ETV Bharat / state

ಪ್ರತಿಭಟನೆಗೆ ಸೀಮಿತವಾದ ಬಂದ್: ಕೃಷಿ ಕಾಯ್ದೆ, ಬೆಲೆ ಏರಿಕೆ, ಕಂಪನೀಕರಣದ ವಿರುದ್ಧ ರೈತರ ಆಕ್ರೋಶ

author img

By

Published : Sep 27, 2021, 7:56 PM IST

Updated : Sep 27, 2021, 8:15 PM IST

Bharat bandh overall information
ಪ್ರತಿಭಟನಾ ರ್ಯಾಲಿಗೆ ಸೀಮಿತವಾದ ಬಂದ್

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕರೆದಿದ್ದ ಭಾರತ್​ ಬಂದ್​​ ಕೇವಲ ರೈತರ ಪ್ರತಿಭಟನೆಗೆ ಸೀಮಿತವಾಗಿತ್ತು.

ಬೆಂಗಳೂರು: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್​ಗೆ ರಾಜ್ಯದ ರೈತ ಸಂಘಟನೆಗಳೂ ಒಗ್ಗೂಡಿ ಬಂದ್​ಗೆ ಬೆಂಬಲಿಸಿದ್ದವು. ಆದರೆ ಕೋವಿಡ್​​​​ನಿಂದ ಸಂಕಷ್ಟ ಅನುಭವಿಸಿರುವ ಉದ್ಯಮ, ಅಂಗಡಿ ಮುಂಗಟ್ಟು, ವಾಣಿಜ್ಯ, ಸಾರಿಗೆ ಸಂಸ್ಥೆಗಳು ಬಂದ್​ ಮಾಡದೇ ರೈತರ ಪ್ರತಿಭಟನೆಗೆ ನೈತಿಕ ಬೆಂಬಲ ಸೂಚಿಸಿದ್ದವು.

ವಿವಿಧ ಸಂಘಟನೆಗಳು ಸಾಥ್​:

ಕಾರ್ಮಿಕ, ದಲಿತ ಸಂಘಟನೆಗಳು, ವಿದ್ಯಾರ್ಥಿ, ಮಹಿಳಾ, ವಕೀಲರ ಸಂಘಟನೆಗಳು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಬೀದಿಗಳಿದು ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಟೌನ್ ಹಾಲ್‌ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು. ಬಳಿಕ ಬೆಳಗ್ಗೆ 11 ರಿಂದ 2-30 ರವರೆಗೆ ಪ್ರತಿಭಟನಾ ಸಭೆ ನಡೆಯಿತು.

ಅದಾನಿ, ಅಂಬಾನಿಗೆ ಗುತ್ತಿಗೆ:

ಪ್ರತಿಭಟನಾ ಸಭೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಇವತ್ತು ಕರ್ನಾಟಕದಾದ್ಯಂತ ಬಂದ್ ನಡೆಯುತ್ತಿದೆ. ‌ಸರ್ಕಾರ ಹಠಕ್ಕೆ ಬಿದ್ದು ಬಸ್ ಓಡಿಸುತ್ತಿದೆ. ಕೈಗಾರಿಕೆ, ಉದ್ದಿಮೆ, ವಾಣಿಜ್ಯವನ್ನು ಅದಾನಿ, ಅಂಬಾನಿಯವರಿಗೆ ಗುತ್ತಿಗೆ ಕೊಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ದೂರಿದರು.

ಬೆಂಗಳೂರಲ್ಲಿ ರೈತ ಸಂಘಟನೆಗಳಿಂದ ಪ್ರತಿಭಟನೆ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​​​ ವಿರುದ್ಧ ಗುಡುಗು:

ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್​ರವರು ನಗದೀಕರಣ ಮಾಡುತ್ತಾ ಇದ್ದೇವೆ ಎನ್ನುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯನ್ನು 50-60 ವರ್ಷಗಳು ಕಾಲ ಗುತ್ತಿಗೆ ನೀಡುವುದು, ದೇಶದ ದುಡ್ಡಿನಿಂದ ಉತ್ಪಾದನೆಯಾಗಿರುವ ವಿದ್ಯುಚ್ಛಕ್ತಿಯನ್ನು ಖಾಸಗಿಯವರಿಗೆ ಮಾರಾಟ, ವಿಮಾನ ನಿಲ್ದಾಣ, ಬಂದರುಗಳು ಸೇರಿದಂತೆ ಎಲ್ಲವನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಪೆಟ್ರೋಲ್ ದರ 105 ರೂ, ಇದರಲ್ಲಿ 37 ರೂ ತೆರಿಗೆಯಾಗಿ ನರೇಂದ್ರ ಮೋದಿ‌ ಖಜಾನೆ ಹೋಗುತ್ತಿದೆ. 36 ರೂ. ಬೊಮ್ಮಾಯಿ ಸರ್ಕಾರಕ್ಕೆ ಹೋಗ್ತಾ ಇದೆ. ಹೀಗೆ ಸಾಮಾನ್ಯ ಜನರಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದರು.

ಪ್ರಧಾನಿ ವಿರುದ್ಧ ವಾಗ್ದಾಳಿ :

ದೆಹಲಿಯಲ್ಲಿ ಪಂಜಾಬ್​​​ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸುಮಾರು 700 ಜನರು ಸಾವನ್ನಪ್ಪಿದ್ದಾರೆ. ಇದನ್ನು ನೋಡುವ ಬದಲು ಪ್ರಧಾನಿಗಳು ಅಮೆರಿಕಾಕ್ಕೆ ಹೋಗಿದ್ದಾರೆ. ಕಂಪನಿಗಳ ಕೈಗೆ ಕೃಷಿ ಹೋದರೆ ಊಟದ ಬೆಲೆ ಎಷ್ಟಾಗಬಹುದು, ವಿದ್ಯುತ್ ಬೆಲೆ ಅದಾನಿ ಕಂಪನಿಗೆ ಹೋದರೆ ಎಷ್ಟಾಗಬಹುದು ಎಂಬುದನ್ನು ಊಹಿಸಿ ಎಂದು ಜನರಿಗೆ ಎಚ್ಚರಿಕೆ ನೀಡಿದರು.

ಮೋದಿಯನ್ನು ಏಜೆಂಟ್ ಎಂದ ನಾಗೇಂದ್ರ:

ಬಡಗಲಪುರ ನಾಗೇಂದ್ರ ಮಾತನಾಡಿ, ಒತ್ತಾಯಪೂರ್ವಕವಾಗಿ ಯಾರನ್ನು ಬಂದ್​ನಲ್ಲಿ ಭಾಗವಹಿಸಿವಂತೆ ಹೇಳಿಲ್ಲ. ಇಂದು ನಡೆದ ಬಂದ್​ ಯಶಸ್ವಿಯಾಗಿದೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ಕೃಷಿ ಕಾಯ್ದೆಗಳು ರೈತರ ಜೀವನವನ್ನೇ ಕಿತ್ತುಕೊಳ್ಳಲಿವೆ. ಇದನ್ನು ಹಿಂಪಡೆಯಬೇಕು. ನ.26 ರಂದು ಕೋಟ್ಯಾಂತರ ಜನ ಸೇರಿಕೊಂಡು ಬಿಜೆಪಿ ಸರ್ಕಾರವನ್ನು ಓಡಿಸುತ್ತೇವೆ. ಪ್ರಧಾನಿ ದೊಡ್ಡ ಏಜೆಂಟ್ ಎಂದು ಹರಿಹಾಯ್ದರು.

ಬಳಿಕ ದಲಿತ ಸಂಘಟನೆಯ ಮಾವಳ್ಳಿ ಶಂಕರ್ ಮಾತನಾಡಿ, ಅನ್ನವನ್ನು ಬೆಳೆಯಲು ರೈತರ ಬೆವರು ಹರಿಯಬೇಕು. ನಂತರ ಅಂಬಾನಿ, ಅದಾನಿ ಮಾಲ್ ತುಂಬುತ್ತದೆ. ರೈತರ ಪರ ಮಸೂದೆ ಎಂದು ಪಿತೂರಿ ಹೂಡಿದ್ದಾರೆ. ಬಸವರಾಜ ಬೊಮ್ಮಾಯಿ ಕೇಶವ ಕೃಪಾದ ಗುಲಾಮರಾಗಿದ್ದಾರೆ. ದುಡ್ಡು ಕೊಟ್ಟ ಪ್ರತಿಭಟನೆ ಎಂದು ರೈತರನ್ನು ಹೀಗಳೆದಿದ್ದಾರೆ. ಹಾಗಿದ್ದರೆ ಬಿಜೆಪಿ ಸರ್ಕಾರ ತರಲು ದುಡ್ಡು ಕೊಟ್ಟಿದ್ದು ಯಾರು ಎಂದು ಆಕ್ರೋಶ ಹೊರ ಹಾಕಿದರು.

ಇಂದು ಬೆಳಗ್ಗೆಯಿಂದ ನಡೆದ ಪ್ರತಿಭಟನೆ ವೇಳೆ ಪೊಲೀಸರು ರೈತ ಮುಖಂಡರನ್ನು ವಶಕ್ಕೆ ಪಡೆದು ಪ್ರತಿಭಟನಾಕಾರರನ್ನು ಚದುರಿಸಿದರು. ಬಂದ್​ ವೇಳೆ ಪ್ರತಿಭಟನಾಕಾರರು ನಗರದಲ್ಲಿ ಕೆಲವು ರಸ್ತೆಗಳನ್ನು ತಡೆದಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಾಹನ ದಟ್ಟನೆ ಉಂಟಾಗಿ ವಾಹನಗಳೆಲ್ಲ ರಸ್ತೆಯಲ್ಲೇ ಸಾಲು ಸಾಲಾಗಿ ನಿಂತಿದ್ದವು. ಈ ವೇಳೆ ಆಂಬ್ಯುಲೆನ್ಸ್​ಗಳು ಪರದಾಡಿದ ಘಟನೆಗಳು ನಡೆದವು.

ಇದನ್ನೂ ಓದಿ: ನಾನು ಮತ್ತೆ ಸಿಎಂ ಆದಲ್ಲಿ ರಾಜ್ಯವನ್ನ ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡುತ್ತೇನೆ : ಸಿದ್ದರಾಮಯ್ಯ

Last Updated :Sep 27, 2021, 8:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.