ETV Bharat / sports

ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಖೇಲ್​ ರತ್ನ, ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ

author img

By ETV Bharat Karnataka Team

Published : Dec 15, 2023, 10:13 PM IST

National Sports Awards 2023: ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ವಾರ್ಷಿಕವಾಗಿ ನೀಡುವ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯ ನಾಮನಿರ್ದೇಶನಗಳ ಪಟ್ಟಿ ಇಲ್ಲಿದೆ.

Major Dhyan Chand Khel Ratna Award
Major Dhyan Chand Khel Ratna Award

ಹೈದರಾಬಾದ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡರೆ, ಟೀಂ ಇಂಡಿಯಾ ವೇಗದ ಬೌಲರ್​​ ಮೊಹಮ್ಮದ್ ಶಮಿ, ಬಿಲ್ಲುಗಾರರಾದ ಓಜಸ್ ಪ್ರವೀಣ್ ಡಿಯೋಟಾಲೆ ಮತ್ತು ಅದಿತಿ ಗೋಪಿಚಂದ್ ಸ್ವಾಮಿ ಹಾಗೂ ಕುಸ್ತಿಪಟು ಅಂತಿಮ್ ಪಂಗಲ್ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ವಾರ್ಷಿಕವಾಗಿ ನೀಡುವ ದೇಶದ ಅತ್ಯುನ್ನತ ಕ್ರೀಡಾ ಗೌರವವೇ ಖೇಲ್ ರತ್ನ. ಅರ್ಜುನ ಪ್ರಶಸ್ತಿಯನ್ನು ಎರಡನೇ ಅತ್ಯುನ್ನತ ಕ್ರೀಡಾ ಗೌರವ ಎಂದು ಪರಿನಗಣಿಸಲಾಗಿದೆ. ನಾಮನಿರ್ದೇಶಿತ ಆಟಗಾರರಿಗೆ ಭಾರತದ ರಾಷ್ಟ್ರಪತಿಗಳು ಪ್ರಶಸ್ತಿ ನೀಡುತ್ತಾರೆ.

ಪುಲ್ಲೇಲ ಗೋಪಿಚಂದ್ (2001), ಸೈನಾ ನೆಹ್ವಾಲ್ (2010), ಪಿ.ವಿ.ಸಿಂಧು (2016), ಪ್ರಮೋದ್ ಭಗತ್ (2021) ಮತ್ತು ಕೃಷ್ಣ ನಗರ (2021) ಷಟ್ಲರ್‌ಗಳಿಗೆ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ. ಮೊದಲ ಬಾರಿಗೆ ಬ್ಯಾಡ್ಮಿಂಟನ್​ ಜೋಡಿಗೆ ಪ್ರಶಸ್ತಿ ನೀಡಲಾಗುತ್ತದೆ.

'ಸಾತ್​-ಚಿ' ಎಂದು ಜನಪ್ರಿಯವಾಗಿರುವ ಸಾತ್ವಿಕ್‌ ಸಾಯಿರಾಜ್ ಮತ್ತು ಚಿರಾಗ್ ಈ ವರ್ಷ ಸ್ವಿಸ್ ಓಪನ್, ಇಂಡೋನೇಷ್ಯಾ ಓಪನ್ ಮತ್ತು ಕೊರಿಯಾ ಓಪನ್ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡ್ಲ್ಯುಎಫ್​​) ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಐತಿಹಾಸಿಕ ಮೊಟ್ಟಮೊದಲ ಬ್ಯಾಡ್ಮಿಂಟನ್ ಚಿನ್ನವನ್ನು ಗೆದ್ದರು ಮತ್ತು ಏಪ್ರಿಲ್‌ನಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದರು.

ಅಕ್ಟೋಬರ್‌ನಲ್ಲಿ ಈ ಜೋಡಿ ಭಾರತದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಬಿಡಬ್ಲ್ಯು ಶ್ರೇಯಾಂಕದಲ್ಲಿ ವಿಶ್ವದ ನಂಬರ್ ಒನ್ ಸ್ಥಾನ ಪಡೆದರು. ಕಳೆದ ವರ್ಷ ಐತಿಹಾಸಿಕ ಥಾಮಸ್ ಕಪ್, ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (ಚಿನ್ನ) ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ (ಕಂಚಿನ) ಪದಕಗಳನ್ನು ಗೆದ್ದರು.

ಅರ್ಜುನ ಪ್ರಶಸ್ತಿಗೆ 17 ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅದ್ವಿತೀಯ ಬೌಲಿಂಗ್​ ಪ್ರದರ್ಶನ ನೀಡಿದ ಶಮಿ, ಅದಿತಿ ಸ್ವಾಮಿ, ಸ್ಟೀಪಲ್‌ಚೇಸರ್ ಪಾರುಲ್ ಚೌಧರಿ, ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು 20 ವರ್ಷದೊಳಗಿನ ವಿಶ್ವ ಚಾಂಪಿಯನ್ ಕುಸ್ತಿಪಟು ಅಂತಿಮ್ ಪಂಗಲ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಭಾರತದ ಯುವ ಚೆಸ್ ಆಟಗಾರ ಆರ್.ಪ್ರಜ್ಞಾನಂದ ಅವರ ತರಬೇತುದಾರರಾದ ಆರ್‌.ಬಿ.ರಮೇಶ್ ಅವರು ದ್ರೋಣಾಚಾರ್ಯ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ.

2023 ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು:

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ: ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (ಬ್ಯಾಡ್ಮಿಂಟನ್)

ಅರ್ಜುನ ಪ್ರಶಸ್ತಿ: ಮೊಹಮ್ಮದ್ ಶಮಿ (ಕ್ರಿಕೆಟ್), ಅಜಯ್ ರೆಡ್ಡಿ (ಅಂಧ ಕ್ರಿಕೆಟ್) ಓಜಸ್ ಪ್ರವೀಣ್ ಡಿಯೋಟಾಲೆ (ಆರ್ಚರಿ), ಅದಿತಿ ಗೋಪಿಚಂದ್ ಸ್ವಾಮಿ (ಆರ್ಚರಿ), ಶೀತಲ್ ದೇವಿ (ಪ್ಯಾರಾ ಆರ್ಚರಿ), ಪಾರುಲ್ ಚೌಧರಿ ಮತ್ತು ಮುರಳಿ ಶ್ರೀಶಂಕರ್ (ಅಥ್ಲೆಟಿಕ್ಸ್), ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸಿಂಗ್), ಆರ್.ವೈಶಾಲಿ (ಚೆಸ್), ದಿವ್ಯಾಕೃತಿ ಸಿಂಗ್ ಮತ್ತು ಅನುಷ್ ಅಗರ್ವಾಲಾ (ಈಕ್ವೆಸ್ಟ್ರಿಯನ್), ದಿಕ್ಷಾ ದಾಗರ್ (ಗಾಲ್ಫ್), ಕ್ರಿಶನ್ ಬಹದ್ದೂರ್ ಪಾಠಕ್ (ಹಾಕಿ), ಸುಶೀಲಾ ಚಾನು (ಹಾಕಿ), ಪಿಂಕಿ (ಲಾನ್ ಬಾಲ್), ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್), ಆಂಟಿಮ್ ಪಂಗಲ್ (ಕುಸ್ತಿ), ಐಹಿಕಾ ಮುಖರ್ಜಿ (ಟೇಬಲ್ ಟೆನಿಸ್)

ದ್ರೋಣಾಚಾರ್ಯ ಪ್ರಶಸ್ತಿ: ಗಣೇಶ್ ಪ್ರಭಾಕರನ್ (ಮಲ್ಲಖಾಂಬ್), ಮಹಾವೀರ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್), ಲಲಿತ್ ಕುಮಾರ್ (ಕುಸ್ತಿ), ಆರ್.ಬಿ.ರಮೇಶ್ (ಚೆಸ್), ಶಿವೇಂದ್ರ ಸಿಂಗ್ (ಹಾಕಿ)

ಧ್ಯಾನ್ ಚಂದ್ ಜೀವಮಾನ ಪ್ರಶಸ್ತಿ: ಕವಿತಾ (ಕಬಡ್ಡಿ), ಮಂಜುಷಾ ಕನ್ವರ್ (ಬ್ಯಾಡ್ಮಿಂಟನ್), ವಿನೀತ್ ಕುಮಾರ್ ಶರ್ಮಾ (ಹಾಕಿ).

ಇದನ್ನೂ ಓದಿ: ಐಪಿಎಲ್‌: ಮುಂಬೈ ಇಂಡಿಯನ್ಸ್‌ ತಂಡಕ್ಕೆ ಹಾರ್ದಿಕ್​ ಪಾಂಡ್ಯ ನಾಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.