ETV Bharat / state

2022 ರೌಂಡ್ ಅಪ್: ಹಲವು ಮಹತ್ವದ ಸರ್ಕಾರಿ ಆದೇಶಗಳಿಗೆ ಸಾಕ್ಷಿಯಾದ ರಾಜ್ಯ

author img

By

Published : Dec 20, 2022, 5:01 AM IST

ವಿಧಾನಸೌಧ
ವಿಧಾನಸೌಧ

ಬೊಮ್ಮಾಯಿ‌ ಸರ್ಕಾರ 2022 ವರ್ಷದ ಅಂತ್ಯದ ಅಂಚಿನಲ್ಲಿದೆ. ಬೊಮ್ಮಾಯಿ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಆಡಳಿತ ವರ್ಷ ಇದಾಗಿತ್ತು. 2023 ಚುನಾವಣಾ ವರ್ಷ ಆಗಿದೆ. 2022ರ ವರ್ಷ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನಸ್ನೇಹಿ, ಜನಪ್ರಿಯ ಸರ್ಕಾರಿ ತೀರ್ಮಾನಗಳನ್ನು ಕೈಗೊಳ್ಳುವ ವರ್ಷ ಆಗಿತ್ತು. ಈ ನಿಟ್ಟಿನಲ್ಲಿ 2022 ವರ್ಷದಲ್ಲಿ ಸರ್ಕಾರ ಹಲವು ಮಹತ್ವದ ಆಡಳಿತಾತ್ಮಕ ತೀರ್ಮಾನಗಳನ್ನು ಕೈಗೊಂಡು, ಸದ್ದು ಮಾಡಿತು.

ಬೆಂಗಳೂರು: 2022ರ ವರ್ಷ ಮುಗಿದು 2023ರ ಹೊಸ ವರ್ಷದ ಸ್ವಾಗತಕ್ಕೆ ಎಲ್ಲರೂ ಅಣಿಯಾಗಿದ್ದಾರೆ. ಇತ್ತ 2022ರಲ್ಲಿ ಬೊಮ್ಮಾಯಿ‌ ಸರ್ಕಾರ ಸಾಕಷ್ಟು ಏಳು ಬೀಳು, ವಿವಾದಗಳನ್ನು ಎದುರಿಸಬೇಕಾಯಿತು. ಅದರ ಜೊತೆಗೆ ಹಲವು ಮಹತ್ವದ ಆಡಳಿತಾತ್ಮಕ ತೀರ್ಮಾನಗಳನ್ನೂ ತೆಗೆದುಕೊಳ್ಳಲಾಯಿತು. 2022 ಸಾಲಿನಲ್ಲಿ ಕರ್ನಾಟಕ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಧಾರಗಳೇನು? ಎಂಬ ವರದಿ ಇಲ್ಲಿದೆ.

ಬೊಮ್ಮಾಯಿ‌ ಸರ್ಕಾರ 2022 ವರ್ಷದ ಅಂತ್ಯದ ಅಂಚಿನಲ್ಲಿದೆ. ಬೊಮ್ಮಾಯಿ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಆಡಳಿತ ವರ್ಷ ಇದಾಗಿತ್ತು. 2023 ಚುನಾವಣಾ ವರ್ಷ ಆಗಿದೆ. 2022ರ ವರ್ಷ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನಸ್ನೇಹಿ, ಜನಪ್ರಿಯ ಸರ್ಕಾರಿ ತೀರ್ಮಾನಗಳನ್ನು ಕೈಗೊಳ್ಳುವ ವರ್ಷ ಆಗಿತ್ತು. ಈ ನಿಟ್ಟಿನಲ್ಲಿ 2022 ವರ್ಷದಲ್ಲಿ ಸರ್ಕಾರ ಹಲವು ಮಹತ್ವದ ಆಡಳಿತಾತ್ಮಕ ತೀರ್ಮಾನಗಳನ್ನು ಕೈಗೊಂಡು, ಸದ್ದು ಮಾಡಿತು.

ಪರಿಶಿಷ್ಟ ವರ್ಗಗಳ ಮೀಸಲಾತಿ ಹೆಚ್ಚಳ ಆದೇಶ: 2022ರಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿ ಹೆಚ್ಚಳದ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಆ ಮೂಲಕ ಬಹು ವರ್ಷಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. 2022ರಲ್ಲಿನ ಅತಿ ದೊಡ್ಡ ನಿರ್ಧಾರ ಇದಾಗಿದೆ.

ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ. 15 ರಿಂದ ಶೇ. 17ಕ್ಕೆ ಮತ್ತು ಪರಿಶಿಷ್ಠ ಪಂಗಡದ ಮೀಸಲಾತಿಯನ್ನು ಶೇ. 3 ರಿಂದ ಶೇ.7ಕ್ಕೆ ಹೆಚ್ಚಿಸುವ ಸಂಬಂಧ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಸಂಬಂಧ ವಿಧೇಯಕ ಮಂಡಿಸಲಾಗುವುದು.

75 ಯೂನಿಟ್ ಉಚಿತ ವಿದ್ಯುತ್: 2022ರಲ್ಲಿ ಬೊಮ್ಮಾಯಿ ಸರ್ಕಾರ ಎಸ್ ಸಿ /ಎಸ್ ಟಿ ಸಮುದಾಯಗಳಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡುವ ಮಹತ್ವದ ತೀರ್ಮಾನ ಕೈಗೊಂಡಿತು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಉಚಿತವಾಗಿ 75 ಯುನಿಟ್ ವರೆಗೆ ವಿದ್ಯುತ್ ನೀಡುವ ಯೋಜನೆ ಇದಾಗಿದೆ. ಸುಮಾರು 25 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿರುವ ಈ ಯೋಜನೆಗಾಗಿ 700 ಕೋಟಿ ರೂ. ಒದಗಿಸಲಾಗಿದೆ.

‘ಸ್ತ್ರೀ ಸಾಮರ್ಥ್ಯ’ ಯೋಜನೆ: ಸ್ತ್ರೀಶಕ್ತಿ ಸಂಘಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಉತ್ತೇಜನ ನೀಡುವ ನಿಟ್ಟಿನಲ್ಲಿ 1.50 ಲಕ್ಷ ರೂ. ನೀಡುವ ಜೊತೆಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸಲು ಆಂಕರ್ ಬ್ಯಾಂಕ್ ಜೋಡಣೆ, ತರಬೇತಿ, ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ನೀಡುವ ‘ಸ್ತ್ರೀ ಸಾಮರ್ಥ್ಯ ಯೋಜನೆ’ ಗೆ ಚಾಲನೆ ನೀಡಲಾಗಿದೆ. ಸುಮಾರು 5 ಲಕ್ಷ ಮಹಿಳೆಯರ ಸ್ವಾವಲಂಬನೆಗೆ ನೆರವು ನೀಡುವ ಮಹತ್ವದ ಯೋಜನೆಯನ್ನು 2022ರಲ್ಲಿ ಜಾರಿಗೊಳಿಸಲಾಯಿತು.

ಪುಣ್ಯಕೋಟಿ ದತ್ತು ಯೋಜನೆ: ಗೋವುಗಳ ಸಂರಕ್ಷಣೆಯಲ್ಲಿ ಜನರ ಪಾಲುದಾರಿಕೆಯನ್ನು ಉತ್ತೇಜಿಸಲು ಮಹತ್ವದ ಪುಣ್ಯಕೋಟಿ ದತ್ತು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ವಾರ್ಷಿಕ 11000 ರೂ. ಪಾವತಿಸಿ, ಒಂದು ಗೋವಿನ ಒಂದು ವರ್ಷದ ನಿರ್ವಹಣೆಯನ್ನು ಮಾಡಬಹುದಾಗಿದೆ. ಅವರೇ ಗೋವುಗಳನ್ನು ದತ್ತು ತೆಗೆದುಕೊಳ್ಳಬಹುದು ಅಥವಾ 11,000 ಮೊತ್ತ ಪಾವತಿಸಿದ್ದಲ್ಲಿ ಸರ್ಕಾರದ ಗೋ ಶಾಲೆಗಳಲ್ಲಿ ಗೋವುಗಳ ರಕ್ಷಣೆಗೆ ಈ ಮೊತ್ತವನ್ನು ಬಳಸಿಕೊಳ್ಳಲಾಗುವುದು.

ವಿದ್ಯಾನಿಧಿ ಯೋಜನೆ ವಿಸ್ತರಣೆ: ರೈತರ ಮಕ್ಕಳಿಗೆ ನೀಡಲಾಗುತ್ತಿದ್ದ ಶಿಷ್ಯವೇತನದ ವಿದ್ಯಾನಿಧಿ ಯೋಜನೆಯನ್ನು 2022ರಲ್ಲಿ ಸರ್ಕಾರ ನೇಕಾರರ ಮಕ್ಕಳು, ಟ್ಯಾಕ್ಸಿ ಚಾಲಕರ ಮಕ್ಕಳು, ಮೀನುಗಾರರ ಮಕ್ಕಳು ಹಾಗೂ ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಿ ಆದೇಶ ಹೊರಡಿಸಿತು.

ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, 10-12 ಸಾವಿರ ಮಕ್ಕಳಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಇತ್ತ 50,000 ಟ್ಯಾಕ್ಸಿ ಚಾಲಕ ಮಕ್ಕಳಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದೆ.

7ನೇ ವೇತನ ಆಯೋಗ ರಚನೆ: 2022ರಲ್ಲಿ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಿಸಲು ಏಳನೇ ವೇತನ ಆಯೋಗ ರಚನೆಯ ಮಹತ್ವದ ನಿರ್ಧಾರ ಕೈಗೊಂಡಿದೆ. ನಿವೃತ್ತ ಮುಖ್ಯ ‌ಕಾರ್ಯದರ್ಶಿ ಸುಧಾಕರ ರಾವ್ ನೇತೃತ್ವದಲ್ಲಿ ಏಳನೇ ಆಯೋಗ ರಚನೆ ಮಾಡಿ ಆದೇಶ ಹೊರಡಿಸಲಾಗಿದೆ. ಆಯೋಗದ ವರದಿ ಆಧಾರದಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಲಾಗುವುದು.

ಎಸಿಬಿ ರದ್ದು, ಲೋಕಾಯುಕ್ತಕ್ಕೆ ಮರುಜೀವ: ಹೈಕೋರ್ಟ್ ತೀರ್ಪಿನ ಮೇರೆಗೆ ರಾಜ್ಯ ಸರ್ಕಾರ ಎಸಿಬಿ ರದ್ದುಗೊಳಿಸಿರುವುದು ವರ್ಷದ ದೊಡ್ಡ ಬೆಳವಣಿಗೆಯಾಗಿದೆ. ಎಸಿಬಿಯನ್ನು ರದ್ದುಪಡಿಸಿ 2022ರ ಆ. 11ರಂದು ಮಹತ್ವದ ತೀರ್ಪು ನೀಡಿದ್ದ ಹೈಕೋರ್ಟ್‌, ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಬೇಕು. ಲೋಕಾಯುಕ್ತಕ್ಕೆ ನೀಡಲಾಗಿದ್ದ ಪೊಲೀಸ್‌ ಠಾಣಾ ಅಧಿಕಾರವನ್ನು ಪುನರ್‌ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಆ ಹಿನ್ನೆಲೆಯಲ್ಲಿ ಅದಕ್ಕೆ ನೀಡಲಾಗಿದ್ದ ತನಿಖಾಧಿಕಾರ, ಪೊಲೀಸ್‌ ಠಾಣೆಗಳೆಂದು ಘೋಷಿಸಿ ಹಾಗೂ ರಾಜ್ಯವ್ಯಾಪಿ ಅಧಿಕಾರ ನೀಡಿ 2016ರಲ್ಲಿ ವಿವಿಧ ದಿನಾಂಕಗಳಂದು ಹೊರಡಿಸಲಾಗಿದ್ದ ಅಧಿಸೂಚನೆಗಳನ್ನು ಸರ್ಕಾರ ಹಿಂಪಡೆದಿದೆ. ಸೆ. 9 ರಂದು ಎಸಿಬಿ ರದ್ದುಪಡಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿತು.

ಹುತಾತ್ಮ ಯೋಧನ ಕುಟುಂಬಸ್ಥನಿಗೆ ಸರ್ಕಾರಿ ಉದ್ಯೋಗ: 2022ರಲ್ಲಿ ಬೊಮ್ಮಾಯಿ‌ ಸರ್ಕಾರ ಹುತಾತ್ಮ ಯೋಧನ ಕುಟುಂಬ ಸದಸ್ಯನೊಬ್ಬನಿಗೆ ಸರ್ಕಾರಿ ಉದ್ಯೋಗ ನೀಡುವ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಸಿಎಂ ಬೊಮ್ಮಾಯಿ ಸರ್ಕಾರ ಈ ಘೋಷಣೆ ಮಾಡಿತ್ತು. ದೇಶ ಕಾಯುವ ಕರ್ತವ್ಯದ ವೇಳೆ ಹುತಾತ್ಮನಾದ ಯೋಧರ ಕುಟುಂಬದ ಆರ್ಥಿಕ ಭದ್ರತೆಗಾಗಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

4000 ಹೊಸ ಅಂಗನವಾಡಿ ಆರಂಭಕ್ಕೆ ನಿರ್ಧಾರ: ಬಡವರು ಹೆಚ್ಚಾಗಿ ವಾಸಿಸುವ ಹಾಗೂ ವಲಸೆ ಭೂಮಿರಹಿತ ಕಾರ್ಮಿಕರು ಹೆಚ್ಚಾಗಿರುವ ರಾಜ್ಯದ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ 268.98 ಕೋಟಿ ರು. ವೆಚ್ಚದಲ್ಲಿ ಹೊಸದಾಗಿ 4,244 ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸುವ ಮಹತ್ವದ ನಿರ್ಧಾರವನ್ನು ಸರ್ಕಾರ ಈ ವರ್ಷ ಕೈಗೊಂಡಿತು.

ಈ ಯೋಜನೆ 16 ಲಕ್ಷ ಕುಟುಂಬದ ಮಕ್ಕಳ ಪೌಷ್ಠಿಕಾಂಶ ಹಾಗೂ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಇದು ಸುಮಾರು 8000 ಮಹಿಳೆಯರಿಗೆ ಉದ್ಯೋಗವನ್ನೂ ಸೃಷ್ಟಿಸಲಿದೆ.

ನಮ್ಮ ಕ್ಲಿನಿಕ್ ಯೋಜನೆ ಜಾರಿ: 2022ರಲ್ಲಿ ಸರ್ಕಾರ ಮಹತ್ವದ ನಮ್ಮ ಕ್ಲಿನಿಕ್​ ಯೋಜನೆಯನ್ನು ಜಾರಿಗೊಳಿಸಿದೆ. ರಾಜ್ಯಾದ್ಯಂತ ಸುಮಾರು 438 ನಮ್ಮ ಕ್ಲಿನಿಕ್ ಸ್ಥಾಪಿಸಲು ಯೋಜಿಸಲಾಗಿದೆ. ಕೊಳಗೇರಿ ನಿವಾಸಿಗಳು, ದಿನಗೂಲಿ ಕಾರ್ಮಿಕರು ಮತ್ತು ಸಮಾಜದಲ್ಲಿರುವ ಇತರ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ದೊರಕಿಸಬೇಕು ಎನ್ನುವ ದೃಷ್ಟಿಯಿಂದ ನಮ್ಮ ಕ್ಲಿನಿಕ್​ಗಳು ಕಾರ್ಯಾರಂಭ ಮಾಡುತ್ತಿವೆ. ಈಗಾಗಲೇ 114 ನಮ್ಮ ಕ್ಲಿನಿಕ್ ಗೆ ಚಾಲನೆ ನೀಡಲಾಗಿದೆ.

2023 ಜನವರಿ ಅಂತ್ಯಕ್ಕೆ ಎಲ್ಲಾ ನಮ್ಮ ಕ್ಲಿನಿಕ್ ಕಾರ್ಯಾರಂಭಗೊಳ್ಳಲಿದೆ. ನಮ್ಮ ಕ್ಲಿನಿಕ್​ಗಳಲ್ಲಿ 12 ರೀತಿಯ ವೈದ್ಯಕೀಯ ಸೇವೆಗಳು ಲಭ್ಯವಿದೆ. ಗರ್ಭಿಣಿಯರ ತಪಾಸಣೆ ಮತ್ತು ಆರೈಕೆ, ನವಜಾತ ಶಿಶುಗಳ ಆರೈಕೆ, ಶಿಶುಗಳಿಗೆ ಚಿಕಿತ್ಸೆ, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯ ಕಾಳಜಿ, ಲಸಿಕೆ ಸೇವೆ, ಕುಟುಂಬ ನಿಯಂತ್ರಣ, ಸೋಂಕು ರೋಗಗಳ ನಿರ್ವಹಣೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿರ್ವಹಣೆ, ಸಣ್ಣಪುಟ್ಟ ಗಾಯಗಳಿಗೆ ಆರೈಕೆ, ಮರುಕಳಿಸುವ ಕಾಯಿಲೆಗಳು ಸೇರಿವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಸಮಸ್ಯೆಗಳಿಗೆ ಸಂಬಂಧಿಸಿದ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳನ್ನೂ ಉಚಿತವಾಗಿ ಒದಗಿಸಲಾಗುವುದು.

ಒಳ ಮೀಸಲಾತಿ ಸಂಪುಟ ಉಪ ಸಮಿತಿ ರಚನೆ: 2022ರಲ್ಲಿ ಸರ್ಕಾರ ತೆಗೆದುಕೊಂಡ ಮತ್ತೊಂದು ದೊಡ್ಡ ತೀರ್ಮಾನ ಪರಿಶಿಷ್ಟ ಜಾತಿಗಳ ವರ್ಗೀಕರಣದ (ಒಳ ಮೀಸಲಾತಿ)ಗಾಗಿ ಸಚಿವ ಸಂಪುಟ ಉಪ ಸಮಿತಿ ರಚನೆ.

ಅತಿ ಸೂಕ್ಷ್ಮ ಹಾಗೂ ಬಹು ನಿರೀಕ್ಷಿತ ಒಳಮೀಸಲಾತಿ ಕುರಿತು ಪರಿಶೀಲಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡಲು ರಾಜ್ಯ ಸರ್ಕಾರ ಸಚಿವ ಸಂಪುಟದ ಒಂದು ಉಪ ಸಮಿತಿಯನ್ನು ರಚಿಸಿದೆ. ಕಾನೂನು ಸಚಿವ ಜೆ. ಸಿ ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಲಾಗಿದೆ. ಸಮಿತಿಯಲ್ಲಿ ಮಾಧುಸ್ವಾಮಿ ಅವರೊಂದಿಗೆ ನೀರಾವರಿ ಸಚಿವ ಗೋವಿಂದ ಕಾರಜೋಳ, ಮೀನುಗಾರಿಕೆ ಸಚಿವ ಎಸ್. ಅಂಗಾರ, ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸದಸ್ಯರಾಗಿದ್ದಾರೆ. ಸಮಿತಿ ವರದಿ ಆಧಾರದಲ್ಲಿ ಒಳಮೀಸಲಾತಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಕರ್ನಾಟಕ-ಭಾರತ್ ಗೌರವ ಕಾಶಿ ದರ್ಶನ ಯಾತ್ರೆ: 2022ರಲ್ಲಿ ಕರ್ನಾಟಕ-ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿತು. ನ. 11ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಅದ್ಧೂರಿಯಾಗಿ ಚಾಲನೆ ಪಡೆದ ಕಾಶಿಯಾತ್ರೆಗೆಂದೇ ವಿಶೇಷವಾಗಿ ವಿನ್ಯಾಸಗೊಂಡಿರುವ ‘ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ಕಾಶಿ ದರ್ಶನ ರೈಲು ಪ್ಯಾಕೇಜ್‌ ಟೂರ್‌’ಗೆ ಚಾಲನೆ ಸಿಕ್ಕಿದೆ.

ಐಆರ್‌ಸಿಟಿಸಿ ಸಹಭಾಗಿತ್ವದ ಈ ಟೂರ್‌ ಪ್ಯಾಕೇಜ್‌ನ ದರ 20 ಸಾವಿರ ರೂಪಾಯಿಗಳಾಗಿದ್ದು, ಪ್ರಯಾಣಿಕರು ಕೇವಲ 15 ಸಾವಿರ ರೂಪಾಯಿಗಳನ್ನು ನೀಡಿದರೆ ಸಾಕು. ಉಳಿದ 5 ಸಾವಿರ ರೂ.ಗಳನ್ನು ರಾಜ್ಯ ಸರಕಾರ ಸಹಾಯಧನದ ರೂಪದಲ್ಲಿ ನೀಡಲಿದೆ. ಭವ್ಯ ಕಾಶಿ-ದಿವ್ಯ ಕಾಶಿಗೆ ರಾಜ್ಯದ ಜನರು ಕಡಿಮೆ ವೆಚ್ಚದಲ್ಲಿ ಹೋಗಿ ಬರಲಿ ಎಂಬ ಉದ್ದೇಶದಿಂದ ಈ ರೈಲು ಪ್ರವಾಸವನ್ನು ಆಯೋಜಿಸಲಾಗಿದೆ.

ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಮೀಸಲಾತಿ: ಕರುನಾಡ ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಅದಕ್ಕಾಗಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಪದಕ ವಿಜೇತರಾದ ವ್ಯಕ್ತಿಗಳನ್ನು ಕೆಲವು ಹುದ್ದೆಗಳಿಗೆ ಮಾಡುವ ನೇಮಕಾತಿ) (ವಿಶೇಷ) ನಿಯಮಗಳು 2022ಕ್ಕೆ ಅನುಮೋದನೆ ನೀಡಲಾಗಿದೆ.

ಒಲಂಪಿಕ್ ಮತ್ತು ಪ್ಯಾರಾ ಒಲಂಪಿಕ್‌ನಲ್ಲಿ ಪದಕ ವಿಜೇತರಿಗೆ ಗ್ರೂಪ್ ಎ ವೃಂದದ ಸರ್ಕಾರಿ ಉದ್ಯೋಗ, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್‌ ಪದಕ ವಿಜೇತರಿಗೆ ಬಿ ಗ್ರೂಪ್ ಸರ್ಕಾರಿ ಉದ್ಯೋಗ, ನ್ಯಾಷನಲ್ ಗೇಮ್ಸ್‌‌ನಲ್ಲಿ ಪದಕ ವಿಜೇತರಿಗೆ ಸಿ ಗ್ರೂಪ್ ಉದ್ಯೋಗ ನೀಡಲಾಗುವುದು. ಉಪ ವಿಭಾಗಾಧಿಕಾರಿ, ಸಹಾಯಕ ಆಯುಕ್ತರು (ಜಿಎಸ್​ಟಿ) ಸೇರಿದಂತೆ 9 ಇಲಾಖೆಗಳಲ್ಲಿ ತಲಾ 5 ರಂತೆ 45 ಗ್ರೂಪ್ -ಎ ಹುದ್ದೆಗಳು, ತಹಶೀಲ್ದಾರ್ ಸೇರಿದಂತೆ 15 ಇಲಾಖೆಗಳಲ್ಲಿ 150 ಗ್ರೂಪ್ ಬಿ ವೃಂದದ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.

ಭೂ ಕಬಳಿಕೆ ತಿದ್ದುಪಡಿ ಕಾಯ್ದೆ ಜಾರಿ: ನಗರ ಪ್ರದೇಶದಲ್ಲಿ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಭೂಮಿ ಕಬಳಿಸಿರುವ ಹಾಗೂ ಬಿಲ್ಡರ್‌ಗಳನ್ನು ಗುರಿಯಾಗಿಸಿಕೊಂಡು ಜಾರಿ ಮಾಡಲಾಗಿರುವ ಕರ್ನಾಟಕ ಭೂ ಕಬಳಿಕೆ(ನಿಷೇಧ) ಅಧಿನಿಯಮ 2011ರ ವ್ಯಾಪ್ತಿಯಿಂದ ಗ್ರಾಮೀಣ ಭಾಗದ ಜನರನ್ನು ಹೊರಗಿಡುವ ಮಹತ್ವದ ತೀರ್ಮಾನ ಸರ್ಕಾರ ಕೈಗೊಂಡಿದೆ.

ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ರೈತರು, ಕಾಫಿ ಬೆಳೆಗಾರರು, ಜನಸಾಮಾನ್ಯರು ಜೀವನ ನಿರ್ವಹಣೆಗಾಗಿ ತಾವು ಬಿತ್ತಿದ ಭೂಮಿ ಉಳಿಸಿಕೊಳ್ಳಲು ಕಠಿಣ ಕಾನೂನು ಅಸ್ತ್ರದಿಂದ ಪಾರಾಗಲು ನ್ಯಾಯಾಲಯಕ್ಕೆ ಅಲೆಯಬೇಕಿತ್ತು. ಇದನ್ನು ತಪ್ಪಿಸಲು ಸರಕಾರ ಈ ತಿದ್ದುಪಡಿ ತಂದಿದೆ. ರಾಜ್ಯದಲ್ಲಿ ಸರಕಾರ ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡಿರುವ ರೈತರ ಭೂ ಒತ್ತುವರಿ ಪ್ರಕರಣಗಳನ್ನು ಭೂ ಕಬಳಿಕೆ ಪ್ರಕರಣಗಳ ವ್ಯಾಜ್ಯ ವಿಲೇವಾರಿಗೆ ಸ್ಥಾಪಿಸಿರುವ ತ್ವರಿತ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಿಡುವ ತೀರ್ಮಾನ ಇದಾಗಿದೆ.

ಓದಿ: ಹಿಂದುಳಿದ ತಾಲೂಕುಗಳ ಕಲ್ಯಾಣಕ್ಕಾಗಿ ವಿಶೇಷ ಅಭಿವೃದ್ಧಿ ಯೋಜನೆ: ಬೊಮ್ಮಾಯಿ‌ ಸರ್ಕಾರದ ಪ್ರಗತಿ ಕಳಪೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.