ETV Bharat / sports

ರಿಷಭ್ ಪಂತ್​ಗೆ ಪರ್ಯಾಯ ಆಟಗಾರನನ್ನು ಹುಡುಕುವುದು ಕಷ್ಟ: ಕಿರಣ್​ ಮೋರೆ

author img

By

Published : Feb 7, 2023, 9:59 PM IST

Kiran More
ಕಿರಣ್​ ಮೋರೆ ವಿಶೇಷ ಸಂದರ್ಶನ

ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಗ್ಗೆ ರಾಷ್ಟ್ರೀಯ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಕಿರಣ್ ಮೋರೆ ಈಟಿವಿ ಭಾರತಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ.

ಕೋಲ್ಕತಾ (ಪಶ್ಚಿಮ ಬಂಗಾಳ) : ರಿಷಭ್ ಪಂತ್​ ಅವರ ಸ್ಥಾನವನ್ನು ಯಾರು ತುಂಬಬಲ್ಲರು ಎಂದು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ವಿಕೆಟ್ ಕೀಪರ್ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಕಿರಣ್ ಮೋರೆ ಅಭಿಪ್ರಾಯಪಟ್ಟರು. ನಾಗ್ಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ಇನ್ನೆರಡು ದಿನದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಇತ್ತಂಡಗಳು ಮಹಾರಾಷ್ಟ್ರ ತಲುಪಿದ್ದು ಅಭ್ಯಾಸದಲ್ಲಿ ತೊಡಗಿವೆ. ಪ್ರವಾಸಿ ತಂಡದ ಆಟಗಾರರು ಆ್ಯಶಸ್‌ಗಿಂತ ಈ ಟೆಸ್ಟ್ ಸರಣಿಯೇ ಮಹತ್ವದ್ದು ಎಂದು ಹೇಳಿದ್ದಾರೆ.

ಈಟಿವಿ ಭಾರತಕ್ಕೆ ವಿಶೇಷ ಸಂದರ್ಶನ ನೀಡಿದ ಕಿರಣ್ ಮೋರೆ, "ವಿಶ್ವ ರ್‍ಯಾಂಕಿಂಗ್​ನ 1 ಮತ್ತು 2 ನೇ ಸ್ಥಾನದಲ್ಲಿರುವ ತಂಡಗಳು ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಎರಡೂ ಉತ್ತಮ ತಂಡಗಳಾಗಿದ್ದು, ಯಾರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಗೆಲುವಿನ ಲೆಕ್ಕಾಚಾರವಿದೆ" ಎಂದಿದ್ದಾರೆ.

"ಆಸ್ಟ್ರೇಲಿಯಾ ತಂಡದಲ್ಲಿ ಬಲಿಷ್ಠ ಆಟಗಾರರಿದ್ದಾರೆ ಎಂದು ಹೇಳಿದ ಅವರು, ಭಾರತ ಮತ್ತು ಕಾಂಗರೂಗಳ ನಡುವಣ ಪಂದ್ಯ ಯಾವಾಗಲೂ ಹೆಚ್ಚು ಸ್ಪರ್ಧಾತ್ಮಕತೆ ಮತ್ತು ಕಠಿಣ ಸವಾಲಿನಿಂದ ಕೂಡಿರುತ್ತದೆ. ಭಾರತಕ್ಕೆ ತವರಿನ ಪಿಚ್‌ನ ಲಾಭ ಪಡೆಯುವ ಅವಕಾಶವಿದೆ. ಆದರೆ ಆಸ್ಟ್ರೇಲಿಯಾ ಸಹ ಉಪಖಂಡದ ಪಿಚ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ" ಎಂದರು.

ಪಂತ್‌ಗೆ ಪರ್ಯಾಯ ಕಷ್ಟ: ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಂತ್​ ಅವರು ತಂಡದಲ್ಲಿ ಇರದೇ ಇರುವುದು ದೊಡ್ಡ ನಷ್ಟ ಎಂದು ಕಿರಣ್ ಹೇಳಿದ್ದಾರೆ. "ಈ ಸರಣಿಯಲ್ಲಿ ಭಾರತವು ರಿಷಭ್ ಪಂತ್ ಅವರನ್ನು 6ನೇ ಸ್ಥಾನದಲ್ಲಿ ಕಳೆದುಕೊಳ್ಳುತ್ತದೆ. ರಿಷಭ್ ಅಂಕಿ-ಅಂಶಗಳು ಅಸಾಧಾರಣವಾಗಿವೆ. ಭರತ್ ಮತ್ತು ಇಶಾನ್ ಕಿಶನ್ ನಡುವೆ ಪಂತ್​ ಸ್ಥಾನಕ್ಕಾಗಿ ಪೈಪೋಟಿ ಇತ್ತು. ಆದರೆ, ಪಂತ್​ಗೆ ಪರ್ಯಾಯ ಆಗಲು ಸಾಧ್ಯವಿಲ್ಲ" ಎಂದು ಹೇಳಿದರು.

ಗಿಲ್​ ಭವಿಷ್ಯದ ಸ್ಟಾರ್​: ಉದಯೋನ್ಮುಖ ಆಟಗಾರ, ಆರಂಭಿಕ ಶುಭಮನ್ ಗಿಲ್ ಬಗ್ಗೆ ಮಾತನಾಡಿದ ಮೋರೆ, ಭಾರತದ ಭವಿಷ್ಯದ ತಾರಾ ಪ್ಲೇಯರ್​ ಎಂದು ಬಣ್ಣಿಸಿದ್ದಾರೆ. "ನಾನು 16ನೇ ವಯಸ್ಸಿನಲ್ಲಿ ದೇಶೀಯ ಜೂನಿಯರ್ ತಂಡದಿಂದ ಶುಭಮನ್​ ಅವರ ಆಟವನ್ನು ನೋಡುತ್ತಿದ್ದೇನೆ. ಅವರು ಯಾವಾಗಲೂ ನನಗೆ ಭವಿಷ್ಯದ ತಾರೆ. ಗಿಲ್​ ಅವರಲ್ಲಿ ಬ್ಯಾಟಿಂಗ್​ ತಂತ್ರ ಮತ್ತು ಪ್ರತಿಭೆ ಎರಡೂ ಇದೆ. ಅವರು ಅದನ್ನು ಇನ್ನಷ್ಟು ಉತ್ತಮಗೊಳಿಸುತ್ತಾ ಹೋದಂತೆ ಸ್ಟಾರ್​ ಆಟಗಾರರ ಪಟ್ಟಿ ಸೇರಲಿದ್ದಾರೆ" ಎಂದು ತಿಳಿಸಿದರು.

ಗಿಲ್​ ಮೂರು ಮಾದರಿಯಲ್ಲಿ ಶತಕ ಗಳಿಸಿದ ಭಾರತದ ನಾಲ್ಕನೇ ಬ್ಯಾಟರ್​ ಆಗಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಜೊತೆಗೆ ಇವರು ಸೇರಿಕೊಂಡಿದ್ದಾರೆ. ಕಳೆದ 2 ತಿಂಗಳಿಂದ ಶುಭಮನ್‌ ಅವರು ಉತ್ತಮ ಲಯದಲ್ಲಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಶತಕ, ಇದರ ನಂತರ ಶ್ರೀಲಂಕಾ ವಿರುದ್ಧದ ಏಕದಿನದಲ್ಲಿ ಶತಕ, ಕಿವೀಸ್ ವಿರುದ್ಧದ ಏಕದಿನದಲ್ಲಿ ದ್ವಿಶತಕ ಸೇರಿದಂತೆ 2 ಶತಕಗಳ ಇನ್ನಿಂಗ್ಸ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟಿ20ಯಲ್ಲಿ 200 ಸ್ಟ್ರೈಕ್‌ ರೇಟ್​ನಲ್ಲಿ ಶತಕಗಳಿಸಿ ಕ್ರಿಕೆಟ್​ನ ಮೂರು ಮಾದರಿಯಲ್ಲಿ ಶತಕ ಗಳಿಸಿದ ದಾಖಲೆ ಬರೆದಿದ್ದಾರೆ.

ವಿರಾಟ್​ ಕೊಹ್ಲಿ ಬಗ್ಗೆ ಮಾತನಾಡಿದ ಮೋರೆ, "ಮೂರು ವರ್ಷಗಳಿಂದ ಫಾರ್ಮ್​ ಕಳೆದುಕೊಂಡಿದ್ದ ಕೊಹ್ಲಿ ಬ್ಯಾಕ್​ ಟು ಬ್ಯಾಕ್​ ಶತಕಗಳ ಮೂಲಕ ಲಯಕ್ಕೆ ಮರಳಿದ್ದಾರೆ. ಅವರು ವಿಶೇಷ ಆಟಗಾರ. ಅವರ ವಿಕೆಟ್​ ಮೇಲೆ ತಂಡ ಅವಲಂಬಿತವಾಗಿದೆ ಎಂದರೆ ತಪ್ಪಾಗದು. ಅವರು ಶತಕಗಳ ಲಯ ಮುಂದುವರೆಸುತ್ತಾರೆ ಎಂಬ ನಂಬಿಕೆಯಿದೆ" ಎಂದಿದ್ದಾರೆ.

ಇದನ್ನೂ ಓದಿ: ಬಾರ್ಡರ್ ಗವಾಸ್ಕರ್ ಟ್ರೋಫಿ: ಇಶಾನ್ ಕಿಶನ್ ಅಥವಾ ಕೆಎಸ್ ಭರತ್.. ಯಾರಾಗಲಿದ್ದಾರೆ ಕೀಪರ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.