ETV Bharat / sports

ಗಾಯದಿಂದ ಚೇತರಿಸಿಕೊಳ್ಳದ ಸೂರ್ಯ: ಆಫ್ಘನ್​ ಸರಣಿಯಲ್ಲಿ 'ಸ್ಕೈ' ಆಡುವುದು ಅನುಮಾನ

author img

By ETV Bharat Karnataka Team

Published : Dec 23, 2023, 5:05 PM IST

SuryaKumar Yadav
SuryaKumar Yadav

Surya Kumar Yadav ruled out: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಗಾಯಕ್ಕೆ ತುತ್ತಾದ ಸೂರ್ಯಕುಮಾರ್​ ಯಾದವ್​ ತವರಿನಲ್ಲಿ ನಡೆಯುವ ಆಫ್ಘನ್​ ಸರಣಿಯಿಂದ ಹೊರಗುಳಿಯಲಿದ್ದಾರೆ.

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಏಕದಿನ ವಿಶ್ವಕಪ್​ ಬೆನ್ನಲ್ಲೇ ನಡೆದ ಆಸ್ಟ್ರೇಲಿಯಾ ಸರಣಿ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಾಯಕತ್ವ ವಹಿಸಿಕೊಂಡು ಸರಣಿ ಗೆಲ್ಲಿಸಿದ್ದ ಸೂರ್ಯಕುಮಾರ್​ ಯಾದವ್​ ತವರಿನಲ್ಲಿ ನಡೆಯುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯಗಳಿಗೆ ಅಲಭ್ಯರಾಗಿರಲಿದ್ದಾರೆ ಎಂದು ಹೇಳಲಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಗಾಯಕ್ಕೆ ತುತ್ತಾದ ಅವರು ಚೇತರಿಸಿಕೊಳ್ಳಲು ಸಮಯ ಬೇಕಾಗಿರುವುದರಿಂದ ಆಫ್ಘನ್​ ಸರಣಿಯಿಂದ ಹೊರಗುಳಿಯಲಿದ್ದಾರೆ.

ಡಿಸೆಂಬರ್ 14 ರಂದು ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫೀಲ್ಡಿಂಗ್ ಮಾಡುವಾಗ ಸೂರ್ಯಕುಮಾರ್ ಯಾದವ್ ಅವರು ಎಡ ಪಾದದ ಗಾಯಕ್ಕೆ ತುತ್ತಾಗಿದ್ದರು. ಆರಂಭದಲ್ಲಿ ಗಾಯ ಅಷ್ಟೊಂದು ಗಂಭೀರವಾಗಿರಲಿಲ್ಲ. ಮುಂಬೈಗೆ ಮರಳಿದ ನಂತರ ಸ್ಕ್ಯಾನ್ ಮತ್ತು ಎಂಆರ್​ಐ ಮಾಡಿಸಿದ ಬಳಿಕವೇ ಗ್ರೇಡ್-II ಹಂತದ ಗಾಯಕ್ಕೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.

"ಸೂರ್ಯ ಎಡ ಪಾದದ ಗ್ರೇಡ್-II ಹಂತದ ಗಾಯಕ್ಕೆ ಒಳಗಾಗಿದ್ದಾರೆ. ಜನವರಿ 11 ರಿಂದ ತವರಿನಲ್ಲಿ ಪ್ರಾರಂಭವಾಗುವ ಅಫ್ಘಾನಿಸ್ತಾನ ವಿರುದ್ಧದ ಮುಂದಿನ ಟಿ20 ಸರಣಿಯಲ್ಲಿ ಅವರು ಪಾಲ್ಗೊಳ್ಳುವುದು ಅನುಮಾನ. ಸ್ಕೈ ಈಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿ ಪ್ರಕ್ರಿಯೆಯಲ್ಲಿದ್ದಾರೆ. ಸೂರ್ಯ ತಂಡಕ್ಕೆ ಮರಳಲು 5-6 ವಾರಗಳು ತೆಗೆದುಕೊಳ್ಳಬಹುದು"ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.

ಇನ್ಸ್ಟಾ ಪೋಸ್ಟ್​​: ಸೂರ್ಯಕುಮಾರ್ ಅವರ ಪತ್ನಿ ದೇವಿಶಾ ಶೆಟ್ಟಿ ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಸ್ಟೋರಿಯಲ್ಲಿ ನ್ಯೂಮ್ಯಾಟಿಕ್ ವಾಕರ್ ಬೂಟ್ ಧರಿಸಿರುವುದು ಕಂಡುಬಂದಿದೆ. ಹೀಗಾಗಿ ಅವರ ಚೇತರಿಕೆ ಹೆಚ್ಚಿನ ಸಮಯ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಹರಿಣಗಳ ನಾಡಲ್ಲಿ ಸ್ಕೈ ಅಬ್ಬರ: ದಕ್ಷಿಣ ಆಫ್ರಿಕಾ ಪ್ರವಾಸದ ಮೂರು ಟಿ-20 ಪಂದ್ಯದಲ್ಲಿ ಒಂದು ಮಳೆಯಿಂದ ರದ್ದಾದರೆ, ಎರಡನೇ ಪಂದ್ಯದಲ್ಲಿ ಭಾರತ ಮಳೆಯ ಕಾರಣ ಸೋಲನುಭವಿಸಿತ್ತು. ಆದರೂ ದ್ವಿತೀಯ ಪಂದ್ಯದಲ್ಲಿ ಸೂರ್ಯ 36 ಬಾಲ್​ನಲ್ಲಿ 56 ರನ್​ ಗಳಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದರು. ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್​​ ಅವರ ಶತಕದ ನೆರವಿನಿಂದ ತಂಡ ಗೆಲುವು ಸಾಧಿಸಿತ್ತು. ಇದರಿಂದ ಸರಣಿ 1-1ರಿಂದ ಸಮಬಲದಲ್ಲಿ ಅಂತ್ಯವಾಯಿತು.

ಕೊನೆಯ ಅಂತಾರಾಷ್ಟ್ರೀಯ ಸರಣಿ: 2024ರ ಟಿ20 ವಿಶ್ವಕಪ್​​ಗೂ ಮುನ್ನ ಭಾರತ ಆಡುವ ಕೊನೆಯ ಅಂತಾರಾಷ್ಟ್ರೀಯ ಟಿ20 ಸರಣಿ ಇದಾಗಿರಲಿದೆ. ವಿಶ್ವಕಪ್​ಗೂ ಮುನ್ನ ತಂಡವನ್ನು ಸಿದ್ಧ ಪಡಿಸಲು ಬಿಸಿಸಿಐಗೆ ಕೊನೆಯ ಮೂರು ಪಂದ್ಯಗಳು ಮಾತ್ರ ಇದೆ. ಇದರಲ್ಲೂ ಹೊಸಬರಿಗೆ ಮಣೆ ಹಾಕಿ ಹಿರಿಯ ಆಟಗಾರರನ್ನು ಕೈಬಿಡಲಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಪ್ರವಾಸ: ಗಾಯಕ್ವಾಡ್ ಬದಲಿಯಾಗಿ ಅಭಿಮನ್ಯು ಈಶ್ವರನ್​ಗೆ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.