ETV Bharat / state

ಒಂದೆಡೆ ಚಿರತೆ ರಸ್ತೆಯಲ್ಲಿ ಪ್ರತ್ಯಕ್ಷ, ಮತ್ತೊಂದೆಡೆ ಕೊಟ್ಟಿಗೆಗೆ ನುಗ್ಗಿ ಕುರಿ ಮೇಲೆ ದಾಳಿ

author img

By

Published : Jan 10, 2023, 11:22 AM IST

a leopard was spotted on the road, in another place attacked on sheep
ಒಂದೆಡೆ ಚಿರತೆ ರಸ್ತೆಯಲ್ಲಿ ಪ್ರತ್ಯಕ್ಷ, ಮತ್ತೊಂದೆಡೆ ಕೊಟ್ಟಿಗೆಗೆ ನುಗ್ಗಿ ಕುರಿ ಮೇಲೆ ದಾಳಿ

ನೆಲಮಂಗಲದ ಗ್ರಾಮಸ್ಥರ ಆಗ್ರಹಕ್ಕೆ ಮಣಿದು ಅರಣ್ಯ ಇಲಾಖೆ ಸಿಬ್ಬಂದಿ ಕೆಲವು ದಿನಗಳ ಹಿಂದೆಯೇ ಚಿರತೆ ಸೆರೆಗೆ ಬೋನು​ ಇರಿಸಿದ್ದರು. ಆದರೆ ಚಿರತೆ ಬೋನಿ​ಗೆ ಬೀಳದೆ ರಸ್ತೆಗಳಲ್ಲಿ ಓಡಾಡುತ್ತಿದೆ.

ನೆಲಮಂಗಲ/ತುಮಕೂರು: ತಾಲೂಕಿನಲ್ಲಿ ಚಿರತೆ ಪದೇ ಪದೇ ಪ್ರತ್ಯಕ್ಷವಾಗುತ್ತಿದೆ. ಮನೆಗಳ ಮುಂದೆ ಕಟ್ಟಿದ ಸಾಕು ಪ್ರಾಣಿಗಳನ್ನು ಹೊತ್ತೊಯ್ಯುತ್ತಿದೆ. ಕಳೆದ ಮೂರ್ನಾಲ್ಕು ದಿನದ ಹಿಂದೆಯಷ್ಟೇ ಚಿರತೆಯ ಚಲನವಲನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈಗ ಮತ್ತೆ ಕಾರಿನಲ್ಲಿ ಚಲಿಸುತ್ತಿದ್ದಾಗ ಚಿರತೆಯ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ನಗರಕ್ಕೆ ಲಗ್ಗೆ ಇಡುವ ಆತಂಕ ಎದುರಾಗಿದೆ.

ನೆಲಮಂಗಲ ತಾಲೂಕಿನ ಭೂಸಂದ್ರ, ಕಾಡುಕರೇನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷಗೊಂಡಿತ್ತು. ಅಲ್ಲದೇ ಮನೆ ಮುಂದೆ ಕಟ್ಟಿದ್ದ ನಾಯಿಯೊಂದಕ್ಕೆ ಹೊಂಚು ಹಾಕಿ ಕುಳಿತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದಾದ ಬಳಿಕ ಚಿರತೆ ಸೆರೆಗೆ ಹಲವು ಗ್ರಾಮಗಳ ಗ್ರಾಮಸ್ಥರ ಆಗ್ರಹ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನ್‌ಗಳನ್ನು ಇರಿಸಿದ್ದರು. ಆದರೆ ಈವರೆಗೂ ಒಂದೇ ಒಂದು ಚಿರತೆ ಕೂಡ ಬೋನ್‌ಗೆ ಬಿದ್ದಿಲ್ಲ. ಈಗ ನೆಲಮಂಗಲ ನಗರದ ಕೆಂಪಲಿಂಗಹಳ್ಳಿ ಸಮೀಪದ ದೇವಾಂಗ ಮಠದ ಬಳಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಕಾರಿನಲ್ಲಿ ಚಲಿಸುತ್ತಿದ್ದಾಗ ಸ್ಥಳೀಯರು ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.

ಚಿಕನ್ ಶಾಪ್‌ಗಳ ತ್ಯಾಜವನ್ನು ನೆಲಮಂಗಲ ಹೊರವಲಯದಲ್ಲಿ ಎಲ್ಲೆಂದರಲ್ಲಿ ಎಸೆಯುತಿದ್ದಾರೆ. ಹೀಗಾಗಿ ಇದನ್ನು ತಿನ್ನಲು ನಾಯಿಗಳು ಬರುತ್ತಿವೆ. ನಾಯಿಗಳನ್ನು ಅರಸಿ ಬೇಟೆಯಾಡಲು ಗ್ರಾಮೀಣ ಪ್ರದೇಶಕ್ಕೆ ಹೋಗುತ್ತಿದ್ದ ಚಿರತೆಗಳು ಈಗ ನಗರದತ್ತ ಮುಖ ಮಾಡಿವೆ. ಹೀಗಾಗಿ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಸ್ಥಳೀಯರಾದ ರುದ್ರೇಶ್ ಮನವಿ ಮಾಡಿದರು.

ಇದನ್ನೂ ಓದಿ: ಅಮಾಯಕರ ಮೇಲೆ ಚಿರತೆ ದಾಳಿ.. ಎಂಟು ಜನರಿಗೆ ಗಾಯ, ಕಾರಿನ ಮೇಲೆ ಎರಗಿದ ಬಿಗ್​ ಕ್ಯಾಟ್​

ಹಟ್ಟಿಗೆ ನುಗ್ಗಿ ಚಿರತೆಯ ಹೊತ್ತೊಯ್ದ ಚಿರತೆ: ತುಮಕೂರಿನ ಗುಬ್ಬಿ ತಾಲ್ಲೂಕಿನ ಮಡೇನಹಳ್ಳಿಯಲ್ಲಿ ಕುರಿಗಳನ್ನು ಕಟ್ಟಿದ್ದ ಕೊಟ್ಟಿಗೆಗೆ ನುಗ್ಗಿದ ಚಿರತೆ ಎರಡು ಕುರಿಗಳನ್ನು ಕೊಂದು ಹಾಕಿರುವ ಘಟನೆ ನಡೆದಿದೆ. ಎರಡು ಕುರಿಗಳು ಚಿಕ್ಕ ತಾಯಮ್ಮ ಎಂಬುವರಿಗೆ ಸೇರಿದ್ದಾಗಿದ್ದು, ನಿನ್ನೆ ರಾತ್ರಿ ಹೊತ್ತು ಚಿರತೆ ಹತ್ತು ಕುರಿಗಳ ಮೇಲೆ ದಾಳಿ ನಡೆಸಿದೆ. ಈ ಪೈಕಿ ಎರಡು ಕುರಿಗಳ ಬಲಿ ಪಡೆದು ಒಂದು ಕುರಿಯನ್ನು ತೆಗೆದುಕೊಂಡು ಪರಾರಿಯಾಗಿದೆ. ಕುರಿ ಸಾಕುವ ಕಾಯಕದಲ್ಲಿರುವ ಈ ಬಡ ಕುಟುಂಬ ಜೀವನೋಪಾಯಕ್ಕಿದ್ದ ಕುರಿಗಳನ್ನು ಕಳೆದುಕೊಂಡು ಆತಂಕದಲ್ಲಿದೆ.

ಅನೇಕ ದಿನಗಳಿಂದ ಪದೇ ಪದೇ ಗ್ರಾಮದ ಸುತ್ತ ಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ಚಿರತೆಗಳ ಉಪಟಳ ತಪ್ಪಿಸಬೇಕು ಎಂದು ಮಡೇನಹಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಕುರಿಗಳನ್ನು ಕಳೆದುಕೊಂಡಿರುವ ಕುರಿಗಾಹಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಗ್ರಾಮದ ಸುತ್ತಮುತ್ತ ಅನೇಕ ದಿನಗಳಿಂದ ಕಾಣಿಸಿಕೊಳ್ಳುತ್ತಿರುವ ಚಿರತೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದು, ಸದ್ಯದಲ್ಲಿಯೇ ಬೋನ್​ ಇರಿಸಿ ಚಿರತೆಯನ್ನು ಸೆರೆಹಿಡಿಯಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಟ್ರಕ್​ ಮತ್ತು ಆಟೋ ನಡುವೆ ಭೀಕರ ಅಪಘಾತ: ಎಂಟು ಜನರ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.