ETV Bharat / state

ಮನೆ ಮುಂದೆ ನೀರು ನಿಂತ ವಿಚಾರಕ್ಕೆ ಜಗಳ: ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಹಲ್ಲೆ

author img

By

Published : Jul 17, 2023, 6:03 PM IST

Updated : Jul 17, 2023, 6:19 PM IST

ಗ್ರಾಮ  ಪಂಚಾಯತ್  ಸದಸ್ಯ ಬಾಬು
ಗ್ರಾಮ  ಪಂಚಾಯತ್  ಸದಸ್ಯ ಬಾಬು

ಮನೆ ಮುಂದೆ ನೀರು ನಿಂತು ಗಲೀಜಾಗಿತ್ತು. ಇದೇ ವಿಚಾರಕ್ಕೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಶಾಸಕರೊಬ್ಬರ ಗನ್​ಮ್ಯಾನ್​ ನಡುವೆ ಜಗಳವಾಗಿರುವ ಘಟನೆ ಯಲಹಂಕದಲ್ಲಿ ನಡೆದಿದೆ.

ಯಲಹಂಕ: ಸ್ನಾನ ಮಾಡಿದ ನೀರು ಮನೆ ಮುಂದೆ ನಿಂತು ಗಲೀಜಾಗಿತ್ತು. ಇದೇ ವಿಚಾರಕ್ಕೆ ಗ್ರಾಮ ಪಂಚಾಯತ್ ಸದಸ್ಯ ಮತ್ತು ಶಾಸಕರೊಬ್ಬರ ಗನ್ ಮ್ಯಾನ್ ನಡುವೆ ಜಗಳವಾಗಿ, ಗನ್ ಮ್ಯಾನ್ ಪಂಚಾಯತ್ ಸದಸ್ಯನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಗೆ ಸಂಬಂಧಿಸಿದಂತೆ ಪಂಚಾಯತ್ ಸದಸ್ಯರು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಯಲಹಂಕ ತಾಲೂಕಿನ ಸಿಂಗನಾಯನಹಳ್ಳಿಯಲ್ಲಿ ಇಂದು ಬೆಳಗ್ಗೆ 11:30 ರ ಸಮಯದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಹಲ್ಲೆಗೊಳಗಾದ ಗ್ರಾಮ ಪಂಚಾಯತ್ ಸದಸ್ಯ ಬಾಬು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನೆ ವಿವರ: ಶಾಸಕರೊಬ್ಬರ ಗನ್ ಮ್ಯಾನ್ ಎಂದು ಹೇಳಲಾಗಿರುವ ಶ್ರೀನಿವಾಸ್ ಅವರು ಸಿಂಗನಾಯಕನಹಳ್ಳಿಯಲ್ಲಿ ಮನೆಯನ್ನ ಕಟ್ಟುತ್ತಿದ್ದರು. ಇವರ ಮನೆಯ ಪಕ್ಕದಲ್ಲಿ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಬಾಬು ಅವರ ಮನೆ ಇದೆ. ಕಟ್ಟಡ ನಿರ್ಮಾಣದ ವೇಳೆ ಮತ್ತು ಸ್ನಾನ ಮಾಡಿದ ನೀರು ಬಾಬು ಅವರ ಮನೆ ಮುಂದೆ ನಿಂತು ಗಲೀಜಾಗಿತ್ತು. ಹೀಗಾಗಿ, ಬಾಬು ಮನೆಯವರು ಗಲೀಜು ಮಾಡದಂತೆ ಸಾಕಷ್ಟು ಬಾರಿ ಶ್ರೀನಿವಾಸ್​​​​ಗೆ ಹೇಳಿದ್ದರಂತೆ.

ಇಂದು ಬೆಳಗ್ಗೆ ಇದೇ ವಿಚಾರಕ್ಕೆ ಶ್ರೀನಿವಾಸ್ ಮತ್ತು ಬಾಬು ಕುಟುಂಬದ ನಡುವೆ ಜಗಳವಾಗಿದೆ. ಜಗಳದಲ್ಲಿ ಶ್ರೀನಿವಾಸ್ ಕಬ್ಬಿಣದ ತುಂಡಿನಿಂದ ಬಾಬು ಅವರ ತಲೆಗೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಬಾಬು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

ಜಮೀನು ವಿವಾದ ಹಿನ್ನೆಲೆ ಗೂಂಡಾಗಳಿಂದ ಹಲ್ಲೆ: ಇನ್ನೊಂದೆಡೆ ಬೆಳಗಾವಿ ತಾಲೂಕಿನ ಬೆಕ್ಕಿನಕೇರಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ (ಜುಲೈ 3-2023) ಸೋಮವಾರ ರೈತರು ಮತ್ತು ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್​ ಧರಣಿ ನಡೆಸಿದ್ದರು.

ಗೂಂಡಾಗಳಿಂದ ತಮ್ಮ ತಲೆ, ಭುಜ, ಬೆನ್ನು ಮತ್ತು ಹೊಟ್ಟೆ ಮೇಲೆ ಆಗಿರುವ ಗಾಯಗಳನ್ನು ತೋರಿಸಿ, ಕಣ್ಣೀರು ಸುರಿಸಿದ್ದರು. ತಮ್ಮ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ನಮಗಾದ ಅನ್ಯಾಯಕ್ಕೆ ನ್ಯಾಯ ಸಿಗಲೇಬೇಕೆಂದು ಒತ್ತಾಯಿಸಿ ಡಿಸಿ ನಿತೇಶ್ ಪಾಟೀಲ ಅವರ ಕಾಲಿಗೆ ಬಿದ್ದು ಅಂಗಲಾಚಿದ್ದರು.

ಬೆಕ್ಕಿನಕೇರಿ ಗ್ರಾಮದಲ್ಲಿನ ಸರ್ವೇ ಸಂಖ್ಯೆ 85/1, 2ರಲ್ಲಿನ ಜಮೀನನ್ನು ಕೃಷ್ಣಾ ಸಾವಂತ ಕುಟುಂಬದವರು 80 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೆ, ಜಮೀನಿನ ಹಕ್ಕು ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ, ಎರಡು ವರ್ಷಗಳ ಹಿಂದೆ ದಾಖಲೆಗಳಲ್ಲಿದ್ದ ಕೃಷ್ಣಾ ಸಾವಂತ ಮತ್ತು ಅವರ ಪುತ್ರರಾದ ನಾಗೋ, ಮಾರುತಿ ಅವರ ಹೆಸರುಗಳನ್ನು ಅಳಿಸಲಾಗಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಬೆಳಗಾವಿ: ಜಮೀನು ವಿವಾದ ಹಿನ್ನೆಲೆ ಗೂಂಡಾಗಳಿಂದ ಹಲ್ಲೆ.. ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಅಂಗಲಾಚಿದ ಜನರು

Last Updated :Jul 17, 2023, 6:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.