ಬ್ಯಾಂಕ್ ಲೂಟಿ ಪ್ರಕರಣ: ಅಡವಿಟ್ಟ ಚಿನ್ನಾಭರಣ ಹಿಂತಿರುಗಿಸುವಂತೆ ಬ್ಯಾಂಕ್​​ಗೆ ಲಗ್ಗೆಯಿಟ್ಟ ಗ್ರಾಹಕರು

author img

By

Published : Jan 27, 2023, 3:38 PM IST

Karnataka Gramin Bank robbery case

ಕರ್ನಾಟಕ ಗ್ರಾಮೀಣ ಬ್ಯಾಂಕ್ ಲೂಟಿ ಪ್ರಕರಣ - ಅಡವಿಟ್ಟ ಚಿನ್ನಾಭರಣ ಹಿಂತಿರುಗಿಸುವಂತೆ ಬ್ಯಾಂಕ್​​ಗೆ ಲಗ್ಗೆಯಿಟ್ಟ ಗ್ರಾಹಕರು - ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಘಟನೆ

ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್​​ಗೆ ನುಗ್ಗಿದ ಕಳ್ಳರು ಬ್ಯಾಂಕಿನಲ್ಲಿ ಗ್ರಾಹಕರು ಅಡವಿಟ್ಟ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಕಳ್ಳತನ ನಡೆದು ಎರಡು ತಿಂಗಳು ಕಳೆದಿವೆ. ಆದರೆ, ಬ್ಯಾಂಕ್ ಸಿಬ್ಬಂದಿ ಯಾವುದೇ ಉತ್ತರ ನೀಡದ ಕಾರಣ ಗ್ರಾಹಕರು ಇಂದು ಬ್ಯಾಂಕ್​​ಗೆ ಇಂದು ಲಗ್ಗೆಯಿಟ್ಟಿದ್ದು, ಅಡವಿಟ್ಟಿರುವ ಒಡವೆಗಳನ್ನು ಹಿಂತಿರುಗಿಸುವಂತೆ ಒತ್ತಾಯಿಸಿದರು.

ಮೂವರು ಆರೋಪಿಗಳ ಬಂಧನ: ನ. 25 ರಂದು ಹೊಸಹಳ್ಳಿ ಗ್ರಾಮದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್​​ನ ಬಾಗಿಲನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಿ ಒಳ ನುಗ್ಗಿದ್ದ ಕಳ್ಳರು 3.50 ಕೋಟಿ ಮೌಲ್ಯದ 12 ಕೆ.ಜಿ ಚಿನ್ನಾಭರಣ ಹಾಗೂ 14 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಈ ಘಟನೆ ಕುರಿತಂತೆ ಹೊಸಹಳ್ಳಿ ಸುತ್ತಮುತ್ತಲಿನ ಪ್ರದೇಶದ ಕೆಲ ಸಿಸಿ ಟಿವಿಗಳಲ್ಲಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಬೆನ್ನುಹತ್ತಿದ್ದ ಪೊಲೀಸರ ತಂಡ ಉತ್ತರ ಪ್ರದೇಶದ ಇಬ್ಬರು ಟ್ರಕ್ ಚಾಲಕರು ಹಾಗೂ ವಿಜಯಪುರದ ಓರ್ವ ಸೇರಿ ಮೂವರನ್ನು ಬಂಧಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಗ್ರಾಹಕರು ಅಡವಿಟ್ಟಿರುವ ಒಡವೆಗಳನ್ನು ಹಿಂತಿರುಗಿಸುವಂತೆ ಬ್ಯಾಂಕಿಗೆ ಲಗ್ಗೆ ಇಟ್ಟಿರುವುದು ಬ್ಯಾಂಕ್ ಸಿಬ್ಬಂದಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಈ ಕುರಿತು ಮಾತನಾಡಿದ ಗ್ರಾಹಕರು, ಬ್ಯಾಂಕಿನಲ್ಲಿ ಕಳ್ಳತನ ನಡೆದು ಎರಡು ತಿಂಗಳು ಕಳೆದಿವೆ. ಆದರೆ, ಒಡವೆಗಳನ್ನು ಅಡವಿಟ್ಟಿದ್ದ ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿ ಯಾವುದೇ ಉತ್ತರ ನೀಡುತ್ತಿಲ್ಲ. ನಮಗೆ ಹಣ ಹಿಂತಿರುಗಿಸುವರೋ ಇಲ್ಲವೆ ಒಡವೆಗಳನ್ನು ಹಿಂತಿರುಗಿಸುವರೋ ತಿಳಿಯದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಹಕರ ಒತ್ತಾಯಕ್ಕೆ ಮಣಿದ ಬ್ಯಾಂಕ್ ಸಿಬ್ಬಂದಿ ಮುಂದಿನ ಶುಕ್ರವಾರದ ಒಳಗಾಗಿ, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು.

ಪ್ರತಿಭಟನೆ ಎಚ್ಚರಿಕೆ: ಇದಕ್ಕೆ ಉತ್ತರಿಸಿದ ಗ್ರಾಹಕರು, ಮುಂದಿನ ಶುಕ್ರವಾರವಲ್ಲದಿದ್ದಲ್ಲಿ ಸೋಮವಾರದವರೆಗೆ ಸಮಯ ತೆಗೆದುಕೊಳ್ಳಿ. ಆದರೆ, ನಮಗೆ ಸಮರ್ಪಕ ಮಾಹಿತಿ ನೀಡಿ. ಇಲ್ಲವಾದಲ್ಲಿ ವಹಿವಾಟು ಬಂದ್ ಮಾಡಿ, ಬ್ಯಾಂಕ್ ಆವರಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ನೌಕರನಿಂದಲೇ ಬ್ಯಾಂಕ್ ಲೂಟಿ: ಬ್ಯಾಂಕ್​ ನೌಕರನೊಬ್ಬ ತಾನು ಕೆಲಸ ಮಾಡುವ ಬ್ಯಾಂಕಿನಲ್ಲೇ ಲೂಟಿ ಮಾಡಿದ ಘಟನೆ ಅಹಮದಾಬಾದ್​​ನಲ್ಲಿ ಇತ್ತೀಚೆಗೆ ನಡೆದಿತ್ತು. ಬ್ಯಾಂಕ್ ಗುತ್ತಿಗೆ ಆಧಾರದ ಸಿಬ್ಬಂದಿಯೊಬ್ಬ​ ತನ್ನ ಪತ್ನಿಯ ಜೊತೆಗೂಡಿ ಬ್ಯಾಂಕಿನ ಲಾಕರ್ ಒಡೆದು ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದ. ಅನುಮಾನದ ಮೇಲೆ ಪೊಲೀಸರು ಯುವಕನೊಬ್ಬನನ್ನು ವಿಚಾರಣೆಗೆ ಒಳಪಡಿಸಿದಾಗ ವಿಷಯ ಬೆಳಕಿಗೆ ಬಂದಿತ್ತು.

ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಯುವಕನೊಬ್ಬನನ್ನು ತಡೆದು ವಿಚಾರಿಸಿದಾಗ ಆತನ ಬಳಿ ಚಿನ್ನಾಭರಣ ತುಂಬಿದ್ದ ಬ್ಯಾಗ್ ಸಿಕ್ಕಿದೆ. ಇದೇ ವೇಳೆ, ಬ್ಯಾಂಕ್ ಲಾಕರ್​ನಲ್ಲಿ ಕಳ್ಳತನ ನಡೆದಿರುವುದು ಬಯಲಾಗಿದೆ. ಎಲ್ಲಿಸ್‌ಬ್ರಿಡ್ಜ್ ಪೊಲೀಸ್ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ದಂಪತಿ ಬ್ಯಾಂಕ್ ಲಾಕರ್‌ನಿಂದ 47.88 ಲಕ್ಷ ಮೌಲ್ಯದ ಮೌಲ್ಯದ ವಸ್ತುಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಕಳ್ಳತನಕ್ಕೆ ಯೋಜಿಸಿದ್ದ ಈ ದಂಪತಿ ಪಕ್ಕಾ ಪ್ಲಾನ್ ಮಾಡಿಯೇ ಕಳ್ಳತನದ ಕೃತ್ಯ ಎಸಗಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ಪತ್ನಿ ಜೊತೆ ಸೇರಿ ನೌಕರನಿಂದಲೇ ಬ್ಯಾಂಕ್ ಲೂಟಿ.. ಲಾಕರ್​ನಲ್ಲಿದ್ದ 48 ಲಕ್ಷ ಮೌಲ್ಯದ ನಗದು, ವಸ್ತು ಕಳ್ಳತನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.