ಮಹದೇವಪುರ (ಬೆಂಗಳೂರು): ಖಾತೆ ಮಾಡಿಕೊಡಲು 13.50 ರೂಪಾಯಿ ಲಕ್ಷಕ್ಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಬೇಡಿಕೆ ಇಟ್ಟ ಆರೋಪ ಪ್ರಕರಣ ಮಂಡೂರಿನಲ್ಲಿ ನಡೆದಿದೆ. ದಾಳಿ ವೇಳೆ ಮಾಹಿತಿ ಸೋರಿಕೆಯಾಗಿದ್ದರಿಂದ ಪಿಡಿಒ ವೆಂಕಟರಂಗನ್ ತಪ್ಪಿಸಿಕೊಂಡಿದ್ದಾರೆ. ಎಸಿಬಿ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡಿ ಎಫ್ಆರ್ಐ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮಂಡೂರು ನಿವಾಸಿ ವಾಸುದೇವ್ ಅವರು ತಮ್ಮ ಮಗಳಿಗೆ 2019 ರಲ್ಲಿ ಪಿತ್ರಾರ್ಜಿತವಾಗಿ ಬಂದ 3,300 ಅಡಿ ವಿಸ್ತೀರ್ಣದ ಜಾಗವನ್ನು ದಾನ ನೀಡಿದ್ದರು. ತಂದೆ ಹೆಸರಿನಿಂದ ಮಗಳ ಹೆಸರಿಗೆ ಖಾತೆ ಬದಲಾವಣೆ ಮಾಡಲು ಗ್ರಾಮ ಪಂಚಾಯತ್ಗೆ ಹೋದ ಸಂದರ್ಭದಲ್ಲಿ ದೊಡ್ಡ ಮೊತ್ತದ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದರಿಂದ ಮನನೊಂದ ವಾಸುದೇವ ಎಸಿಬಿಗೆ ದಾಖಲೆಗಳ ಸಮೇತ ದೂರು ನೀಡಿದ್ದರು. ಆದರೆ ಮಾಹಿತಿ ಸೋರಿಕೆಯಾದ ಹಿನ್ನೆಲೆ ಪಿಡಿಒ ಹಣ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ವಾಸುದೇವ್ ಬಳಿ ಮೊಬೈಲ್ನಲ್ಲಿ ಮಾತನಾಡಿರುವ ದಾಖಲೆಗಳನ್ನ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆಡಿಯೋವನ್ನು ಎಫ್ಎಸ್ಎಲ್ಗೆ ಕಳುಹಿಸಲು ನಿರ್ಧರಿಸಲಾಗಿದೆ. ಈ ಹಿಂದೆಯೂ ಪಿಡಿಒ ಇದೇ ರೀತಿ ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಹಾಕಿಕೊಂಡು ಅಮಾನತು ಆಗಿದ್ದರು ಎನ್ನಲಾಗುತ್ತಿದೆ.
ಅರ್ಜಿದಾರ ವಾಸುದೇವ್ ಮಾತನಾಡಿ, ನನ್ನ ಹೆಸರಿನಿಂದ ನನ್ನ ಮಗಳ ಹೆಸರಿಗೆ ಖಾತೆಗೆ ಮಾಡಿಸಲು ಅರ್ಜಿ ನೀಡಿದ್ದೆ. ಆದ್ರೆ ಪಿಡಿಒ ವೆಂಕಟ ರಂಗನ್ ₹13.50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಆರ್ಟಿಐ ಕಾರ್ಯಕರ್ತರ ಮೂಲಕ ಎಸಿಬಿಗೆ ದೂರು ನೀಡಿದ್ದು, ಮಾಹಿತಿ ಸೋರಿಕೆ ಆದ ಕಾರಣದಿಂದ ಆರೋಪಿ ತಪ್ಪಿಸಿಕೊಂಡಿದ್ದಾರೆಂದು ದೂರಿದರು. ಪಿಡಿಒ ವೆಂಕಟರಂಗನ್ ಆಸೀಪ್ ಎನ್ನುವ ಖಾಸಗಿ ಸಹಾಯಕ ಮೀಡಿಯೇಟರ್ಗೆ ಕೆಲಸಮಾಡುವ ಮೂಲಕ ಮಾತನಾಡಿಸಿ ಹದಿಮೂರುವರೆ ಲಕ್ಷಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದರು.
ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ: ದಾಳೆ ನಡೆಸಿ, ದಾಖಲೆ ಪರಿಶೀಲನೆ ನಡೆಸಲಾಗಿದೆ. ಎಫ್ಎಸ್ಐಎಲ್ ವರದಿ ಬಂದ ನಂತರ ಮುಂದಿನ ದಿನಗಳಲ್ಲಿ ಬಂಧಿಸುವುದಾಗಿ ಎಸಿಬಿ ಗ್ರಾಮಾಂತರ ಡಿವೈಎಸ್ಪಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಅಂಗನವಾಡಿ ನೇಮಕಾತಿ ಆದೇಶ ತಡೆ: ಮುಧೋಳದ ಸಿಡಿಪಿಒ ಕಚೇರಿ ಮೇಲೆ ಎಸಿಬಿ ದಾಳಿ
ನಂತರ ಮಾತನಾಡಿದ ಆರ್ ಟಿ ಐ ಕಾರ್ಯಕರ್ತ ಬೆಳತ್ತೂರು ಪರಮೇಶ್ ಮಾತನಾಡಿ, ವೆಂಕಟರಂಗನ್ ಬಳಿ ಮಂಡೂರು ಪಂಚಾಯಿತಿ ಪಿಡಿಓ 15 ಲಕ್ಷ ಬೇಡಿಕೆ ಇಟ್ಟಿದ್ದರು. ಕೊನೆಗೆ 13.50 ಲಕ್ಷಕ್ಕೆ ಫೈನಲ್ ಆಗಿತ್ತು. ಆಡಿಯೋ ರೆಕಾರ್ಡ್ ಇದ್ದು, ಎಫ್ಐಆರ್ ಮಾಡಿ ರೈಡ್ ಮಾಡುವ ಸಂದರ್ಭದಲ್ಲಿ ಮಾಹಿತಿ ಸೋರಿಕೆಯಾಗಿದ್ದು, ಶುಕ್ರವಾರ ಮಧ್ಯಾಹ್ನ ದಾಳಿ ಸಂದರ್ಭದಲ್ಲಿ ಪಿಡಿಓ ತಪ್ಪಿಸಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲರು ಜಗನ್ ಕುಮಾರ್ ಮಾತನಾಡಿ, ಆಡಿಯೋ ರೆಕಾರ್ಡಿಂಗ್ ಮಾಡಿ ಮತ್ತೆ ಸರಿಯಾದ ದಾಖಲೆಗಳನ್ನ ಎಸಿಬಿ ನೀಡಿ ಎಫ್ಐಆರ್ ಮಾಡಿಸಿ ದಾಳಿ ಮಾಡಲು ಹೋಗಬೇಕು ಎನ್ನುವ ಸಮಯದಲ್ಲಿ ಎಸಿಬಿ ಕಚೇರಿಯಿಂದ ಮಾಹಿತಿ ಸೋರಿಕೆ ಆಗಿದೆ. ಇದರಿಂದ ಭ್ರಷ್ಟ ಅಧಿಕಾರಿ ತಪ್ಪಿಸಿಕೊಳ್ಳುವಂತಾಗಿದೆ ಎಂದರು.