ETV Bharat / state

ಪತಿ ಉದ್ಯೋಗದ ಬಗ್ಗೆ ಸುಳ್ಳು ಮಾಹಿತಿ ಆರೋಪ, ಕೆಲಸದಿಂದ ವಜಾ: ಕಾನೂನು ಹೋರಾಟ ನಡೆಸಿ ಗೆದ್ದ ಮಹಿಳೆ

author img

By ETV Bharat Karnataka Team

Published : Dec 14, 2023, 9:25 AM IST

High Court notice  continue service  not providing information  husband employment  ಪತಿ ಉದ್ಯೋಗದ ಬಗ್ಗೆ ಸುಳ್ಳು ಮಾಹಿತಿ  ಹೋರಾಟ ನಡೆಸಿ ಗೆದ್ದ ಮಹಿಳೆ  ಕೆಲಸದಿಂದ ವಜಾ  ಕಾನೂನು ಹೋರಾಟ  ಟೈಪಿಸ್ಟ್ ಹುದ್ದೆಗೆ ಸೂಕ್ತ ಅರ್ಹತೆ  ದಾವಣಗೆರೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ  ಸೇವೆಯಿಂದ ವಜಾ
ಕಾನೂನು ಹೋರಾಟ ನಡೆಸಿ ಗೆದ್ದ ಮಹಿಳೆ

ಸಂದರ್ಶನದ ವೇಳೆ ಪತಿ ಉದ್ಯೋಗದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪದಿಂದ ಕೆಲಸ ಕಳೆದುಕೊಂಡಿದ್ದ ಮಹಿಳೆಯೊಬ್ಬರು ಕಾನೂನು ಹೋರಾಟ ನಡೆಸಿ ಗೆದ್ದಿದ್ದಾರೆ.

ಬೆಂಗಳೂರು: ನೇಮಕದ ವೇಳೆ ಪತಿಯ ಉದ್ಯೋಗದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆನ್ನುವ ಆರೋಪದ ಮೇರೆಗೆ ದಾವಣಗೆರೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಟೈಪಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಎಚ್. ಅನಿತಾ ಎಂಬುವರನ್ನು ಸೇವೆಯಿಂದ ವಜಾಗೊಳಿಸಿತ್ತು. ಆದ್ರೆ ದಾವಣಗೆರೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ತಮ್ಮನ್ನು ಸೇವೆಯಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಅನಿತಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎನ್.ಎಸ್. ಸಂಜಯ್ ಗೌಡ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಆ ಮಹಿಳೆಗೆ ತಕ್ಷಣವೇ ಟೈಪಿಸ್ಟ್ ಹುದ್ದೆ ನೀಡಿ ಸೇವೆ ಮುಂದುವರಿಸಲು ಅವಕಾಶ ಮಾಡಿಕೊಡುವಂತೆ ಸೂಚಿಸಿದೆ. ಜತೆಗೆ, ಪತಿಯ ಉಪಕಸುಬಿಗೂ ಅಭ್ಯರ್ಥಿಯ ಮೆರಿಟ್‌ಗೂ ಸಂಬಂಧ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರರು ಟೈಪಿಸ್ಟ್ ಹುದ್ದೆಗೆ ಸೂಕ್ತ ಅರ್ಹತೆ ಹೊಂದಿದ್ದಾರೆ. ಹಾಗಾಗಿ ಅವರ ಪತ್ನಿಯ ಉಪಕಸುಬು ಇಲ್ಲಿ ಪ್ರಸ್ತುತವಲ್ಲ. ಅಲ್ಲದೆ, ಅರ್ಜಿದಾರರು ಟೈಪಿಸ್ಟ್ ಹುದ್ದೆಗೆ ಅಗತ್ಯವಾದ ಎಲ್ಲಾ ಮೆರಿಟ್ ಹೊಂದಿದ್ದು, ಅದೇ ಆಧಾರದ ಮೇಲೆ ಅವರು ನೇಮಕಗೊಂಡಿದ್ದಾರೆ. ಅವರ ಪತಿಯ ಉಪಕಸುಬಿನ ಆಧಾರದಲ್ಲಿ ಅವರಿಗೆ ಉದ್ಯೋಗ ನೀಡಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಮತ್ತು ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಸಂದರ್ಶನದ ವೇಳೆ ಏನು ನಡೆದಿದೆ ಎಂಬುದಕ್ಕೆ ದಾಖಲೆ ಇಲ್ಲ. ಜಿಲ್ಲಾ ಪ್ರಧಾನ ನ್ಯಾಯಾಧೀಶರು ಹೇಳಿರುವಂತೆ ಸಂದರ್ಶನದ ವೇಳೆ ತಪ್ಪು ಮಾಹಿತಿ ನೀಡಿದ್ದಾರೆಂಬುದನ್ನು ಒಪ್ಪಲಾಗದು. ಪತಿಯ ಉಪಕಸುಬಿಗೂ ಅರ್ಜಿದಾರರ ಉದ್ಯೋಗಕ್ಕೂ ಸಂಬಂಧವಿಲ್ಲ. ಜತೆಗೆ ಜಾತಿ ಪರಿಶೀಲನಾ ಸಮಿತಿ ಕೂಡ ಅರ್ಜಿದಾರರ ಪತಿ ಸರ್ಕಾರದಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಖಾತ್ರಿಪಡಿಸಿದೆ. ಹಾಗಾಗಿ ಸೇವೆಯಿಂದ ವಜಾ ಆದೇಶ ರದ್ದುಗೊಳಿಸಲಾಗುತ್ತಿದೆ ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?: ದಾವಣಗೆರೆ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಟೈಪಿಸ್ಟ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅಧಿಸೂಚನೆಯಂತೆ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು, ಆಗ ವೇಳೆ ವೈವಾಹಿಕ ಸ್ಥಿತಿಗತಿ ಕಾಲಂನಲ್ಲಿ ಮದುವೆ ಆಗಿದೆ ಎಂದು ಭರ್ತಿ ಮಾಡಿದ್ದರು. ಸೂಕ್ತ ಮೆರಿಟ್ ಇದ್ದ ಕಾರಣ ಅವರು 2022ರ ಡಿ.21ರಂದು ಟೈಪಿಸ್ಟ್ ಆಗಿ ಮೀಸಲು ವರ್ಗದಡಿ ನೇಮಕಗೊಂಡಿದ್ದರು.

ಅವರ ಜಾತಿ ಪ್ರಮಾಣಪತ್ರವನ್ನು ಪರಿಶೀಲಿಸಿದಾಗ ಅದೂ ಸಹ ನೈಜ ಎಂದು ದೃಢಪಟ್ಟಿತ್ತು. ಅವರು ನೇಮಕದ ವೇಳೆ ನಡೆದ ಸಂದರ್ಶನದಲ್ಲಿ ತಮ್ಮ ಪತಿ ಶಿವಮೊಗ್ಗದ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯಲ್ಲಿ ಎಫ್​ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಪೋಷಕರು ತರಕಾರಿ ಮಾರಾಟ ಮಾಡುತ್ತಾರೆಂದು ತಿಳಿಸಿದ್ದರು. ಆದರೆ ಜಿಲ್ಲಾ ಪ್ರಧಾನ ನ್ಯಾಯಾಧೀಶರು, ಅನಿತಾ ಸಂದರ್ಶನದ ವೇಳೆ ತಮ್ಮ ಪತಿ ತರಕಾರಿ ವ್ಯಾಪಾರಿ ಎಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ಹೇಳಿ ಅವರನ್ನು ಸೇವೆಯಿಂದ ವಜಾ ಮಾಡಿದ್ದರು. ಅದನ್ನು ಪ್ರಶ್ನಿಸಿ ಅನಿತಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಓದಿ: ಅತ್ಯಾಚಾರ ಸಂತ್ರಸ್ತೆಯರ ಗರ್ಭಪಾತ ವಿಚಾರ: ತಜ್ಞರ ಸಮಿತಿ ರಚಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಪ್ರತ್ಯೇಕ ಪ್ರಕರಣ- ಎಐಬಿಇ ಪರೀಕ್ಷೆ ಪಾಸಾಗದೇ ವಕಾಲತ್ತಿಗೆ ಸಹಿ: ವಕೀಲರಾಗಿ ನೋಂದಣಿಯಾದ ಕಾನೂನು ಪದವೀಧರರು ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಪಾಸಾಗದೆ ವಕಾಲತ್ತಿಗೆ ಸಹಿ ಮಾಡಿ, ನಿಯಮಬಾಹಿರವಾಗಿ ವಕೀಲಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ವಕೀಲರ ಪರಿಷತ್‌ ಎಚ್ಚರಿಸಿದೆ.

ರಾಜ್ಯದ ಎಲ್ಲಾ ವಕೀಲರ ಸಂಘಗಳಿಗೆ ಪತ್ರ ಬರೆದಿರುವ ಪರಿಷತ್‌ ಅಧ್ಯಕ್ಷ ಎಚ್‌.ಎಲ್‌.ವಿಶಾಲ ರಘು, ‘ಯಾರು ಎಐಬಿಇ ಪರೀಕ್ಷೆ ಪಾಸಾಗಿಲ್ಲವೋ ಅಂಥವರು ಕೋರ್ಟ್‌ ಕಲಾಪದಲ್ಲಿ ವಕೀಲರ ಉಡುಪು ಅಥವಾ ನಿಲುವಂಗಿ ಧರಿಸಿ ಬರುವಂತಿಲ್ಲ. ಈ ರೀತಿ ವಕೀಲಿಕೆ ನಡೆಸುತ್ತಿದ್ದ ಯಲಬುರ್ಗಾದ ವಕೀಲ ಆನಂದ ಎ. ಉಳ್ಳಾಗಡ್ಡಿ ಅವರ ಸನ್ನದನ್ನು ಅಮಾನತುಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಎಐಬಿಇ ಪರೀಕ್ಷಾ ಫಲಿತಾಂಶದಲ್ಲಿ ಪಾಸಾಗದ ಅಥವಾ ವೃತ್ತಿ ‍ಪ್ರಮಾಣ ಪತ್ರ ಹೊಂದಿರದ (ಸರ್ಟಿಫಿಕೇಟ್‌ ಆಫ್‌ ಪ್ರ್ಯಾಕ್ಟೀಸ್–ಸಿಒಪಿ) ವಕೀಲರಿಗೆ, ವಕೀಲರ ಸಂಘಗಳು ಸದಸ್ಯತ್ವ ನೀಡಬೇಕು. ಆದರೆ ಮತದಾನದ ಹಕ್ಕು ನೀಡಬಾರದು’ ಎಂದು ರಾಜ್ಯದ ಎಲ್ಲಾ ವಕೀಲರ ಸಂಘಗಳಿಗೆ ಮನವಿ ಮಾಡಿದ್ದಾರೆ.

‘ಯಾರಾದರೂ ನಿಯಮ ಉಲ್ಲಂಘಿಸಿದಲ್ಲಿ ಅಂಥವರ ನೋಂದಣಿಯನ್ನು ವಕೀಲರ ಕಾಯ್ದೆ ಮತ್ತು ಸಿಒಪಿ ನಿಯಮಗಳ ಪ್ರಕಾರ ಅಮಾನತುಗೊಳಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.