ETV Bharat / state

ರಿಲ್ಯಾಕ್ಸ್ ಮೂಡ್​ನಲ್ಲಿ ಬಿಎಸ್​ವೈ : ಆಪ್ತರ ಜೊತೆ ದೋಸೆ ಸವಿದ ಹಿರಿಯ ನಾಯಕ

author img

By

Published : May 12, 2023, 8:47 PM IST

ಆಪ್ತರ ಜೊತೆ ದೋಸೆ ಸವಿದ ಹಿರಿಯ ನಾಯಕ
ಆಪ್ತರ ಜೊತೆ ದೋಸೆ ಸವಿದ ಹಿರಿಯ ನಾಯಕ

ಬಿ ಎಸ್​ ಯಡಿಯೂರಪ್ಪ ಅವರು ಆಪ್ತರ ಜೊತೆ ಹೋಟೆಲ್​ಗೆ ತೆರಳಿ ದೋಸೆ ಸವಿದಿದ್ದಾರೆ.

ಬೆಂಗಳೂರು: ನಾಳೆ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ಬಹುತೇಕ ಎಕ್ಸಿಟ್ ಪೋಲ್​ಗಳು ಬಿಜೆಪಿಗೆ ಬಹುಮತ ಸಿಗದ ಬಗ್ಗೆ ವರದಿ ನೀಡಿದ್ದರೂ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಫುಲ್ ರಿಲ್ಯಾಕ್ಸ್ ಮೂಡ್​ನಲ್ಲಿದ್ದು, ಆಪ್ತರ ಜೊತೆ ಹೋಟೆಲ್​ಗೆ ತೆರಳಿ ದೋಸೆ ಸವಿದರು.

ಬೆಳಗ್ಗೆ ಸಿಎಂ ಸೇರಿದಂತೆ ಕೆಲ ನಾಯಕರ ಜೊತೆ ಫಲಿತಾಂಶ ಕುರಿತು ಸಮಾಲೋಚನೆ ನಡೆಸಿದ ಬಿ ಎಸ್ ಯಡಿಯೂರಪ್ಪ ಸಂಜೆಯ ನಂತರ ಫುಲ್‌ ರಿಲ್ಯಾಕ್ಸ್ ಆದರು. ರಾಜಕೀಯ ಜಂಜಾಟದ ನಡುವೆಯೂ ಫಲಿತಾಂಶದ ಚಿಂತೆ ಬಿಟ್ಟು ಆಪ್ತರ ಜೊತೆ ಪ್ರೆಸಿಡೆಂಟ್ ಹೋಟೆಲ್​​ಗೆ ತೆರಳಿದರು.

ರುಚಿ ರುಚಿಯಾದ ಮಸಾಲೆ ದೋಸೆ ಸವಿದು ಬಿಸಿ ಬಿಸಿ ಚಹಾ ಹೀರಿದರು. ಕಂದಾಯ ಸಚಿವ ಆರ್ ಅಶೋಕ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಎಂ ಡಿ ಲಕ್ಷ್ಮೀನಾರಾಯಣ ಹಾಗೂ ಇತರರು ಬಿಎಸ್​​ವೈ ಜೊತೆ ಉಪಹಾರ ಸೇವಿಸಿ ಕೆಲಕಾಲ ಅನೌಪಚಾರಿಕ ಮಾತುಕತೆ ನಡೆಸಿದರು.

ಈವರೆಗೂ ಮುಖ್ಯಮಂತ್ರಿ ಆಗಬೇಕು ಎನ್ನುವ ಕಾತರದಿಂದ ಫಲಿತಾಂಶದ ದಿನವನ್ನು ಎದುರು ನೋಡುತ್ತಿದ್ದ ಯಡಿಯೂರಪ್ಪ ಇದೇ ಮೊದಲ ಬಾರಿ ಚುನಾವಣಾ ಕಣದಿಂದ ದೂರ ಉಳಿದು ಪಕ್ಷ ಅಧಿಕಾರಕ್ಕೆ ಬರುವುದನ್ನು ಎದುರು ನೋಡುತ್ತಿದ್ದಾರೆ. ನಾಳೆ ಬೆಂಗಳೂರಿನಲ್ಲೇ ಇದ್ದು ಫಲಿತಾಂಶ ವೀಕ್ಷಿಸಲಿದ್ದಾರೆ.

ಇದನ್ನೂ ಓದಿ: ನಾವು 130 ಸ್ಥಾನ ಗೆಲ್ಲುತ್ತೇವೆ, ಸಮೀಕ್ಷೆ ಪ್ರಕಾರ ಅಲ್ಲ, ಜಿಲ್ಲಾವಾರು ಮಾಹಿತಿ ಪಡೆದಿದ್ದೇವೆ : ಡಾ‌ ಜಿ ಪರಮೇಶ್ವರ್

ನಾವು ಮ್ಯಾಜಿಕ್ ನಂಬರ್ ತಲುಪುತ್ತೇವೆ ಎಂದಿರುವ ಸಿಎಂ: ನಮಗೆ ಸಂಪೂರ್ಣ ಬಹುಮತ ಸಿಗಲಿದೆ. ನಾವು ಮ್ಯಾಜಿಕ್ ನಂಬರ್ ತಲುಪುತ್ತೇವೆ. ಯಾವುದೇ ಕಾರಣಕ್ಕೂ ಮೈತ್ರಿ ಸಂದರ್ಭ ನಿರ್ಮಾಣವಾಗಲ್ಲ. ಈ ಬಗ್ಗೆ ನಾನೇ ಹೈಕಮಾಂಡ್ ನಾಯಕರಿಗೆ ಫೋನ್ ಮಾಡಿ ಇಲ್ಲಿನ ವಸ್ತುಸ್ಥಿತಿಯ ಬಗ್ಗೆ ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಆರ್. ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಕ್ಸಿಟ್ ಪೋಲ್​ನಲ್ಲಿ ಏನೇ ಸಮೀಕ್ಷೆ ಬಂದಿರಲಿ. ಆದರೆ ನಮಗೆ ಗೆಲ್ಲುವ ವಿಶ್ವಾಸ ಇದೆ. ನಾವು ಬಹುಮತದ ಗಡಿ ದಾಟುತ್ತೇವೆ. ನಾನೇ ವರಿಷ್ಠರಿಗೆ ಕರೆ ಮಾಡಿ ಇಲ್ಲಿನ ವಸ್ತುಸ್ಥಿತಿ ತಿಳಿಸಿದ್ದೇನೆ ಎಂದ ಅವರು, ಹೈಕಮಾಂಡ್ ನಾಯಕರು ಬಿಜೆಪಿ ಸರ್ಕಾರ ರಚಿಸುವ ವಿಶ್ವಾಸದಲ್ಲಿದಾರೆ ಎಂದು ತಿಳಿಸಿದರು.

ನಾನು ಮೊದಲಿಂದಲೂ ಒಂದೇ ಮಾತನ್ನು ಹೇಳುತ್ತಾ ಬಂದಿದ್ದೇನೆ. ನಮಗೆ ಸ್ಪಷ್ಟ ಬಹುಮತ ಬರುತ್ತದೆ. ಎಲ್ಲ ಕ್ಷೇತ್ರ, ಬೂತ್​ಗಳಿಂದ ಗ್ರೌಂಡ್ ಮಾಹಿತಿ ತರಿಸಿದ್ದೇವೆ. ನಮಗೆ ವಿಶ್ವಾಸ ಇದೆ. ಮ್ಯಾಜಿಕ್ ನಂಬರ್ ಮುಟ್ಟುತ್ತೇವೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್​ ಪಕ್ಷದವರಿಗೆ ಬಹುಮತ ಬರಲ್ಲ. ಹಾಗಾಗಿ ಬೇರೆ ಪಕ್ಷದವರ ಜೊತೆ ಮಾತಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ನಮ್ಮದೇ ಸರ್ಕಾರ ರಚನೆ, ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡಿದ್ದೇನೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.