ETV Bharat / state

ರಾಷ್ಟ್ರಪಕ್ಷಿ ನವಿಲು ಬೇಟೆ.. ಇಬ್ಬರ ಬಂಧನ

author img

By ETV Bharat Karnataka Team

Published : Sep 20, 2023, 6:46 PM IST

ನವಿಲು ಬೇಟೆಯಾಡಿದವರ ಬಂಧನ
ನವಿಲು ಬೇಟೆಯಾಡಿದವರ ಬಂಧನ

ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಕೆರೆಯಲ್ಲಿ ನವಿಲು ಬೇಟೆಯಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ದೊಡ್ಡಬಳ್ಳಾಪುರ : ಅರಳುಮಲ್ಲಿಗೆ ಕೆರೆಯಲ್ಲಿ ನವಿಲು ಬೇಟೆಯಾಡಿದ ಇಬ್ಬರನ್ನ ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಬೇಟೆಯಾಡಿದ ಮೂರು ನವಿಲುಗಳು, ನಾಡ ಬಂದೂಕು ಮತ್ತು ಟಿವಿಎಸ್ ಮೊಪೆಡ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಗ್ರಾಮದಲ್ಲಿ ನವಿಲು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಇನ್​ಸ್ಪೆಕ್ಟರ್ ಮುನಿಕೃಷ್ಣ ನೇತೃತ್ವದಲ್ಲಿ ಬಂಧಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಬಂಧಿತರನ್ನು ಪುಟ್ಟಪರ್ತಿ ಟೌನ್ ನಿವಾಸಿಗಳಾದ ಶ್ರೀನಿವಾಸ, ಬಾಲಾಜಿ ಎಂದು ಗುರುತಿಸಲಾಗಿದೆ. ಆರೋಪಿ ಶ್ರೀನಿವಾಸ ಎಂಬಾತ ಜಾಲಿಗೆ ಶಿವಣ್ಣ ಎಂಬುವರ ತೋಟದಲ್ಲಿ ಕೆಲಸ‌ ಮಾಡುತ್ತಿದ್ದ. ಮತ್ತೊಬ್ಬ ಆರೋಪಿ ಬಾಲಾಜಿ, ಅರಳುಮಲ್ಲಿಗೆಯ ವೆಂಕಟೇಶ್ ಎಂಬುವರ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಕಳೆದ ರಾತ್ರಿ ಗ್ರಾಮಾಂತರ ಪೊಲೀಸರು ಗಸ್ತು ತಿರುಗುತ್ತಿದ್ದಾಗ ನವಿಲು ಬೇಟೆಯಾಡುತ್ತಿದ್ದವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನ ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ಸಿಮೆಂಟ್ ರೆಡಿ ಮಿಕ್ಸ್ ಘಟಕದಲ್ಲಿ ಬೆಳೆದಿದ್ದ ಗಾಂಜಾ ಗಿಡ ಪತ್ತೆ: ಸಿಮೆಂಟ್ ರೆಡಿ ಮಿಕ್ಸ್ ಘಟಕದಲ್ಲಿ 10 ಅಡಿ ಎತ್ತರದ ಗಾಂಜಾ ಗಿಡವನ್ನ ಅಕ್ರಮವಾಗಿ ಬೆಳೆಯಲಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು 2.5 ಲಕ್ಷ ಮೌಲ್ಯದ ಗಾಂಜಾ ಗಿಡವನ್ನ ವಶಕ್ಕೆ ಪಡೆದಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯದಲ್ಲಿರುವ ಸಿಮೆಂಟ್ ರೆಡಿ ಮಿಕ್ಸ್ ಘಟಕದಲ್ಲಿ ಅಕ್ರಮವಾಗಿ ಗಾಂಜಾ ಗಿಡವನ್ನ ಬೆಳೆಯಲಾಗಿತ್ತು. ಹೂವಿನ ಗಿಡಗಳ ಮಧ್ಯೆ 10 ಅಡಿ ಎತ್ತರದಲ್ಲಿ ಗಾಂಜಾ ಗಿಡ ಬೆಳೆದಿತ್ತು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಗ್ರಾಮಾಂತರ ಠಾಣೆ ಇನ್​ಸ್ಪೆಕ್ಟರ್ ಮುನಿಕೃಷ್ಣ ಹಾಗೂ ಸಿಬ್ಬಂದಿ ಅಂದಾಜು 2.5 ಲಕ್ಷ ಮೌಲ್ಯದ ಗಾಂಜಾ ಗಿಡವನ್ನು ವಶಪಡಿಸಿಕೊಂಡಿದ್ದಾರೆ.

ಸಿಮೆಂಟ್ ರೆಡಿ ಮಿಕ್ಸ್ ಘಟಕದಲ್ಲಿ ಬೆಳೆದಿದ್ದ ಗಾಂಜಾ ಗಿಡ ಪತ್ತೆ
ಸಿಮೆಂಟ್ ರೆಡಿ ಮಿಕ್ಸ್ ಘಟಕದಲ್ಲಿ ಬೆಳೆದಿದ್ದ ಗಾಂಜಾ ಗಿಡ ಪತ್ತೆ

ಸಿಮೆಂಟ್ ರೆಡಿಮಿಕ್ಸ್ ಪ್ಲಾಂಟ್ ಮಾಲೀಕರಾದ ಮಾದೇವ, ಮಧು (40), ಚಾಲಕ ಬಿಸ್ವುಲ್ಲಾ ಶೇಖ್ (31) ವಿರುದ್ಧ ಪ್ರಕರಣ ದಾಖಲಾಗಿದೆ. ಚಾಲಕ ಬಿಸ್ವುಲ್ಲಾ ಶೇಖ್ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಡುಪ್ರಾಣಿಗಳ ಬೇಟೆ; ಕಲಬುರಗಿಯಲ್ಲಿ ಮೂವರ ಬಂಧನ (ಪ್ರತ್ಯೇಕ ಪ್ರಕರಣ): ಚಿತ್ತಾಪುರ ಗುಡ್ಡದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಚರ್ಮ, ದಂತ, ಕೂದಲು, ಚಿಪ್ಪು ಮತ್ತು ಮುಳ್ಳುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಚಿತ್ತಾಪುರ ವಲಯ ಅರಣ್ಯ ಇಲಾಖೆ ಸಿಬ್ಬಂದಿ (ಸೆಪ್ಟೆಂಬರ್ 14-2023) ಬಂಧಿಸಿದ್ದರು. ಚಿತ್ತಾಪುರ ತಾಲೂಕಿನ ರಾಂಪುರಹಳ್ಳಿ ಗ್ರಾಮದ ನಿವಾಸಿ ಹಣಮಂತ ಹೆಳವರ, ಭೀಮರಾಯ ಹೆಳವರ ಮತ್ತು ಮಲ್ಲಪ್ಪ ಹೆಳವರ ಬಂಧಿತರು. ಇನ್ನೋರ್ವ ಆರೋಪಿ ಕುಂಬಾರಹಳ್ಳಿ ಗ್ರಾಮದ ಸಾಯಬಣ್ಣ ಹೆಳವರ ತಲೆಮರೆಸಿಕೊಂಡಿದ್ದು, ಅರಣ್ಯಾಧಿಕಾರಿಗಳು ಬಲೆ ಬೀಸಿದ್ದರು.

ಚಿತ್ತಾಪುರ ತಾಲೂಕಿನ ಗುಡ್ಡಗಳಲ್ಲಿ ಕಾಡು ಪ್ರಾಣಿಗಳ ಬೇಟೆಯಾಡಿ ಅಪಾರ ಪ್ರಮಾಣದ ಪ್ರಾಣಿಗಳ ಅಂಗಾಂಗಗಳ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸನ್ನತಿ ಬಳಿಯ ರಾಂಪೂರ ಹಳ್ಳಿಯಲ್ಲಿ ಅರಣ್ಯ ಇಲಾಖೆ ವನ್ಯಜೀವಿಧಾಮದ ಸಂರಕ್ಷಣಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಬೇಟೆಗಾರರ ಮನೆಯಿಂದ ಅಪಾರ ಪ್ರಮಾಣದಲ್ಲಿ ವನ್ಯಪ್ರಾಣಿಗಳ ಅಂಗಾಂಗಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು.

ಇದನ್ನೂ ಓದಿ: ಕಾಡುಪ್ರಾಣಿಗಳ ಬೇಟೆ: ಕಲಬುರಿಗಿಯಲ್ಲಿ ಮೂವರ ಬಂಧನ; ಲಕ್ಷಾಂತರ ಮೌಲ್ಯದ ಪ್ರಾಣಿಗಳ ಅಂಗಾಂಗ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.