ETV Bharat / state

ಸಾರಿಗೆ ನಿಗಮಗಳಲ್ಲಿ ಇವಿ ದುನಿಯಾ ಆರಂಭ: ಕೆಎಸ್ಆರ್​ಟಿಸಿ, ಬಿಎಂಟಿಸಿ ಬಳಿಕ ವಾಯುವ್ಯ ಸಾರಿಗೆಯಲ್ಲೂ ವಿದ್ಯುತ್ ಚಾಲಿತ ಬಸ್​ಗಳು

author img

By ETV Bharat Karnataka Team

Published : Aug 27, 2023, 5:48 PM IST

450-electric-buses-are-in-operation-in-nwkrtc
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ವಿದ್ಯುತ್​ ಚಾಲಿತ ಬಸ್​ಗಳು ಸಂಚರಿಸುತ್ತಿದ್ದು, ಇದೀಗ ವಾಯವ್ಯ ಸಾರಿಗೆಯಲ್ಲಿ 450 ಎಲೆಕ್ಟ್ರಿಕ್​ ಬಸ್​ಗಳು ಕಾರ್ಯಾಚರಣೆ ನಡೆಸಲಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಇನ್ಮುಂದೆ ವಿದ್ಯುತ್ ಚಾಲಿತ ಬಸ್​ಗಳ ದುನಿಯಾ ಆರಂಭವಾಗಲಿದೆ. ಈಗಾಗಲೇ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿಗಳಲ್ಲಿ ಇವಿ ಬಸ್​ಗಳ ಸಂಚಾರ ಆರಂಭಗೊಂಡಿದ್ದು, ಸದ್ಯದಲ್ಲೇ ವಾಯುವ್ಯ ಸಾರಿಗೆಯಲ್ಲೂ ಇವಿ ಬಸ್ ಜಮಾನ ಆರಂಭವಾಗಲಿದೆ. ಅದಕ್ಕಾಗಿಯೇ 450 ಎಲೆಕ್ಟ್ರಿಕ್ ಬಸ್​ಗಳ ಕಾರ್ಯಾಚರಣೆಗೆ ಸಿದ್ಧತೆ ಆರಂಭಗೊಂಡಿದೆ.

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಚಹರೆ ಬದಲಾಗುತ್ತಿದೆ. ನಷ್ಟದಿಂದ ನಿಗಮಗಳು ಲಾಭದತ್ತ ತಿರುತ್ತಿರುವುದು ಮಾತ್ರವಲ್ಲ, ಇವಿ ವಾಹನಗಳ ಕಾರ್ಯಾಚರಣೆಗೂ ಮುಂದಾಗಿವೆ. ಸದ್ಯ ಬೆಂಗಳೂರಿನಿಂದ ಬಹುತೇಕ ಜಿಲ್ಲಾ ಕೇಂದ್ರಗಳಿಗೆ ಕೆಎಸ್ಆರ್​ಟಿಸಿ ಇವಿ ಬಸ್​ಗಳು ಕಾರ್ಯಾಚರಣೆ ನಡೆಸುತ್ತಿವೆ. ಬಿಎಂಟಿಸಿಯೂ ಕೂಡ ಇವಿ ಬಸ್​ಗಳನ್ನು ರಸ್ತೆಗಿಳಿಸಿದೆ. ಎರಡೂ ನಿಗಮಗಳ ಇವಿ ಬಸ್​ಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಪರಿಸರ ಮಾಲಿನ್ಯ ರಹಿತದ ಜೊತೆಗೆ ಬಂಡವಾಳ ಹೂಡಿಕೆ ರಹಿತ ಕಾರ್ಯಾಚರಣೆಯಿಂದಾಗಿ ಹಣ ಉಳಿತಾಯವೂ ಆಗುತ್ತಿದೆ. ಹಾಗಾಗಿ ಈ ಇವಿ ಬಸ್​ಗಳ ಕಾರ್ಯಾಚರಣೆಯನ್ನು ಇದೀಗ ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೂ ವಿಸ್ತರಿಸಲಾಗುತ್ತಿದೆ.

ಮೊದಲ ಹಂತವಾಗಿ 450 ವಿದ್ಯುತ್ ಚಾಲಿತ ಬಸ್​ಗಳನ್ನು ವಾಯುವ್ಯ ಸಾರಿಗೆಯಡಿ ಕಾರ್ಯಾಚರಣೆ ನಡೆಸುವ ಪ್ರಸ್ತಾವನೆಗೆ ಸಾರಿಗೆ ನಿಗಮ ಮಂಡಳಿ ಅನುಮೋದನೆ ನೀಡಿದೆ. ಜೊತೆಗೆ ಮಂಡಳಿಯ ಪ್ರಸ್ತಾವನೆಗೆ ಸರ್ಕಾರವೂ ಸಮ್ಮತಿ ನೀಡಿದೆ. ಹಾಗಾಗಿ ಅತಿ ಶೀಘ್ರದಲ್ಲಿಯೇ ಉತ್ತರ ಕರ್ನಾಟಕ ಭಾಗದಲ್ಲಿ ವಿದ್ಯುತ್ ಚಾಲಿತ ಬಸ್​ಗಳ ಸಂಚಾರ ಆರಂಭವಾಗಲಿದೆ.

ಶಕ್ತಿ ಯೋಜನೆಯ ಮೊದಲು ನಿತ್ಯ 17.48 ಲಕ್ಷ ಜನರು ಬಸ್​ಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರ ಸಂಖ್ಯೆ 24 ರಿಂದ 26 ಲಕ್ಷದಷ್ಟಾಗಿದೆ. ನಗರ ಸಾರಿಗೆ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲೂ ಬಹಳಷ್ಟು ಏರಿಕೆಯಾಗಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಸುಗಳನ್ನು ಕಾರ್ಯಾಚರಣೆ ನಡೆಸಲು ಕ್ರಮವಹಿಸುವ ಭಾಗವಾಗಿ 450 ಎಲೆಕ್ಟ್ರಿಕ್ ಬಸ್​​ಗಳ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

450 ಇವಿ ಬಸ್​ಗಳಲ್ಲಿ 200 ಬಸ್​ಗಳು ಗ್ರಾಮಾಂತರ ಸಾರಿಗೆಯಾಗಲಿದ್ದು, 150 ಇವಿ ಬಸ್​ಗಳು ನಗರ ಸಾರಿಗೆ ಮಾದರಿ ಹಾಗು 100 ಇವಿ ಬಸ್ ಬಿ.ಆರ್.ಟಿ.ಎಸ್ ಮಾದರಿಯ ಬಸ್​ಗಳಾಗಿವೆ. ಗ್ರಾಮಾಂತರ ಹಾಗು ನಗರ ಸಾರಿಗೆ ಬಸ್ಸುಗಳನ್ನು ಹುಬ್ಬಳ್ಳಿ-ಧಾರವಾಡ ಹಾಗು ಬೆಳಗಾವಿ ವಿಭಾಗದಿಂದ ಕಾರ್ಯಾಚರಣೆ ಮಾಡಲಾಗುತ್ತದೆ. ಎಲ್ಲಾ 450 ಇವಿ ಬಸ್​ಗಳನ್ನೂ ಸಾರಿಗೆ ನಿಗಮ ಖರೀದಿ ಮಾಡುತ್ತಿಲ್ಲ. ಜಿಸಿಸಿ ಮಾದರಿಯಲ್ಲಿ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕೆಎಸ್ಆರ್​ಟಿಸಿ ಲಾಂಗ್ ರೂಟ್​​ನಲ್ಲಿ ಈಗಾಗಲೇ ಇವಿ ಬಸ್​ಗಳು ಓಡಾಟ ನಡೆಸುತ್ತಿವೆ. ಬಿಎಂಟಿಸಿಯಲ್ಲಿಯೂ ಇವಿ ಬಸ್​ಗಳ ಕಾರ್ಯಾಚರಣೆ ಇದೆ. ಈಗ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೂ ಇವಿಗಳ ಸೇರ್ಪಡೆ ಮಾಡಲಾಗುತ್ತಿದೆ. ಇನ್ನು ಉಳಿದಿದ್ದು ಕೇವಲ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮಾತ್ರ. ಕಲ್ಯಾಣ ಕರ್ನಾಟಕ ನಿಗಮದಿಂದ ಇನ್ನೂ ಪ್ರಸ್ತಾವನೆ ಬಂದಿಲ್ಲ. ಇವಿ ಬಸ್​ಗಳ ಕಾರ್ಯಾಚರಣೆಗೆ ಅವರೂ ಕೇಳಿದರೆ ಅವರಿಗೂ ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ನಗರ ಪ್ರದೇಶದಲ್ಲಿ ಹೆಚ್ಚು ಪರಿಸರ ಮಾಲಿನ್ಯವಾಗುತ್ತಿದೆ ಎಂದು ಇಡೀ ದೇಶದಲ್ಲಿ ನಗರ ಸಾರಿಗೆಗೆ ಇವಿ ಬಸ್​ಗಳ ಅಳವಡಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಇಷ್ಟು ದಿನ ಇದಕ್ಕೆ ಸಬ್ಸಿಡಿ ಸಿಗುತ್ತಿತ್ತು. ಆದರೆ ಈಗ ಸಬ್ಸಿಡಿ ನಿಲ್ಲಿಸಿದ್ದಾರೆ. ಸಬ್ಸಿಡಿ ಕೊಟ್ಟರೆ ಇನ್ನು ಹೆಚ್ಚಿನ ಇವಿ ಬಸ್​ಗಳನ್ನು ನಾವು ಸಾರಿಗೆ ನಿಗಮಗಳಿಗೆ ಹಾಕಬಹುದು. ಆದರೆ ನಿಲ್ಲಿಸಿರುವ ಸಬ್ಸಿಡಿಯನ್ನು ಕೊಡಿ ಎಂದು ನಾವು ಪ್ರತ್ಯೇಕವಾಗಿ ಕೇಳಲು ಬರುವುದಿಲ್ಲ. ಸಬ್ಸಿಡಿ ಪಾಲಿಸಿ ವಿಷಯಕ್ಕೆ ಸೇರಿದ್ದಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಸಬ್ಸಿಡಿಗೆ ಮನವಿ ಮಾಡಲು ಸಾಧ್ಯವಿಲ್ಲ. ಆದರೆ ಸಬ್ಸಿಡಿ ಕೊಟ್ಟರೆ ಇನ್ನಷ್ಟು ಹೆಚ್ಚಾಗಿ ಇವಿ ಬಸ್​ಗಳ ಅಳವಡಿಕೆ ಮಾಡಬಹುದು ಎಂದು ತಿಳಿಸಿದರು.

ದೇಶದ ಯಾವುದೇ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಇವಿ ಬಸ್ ಖರೀದಿಸುವ ಸಾಮರ್ಥ್ಯವಿಲ್ಲ. ಅಷ್ಟು ಬೆಲೆ ಕೊಟ್ಟು ಖರೀದಿ ಮಾಡಲಾಗಲ್ಲ. ಹಾಗಾಗಿ ಸಬ್ಸಿಡಿಯ ಅಗತ್ಯವಿದೆ. ಕೇಂದ್ರ ಹಾಗು ರಾಜ್ಯ ಎರಡೂ ಸರ್ಕಾರಗಳು ಸಬ್ಸಿಡಿ ಕೊಟ್ಟರೆ ಆಗ ಸಾರಿಗೆ ನಿಗಮಗಳೂ ಉಳಿದ ಹಣ ಹಾಕಿಕೊಂಡು ಇವಿ ಬಸ್​ಗಳ ಖರೀದಿ ಮಾಡಬಹುದು. ಆದರೆ ಸಬ್ಸಿಡಿ ಇಲ್ಲದ ಕಾರಣಕ್ಕೆ ನಾವು ನೇರವಾಗಿ ಇವಿ ಬಸ್​ಗಳ ಖರೀದಿ ಮಾಡಿಕೊಳ್ಳದೆ ಖಾಸಗಿಯವರ ಜೊತೆ ಒಪ್ಪಂದ ಮಾಡಿಕೊಂಡು ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ : ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಂತೆಯೇ ಮಣಿಪುರಕ್ಕೂ ಹೋಗಬೇಕಿತ್ತು: ಸಚಿವ ಮಧು ಬಂಗಾರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.