ETV Bharat / sports

ಟಿ20 ವಿಶ್ವಕಪ್‌ನಲ್ಲಿಂದು ಭಾರತಕ್ಕೆ ಮಹತ್ವದ ಪಂದ್ಯ: ಬಾಂಗ್ಲಾ ಜತೆ ಪೈಪೋಟಿ

author img

By

Published : Nov 2, 2022, 9:29 AM IST

t20 world cup india bangaldesh match today
ಬಾಂಗ್ಲಾ ಎದುರಿಸಿಲು ಭಾರತ ಸಜ್ಜು

ಭಾರತ ತಂಡದಲ್ಲಿ ಕೆಲವು ಬದಲಾವಣೆಯ ಸಾಧ್ಯತೆ ಕಾಣುತ್ತಿದೆ. ದಿನೇಶ್​ ಕಾರ್ತಿಕ್​ ಗಾಯದ ಕಾರಣ ಹೊರಗುಳಿದರೆ ರಿಷಬ್ ಪಂತ್‌ಗೆ ಅವಕಾಶ ಸಿಗಬಹುದು.

ಅಡಿಲೇಡ್​(ಆಸ್ಟ್ರೇಲಿಯಾ): ಭಾರತ ಹಾಗೂ ಬಾಂಗ್ಲಾದೇಶದ ಸೆಮಿಸ್​ ಹಾದಿ ಸುಗಮವಾಗಲು ಇಂದಿನ ಪಂದ್ಯ ಅತ್ಯಂತ ಮಹತ್ವದ್ದು. ಭಾರತ ಮೊದಲೆರಡು ಪಂದ್ಯಗಳನ್ನು ಗೆದ್ದು ದ.ಆಫ್ರಿಕಾ ತಂಡದೆದುರು ಕಳಪೆ ಕ್ಷೇತ್ರರಕ್ಷಣೆಯಿಂದ ಸೋಲನುಭವಿಸಿ ಬಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಎರಡರಲ್ಲಿ ಗೆದ್ದು ಒಂದರಲ್ಲಿ ಸೋತು 4 ಅಂಕಗಳಿಂದ ಮೂರನೇ ಸ್ಥಾನದಲ್ಲಿದೆ.

ಭಾರತ ಮತ್ತು ಬಾಂಗ್ಲಾ 2016ರ ಟಿ20 ವಿಶ್ವಕಪ್​ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆ ಸಂದರ್ಭದಲ್ಲಿ ಭಾರತ 1 ರನ್‌ ಮೂಲಕ ರೋಚಕ ಜಯ ದಾಖಲಿಸಿತ್ತು. ಮೂರು ವರ್ಷಗಳ ಹಿಂದೆ ಉಭಯ ದೇಶಗಳು ದ್ವಿಪಕ್ಷೀಯ ಸರಣಿಯನ್ನೂ ಆಡಿದ್ದವು.

ಲಯ ಕಂಡುಕೊಳ್ಳುವರೇ ರಾಹುಲ್?: ಭಾರತ ಕಳೆದ ಮೂರು ಪಂದ್ಯದಲ್ಲಿ ಉತ್ತಮ ಆರಂಭವನ್ನು ಕಂಡಿಲ್ಲ. ಕೆ ಎಲ್​ ರಾಹುಲ್​ ಸತತವಾಗಿ ನಿರಾಶೆ ಮೂಡಿಸಿದ್ದಾರೆ. ಮೊದಲ ಪಂದ್ಯದಲ್ಲಿ 4 ಮತ್ತು ಬಾಕಿ ಎರಡರಲ್ಲಿ 9, 9 ರನ್​ ಗಳಿಸಿ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಇಂದು ದಿನೇಶ್ ಕಾರ್ತಿಕ್‌ ಆಡುತ್ತಾರಾ?: ಭಾನುವಾರ ಹರಿಣಗಳ ನಡುವಣ ಪಂದ್ಯದಲ್ಲಿ ದಿನೇಶ್​ ಕಾರ್ತಿಕ್​ ಬೆನ್ನು ನೋವಿಗೆ ತುತ್ತಾಗಿದ್ದರು. ಪಂತ್​ ಕೀಪಿಂಗ್​ ಗ್ಲೌಸ್​ ತೊಟ್ಟು ವಿಕೆಟ್​ ಹಿಂದೆ ಐದಾರು ಓವರ್​ ಆಡಿದ್ದರು. ಈ ಬಗ್ಗೆ ಕೋಚ್​ ರಾಹುಲ್​ ದ್ರಾವಿಡ್​ ನಿನ್ನೆ ಹೇಳಿಕೆ ನೀಡಿದ್ದು ವೈದ್ಯರ ಸಲಹೆ ಮೇರೆಗೆ ಕಣಕ್ಕಿಳಿಯುತ್ತಾರೆ ಎಂದಿದ್ದಾರೆ. ಆದರೂ ಡಿಕೆ ಮೈದಾನಕ್ಕಿಳಿಯುವ ಬಗ್ಗ ಸಂದೇಹಗಳಿವೆ.

ಪಂತ್​ಗೆ ಅವಕಾಶ ಸಾಧ್ಯತೆ: ರಿಷಭ್ ಪಂತ್​ ಕೀಪರ್​ ಜೊತೆಗೆ ಆರಂಭಿಕ ಆಟಗಾರರಾಗಿಯೂ ತಂಡದಲ್ಲಿ ಗುರುತಾಗಿದ್ದಾರೆ. ರಾಹುಲ್​ರ ವೈಫಲ್ಯಕ್ಕೆ ಬದಲಿ ಆಟಗಾರರಾಗಿ ಪಂತ್​ ಕ್ರೀಡಾಂಗಣಕ್ಕೆ ಇಳಿಯಲಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಶೈನ್​ ಆಗಬೇಕಿದೆ ದೀಪಕ್ ಹೂಡಾ: ದೀಪಕ್​ ಹೂಡಾ ಮೇಲೆ ಹೊಡಿಬಡಿ ಆಟದ ನಿರೀಕ್ಷೆ ಇದ್ದು ಹೆಚ್ಚಿನ ಒತ್ತಡವೂ ಇದೆ. ತಂಡ ವಿಕೆಟ್​ ಕಳೆದುಕೊಂಡಾಗ ಭಾರತ ಈಗ ವಿರಾಟ್​, ಸೂರ್ಯ ಮತ್ತು ಹಾರ್ದಿಕ್‌ರನ್ನು ನೆಚ್ಚಿಕೊಂಡಂತಿದೆ. ಹಾಗೆಯೇ ಹೂಡಾರನ್ನು ನಾಯಕ ಆಲ್​ರೌಂಡ್​ ಪ್ರದರ್ಶನಕ್ಕೆ ಇಳಿಸುವ ಅಗತ್ಯವೂ ಇದೆ. ಬ್ಯಾಟಿಂಗ್​ನಲ್ಲಿ ಸಿಗದ ಚಾರ್ಮ್​ ಬೌಲಿಂಗ್​ನಲ್ಲಿ ಹುಡುಕಬೇಕು.

ವಿರಾಟ್​, ಸೂರ್ಯ ಮತ್ತು ಹಾರ್ದಿಕ್​ ಬಲ: ಭಾರತ ತಂಡದ ಬಲ ಸದ್ಯ ವಿರಾಟ್​, ಸೂರ್ಯ ಮತ್ತು ಹಾರ್ದಿಕ್​ ಪಾಂಡ್ಯಾ ಆಟದ ಮೇಲೆ ನಿಂತಿದೆ. ಈ ಆಧಾರದ ಜತೆಗೆ ಎಲ್ಲರ ಸಾಂಘಿಕ ಪ್ರದರ್ಶನದ ಅಗತ್ಯ ತಂಡಕ್ಕಿದೆ. ನಾಯಕ ರೋಹಿತ್​ ನಿರಂತರತೆ ಕಾಪಾಡಿಕೊಳ್ಳಬೇಕಿದೆ.

ಬೌಲಿಂಗ್ ಪ್ರದರ್ಶನ ಹೇಗಿದೆ?: ವೇಗ ಮತ್ತು ಸ್ಪಿನ್ ವಿಭಾಗ ತಮ್ಮ ಆಟವನ್ನು ಉತ್ತಮವಾಗಿ ಪ್ರದರ್ಶಿಸುತ್ತಿದೆ. ಭುವನೇಶ್ವರ್​ ಮತ್ತು ಶಮಿ ಜೋಡಿ ಮಾರಕ ಸ್ಪೆಲ್ ಮಾಡುತ್ತಿದ್ದು, ಹಾರ್ದಿಕ್​ ಕೂಡ ಉತ್ತಮ ಸಾಥ್​ ನೀಡುತ್ತಿದ್ದಾರೆ. ಸ್ಪಿನ್​ ವಿಭಾಗದಲ್ಲಿ ಅಶ್ವಿನ್​ಗೆ ಇಂದು ದೀಪಕ್​ ಬೆಂಬಲ ಸಿಗುವ ಸಾಧ್ಯತೆ ಕಾಣುತ್ತಿದೆ.

ಬಾಂಗ್ಲಾ​ ಟೀಂ ಕಡೆಗಣಿಸುವಂತಿಲ್ಲ: ಜಿಂಬಾಬ್ವೆ ಮತ್ತು ನೆದರ್ಲ್ಯಾಂಡ್ಸ್ ಮೇಲೆ ಬಾಂಗ್ಲಾ ಪ್ರಯಾಸದ ಗೆಲುವು ಕಂಡಿದ್ದರೂ ಆಟಗಾರರನ್ನು ಕಡೆಗಣಿಸುವಂತಿಲ್ಲ. ಆರಂಭಿಕರಾದ ನಜ್ಮುಲ್ ಹುಸೈನ್ ಶಾಂಟೊ ಆಡಿದ ಮೂರು ಪಂದ್ಯದಲ್ಲಿ ನೂರಕ್ಕೂ ಹೆಚ್ಚು ರನ್​ಗಳಿಸಿ ಗಮನ ಸೆಳೆದಿದ್ದಾರೆ. ನಾಯಕ ಶಾಕಿಬ್ ಅಲ್ ಹಸನ್ ಈವರೆಗೆ ಉತ್ತಮ ಪ್ರದರ್ಶನ ನೀಡದಿದ್ದರೂ ಕಡೆಗಣಿಸುವಂತಿಲ್ಲ. ಮುಸ್ತಫಿಜುರ್ ರೆಹಮಾನ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್ ಮತ್ತು ನಾಯಕ ಶಾಕಿಬ್ ಅಲ್ ಹಸನ್ ಬೌಲಿಂಗ್​ ಶಕ್ತಿಯಾಗಿದ್ದಾರೆ.

ವೆಟ್‌ ಪಿಚ್‌: ಅಡಿಲೇಡ್​ನಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ವಾತಾವರಣ ಇರುವ ಕಾರಣ ವೆಟ್​ ಪಿಚ್​ ಇರಲಿದೆ. ವೇಗಿಗಳಿಗೆ ಸಹಕಾರಿಯಾಗಿರುವ ಓವೆಲ್​, ಸರಾಸರಿ 170 ರನ್​ ಗಳಿಕೆಗೆ ಪೂರಕವಾಗಿದೆ.

ಸಂಭಾವ್ಯ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ರಿಷಭ್ ಪಂತ್/ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್

ಸಂಭಾವ್ಯ ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ನೂರುಲ್ ಹಸನ್ (ವಿಕೆಟ್​ ಕೀಪರ್​), ಯಾಸಿರ್ ಅಲಿ, ಮುಸ್ತಫಿಜುರ್ ರೆಹಮಾನ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್

ಸ್ಥಳ: ಆಸ್ಟ್ರೇಲಿಯಾದ ಅಡಿಲೇಡ್​ ಓವೆಲ್​

ಸಮಯ: ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ

ನೇರ ಪ್ರಸಾರ: ಸ್ಟಾರ್​ ಸ್ಪೋರ್ಟ್​

ಇದನ್ನೂ ಓದಿ: ಶುಭ್​ಮನ್​ ಗಿಲ್​ ಭರ್ಜರಿ ಶತಕ.. ಸೈಯದ್​ ಮುಷ್ತಾಕ್​ ಅಲಿ ಟ್ರೋಫಿಯಿಂದ ಕರ್ನಾಟಕ ಔಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.