ETV Bharat / state

ಬಿಟ್ ಕಾಯಿನ್ ಹಗರಣ: ಶ್ರೀಕಿ ಸಹೋದರನ ವಿರುದ್ಧದ ಲುಕ್‌ಔಟ್ ಸುತ್ತೋಲೆ ರದ್ದು

author img

By ETV Bharat Karnataka Team

Published : Oct 16, 2023, 10:11 PM IST

ಹೈಕೋರ್ಟ್
ಹೈಕೋರ್ಟ್

ಬಿಟ್​ ಕಾಯಿನ್ ಹಗರಣದ ಆರೋಪಿ ಶ್ರೀಕಿ ಸಹೋದರನ ವಿರುದ್ಧದ ಲುಕ್​ಔಟ್​ ಸುತ್ತೋಲೆಯನ್ನು ಹೈಕೋರ್ಟ್​ ರದ್ದುಪಡಿಸಿದೆ.

ಬೆಂಗಳೂರು : ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಅಲಿಯಾಸ್ ಶ್ರೀ ಕೃಷ್ಣ ಸಹೋದರ ಸುದರ್ಶನ್ ರಮೇಶ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಹೊರಡಿಸಿದ್ದ ಲುಕ್ ಔಟ್ ಸುತ್ತೋಲೆಯನ್ನು (ಎಲ್‌ಒಸಿ) ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ತನ್ನ ವಿರುದ್ಧ ಹೊರಡಿಸಿರುವ ಎಲ್‌ಒಸಿ ರದ್ದುಪಡಿಸುವಂತೆ ಕೋರಿ ಸುದರ್ಶನ್ ರಮೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ಅಲ್ಲದೆ, ಕೇಂದ್ರ ಗೃಹ ಇಲಾಖೆಯ ಬ್ಯುರೊ ಆಫ್ ಇಮಿಗ್ರೇಷನ್ ಸುದರ್ಶನ್ ವಿರುದ್ಧ ಹೊರಡಿಸಿರುವ ಲುಕ್‌ಔಟ್ ಸುತ್ತೋಲೆಯನ್ನು (ಎಲ್‌ಒಸಿ) ಅನುಷ್ಠಾನಗೊಳಿಸಲಾಗದು ಹಾಗೂ ಅವರ ಪಾಸ್‌ಪೋರ್ಟ್ ಮೇಲೆ ರದ್ದುಪಡಿಸಲಾಗಿದೆ ಎಂದು ನೀಡಲಾಗಿರುವ ಹಿಂಬರಹವನ್ನು ಬ್ಯುರೊ ಆಫ್ ಇಮಿಗ್ರೇಷನ್ ತೆಗೆದು ಹಾಕಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ತನಿಖೆಯ ಸಂದರ್ಭದಲ್ಲಿ ಆಕ್ಷೇಪಾರ್ಹವಾದ ವಿಚಾರಗಳು ಕಂಡುಬಂದಲ್ಲಿ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದರೆ ಅರ್ಜಿದಾರರು ಹಾಜರಾಗಬೇಕು. ಈಮೇಲ್ ಐಡಿ, ಸಂಪರ್ಕ ವಿವರ ಮತ್ತು ಶಾಶ್ವತ ವಸತಿ ವಿಳಾಸವನ್ನು ಅರ್ಜಿದಾರರು ನೀಡಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ಅನುಮಾನದ ಆಧಾರದಲ್ಲಿ ಅರ್ಜಿದಾರರ ವಿರುದ್ಧ ಎಲ್‌ಒಸಿ ಮುಂದುವರಿಯುವುದು ಕಾನೂನು ದುರ್ಬಳಕೆಯಾಗಲಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಸುದರ್ಶನ್ ರಮೇಶ್ ಅವರು 12.08.2021 ರಂದು ನೆದರ್ಲೆಂಡ್‌ನಿಂದ ಭಾರತಕ್ಕೆ ಬಂದಿದ್ದರು. ಸುದರ್ಶನ್​ಗೆ ಪಿಎಂಎಲ್‌ಎ ಸೆಕ್ಷನ್ 50ರಡಿ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ 29.12.2021, 30.12.2021 ಮತ್ತು 01.01.2022ರಂದು ವಿಚಾರಣೆಗೆ ಹಾಜರಾಗಿದ್ದರು. ಅಂದು ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು. 13 .01.2022ರಂದು ನೆದರ್ಲೆಂಡ್‌ಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳಿದ್ದಾಗಿ ಇಮಿಗ್ರೇಷನ್ ಅಧಿಕಾರಿಗಳು ಸುದರ್ಶನ್ ಅವರನ್ನು ತಡೆದಿದ್ದು, ಅವರ ಪಾಸ್‌ಪೋರ್ಟ್‌ಗೆ ಕ್ಯಾನ್ಸಲ್ ಹಿಂಬರಹ ನೀಡಲಾಗಿತ್ತು. ಆದರೆ, ಎಲ್‌ಒಸಿ ಪ್ರತಿಯನ್ನು ಅರ್ಜಿದಾರರಿಗೆ ನೀಡಿರಲಿಲ್ಲ. ಈ ಮಧ್ಯೆ, ಪಿಎಂಎಲ್‌ಎ ಅಡಿ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ವಿನಾಕಾರಣ ವಿಚಾರಣೆಗೆ ಹಾಜರಾಗುವಂತೆ ಮನವಿ ಮಾಡಲಾಗುತ್ತಿದೆ. ಈ ಬೆಳವಣಿಗೆ ನ್ಯಾಯಾಂಗ ನಿಯಮಗಳ ಉಲ್ಲಂಘನೆಯಾದಂತಾಗಿದೆ. ತನಿಖೆಗೆ ಸಹಕರಿಸಿದರೂ, ಸ್ವಯಂ ದೋಷಾರೋಪಣೆ ಹೇಳಿಕೆಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಎಲ್‌ಒಸಿ ಆದೇಶವನ್ನು ರದ್ದು ಮಾಡಬೇಕು ಎಂದು ಕೋರಿದ್ದರು.

ಕೇಂದ್ರ ಸರ್ಕಾರದ ಪರವಾಗಿ ವಾದಮಂಡಿಸಿದ ಸಹಾಯಕ ಸಾಲಿಸಿಟರ್ ಜನರಲ್, ಅರ್ಜಿದಾರರ ವಿರುದ್ಧದ ಸಾಕ್ಷ್ಯಾಧಾರಗಳನ್ನು ಪರಿಗಣಿಸದೇ ವಿಚಾರಣೆ ಬರುವಂತೆ ಕೋರಲಾಗಿದೆ. ಜತೆಗೆ, ಅರ್ಜಿದಾರರ ಸಹೋದರನ ವಿರುದ್ಧ ಗಂಭೀರವಾದ ಆರೋಪವಿದೆ. ಇದೇ ಕಾರಣದಿಂದ ಅರ್ಜಿದಾರರ ವಿರುದ್ಧ ಎಲ್‌ಒಸಿ ನೀಡಲಾಗಿದೆ. ಈ ಸುತ್ತೋಲೆ ಹಿಂಪಡೆದಲ್ಲಿ ಅರ್ಜಿದಾರರು ವಿದೇಶಕ್ಕೆ ತೆರಳಲಿದ್ದು, ತನಿಖೆಗೆ ಸಹಕರಿಸದೆ ಇರಬಹುದು. ಹೀಗಾಗಿ ಎಲ್‌ಒಸಿ ರದ್ದು ಮಾಡಲಾಗದು ಎಂದು ಮನವಿ ಮಾಡಿದ್ದರು.

ಅಲ್ಲದೆ, ಅರ್ಜಿದಾರರ ಖಾತೆಯಿಂದ ವಿದೇಶಿ ಮೊತ್ತ ವರ್ಗಾವಣೆಯಾಗಿದೆ. ಈ ಸಂಬಂಧ ಮಾಹಿತಿ ಸಂಗ್ರಹಿಸಲು ಇ-ಮೇಲ್ ಐಡಿ ಸೇರಿದಂತೆ ಮತ್ತಿತರರ ಮಾಹಿತಿ ನೀಡುತ್ತಿಲ್ಲ. ಆದ ಕಾರಣ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು. ಇದೀಗ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಎಲ್‌ಒಸಿಯನ್ನು ರದ್ದುಪಡಿಸಿ ಆದೇಶಿಸಿದೆ.

ಇದನ್ನೂ ಓದಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡುವ ಮುನ್ನ ಸಂತ್ರಸ್ತೆಯ ಕಡೆಯವರಿಗೆ ತಿಳಿಸಬೇಕು: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.