಾರೆ.

ತಮಿಳುನಾಡು ಸಚಿವ ಉದಯನಿಧಿ ಹೇಳಿಕೆಗೆ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಿರುಗೇಟು

ಬೆಂಗಳೂರು : ಉದಯನಿಧಿ ಸ್ಟಾಲಿನ್​ ಬಹಳ ಅದೃಷ್ಟವಂತ. ಸನಾತನೀಯರು ಬಹುಸಂಖ್ಯಾತರಿರುವ ದೇಶದಲ್ಲಿ ಹುಟ್ಟಿದ್ದಾರೆ. ಅರಬ್, ಇರಾನ್, ಇರಾಕ್​ನಲ್ಲಿ ಅಲ್ಲಿಯ ಮತದ ಪ್ರಶ್ನೆ ಮಾಡಿದ್ದರೆ ನಿಮ್ಮ ಪರಿಸ್ಥಿತಿ ಏನಾಗುತ್ತಿತ್ತು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಿರುಗೇಟು ನೀಡಿದ್ದಾರೆ.

ಭಾರತದ ಅರ್ಥ ವಿವರಿಸಿದ ಸಿಟಿ ರವಿ: ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ ಎನ್ನುವ ಹೆಸರು ಮತ್ತು ಸನಾತನ ಧರ್ಮಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿದೆ. ಈ ಎರಡರಲ್ಲಿಯೂ ನಾನು ನನ್ನದೇ ಆದ ಅಭಿಪ್ರಾಯ ಹೊಂದಿದ್ದೇನೆ. ಭಾರತ ಹೆಸರು ನಿನ್ನೆ ಮೊನ್ನೆಯದ್ದಲ್ಲ. ಸಾವಿರಾರು ವರ್ಷದಿಂದ ನಮ್ಮ ದೇಶವನ್ನು ಭಾರತ ಎಂದೇ ಗುರುತಿಸಲಾಗಿದೆ. ಭರತ ಚಕ್ರವರ್ತಿಯಿಂದ ಭಾರತ ಎಂಬ ಹೆಸರು ಬಂದಿತು ಎಂದು ಪರಿಭಾವಿಸಲಾಗಿದೆ. ಭಾ ಎಂದರೆ ಬೆಳಕು, ಜ್ಞಾನವನ್ನು ಮುನ್ನಡೆಸುವ ದೇಶ ಭಾರತ ಎಂದರು.

ಸಿಂಹದ ಜೊತೆ ಆಡಿದವ ಭರತ. ಅವನ ಸಂಜಾತರು ನಾವು, ವಿಷ್ಣು ಪುರಾಣದಲ್ಲೂ ಈ ಬಗ್ಗೆ ಉಲ್ಲೇಖವಿದೆ. ಉತ್ತರದ ಹಿಮಾಲಯದಿಂದ ದಕ್ಷಿಣದ ಸಮುದ್ರದವರೆಗೂ ಇರುವ ಭೂ ಭಾಗವನ್ನು ಭಾರತ ಎಂದು ಕರೆದಿದ್ದು, ಅಲ್ಲಿನ ಜನರನ್ನು ಭಾರತೀಯರು ಎಂದು ಕರೆಯಲಾಗಿದೆ ಎಂದು ತಿಳಿಸಿದರು.

ಮಹಾತ್ಮ ಗಾಂಧಿ ಭಾಷಣದಲ್ಲಿ ಹೇ ರಾಮ್ ಜೊತೆ ಭಾರತ್ ಮಾತಾ ಕೀ ಜೈ ಎಂದರು. ಬಂಗಾಳದ ವಿಭಜನೆ ಕಾಲದಲ್ಲಿ ಹೋರಾಟಕ್ಕೆ ಇದು ಶಕ್ತಿ ಕೊಟ್ಟಿತ್ತು. ಬ್ರಿಟೀಷರ ವಿರುದ್ಧ ಹೋರಾಟ ಮಾಡುವವರಿಗೆ ಮಂತ್ರವಾಗಿತ್ತು. ಆದರೆ, ಈಗ ಯಾಕೆ ವಿವಾದದ ದೃಷ್ಟಿಯಲ್ಲಿ ನೋಡುತ್ತಿದ್ದಾರೋ ಗೊತ್ತಿಲ್ಲ. ಇಂಡಿಯಾ ಪದವನ್ನು ವ್ಯಾವಹಾರಿಕವಾಗಿ ಅರಗಿಸಿಕೊಂಡಿದ್ದೇವೆ, ಪರ್ಶಿಯನ್ನರಿಗೆ ಸಿಂಧು ಉಚ್ಚರಣೆ ಬಾರದೆ ಹಿಂದೂ ಎಂದು ಕರೆದರು.

ಇಂಡಸ್​​​​​​​ ಬಗ್ಗೆ ಸಿಟಿ ರವಿ ವಿವರಣೆ ಹೀಗಿದೆ: ಅವರ ಅರಬ್ ಹೆಸರಿನಲ್ಲಿ ನಮ್ಮ ಅಸ್ತಿತ್ವ ಗುರುತಿಸಿಕೊಳ್ಳುತ್ತಿದ್ದರು. ನಮಗೆ ಅಸ್ತಿತ್ವದ ಪ್ರಶ್ನೆ ಇರಲಿಲ್ಲ, ಪರಕೀಯರು ಆಕ್ರಮಣ ಮಾಡಿದಾಗ ಸಿಂಧೂ ಹಿಂದೂ ಆಯಿತು. ಗ್ರೀಕ್ ನವರು ಇಂಡಸ್ ಎಂದರು. ಬ್ರಿಟಿಷರು ಇಂಡಸ್​ನ್ನು ಇಂಡಿಯಾ ಎಂದು ಕರೆದರು. ಇದಕ್ಕೇನು ಸಾವಿರಾರು ವರ್ಷಗಳ ಇತಿಹಾಸ ಇಲ್ಲ. ವಸಾಹತುಶಾಹಿ ಕಾಲಕ್ಕೂ ಮೊದಲು ಈ ಪದ ಕಂಡೇ ಇಲ್ಲ. ಭಾರತೀಯ ಯಾವುದೇ ಸಾಹಿತ್ಯದಲ್ಲಿ ಇಲ್ಲ. ಆದರೂ ಇಂಡಿಯಾ ಪದ ಅಳವಡಿಸಿಕೊಂಡಿದ್ದೇವೆ. ಆದರೆ, ಭಾರತ ನಮ್ಮ ಅಸ್ಮಿತೆ, ಭಾರತ ಎನ್ನುವುದು ಆತ್ಮ ಅದನ್ನು ಕಳೆದುಕೊಂಡರೆ ಏನಾಗುತ್ತೇವೆ? ಎಂದು ಪ್ರತಿಪಕ್ಷಗಳ ನಿಲುವಿಗೆ ಟಕ್ಕರ್ ನೀಡಿದರು.

ಭಾರತವನ್ನೇ ವಿರೋಧಿ ಮಾತನಾಡುವ ಮನಸ್ಥಿತಿ ಬಂದಿರುವವರಿಗೆ ಕೇಳ ಬಯಸುತ್ತೇನೆ, ಸಿಎಂ, ಡಿಸಿಎಂ ಇಬ್ಬರೂ ಹರಕೆ ತೀರಿಸಲು ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿದ್ದರು. ಅಲ್ಲಿ ಸಂಕಲ್ಪ ಮಾಡಿಸಿದ್ದರು. ಇದು ಸಾವಿರಾರು ವರ್ಷದಿಂದ ನಡೆದುಕೊಂಡು ಬಂದಿದೆ. ಈ ವೇಳೆ, ನಾನು ಯಾವ ಸಾಂಸ್ಕೃತಿಕ ಮೂಲದವರು ಎಂದು ಸಿಎಂ ಡಿಸಿಎಂ ಇಬ್ಬರಿಗೂ ಗೊತ್ತಿದ್ದೇ ಮಾಡಿಸಿದ್ದಾರೆ ಎಂದುಕೊಂಡಿದ್ದೇನೆ. ಆದರೂ ಅವರಿಗೆ ದಾಸ್ಯದ ಪರಿಕಲ್ಪನೆ ಹೋಗಿಲ್ಲ, ಊಳಿಗಮಾನ್ಯ ಪದ್ದತಿಯನ್ನೇ ಅನುಕರಿಸುತ್ತಿದ್ದಾರೆ ಟಾಂಗ್ ನೀಡಿದರು.

ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ಸನಾತನ ಧರ್ಮದ ಚರ್ಚೆ ಆರಂಭವಾಗಿದೆ. ಚರ್ಚೆ ಟೀಕೆಯೇ ಸನಾತನ ಧರ್ಮದ ವಿಶೇಷತೆ. ಅರಬ್, ಇರಾನ್, ಇರಾಕ್ ನಲ್ಲಿ ಅಲ್ಲಿಯ ಮತದ ಪ್ರಶ್ನೆ ಮಾಡಿದ್ದರೆ ನಿಮ್ಮ ಪರಿಸ್ಥಿತಿ ಏನಾಗುತ್ತಿತ್ತು. ನೀವು ಬಹಳ ಅದೃಷ್ಟವಂತ, ಸನಾತನೀಯರು ಬಹುಸಂಖ್ಯಾತರಿರುವ ದೇಶದಲ್ಲಿ ಹುಟ್ಟಿದ್ದೀಯಾ ಎಂದು ಸ್ಟಾಲಿನ್ ವಿರುದ್ಧ ಹರಿಹಾಯ್ದರು.

ಪರಮೇಶ್ವರ್​ ಹೇಳಿಕೆ ಬಗ್ಗೆಯೂ ತಿರುಗೇಟು: ಸನಾತನ ಎಂದರೆ ಆದಿ ಅಂತ್ಯ ಇಲ್ಲದ್ದು, ಎಷ್ಟೋ ಧರ್ಮ ಉದಯಿಸಿ ಹೋಗಿವೆ. ಆದರೆ, ಸನಾತನ ಧರ್ಮ ಹಾಗೆಯೇ ಉಳಿದಿದೆ. ಮತಗಳಿಗೆ ವಾರಸುದಾರಿಕೆ ಇದೆ. ಡೇಟ್ ಆಫ್ ಬರ್ತ್ ಇದೆ. ಹುಟ್ಟಿಸಿದ್ದು ಯಾರು ಅಂತಲೂ ಇದೆ. ಆದರೆ ಧರ್ಮಕ್ಕೆ ಇಲ್ಲ, ಅದು ವಿಕಸನದಿಂದ ಬರಲಿದೆ. ಯಾರು ಆ ಸಂಸ್ಕೃತಿಯನ್ನು ಅನುಸರಿಸುತ್ತಾರೋ ಅವರು ಅದರ ವಾರಸುದಾರರಾಗಿರುತ್ತಾರೆ ಎಂದು ಹಿಂದೂ ಧರ್ಮದ ಹುಟ್ಟಿನ ಕುರಿತು ಪ್ರಶ್ನಿಸಿದ್ದ ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದರು.

ಸರ್ವಜ್ಞ, ತಿರುವಳ್ಳುವರ್ ಯಾವ ಜಾತಿ? ಸಚಿವ ಮಹದೇವಪ್ಪಗೆ ಸಿಟಿ ರವಿ ಟಾಂಗ್​: ಶೂದ್ರರಿಗೆ ಶಿಕ್ಷಣ ಸಿಕ್ಕಿದ್ದೇ ಮೆಕಾಲೆ ಬಂದ ನಂತರ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಆದರೆ ಇದು ತಪ್ಪು, ನೀವು ವಾಲ್ಮೀಕಿಗೆ ಅಪಮಾನ ಮಾಡಿದ್ದೀರಿ, ವೇದಗಳಿಗೆ ಭಾಷ್ಯ ಬರೆದ, ಮಹಾಭಾರತವನ್ನು ಬರೆಸಿದಂತ ವೇದವ್ಯಾಸರಿಗೆ ಅಪಮಾನ ಮಾಡಿದ್ದೀರಿ. ನಿಮ್ಮ ದೃಷ್ಟಿಯಲ್ಲಿ ಇವರು ಯಾವ ಜಾತಿಗೆ ಸೇರಿದವರು? ಋಷಿಮುನಿಗಳಲ್ಲಿಯೂ ಹಲವು ಜಾತಿಯಿದ್ದರೂ ಗುಣವನ್ನು ಗೌರವಿಸಲಾಗಿತ್ತೇ ಹೊರತು ಜಾತಿಯನ್ನಲ್ಲ. ಈಗ ಇರುವ ಶಿಕ್ಷಣ ಪದ್ದತಿ ಬ್ರಿಟೀಷರ ಶಿಕ್ಷಣ ಪದ್ದತಿ. ಹಿಂದೆ ಈ ಪದ್ದತಿ ಇರಲಿಲ್ಲ, ಮಧ್ಯಕಾಲದಲ್ಲಿ ಬಂದಿದ್ದು. ನೀವು ಹೇಳುವುದು ಸತ್ಯವಾದರೆ, ಸರ್ವಜ್ಞ, ತಿರುವಳ್ಳುವರ್ ಯಾವ ಜಾತಿ. ಅವರು ಅಜ್ಞಾನಿಗಳಾ, ಶಿಕ್ಷಣ ಕಲಿತಿಲ್ಲವಾ? ಎಂದು ವಾಗ್ದಾಳಿ ನಡೆಸಿದರು.

ಭಾರತ ಎಂದು ಕರೆದಾಕ್ಷಣ ಯಾಕೆ ಬೆಚ್ಚಿಬೀಳಬೇಕು? ಯಾಕೆ ಉರಿದು ಬೀಳಬೇಕು, ಯಾಕೆ ಸಂಕಟ ಪಡಬೇಕು? ಬಾಂಬೆ, ಕಲ್ಕತ್ತ, ಮದ್ರಾಸು ಎಲ್ಲಾ ಬದಲಾಗಿಲ್ಲವೇ? ಇಲ್ಲಿ ಭಾರತ ಇತ್ತು. ಇಂಡಿಯಾ ಪದ ಇರಬೇಕಾ ಬೇಡವಾ ಚರ್ಚೆ ಆಗಲಿ. ಭಾರತ ಪದಕ್ಕೆ ಹಿನ್ನೆಲೆ ಇದೆ, ಇಂಡಿಯಾ ಪದಕ್ಕೆ ಹಿನ್ನಲೆ ಎಲ್ಲಿದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : India vs Bharat: 'ಭಾರತ್ ಮಾತಾಕಿ ಜೈ ಎನ್ನುತ್ತೆವೆಯೇ ಹೊರತು, ಇಂಡಿಯಾ ಮಾತಾಕಿ ಜೈ ಎನ್ನೋದಿಲ್ಲ'; ಆರಗ ಜ್ಞಾನೇಂದ್ರ

Last Updated :Sep 6, 2023, 6:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.