ETV Bharat / state

ಪರಮೇಶ್ವರ್ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು: ಕ್ಷಮೆ ಕೇಳುವಂತೆ ಈಶ್ವರಪ್ಪ ಒತ್ತಾಯ

author img

By ETV Bharat Karnataka Team

Published : Sep 6, 2023, 5:58 PM IST

ಹಿಂದೂ ಧರ್ಮದ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ನೀಡಿರುವ​ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ತಕ್ಷಣ ಅವರು ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ್ದಾರೆ. ​

KS Eshwarappa React On Home Minister statement
KS Eshwarappa React On Home Minister statement

ಕೆ ಎಸ್ ಈಶ್ವರಪ್ಪ ಹೇಳಿಕೆ

ಬಾಗಲಕೋಟೆ: ಗೃಹ ಸಚಿವ ಜಿ. ಪರಮೇಶ್ವರ್​ ಅವರ ಮೇಲೆ ನನಗೆ ತುಂಬಾ ಗೌರವವಿದೆ. ಆದರೆ, ಅವರ ಬಾಯಲ್ಲಿ ಇಂತಹ ಮಾತು ಏಕೆ ಬಂದಿತೋ ಗೊತ್ತಿಲ್ಲ. ಹಿರಿಯ ರಾಜಕಾರಣಿ ಅಲ್ಲದೇ ವೈದ್ಯರಾದ ಅವರ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು ಎಂದು ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಹೇಳಿದರು.

ದೇಶದಲ್ಲಿ ಹಿಂದೂ ಧರ್ಮವನ್ನು ಯಾರು ಹುಟ್ಟು ಹಾಕಿದರು? ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿರುವ ಅವರ ಹೇಳಿಕೆಗೆ ನಗರದಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಪರಮೇಶ್ವರ್ ಅವರು ತಮ್ಮ ತಂದೆ ಮತ್ತು ತಾತನ ಹೆಸರು ಹೇಳಬಹುದು. ಮುತ್ತಜ್ಜನ ಹೆಸರು ಹೇಳಲಿ ನೋಡೊಣ? ಮೂರನೇ ತಲೆಮಾರಿನ ಹೆಸರೇ ನಿನಗೆ ಗೊತ್ತಿಲ್ಲ. ಅಂತಹದರಲ್ಲಿ ನೂರಾರು ವರ್ಷಗಳ ಇತಿಹಾಸ ಇರುವ ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತೀರಿ. ಇದು ಸರಿ ಅಲ್ಲ. ನೀವು ರಾಜ್ಯದ ಗೃಹ ಸಚಿವರು. ಮೇಲಾಗಿ ವೈದ್ಯರು, ಈ ರೀತಿ ಪ್ರಶ್ನೆ ಕೇಳುವಂತಹ ಅವಕಾಶ ನಿಮ್ಮಲ್ಲಿ ಬರಬಾರದು ಎಂದು ವ್ಯಂಗ್ಯವಾಡಿದರು.

ಹಿಂದೂ ಧರ್ಮ ತನ್ನದೇಯಾದ ಇತಿಹಾಸ ಹೊಂದಿದ್ದರಿಂದ ಅದಕ್ಕೆ ಸನಾತನ ಧರ್ಮ ಅಂತಲೂ ಕರೆಯುತ್ತಾರೆ. ಯಾರು ಏನೇ ಮಾತನಾಡಲಿ, ಹಿಂದೂ ಸಮಾಜ ಶಾಂತವಾಗಿದೆ. ಕೆಲವರಿಗೆ ಮಾಧ್ಯಮಗಳಲ್ಲಿ ತಮ್ಮ ಹೆಸರು ಬರಬೇಕು ಅನ್ನೋ ಕಾಯಿಲೆ. ಹಾಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂದು ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಹಿಂದೂ ಧರ್ಮದ ಬಗ್ಗೆ ಮಾತನಾಡಲು ನಿಮಗೆ ಅಧಿಕಾರ ಇಲ್ಲ. ಹಾಗಾಗಿ ದಯವಿಟ್ಟು ಕ್ಷಮೆ ಕೇಳಿ ಎಂದು ಒತ್ತಾಯ ಮಾಡಿದರು. ಚಿತ್ರ ನಟ ಪ್ರಕಾಶ್ ರೈ ಹೇಳಿಕೆಯನ್ನು ಖಂಡಿಸಿದ ಅವರು, ಇಂಥವರನ್ನು ನೇರವಾಗಿ ಹುಚ್ಚರು, ಅಯೋಗ್ಯರು ಅಂತ ಅಂದರು ಬೇಜಾರು ಆಗಲ್ಲ. ಹಾಗಾಗಿ ಅವರ ಬಗ್ಗೆ ಹೆಚ್ಚು ಮಾತು ಬೇಡ ಎಂದರು.

ಜಗದೀಶ ಶೆಟ್ಟರ್ ಕುಟುಂಬಸ್ಥರ ಆರೋಪ ವಿಚಾರವಾಗಿ ಮಾತನಾಡಿ, ಯಾರು ಪಕ್ಷದ ಸಿದ್ದಾಂತವನ್ನು ಒಪ್ಪಿ ತಾಯಿ ಅಂತ ತಿಳಿಯುತ್ತಾರೋ ಅವಾಗ ಜನ ಮೆಚ್ಚುತ್ತಾರೆ. ಅದೇ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಏಕೆ ಸೋತರು? ತಾಯಿ ಅಂತ ತಿಳಿದುಕೊಂಡಿರುವ ಪಕ್ಷದ ಬಗ್ಗೆ ಅಪಪ್ರಚಾರ, ಅಪಮಾನ ಮಾಡುತ್ತಾ ಹೋದರೆ ಉದ್ಧಾರ ಆಗಲ್ಲ. ಸನಾತನ ಧರ್ಮದ ಪ್ರಕಾರ ಕೆಟ್ಟ ತಾಯಿ ಇಲ್ಲ. ಕೆಟ್ಟ ಮಗ ಇರಬಹುದು. ಅಂತಹ ಕೆಟ್ಟ ಮಕ್ಕಳಲ್ಲಿ ಜಗದೀಶ ಶೆಟ್ಟರ್ ಕೂಡ ಒಬ್ಬರು ಎಂದು ಟೀಕಿಸಿದರು.

ಇದೇ ವೇಳೆ ಉದಯನಿಧಿ ಸ್ಟಾಲಿನ್​ ಮತ್ತು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಅವರಿಗೆ ಒಂದು ಸಮುದಾಯದ ವೋಟ್ ಬೇಕು. ಇದನ್ನ ಬಿಟ್ರೆ ಇನ್ನೇನು ಅವರಿಗೆ ಬೇಕಿಲ್ಲ. ಖರ್ಗೆ, ಉದಯನಿಧಿ ಏನು ದೊಡ್ಡ ಮನುಷ್ಯರಲ್ಲ. ಈವರೆಗೂ ಉದಯನಿಧಿ ಹೆಸರು ಕೇಳಿದ್ರಾ? ಹೆಸರು ಪ್ರಚಾರಕ್ಕೆ ಬರಲಿ ಅನ್ನೋದಕ್ಕೇನೆ ಹಿಂದೂ, ಸನಾತನ ಧರ್ಮದ ಬಗ್ಗೆ ಟೀಕೆ ಮಾಡುತ್ತಾರೆ. ಈವರೆಗೂ ಇವರು ಯಾರಿಗೂ ಗೊತ್ತಿರಲಿಲ್ಲ ಎಂದು ಇಬ್ಬರ ವಿರುದ್ಧ ವಾಗ್ದಾಳಿ ನಡೆಸಿದರು.

ಧರ್ಮವನ್ನು ಟೀಕೆ ಮಾಡಿದ ಯಾರೂ ಉಳಿದಿಲ್ಲ‌. ಕೆಲವರಿಗೆ ಇತ್ತೀಚೆಗೆ ರಾಮಾಯಣ, ಮಹಾಭಾರತ ಓದಿ ಬುದ್ಧಿ ಬರುತ್ತಿದೆ. ಮುಂಚೆ ಹಣೆಗೆ ಕುಂಕುಮ ಇಟ್ಕೊಳ್ಳೋಕೆ ಒಪ್ಪುತ್ತಿರಲಿಲ್ಲ. ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಮುನ್ನ ದೇವಸ್ಥಾನ ಹೋಗಿ ಬರಲಿಲ್ವ? ನಾಮಿನೇಶನ್ ಮಾಡೋ ಮೊದಲು ದೇವಸ್ಥಾನ ಹೋಗಿ ಬರಲಿಲ್ವಾ? ಇದು ಸನಾತನ ಧರ್ಮ ಫಾಲೋ ಮಾಡ್ತೀದಿನಿ ಅನ್ನೋ ಅರ್ಥ ತಾನೆ? ಎಲ್ಲ ಕಾಂಗ್ರೆಸ್​ನವರು ದೈವ ಭಕ್ತರೇ. ಆದರೆ, ಅದು ಕೇವಲ ಚುನಾವಣೆಗೆ ಮಾತ್ರ ಸೀಮಿತ ಎಂದರು.

ಇಂಡಿಯಾ ಅಥವಾ ಭಾರತ ಎಂದು ಕರೆಯಲು ಮುಕ್ತ ಅವಕಾಶವಿದೆ. 2016ರಲ್ಲಿ ಸುಪ್ರಿಂ ಕೋರ್ಟ್ ಅವಕಾಶ ಕಲ್ಪಿಸಿದೆ. ಸಿದ್ದರಾಮಯ್ಯ , ನಾನೇ ಕಾನೂನು ತಜ್ಞ, ಅಂಬೇಡ್ಕರ್ ಬಿಟ್ರೆ ನಾನೇ ಅಂತಾ ಹೇಳೋರು, ಈ ಪತ್ರಿಕೆ ಅವ್ರಿಗೆ ಕಳಿಸ್ತೇನೆ‌. ಏಕೆಂದರೆ ಚರ್ಚೆ ಆಗುತ್ತಿರುವ ವಿಷಯಗಳು ಇವು. ಭಾರತ್ ಮಾತಾ ಕೀ ಜೈ ಅಂತಾ ಇಡೀ ದೇಶದ ಜನ ಕೂಗೋದು ಕೇಳಿದ್ದೀವೆ. ಭಾರತ ಅಂದ್ರೆ ನಮ್ಮ ತಾಯಿ ಅಂತಾ ಅರ್ಥ. ಭಾರತ್ ಮಾತಾಕೀ ಜೈ ಅಂತಾರೆ. ಇಂಡಿಯಾ ಮಾತಾಕೀ ಜೈ ಅಂತಾ ಕೂಗಿದ್ದು ಕೇಳಿದ್ರಾ? ಎಂದು ದೇಶದ ಹೆಸರು ಇಂಡಿಯಾ ಬದಲಾಗಿ ಭಾರತ ಮರುನಾಮಕರಣ ವಿಚಾರದ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಉದಯನಿಧಿ ಅದೃಷ್ಟವಂತ, ಅರಬ್, ಇರಾನ್, ಇರಾಕ್​ನಲ್ಲಿ ಇಂತಹ ಪ್ರಶ್ನೆ ಮಾಡಿದ್ದರೆ ಹೇಗಾಗ್ತಿತ್ತು: ಸಿಟಿ ರವಿ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.