ETV Bharat / state

Annabhagya: ಅನ್ನಭಾಗ್ಯದಡಿ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಸೆಪ್ಟೆಂಬರ್‌ನಿಂದ್ಲೇ ವಿತರಿಸಲು ಕ್ರಮ: ಸಚಿವ ಕೆ.ಹೆಚ್.ಮುನಿಯಪ್ಪ

author img

By

Published : Aug 4, 2023, 5:46 PM IST

Minister K H Muniyappa
ಸಚಿವ ಕೆ ಹೆಚ್ ಮುನಿಯಪ್ಪ

Annabhagya Scheme: ಅನ್ನಭಾಗ್ಯ ಯೋಜನೆ ಕುರಿತು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಮಾಹಿತಿ ನೀಡಿದ್ದಾರೆ.

ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆ

ಬೆಂಗಳೂರು: ''ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಸೆಪ್ಟೆಂಬರ್ ತಿಂಗಳಿನಿಂದಲೇ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ'' ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು (ಶುಕ್ರವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಬಿಪಿಎಲ್ ಕಾರ್ಡ್​ದಾರರಿಗೆ 5 ಕೆಜಿ ಹೆಚ್ಚುವರಿಗಾಗಿ ವಿತರಿಸಲು ಅಕ್ಕಿ ಸಿಗದ ಕಾರಣ ಪ್ರತಿ ಫಲಾನುಭವಿಗೆ ಐದು ಕೆಜಿ ಅಕ್ಕಿ ಬೆಲೆ 170 ರೂ. ಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಯೋಜನೆ ಜಾರಿಗೆ ಬಂದು ಒಂದು ತಿಂಗಳೊಳಗೆ ಒಂದು ಕೋಟಿಗೂ ಅಧಿಕ ಪಡಿತರ ಕುಟುಂಬಗಳ ಫಲಾನುಭವಿಗಳಿಗೆ 566 ಕೋಟಿ ರೂ. ಜಮೆ ಮಾಡಲಾಗಿದೆ. ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ'' ಎಂದು ಹೇಳಿದರು.

ಕೆಜಿ ಅಕ್ಕಿಗೆ 34 ರೂ. ನೀಡಿ ಖರೀದಿಸುವ ಬಗ್ಗೆ ಮಾತುಕತೆ: ''ಈ ರೀತಿ ಹಣ ಹಾಕುವುದು ಎರಡು ತಿಂಗಳು ಮಾತ್ರ. ಸೆಪ್ಟಂಬರ್‌ನಿಂದ ಅಕ್ಕಿಯನ್ನೇ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅಕ್ಕಿ ಖರೀದಿಗೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳ ಆಹಾರ ಇಲಾಖೆ ಸಚಿವರುಗಳ ಜೊತೆ ಚರ್ಚೆ ಆಗಿದೆ. ಕೇಂದ್ರ ಸರ್ಕಾರದ ದರದಂತೆ ಪ್ರತಿ ಕೆ.ಜಿ. ಅಕ್ಕಿಗೆ 34 ರೂ. ನೀಡಿ ಖರೀದಿಸುವ ಬಗ್ಗೆಯೂ ಮಾತುಕತೆ ನಡೆದಿವೆ. ನಮ್ಮ ಬೆಲೆಗೆ ಈ ರಾಜ್ಯಗಳು ಅಕ್ಕಿ ನೀಡಲು ಒಪ್ಪಿದರೆ ಬಹುಶಃ ಸೆಪ್ಟೆಂಬರ್ ತಿಂಗಳಲ್ಲೇ ಅನ್ನಭಾಗ್ಯ ಯೋಜನೆಯಡಿ ಹಣ ನೀಡುವುದನ್ನು ಸ್ಥಗಿತಗೊಳಿಸಿ ಅಕ್ಕಿಯನ್ನೇ ವಿತರಿಸಲಾಗುವುದು. ಒಂದು ವಾರದೊಳಗೆ ಎಲ್ಲವೂ ಅಂತಿಮವಾಗಲಿದೆ'' ಎಂದು ಸಚಿವರು ಮಾಹಿತಿ ನೀಡಿದರು.

''ಆಂಧ್ರ, ತೆಲಂಗಾಣ ರಾಜ್ಯಗಳಿಂದ ಅಕ್ಕಿ ಖರೀದಿಸುವ ಪ್ರಯತ್ನ ಈ ಹಿಂದೆಯೇ ಮಾಡಲಾಗಿತ್ತು. ಆದರೆ, ದರ ಹೆಚ್ಚಾದ ಕಾರಣ ಖರೀದಿ ಸಾಧ್ಯವಾಗಲಿಲ್ಲ. ಈಗ ಪ್ರತಿ ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರದ ದರದಂತೆ ಅಂದರೆ 34 ರೂ.ನಂತೆ ಪೂರೈಸಲು ಈ ರಾಜ್ಯಗಳು ಮುಂದಾಗಿದ್ದು, ಅಕ್ಕಿ ಖರೀದಿಯ ಸಂಬಂಧ ಮಾತುಕತೆ ನಡೆಸಲಾಗಿದೆ. ಮಾತುಕತೆ ಫಲಪ್ರದವಾದರೆ ಬಿಪಿಎಲ್ ಕಾರ್ಡ್ ದಾರರಿಗೆ ಪೂರ್ಣ ಪ್ರಮಾಣದಲ್ಲಿ ಹತ್ತು ಕೆಜಿ ಅಕ್ಕಿ ನೀಡುವುದು'' ಎಂದು ಹೇಳಿದರು.

ಬಾಕಿ ಹಣ ಕೊಡಲು ಸಾಧ್ಯವಿಲ್ಲ: ''ಅನ್ನಭಾಗ್ಯ ಯೋಜನೆಯಡಿ ಬ್ಯಾಂಕ್ ಖಾತೆ ಹೊಂದಿಲ್ಲದ ಬಿಪಿಎಲ್ ಕಾರ್ಡ್​ದಾರರಿಗೆ ನಗದು ಹಣ ವರ್ಗಾವಣೆ ಯೋಜನೆಯಡಿ ಬಾಕಿ ಹಣವನ್ನು ಕೊಡಲು ಸಾಧ್ಯವಿಲ್ಲ. ಅವರು ಬ್ಯಾಂಕ್ ಖಾತೆ ಹೊಂದಿದ ದಿನದಿಂದ ಹಣವನ್ನು ನೀಡಲಾಗುತ್ತದೆ. ಇದುವರೆಗೂ ಒಂದು ಕೋಟಿ ಕುಟುಂಬಗಳಿಗೆ 566 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಲಾಗಿದೆ. ಬಾಕಿ ಕುಟುಂಬಗಳು ಖಾತೆ ಮತ್ತು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿದ ನಂತರ ಅವರಿಗೂ ಹಣವನ್ನು ನೀಡುತ್ತೇವೆ. ಆದರೆ, ಇವರಿಗೆ ಬಾಕಿ ಹಣ ನೀಡುವುದಿಲ್ಲ. ಎಂದಿನಿಂದ ಖಾತೆ ನಂಬರ್ ನೀಡುತ್ತಾರೋ ಆ ತಿಂಗಳಿನಿಂದ ಹಣ ನೀಡುತ್ತೇವೆ'' ಎಂದು ಸಚಿವರು ಸ್ಪಷ್ಟಪಡಿಸಿದರು.

''ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆ ಯೋಜನೆಗೆ ಚಾಲನೆ ಸಿಕ್ಕಿ 25 ದಿನಗಳಾಗಿದ್ದು, ಅತಿ ಕಡಿಮೆ ಸಮಯದಲ್ಲಿ ಆಹಾರ ಇಲಾಖೆಯು ಒಂದು ಕೋಟಿ ಕುಟುಂಬಗಳಿಗೆ 566 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿದೆ. ಇದು ದಾಖಲೆಯಾಗಿದೆ. ಉಳಿದ 28 ಲಕ್ಷ ಕುಟುಂಬಗಳ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿಲ್ಲ. ಹಾಗಾಗಿ ಇವರಿಗೆ ಹಣ ವರ್ಗಾವಣೆಯಾಗಿಲ್ಲ'' ಎಂದರು.

''ಬ್ಯಾಂಕ್ ಖಾತೆ ಹೊಂದದಿರುವ ಪಡಿತರದಾರರಿಗೆ ಖಾತೆಗಳನ್ನು ತೆರೆಯಲು ಇಲಾಖೆಯಿಂದಲೇ ನೆರವು ನೀಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಶಿಬಿರಗಳನ್ನು ಏರ್ಪಡಿಸಿ ಖಾತೆ ತೆರೆಯಲಾಗುತ್ತಿದೆ. ಇದುವರೆಗೂ 1,19,502 ಹೊಸ ಬ್ಯಾಂಕ್ ಖಾತೆ ತೆರೆಯಲಾಗಿದೆ'' ಎಂದು ಅವರು ವಿವರಿಸಿದರು.

ಹೊಸ ಕಾರ್ಡ್ ವಿತರಣೆಯಷ್ಟು?: ''ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ್ದರಿಂದ ಹೊಸ ಪಡಿತರ ಚೀಟಿ ಕಾರ್ಯ ವಿಚಾರಣೆಗೊಳ್ಳದೆ ಇದುವರೆಗೂ 2,95,986 ಬಿಪಿಎಲ್ ಪಡಿತರ ಅರ್ಜಿಗಳು ಬಾಕಿ ಉಳಿದಿವೆ. ಇವುಗಳನ್ನು ಆದಷ್ಟು ಶೀಘ್ರ ವಿಲೇವಾರಿ ಮಾಡಿ ಹೊಸ ಕಾರ್ಡ್‌ಗಳನ್ನು ವಿತರಿಸಲಾಗುವುದು. ಅದೇ ರೀತಿ ಅಗತ್ಯ ಬಿದ್ದವರಿಗೆ ಎಪಿಎಲ್ ಕಾರ್ಡ್‌ನ್ನು ವಿತರಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಡಿತರ ಚೀಟಿಯ ತಿದ್ದುಪಡಿ, ಸೇರ್ಪಡೆ, ರದ್ದತಿ ಕಾರ್ಯವೂ ಸ್ಥಗಿತಗೊಂಡಿದ್ದು, ಇದಕ್ಕೂ ಈಗ ಅವಕಾಶ ನೀಡಲಾಗುವುದು. ಜುಲೈ ಅಂತ್ಯಕ್ಕೆ ಒಟ್ಟು 3,18,907 ಅರ್ಜಿಗಳು ಬಾಕಿ ಉಳಿದಿವೆ'' ಎಂದು ಹೇಳಿದರು.

''ಆಂಧ್ರ ಪ್ರದೇಶದಲ್ಲಿ ಜಾರಿಯಲ್ಲಿರುವಂತೆ ಆಹಾರ ಧಾನ್ಯ ಪಡೆಯುವವರಿಗ ಎ ಕಾರ್ಡ್ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಬಿ ಕಾರ್ಡ್‌ನ್ನು ನೀಡುತ್ತಿರುವ ವ್ಯವಸ್ಥೆಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಲು ಅಧ್ಯಯನ ನಡೆದಿದೆ. ಆದಷ್ಟು ಬೇಗ ಇದನ್ನು ಜಾರಿ ಮಾಡಲಾಗುವುದು'' ಎಂದರು.

ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರಕ್ಕೆ ಮನವಿ: ಕೇಂದ್ರ ವಾಣಿಜ್ಯ ಮತ್ತು ಆಹಾರ ಸಚಿವರನ್ನು ಆಗಸ್ಟ್ 1 ರಂದು ದೆಹಲಿಯಲ್ಲಿ ಭೇಟಿ ಮಾಡಿ ರಾಗಿ, ಜೋಳದ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದೇನೆ. ಹಾಗೆಯೇ ಮುಂಗಾರು ಹಂಗಾಮಿನಲ್ಲಿ ರೈತರಿಂದ ರಾಗಿ ಮತ್ತು ಬಿಳಿ ಜೋಳವನ್ನು ಹೆಚ್ಚುವರಿಯಾಗಿ ಖರೀದಿಸುವಂತೆಯೂ ಕೋರಿದ್ದೇನೆ. ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ನಕಲಿ ಪಡಿತರ ಚೀಟಿ ಪತ್ತೆಗೆ ಕ್ರಮ: ರಾಜ್ಯದ ಹಲವು ಕಡೆಗಳಲ್ಲಿ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದು, ಇದನ್ನು ಪತ್ತೆ ಹಚ್ಚಲು ತನಿಖೆಯನ್ನು ನಡೆಸುತ್ತೇವೆ. ಅನರ್ಹರಿಗೆ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವುದಾಗಿಯೂ ಅವರು ತಿಳಿಸಿದರು. ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, ಹಳದಿ ಬೋರ್ಡ್‌ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಅದನ್ನು ಪರಿಶೀಲಿಸಿ ವಾಪಸ್ ಪಡೆಯುವ ಬಗ್ಗೆ ನಿರ್ಧಾರ ಮಾಡುತ್ತೇವೆ. ಹಳದಿ ಬೋರ್ಡ್ ಹೊಂದಿರುವವರು ಜೀವನಕ್ಕಾಗಿ ದುಡಿಯಲು ಕಾರು ತೆಗೆದುಕೊಂಡಿರುತ್ತಾರೆ. ಹೀಗಾಗಿ ಅವರ ಕಾರ್ಡ್ ರದ್ದು ಮಾಡುವುದಿಲ್ಲ. ಬಿಳಿ ಬೋರ್ಡ್ ಕಾರು ಇರುವವರ ಕಾರ್ಡ್ ರದ್ದು ವಾಪಸ್ ಪಡೆಯುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಕಾರ್ಯದರ್ಶಿ ಡಾ.ರೇಜು ಎಂ.ಟಿ, ಆಯುಕ್ತೆ ಕನಗವಲ್ಲಿ, ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ಇತರರು ಇದ್ದರು.

ಇದನ್ನೂ ಓದಿ: Shakti Yojana: ಪ್ರತಿದಿನ ಶೇ.1ರಷ್ಟು ಶಕ್ತಿ ಯೋಜನೆ ದುರ್ಬಳಕೆ- ಸಚಿವ ರಾಮಲಿಂಗಾ ರೆಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.