ETV Bharat / state

Bengaluru crime : ಮದ್ಯ ಸೇವಿಸಿ ಗಲಾಟೆ.. ಗಾಯ ಮಾಡಿಕೊಂಡು ಆಸ್ಪತ್ರೆಗೆ ಬಂದ ಆರೋಪಿಗಳಿಂದ ವೈದ್ಯರ ಮೇಲೆ ಹಲ್ಲೆ

author img

By

Published : Jul 5, 2023, 11:48 AM IST

ವೈದ್ಯರ ಮೇಲೆ ಹಲ್ಲೆ
ವೈದ್ಯರ ಮೇಲೆ ಹಲ್ಲೆ

ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಬಳಿಕ ಹಣ ಕೇಳಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬೆಂಗಳೂರು: ಆಸ್ಪತ್ರೆಯ ಬಿಲ್​ನಲ್ಲಿ ರಿಯಾಯಿತಿ ನೀಡಲಿಲ್ಲವೆಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ವೈದ್ಯರ ಮೇಲೆ ಹಲ್ಲೆ ಮಾಡಿರುವ ಘಟನೆ ಜುಲೈ 3ರಂದು ರಾತ್ರಿ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ಪಣತ್ತೂರಿನಲ್ಲಿ ನಡೆದಿದೆ. ಮದ್ಯ ಸೇವಿಸಿ ಜಗಳ‌ವಾಡಿಕೊಂಡು ಆಸ್ಪತ್ರೆಗೆ ಬಂದಿದ್ದ ಹರೀಶ್ ಹಾಗೂ ರಾಜೇಶ್ ಎಂಬುವರು ಹಲ್ಲೆ ಮಾಡಿರುವುದಾಗಿ ವೈದ್ಯ ಬಸವರಾಜು ಎಂಬುವವರು ಮಾರತ್ತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಪಣತ್ತೂರಿನಲ್ಲಿ ಖಾಸಗಿ ಅಸ್ಪತ್ರೆ ನಡೆಸುತ್ತಿರುವ ಬಸವರಾಜು ಅವರ ಬಳಿ ಜುಲೈ 3ರಂದು ಬಂದಿದ್ದ ಆರೋಪಿಗಳು ಚಿಕಿತ್ಸೆ ನೀಡುವಂತೆ ಕೇಳಿದ್ದರು. ಕುಡಿದು ಗಲಾಟೆ ಮಾಡಿಕೊಂಡಿದ್ದರು. ಬಿಯರ್ ಬಾಟಲಿಯಿಂದ ಕೈಗೆ ಗಾಯ ಮಾಡಿಕೊಂಡು ಬಂದಿದ್ದ ಹರೀಶ್​ಗೆ ಡಾಕ್ಟರ್ ಬಸವರಾಜು ಚಿಕಿತ್ಸೆ ನೀಡಿದ್ದರು. ಬಳಿಕ ಬಿಲ್ ಕೌಂಟರ್​ನಲ್ಲಿದ್ದ ಸಿಬ್ಬಂದಿ 1300/- ರೂ. ಬಿಲ್ ನೀಡಿದ್ದರು. ಈ ವೇಳೆ ಬಿಲ್ ಜಾಸ್ತಿಯಾಗಿದೆ ಎಂದು ಆರೋಪಿಗಳಿಬ್ಬರೂ ಅಸ್ಪತ್ರೆಯಲ್ಲಿ ಗಲಾಟೆ ಆರಂಭಿಸಿದ್ದರು.

ನಂತರ ಬಸವರಾಜು ಅವರೇ 10% ಡಿಸ್ಕೌಂಡ್ ನೀಡಲು ಬಿಲ್ ಕೌಂಟರ್ ಸಿಬ್ಬಂದಿಗೆ ಸೂಚಿಸಿದ್ದರು. ಇಷ್ಟಾದರೂ ಸಹ ಬಿಲ್ ಹೆಚ್ಚಾಗಿದೆ ಎಂದು ಗಲಾಟೆ ಮಾಡಿದ್ದ ಆರೋಪಿಗಳು ಬಸವರಾಜು ಅವರ ಮೇಲೆ ಹಲ್ಲೆ ಮಾಡಿ, ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಜೊತೆಗೂ ಅನುಚಿತವಾಗಿ ವರ್ತಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳ ಉಪಟಳ ತಾಳಲಾರದ ಆಸ್ಪತ್ರೆ ಸಿಬ್ಬಂದಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದು, ಆಸ್ಪತ್ರೆಗೆ ಬಂದ ಪೊಲೀಸರು ಇಬ್ಬರೂ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಬೈಲ್​ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ: ಇತ್ತೀಚೆಗೆ ನೆಲಮಂಗಲದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಚಾರ್ಜರ್​ ಕೊಟ್ಟಿಲ್ಲವೆಂಬ ಕಾರಣಕ್ಕೆ ಪುಡಿರೌಡಿಗಳು ಮೊಬೈಲ್ ಅಂಗಡಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದರು. ಬೆಂಗಳೂರು ಉತ್ತರ ತಾಲೂಕು ಮಾಗಡಿ ರಸ್ತೆಯ ಸೀಗೆಹಳ್ಳಿ ಗೇಟ್ ಬಳಿ ಘಟನೆ ನಡೆದಿತ್ತು. ಮೊಬೈಲ್ ಅಂಗಡಿಗೆ ಬಂದ ಪುಡಿರೌಡಿಯೊಬ್ಬ ಚಾರ್ಜರ್ ಕೇಳಿದ್ದ. ಆಗ ಅಂಗಡಿ ಸಿಬ್ಬಂದಿ ಮೊತ್ತೊಬ್ಬರು ಚಾರ್ಜಿಂಗ್​ ಇಟ್ಟಿದ್ದಾರೆ, ಬಳಿಕ ಕೊಡುವುದಾಗಿ ಹೇಳಿದ್ದರು. ಇಷ್ಟಕ್ಕೆ ಕೆರಳಿದ ಆತ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ.

ಹಲ್ಲೆ ನಡೆಸುತ್ತಿರುವ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹ ಆಗಿತ್ತು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಬೆನ್ನತ್ತಿದ್ದ ಪೊಲೀಸರು, ಮಂಜುನಾಥ್ ಎಂಬ ಆರೋಪಿಯನ್ನು ಬಂಧಿಸಿದ್ದರು.

ಇದನ್ನೂ ಓದಿ: ಚಾರ್ಜರ್​ ಕೊಟ್ಟಿಲ್ಲವೆಂದು ಮೊಬೈಲ್ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ... ಪುಡಿರೌಡಿ ಬಂಧನ - ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.