ಬಾಗಲಕೋಟೆ : ಒಂದು ಕಾಲದಲ್ಲಿ ಹಳಂಗಳಿ ಭದ್ರಗಿರಿ ಬೆಟ್ಟ ಜೈನ್ ಮುನಿಗಳ ತಾಣವಾಗಿತ್ತು. ಈ ಪ್ರದೇಶದಿಂದ ಸ್ವಲ್ಪ ದೂರದಲ್ಲೇ ತಮದಡ್ಡಿ ಗ್ರಾಮವಿದೆ. ಈ ಗ್ರಾಮವು ಕೃಷ್ಣ ನದಿಯ ಪ್ರವಾಹದಿಂದ ತೊಂದರೆಗೆ ಒಳಗಾಗಿ ಸ್ಥಳಾಂತರ ಮಾಡುವ ಬಗ್ಗೆ ವಿವಾದ ಉಂಟಾಗಿದೆ. ಆದರೆ, ಈ ಸ್ಥಳದಲ್ಲಿಯೇ ಈಗ ಶಿಲಾಯುಗದ ಪಳೆಯುಳಿಕೆಗಳು ಪತ್ತೆ ಆಗಿವೆ.
ತಮದಡ್ಡಿ ಗ್ರಾಮವು ಪುನರ್ವಸತಿ ಕೇಂದ್ರವನ್ನಾಗಿ ಸರಕಾರ ನಿರ್ಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಪುನರ್ವಸತಿ ಕೇಂದ್ರ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಅಲ್ಲಿನ ಗಿಡಗಂಟಿ ತೆರವುಗೊಳಿಸಿ ಭೂಮಿಯನ್ನು ಸಮತಟ್ಟಾಗಿ ಮಾಡುವ ಕಾರ್ಯ ಕೈಗೊಳ್ಳಲಾಗಿದೆ. ಈ ವೇಳೆ ಬೆಟ್ಟದ ಕೆಳಗಿನ ಭಾಗದಲ್ಲಿ ಜೆಸಿಬಿಯಿಂದ ನೆಲ ಅಗೆಯುವಾಗ ಮಡಿಕೆಗಳು, ಮೂಳೆಗಳ ಪುಡಿಗಳು ಕಂಡು ಬಂದಿದ್ದು, ಸ್ಥಳೀಯರಿಗೆ ಅಚ್ಚರಿ ಮೂಡಿಸಿದೆ.
ಇದೇ ಸ್ಥಳಕ್ಕಾಗಿ ಆಗಸ್ಟ್ 4ರಂದು ಹಳಿಂಗಳಿ ಗ್ರಾಮಸ್ಥರು, ಮಹಿಳೆಯರು ಬೃಹತ್ ಪ್ರತಿಭಟನೆ ಮಾಡಿದ್ದರು. ತಮ್ಮೂರ ಜಾಗವವನ್ನು ತಮದಡ್ಡಿ ಸಂತ್ರಸ್ತರಿಗೆ ನೀಡಬಾರದೆಂದು ಹೋರಾಟ ಮಾಡಿದ್ದರು. ಈ ವೇಳೆ ಪೊಲೀಸರು ಅನೇಕರನ್ನು ವಶಕ್ಕೆ ಪಡೆದಿದ್ದರು.
ಈಗ ಅದೇ ಜಾಗದಲ್ಲಿ ಪಳೆಯುಳಿಕೆಗಳು ಪತ್ತೆಯಾಗಿದ್ದು, ಕುತೂಹಲ ಮೂಡಿಸಿದೆ. ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದಲ್ಲಿ ಜೈನ್ ಮುನಿ ಆಶ್ರಮ ಮಾಡಿಕೊಂಡು, ಪ್ರವಚನ ಸೇರಿದಂತೆ ಇತರ ಆಧ್ಯಾತ್ಮಿಕ ಸಭೆ, ಸಮಾರಂಭ ನಡೆಸುತ್ತಿದ್ದರು.
ಇದೇ ಬೆಟ್ಟದಲ್ಲಿ ಒಂದು ಕಡೆ ಈಗ ತಮದಡ್ಡಿ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಹಳಿಂಗಳಿ ಹಾಗೂ ತಮದಡ್ಡಿ ಗ್ರಾಮಸ್ಥರ ಮಧ್ಯೆ ಜಾಗದ ವಿವಾದ ಶುರುವಾಗಿದೆ. ಇದೇ ಜಾಗದಲ್ಲಿ ಆಗಷ್ಟ15ರಂದು ಬಾಹುಬಲಿಮೂರ್ತಿ ಕೂಡ ಸಿಕ್ಕಿದೆಯಂತೆ.
ಜೊತೆಗೆ ಇಲ್ಲಿ 772 ಮುನಿಗಳು ತಪಸ್ಸು ಮಾಡಿದ್ದು, 700ಕ್ಕೂ ಅಧಿಕ ಜೈನ್ ಗುಂಪುಗಳಿವೆ ಎನ್ನಲಾಗುತ್ತಿದೆ. ಇಲ್ಲಿ ಕುರುಹುಗಳು, ಮೂರ್ತಿಗಳು ಸಿಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಜೈನ ವಿಗ್ರಹಳು, ಪುರಾತನ ಕಾಲದ ಕುರುಹುಗಳು ಸಿಕ್ಕಿದ್ದವು.
ಈ ಜಾಗವನ್ನು ಇದೀಗ ಪುನರ್ವಸತಿ ಕೇಂದ್ರ ನಿರ್ಮಾಣಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಲ್ಲ ಕುರುಹುಗಳು, ಸಾಕ್ಷಿಗಳನ್ನು ನೋಡಿದರೆ ಇದೊಂದು ಪ್ರಾಗೈತಿಹಾಸಿಕ ಸ್ಥಳ ಆದ್ದರಿಂದ ಇಲ್ಲಿ ಕಾಮಗಾರಿ ಹೆಸರಲ್ಲಿ ಪ್ರಾಗೈತಿಹಾಸಿಕ ನೆಲೆ, ಧಾರ್ಮಿಕ ಬೀಡನ್ನು ಹಾಳು ಮಾಡಬಾರದು ಎಂದು ಜೈನ್ ಮುನಿ ಕುಲರತ್ನಭೂಷಣ ಮಹಾರಾಜರು ಹೇಳುತ್ತಾರೆ.
ಇದನ್ನೂ ಓದಿ : ಸಕ್ರೇಬೈಲ್ ಆನೆ ಬಿಡಾರದ ಮಾವುತರು, ಕಾವಾಡಿಗರಿಗಿಲ್ಲ ವೇತನ.. 6 ತಿಂಗಳಿಂದ ಸಂಕಷ್ಟದಲ್ಲೇ ಜೀವನ
ಭದ್ರಗಿರಿ ಬೆಟ್ಟದಲ್ಲಿ ಸಿಕ್ಕ ಈ ವಸ್ತುಗಳು ಜನರಲ್ಲಿ ಭಾರೀ ಕುತೂಹಲ ಮೂಡಿಸಿವೆ. ಆದರೆ, ಈ ಬಗ್ಗೆ ಸಂಶೋಧನೆ ನಡೆಸಿ, ನಿಜವಾಗಲೂ ಯಾವ ಕಾಲಕ್ಕೆ ಸೇರಿದ್ದವು ಎಂಬ ಬಗ್ಗೆ ಮಾಹಿತಿ ತಿಳಿಯುವುದು ಅಗತ್ಯವಿದೆ. ತಜ್ಞರಿಂದ ಸಂಶೋಧನೆ ನಡೆದು ಜನರಿಗೆ ಇದರ ಸತ್ಯಾಂಶ ತಿಳಿಸುವ ಕಾರ್ಯವನ್ನ ಸರಕಾರ ಮಾಡಬೇಕಾಗಿದೆ.