ETV Bharat / state

ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಯಲ್ಲಿ ಉಚಿತ ಹೃದಯ ಶಸ್ತ್ರಚಿಕಿತ್ಸೆ ಸೇವೆ ಆರಂಭ

author img

By

Published : Nov 7, 2021, 4:51 PM IST

Kumareshwar Hospital at Bagalkot
ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆ

ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಯಡಿ ಉಚಿತವಾಗಿ ತೆರೆದ ಹೃದಯ ರೋಗ ಚಿಕಿತ್ಸಾ ಸೇವೆಯನ್ನು ಆರಂಭಿಸಲಾಗಿದೆ.

ಬಾಗಲಕೋಟೆ: ಜಿಲ್ಲೆಯಲ್ಲಿ ಹೃದಯ ಸಂಬಂಧಿ ರೋಗಗಳ ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗಬೇಕಾದಂತಹ ಸ್ಥಿತಿ ಇದೆ. ಇದರಿಂದ ಬಡ ರೋಗಿಗಳು ಹಣವಿಲ್ಲದೆ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದರು. ಆದರೀಗ ಸರ್ಕಾರದ ಯೋಜನೆಯಡಿ ಕುಮಾರೇಶ್ವರ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಸೇವೆಯನ್ನು ಆರಂಭವಾಗಿದ್ದು, ಬಡರೋಗಿಗಳಿಗೆ ವರದಾನವಾಗಿದೆ.


ಕೊಪ್ಪಳ ಜಿಲ್ಲೆಯ ಮಡಿಕೇರಾ ಗ್ರಾಮದ 68 ವರ್ಷದ ಹನಮಪ್ಪ ಬಿಂಜವಾಡಗಿ ಎಂಬುವವರು ಕೆಲವು ತಿಂಗಳಿಂದ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರು. ನಂತರ ಕುಮಾರೇಶ್ವರ ಆಸ್ಪತ್ರೆಗೆ ದಾಖಲಾದಾಗ ಮೂರು ರಕ್ತನಾಳಗಳಲ್ಲಿ ಬ್ಲಾಕ್​​​ಗಳಿರುವುದು ಖಚಿತವಾಯಿತು. ಇದನ್ನರಿತ ಡಾ.ಗಿರಿಧರ್​ ಕಮಲಾಪೂರ ಅವರ ನೇತೃತ್ವದ ವೈದ್ಯರ ತಂಡ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿ ರೋಗಿಯನ್ನು ಗುಣಪಡಿಸಿದೆ. ಇದು ಆಸ್ಪತ್ರೆಯಲ್ಲಿ ನಡೆದ ಮೊದಲ ಶಸ್ತ್ರಚಿಕಿತ್ಸೆಯಾಗಿದ್ದು, ಸರ್ಕಾರದ ಆಯುಷ್ಮಾನ್ ಯೋಜನೆಯಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ವೈದ್ಯರು ಹೇಳಿದ್ದು..

'ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೃದಯಸಂಬಂಧಿ ಸಮಸ್ಯೆ ಇದೆ ಎಂದಾಕ್ಷಣ ಹೆದರುತ್ತಾರೆ. ಸ್ಟಂಟ್​ ಅಳವಡಿಕೆ ಮಾಡಿದರೆ ಎಲ್ಲವೂ ಮುಗಿದಂತೆ ಎಂದು ಭಾವಿಸುತ್ತಾರೆ. ಆದರೆ ಕೆಲವು ಗಂಭೀರ ಸ್ವರೂಪದ ಸಮಸ್ಯೆಗಳಿರುತ್ತವೆ. ಹಾಗಾಗಿ ಸಂದರ್ಭವನ್ನು ನೋಡಿಕೊಂಡು ನಾವು ರೋಗಿಗಳಿಗೆ ಧೈರ್ಯ ತುಂಬಿ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ. ಅದರಂತೆ ಹನಮಪ್ಪ ಬಿಂಜವಾಡಗಿ ಅವರಿಗೂ ಯಶ್ವಸಿಯಾಗಿ ತೆರದ ಹೃದಯರೋಗ ಚಿಕಿತ್ಸೆ ಮಾಡಲಾಗಿದೆ. ಅವರೀಗ ಆರಾಮಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಇದೇ ಶಸ್ತ್ರಚಿಕಿತ್ಸೆಯನ್ನು ಹೊರಗಡೆ ಮಾಡಿದರೆ ಅಂದಾಜು 3 ರಿಂದ 4 ಲಕ್ಷ ರೂ ವೆಚ್ಚ ತಗಲುತ್ತದೆ. ಇದನ್ನರಿತು ಜನರಿಗೆ ಅನುಕೂಲವಾಗಲೆಂದು ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆಯನ್ನು ಆರಂಭಿಸಲಾಗಿದೆ' ಎಂದು ಡಾ.ಗಿರಿಧರ್​ ಕಮಲಾಪೂರ ಹೇಳಿದರು.

heart surgery
ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ(ಮಧ್ಯದಲ್ಲಿವವರು)

ಶಸ್ತ್ರಚಿಕಿತ್ಸೆಯಿಂದ ಗುಣಮುಖನಾದ ವ್ಯಕ್ತಿಯ ಪ್ರತಿಕ್ರಿಯೆ:

'ಕಳೆದ ಕೆಲ ದಿನಗಳಿಂದ ನನಗೆ ಹೃದಯಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಂಡಿತ್ತು. ಆಗ ಕುಮಾರೇಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದೆ. ಈ ವೇಳೆ ಹೃದಯದಲ್ಲಿ ಮೂರು ರಕ್ತನಾಳಗಳಲ್ಲಿ ಬ್ಲಾಕ್​ ಇರುವುದಾಗಿ ವೈದ್ಯರು ಖಚಿತ ಪಡಿಸಿದರು. ಇದೇ ವೇಳೆ ಹೆದರಬೇಡಿ ಎಂದು ಧೈರ್ಯ ತುಂಬಿದ್ದರು. ಕೆಲ ದಿನಗಳ ಹಿಂದೆ ವೈದ್ಯರ ತಂಡ ನನಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದು, ನಾನು ಈಗ ಆರಾಮಾಗಿದ್ದೇನೆ. ಯಾವುದೇ ಸಮಸ್ಯೆ ಇಲ್ಲ. ಚಿಕಿತ್ಸೆಗಾಗಿ ಒಂದು ರೂಪಾಯಿ ಹಣವನ್ನೂ ಆಸ್ಪತ್ರೆಯಲ್ಲಿ ಪಡೆದಿಲ್ಲ' ಎಂದು ರೋಗಿ ಹನಮಪ್ಪ ಬಿಂಜವಾಡಗಿ ಹೇಳಿದರು.

ಶಾಸಕರ ಮನವಿ:

'ಇದುವರೆಗೂ ನಮ್ಮ ಆಸ್ಪತ್ರೆಯಲ್ಲಿ ಸ್ಟಂಟ್​ ಹಾಕುವುದು ಸೇರಿದಂತೆ ಇತರೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಡಾ.ಗಿರಿಧರ್​ ಕಮಲಾಪೂರ ಅವರು ನಮ್ಮ ಆಸ್ಪತ್ರೆಗೆ ಬಂದ ನಂತರ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುವ ಕಾರ್ಯ ಆರಂಭವಾಗಿದೆ. ಇನ್ಮುಂದೆ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಬಡ ಜನರು ಬಂದು ಈ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು' ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಶಾಸಕ ವೀರಣ್ಣ ಚರಂತಿಮಠ ಮಾಧ್ಯಮಗಳ ಮೂಲಕ ಮನವಿ ಮಾಡಿದರು.

ಇದನ್ನೂ ಓದಿ: ರಾಜ್ಯಗಳ ಬಳಿ ಇನ್ನೂ 15 ಕೋಟಿ ಕೋವಿಡ್ ಲಸಿಕೆ ಬಳಕೆಯಾಗದೆ ಉಳಿದಿದೆ: ಕೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.