ETV Bharat / state

ಕಾರಿನ ಕಿಟಕಿ ಗಾಜು ಒಡೆದು ಚಿನ್ನಾಭರಣ ದರೋಡೆ: ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ

author img

By

Published : Mar 30, 2023, 10:11 AM IST

two-arrested-gold-ornaments-robbed-by-breaking-car-window
ಕಾರಿನ ಕಿಟಕಿ ಗಾಜು ಚಿನ್ನಾಭರಣ ದರೋಡೆ : ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ

ಕಾರಿನ ಕಿಟಕಿ ಗಾಜು ಒಡೆದು ಚಿನ್ನಾಭರಣ ದೋಚಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ.

ಆನೇಕಲ್ : ಇಲ್ಲಿನ ದೊಮ್ಮಸಂದ್ರದ ಮುತ್ತಾನಲ್ಲೂರು ಕ್ರಾಸ್​​ನ ಹೆಚ್​​ಡಿಎಫ್​​ಸಿ ಬ್ಯಾಂಕ್ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು ಚಿನ್ನಾಭರಣಗಳನ್ನು ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿದ್ದ ಸುಮಾರು 60 ಲಕ್ಷ ರೂ ಮೌಲ್ಯದ ವಜ್ರ ಮತ್ತು ಚಿನ್ನದ ಒಡವೆಗಳನ್ನು ದೋಚಿದ್ದ ಅಂತಾರಾಜ್ಯ ದರೋಡೆಕೋರರನ್ನು ಸರ್ಜಾಪುರ ಇನ್ಸ್ಪೆಕ್ಟರ್ ಎಸ್.ಎಸ್.ಮಂಜುನಾಥ್ ನೇತೃತ್ವದ ತಂಡ ಬಂಧಿಸಿದೆ. ಬಂಧಿತರನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಾವೇಟಿಪುರಂ ಓಟಿ ಕುಪ್ಪಂ ಗ್ರಾಮದ ಪಾಂಡುರಂಗ(44) ಮತ್ತು ಅಂಕಯ್ಯ(20) ಎಂದು ಗುರುತಿಸಲಾಗಿದೆ. ಚೆನ್ನೈ ಮೂಲದ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಸರ್ಜಾಪುರ ಗ್ರಾಮಪಂಚಾಯತಿ ಪಕ್ಕದಲ್ಲಿರುವ ಔಷಧಿ ಅಂಗಡಿ ಮಾಲೀಕ ಲಕ್ಷ್ಮಿನಾರಾಯಣ ಎಂಬುವವರು ಕಳೆದ ಫೆ. 23ರಂದು ಮಗಳ ಮದುವೆಗಾಗಿ ಅತ್ತಿಬೆಲೆಯ ಯೂನಿಯನ್ ಬ್ಯಾಂಕಿನ ಲಾಕರ್​​ನಲ್ಲಿ ಇಟ್ಟಿದ್ದ ಒಡವೆಯನ್ನು ಪಡೆದುಕೊಂಡಿದ್ದಾರೆ. ಅಲ್ಲಿಂದ ದಂಪತಿಯು ತಮ್ಮ ಕಾರನಲ್ಲಿ ದೊಮ್ಮಸಂದ್ರ ಕ್ರಾಸ್​ನಲ್ಲಿದ್ದ ಲೈಟ್​​ ಶಾಪ್​ವೊಂದಕ್ಕೆ ಬಂದಿದ್ದಾರೆ. ಅತ್ತಿಬೆಲೆಯಿಂದಲೇ ಲಕ್ಷ್ಮೀ ನಾರಾಯಣ ಎಂಬುವವರ ಕಾರನ್ನು ಹಿಂಬಾಲಿಸಿದ್ದರು. ಇವರೊಂದಿಗೆ ಇನ್ನಿಬ್ಬರು ಆರೋಪಿಗಳು ಇದ್ದರು.

ಈ ವೇಳೆ ದೊಮ್ಮಸಂದ್ರ ಕ್ರಾಸ್‌ನಲ್ಲಿ ಕಾರು ನಿಲ್ಲಿಸಿ ಲೈಟ್​ ಶಾಪ್​ಗೆ ತೆರಳಿದ್ದ ವೇಳೆ ಆರೋಪಿಗಳು ಕಾರಿನಲ್ಲಿದ್ದ ಆಭರಣಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ಆರೋಪಿಗಳು ಕಾರಿನ ಎಡಭಾಗದ ಕಿಟಕಿ ಗಾಜನ್ನು ಹೊಡೆದು ಒಡವೆಯ ಬ್ಯಾಗ್ ನ್ನು ಎಗರಿಸಿದ್ದರು. ಈ ವೇಳೆ ದಂಪತಿಗಳು ಕಾರಿನ ಬಳಿ ಬಂದಾಗ ಚಿನ್ನಾಭರಣ ಕಳವಾಗಿರುವುದು ಪತ್ತೆಯಾಗಿದೆ.ಕೂಡಲೇ ಲಕ್ಷ್ಮೀ ನಾರಾಯಣ ಅವರು ಇಲ್ಲಿನ ಸರ್ಜಾಪುರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಕಳ್ಳರು ಆಭರಣಗಳನ್ನು ಕಳವು ಮಾಡಿದ್ದ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಕಳವಾದ ಒಡವೆಗಳನ್ನು ಮಾಲಕರಿಗೆ ಹಿಂತಿರುಗಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಎಸ್ಪಿ ಪುರುಷೋತ್ತಮ್, ಕಾರಿನಲ್ಲಿದ್ದ ಚಿನ್ನಾಭರಣ ದರೋಡೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇನ್ನು, ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿ ಪಾಂಡುರಂಗ ವಿರುದ್ಧ ಹೊಸಕೋಟೆ, ಅಶೋಕ್ ನಗರ, ಸವದತ್ತಿ ಪೊಲೀಸ್ ಠಾಣೆಗಳಲ್ಲಿನ ಪ್ರಕರಣಗಳ ದಾಖಲಾಗಿದೆ. ಮತ್ತೋರ್ವ ಆರೋಪಿ ಅಂಕಯ್ಯ ವಿರುದ್ಧ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ, ಚಂದ್ರಾ ಲೇಔಟ್, ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಯಾರೇ ಆದರೂ ಚಿನ್ನಾಭರಣ, ಅಥವಾ ಹಣವನ್ನು ಈ ರೀತಿ ವಾಹನದಲ್ಲಿ ಇಟ್ಟುಹೋಗಬಾರದು. ಜಾಗರೂಕರಾಗಿರಬೇಕು ಎಂದು ಹೇಳಿದರು.

ಯಶಸ್ವಿ ಕಾರ್ಯಾಚರಣೆ ನಡೆಸಿದ ಸರ್ಜಾಪುರ ಇನ್ಸಪೆಕ್ಟರ್ ಎಸ್ ಎಸ್ ಮಂಜುನಾಥ್, ಎಸ್ಐ ದುಂಡಪ್ಪ ಬಾರ್ಕಿ, ಹೆಡ್​​ ಕಾನ್​​ಸ್ಟೇಬಲ್​​ ಪ್ರಭು, ಪೇದೆಗಳಾದ ಸಂತೋಷ್, ಬಸವ, ಭರತ್ ಅವರಿಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪ್ರಶಂಸಾ ಪತ್ರಗಳನ್ನು ವಿತರಿಸಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ : ಮಂಗಳೂರಿನಲ್ಲಿ ಏರ್​ ಕಂಡೀಷನರ್ ಫಿಟ್ ವೇಳೆ ದುರಂತ.. 9ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.