ETV Bharat / sports

ಲಂಕಾ ಟೆಸ್ಟ್​ ತಂಡಕ್ಕೆ ಧನಂಜಯ್​ ಡಿ ಸಿಲ್ವಾ ನಾಯಕ: ಮೂರು ಮಾದರಿಗೂ ಪ್ರತ್ಯೇಕ ನಾಯಕರ ಆಯ್ಕೆ

author img

By ETV Bharat Karnataka Team

Published : Jan 4, 2024, 6:07 PM IST

ಲಂಕಾ ಟೆಸ್ಟ್​ ತಂಡ
ಲಂಕಾ ಟೆಸ್ಟ್​ ತಂಡ

ಲಂಕಾ ಕ್ರಿಕೆಟ್​ ಮಂಡಳಿ ತಂಡವನ್ನು ಕಟ್ಟಲು ವಿಭಿನ್ನ ನಿಲುವು ತಳೆದಿದೆ. ಮೂರು ಮಾದರಿಗೂ ಪ್ರತ್ಯೇಕ ನಾಯಕರನ್ನು ಆಯ್ಕೆ ಮಾಡಿದೆ. ಟೆಸ್ಟ್​ ತಂಡಕ್ಕೆ ಧನಂಜಯ್​ ಡಿ ಸಿಲ್ವಾರನ್ನು ಕ್ಯಾಪ್ಟನ್​ ಆಗಿ ಆಯ್ಕೆ ಮಾಡಿದೆ.

ಕೊಲಂಬೊ(ಶ್ರೀಲಂಕಾ): ಸತತ ವೈಫಲ್ಯದಿಂದ ಟೀಕೆಗೆ ಗುರಿಯಾಗಿರುವ ಶ್ರೀಲಂಕಾ ತಂಡಕ್ಕೆ ಹೊಸ ನಾಯಕರ ನೇಮಕ ಮಾಡಲಾಗಿದೆ. ಮೂರು ಮಾದರಿಯ ಕ್ರಿಕೆಟ್​​ಗೆ ಪ್ರತ್ಯೇಕ ನಾಯಕರನ್ನು ಆಯ್ಕೆ ಮಾಡಲಾಗಿದೆ. ಟೆಸ್ಟ್​ ತಂಡಕ್ಕೆ ಬ್ಯಾಟರ್​ ಧನಂಜಯ್​ ಡಿ ಸಿಲ್ವಾ, ಏಕದಿನಕ್ಕೆ ಕುಸಾಲ್​ ಮೆಂಡಿಸ್​, ಟಿ20 ಮಾದರಿಗೆ ವನಿಂದು ಹಸರಂಗ ನಾಯಕರಾಗಿ ಇರಲಿದ್ದಾರೆ ಎಂದು ಆಯ್ಕೆ ಸಮಿತಿಯ ನೂತನ ಅಧ್ಯಕ್ಷ ಉಪುಲ್​ ತರಂಗ ಘೋಷಿಸಿದ್ದಾರೆ.

ಭಾರತದಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಲಂಕಾ ತಂಡದ ಕಳಪೆ ಪ್ರದರ್ಶನದಿಂದಾಗಿ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದು, ಪಾಯಿಂಟ್​ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿತ್ತು. ಹೀಗಾಗಿ ಫೀಲ್ಡಿಂಗ್, ಬ್ಯಾಟಿಂಗ್​, ಬೌಲಿಂಗ್​ನಲ್ಲಿ ತಂಡವನ್ನು ಮರುರಚಿಸಬೇಕಿದೆ ಎಂದು ಲಂಕಾ ಮಂಡಳಿ ಹೇಳಿದೆ.

ತಂಡ ಕಟ್ಟಲು ಪ್ರತ್ಯೇಕ ನಾಯಕತ್ವ: ಶ್ರೀಲಂಕಾ ಟೆಸ್ಟ್ ಕ್ರಿಕೆಟ್ ತಂಡದ ಹೊಸ ನಾಯಕನಾಗಿ ಧನಂಜಯ ಡಿ ಸಿಲ್ವಾ ಅವರನ್ನು ನೇಮಕ ಮಾಡಲಾಗಿದೆ. ಮೂರು ಸ್ವರೂಪಗಳಿಗೆ ಪ್ರತ್ಯೇಕ ನಾಯಕರ ಆಯ್ಕೆ ಮೊದಲು ಇರಲಿಲ್ಲ. ಆದರೆ, ಬ್ಯಾಟಿಂಗ್​, ಬೌಲಿಂಗ್​ ವಿಭಾಗವನ್ನು ಬಲಪಡಿಸಿ, ತಂಡವನ್ನು ಕಟ್ಟಲು ಪ್ರತ್ಯೇಕ ನಾಯಕರನ್ನು ಆಯ್ಕೆ ಮಾಡಲಾಗಿದೆ. ಏಕದಿನಕ್ಕೆ ಕುಸಾಲ್ ಮೆಂಡಿಸ್ ಮತ್ತು ವನಿಂದು ಹಸರಂಗ ಟಿ20 ಸ್ವರೂಪಕ್ಕೆ ನಾಯಕರಾಗಿ ಇರಲಿದ್ದಾರೆ. ಹಸರಂಗವನ್ನು ದೀರ್ಘಾವಧಿಯ ಆಯ್ಕೆಯಾಗಿ ಪರಿಗಣಿಸಲಾಗಿದೆ ಎಂದು ಉಪುಲ್​ ತರಂಗ ಹೇಳಿದರು.

ಮಾಜಿ ನಾಯಕ ದಿಮುತ್ ಕರುಣರತ್ನೆ 30 ಟೆಸ್ಟ್‌ಗಳಲ್ಲಿ ಲಂಕಾ ತಂಡವನ್ನು ಮುನ್ನಡೆಸಿದ್ದು, 12ರಲ್ಲಿ ಗೆಲುವು, 12ರಲ್ಲಿ ಸೋಲು, ಆರು ಡ್ರಾ ಸಾಧಿಸಿದ್ದಾರೆ. 2019 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲುವು ತಂದುಕೊಟ್ಟಿದ್ದರು. ಹರಿಣಗಳ ನಾಡಿನಲ್ಲಿ ಸರಣಿ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕುಸಾಲ್​ ಮೆಂಡಿಸ್​ ಬಗ್ಗೆ ಚರ್ಚೆ: ಏಕದಿನ ತಂಡದ ನಾಯಕ ಕುಸಾಲ್​ ಮೆಂಡಿಸ್​ ಅನುಚಿತ ವರ್ತನೆಯ ಬಗ್ಗೆ ದೂರು ಬಂದಿದ್ದು, ಅದನ್ನು ನಮ್ಮ ಸಮಿತಿಯು ಗಂಭೀರವಾಗಿ ಪರಿಗಣಿಸಿದೆ. ಆದಾಗ್ಯೂ ಅವರನ್ನು ನಾಯಕರನ್ನಾಗಿ ಮುಂದುವರಿಸಲಾಗಿದೆ. ಎಸ್​ಎಸ್​ಸಿ ಸಮಿತಿಗೆ ಇನ್ನೂ ವರದಿ ಬಂದಿಲ್ಲ. ಬಳಿಕ ಅದರ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡಲಾಗುವುದು ಎಂದರು.

ಏಕದಿನ ವಿಶ್ವಕಪ್‌ ವೇಳೆ ನಾಯಕ ದಸುನ್​ ಶನಕ ಗಾಯಗೊಂಡಿದ್ದರು. ಹೀಗಾಗಿ ಮೆಂಡಿಸ್​ಗೆ ನಾಯಕತ್ವ ಪಟ್ಟ ಕಟ್ಟಲಾಗಿತ್ತು. ಬ್ಯಾಟಿಂಗ್​ನಲ್ಲೂ ಕಳಪೆ ಪ್ರದರ್ಶನ ತೋರಿದ್ದರು. ತಂಡದೊಂದಿಗೆ ಹೊಂದಾಣಿಕೆಗೆ ಇನ್ನಷ್ಟು ಅವಕಾಶ ನೀಡಬೇಕಾಗಿದೆ ಎಂದು ಉಪುಲ್​ ತರಂಗ ಹೇಳಿದರು.

ಇದನ್ನೂ ಓದಿ: ಹರಿಣಗಳ ನಾಯಕನಿಗೆ ಅಪ್ಪುಗೆಯ ವಿದಾಯ ಹೇಳಿದ ವಿರಾಟ್​: ಅಭಿಮಾನಿಗಳ ಮನಗೆದ್ದ ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.