ETV Bharat / sports

Rahul Dravid: ಮಹತ್ವದ ಟೂರ್ನಿಗೂ ಮುನ್ನ ಪ್ರಯೋಗ ಅನಿವಾರ್ಯ- ರಾಹುಲ್​ ದ್ರಾವಿಡ್​​

author img

By

Published : Jul 30, 2023, 12:59 PM IST

Rahul Dravid
Rahul Dravid

Dravid defends experiments in team selection: ವೆಸ್ಟ್​ ಇಂಡೀಸ್​ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅನುಭವಿಗಳಿಗೆ ವಿಶ್ರಾಂತಿ ನೀಡಿ ತಂಡದಲ್ಲಿ ಪ್ರಯೋಗ ಮಾಡಿರುವುದನ್ನು ಕೋಚ್​ ರಾಹುಲ್​ ಸಮರ್ಥಿಸಿಕೊಂಡಿದ್ದಾರೆ.

ಬಾರ್ಬಡೋಸ್ (ವೆಸ್ಟ್​​ ಇಂಡೀಸ್​​): ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​ಗೆ ಇನ್ನು ಕೆಲವೇ ತಿಂಗಳುಗಳಷ್ಟೇ ಬಾಕಿ. ಈ ನಡುವೆ ಟೀಂ​​ ಇಂಡಿಯಾ ಬೆರಳೆಣಿಕೆಯ ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದೆ. ಭಾರತದ ಬಲಿಷ್ಠ ಆಡುವ 11ರ ಬಳಗ ಇನ್ನೂ ನಿರ್ಧಾರವಾಗಿಲ್ಲ. ಆರಂಭಿಕರಿಂದ ಹಿಡಿದು ಬೌಲರ್​​ಗಳವರೆಗೆ ಪ್ರಯೋಗಗಳು ನಡೆಯುತ್ತಲೇ ಇವೆ. ಕೋಚ್​ ರಾಹುಲ್​ ದ್ರಾವಿಡ್​,​​ ವೆಸ್ಟ್​​ ಇಂಡೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿ ಯುವ ಪಡೆಯನ್ನು ಮೈದಾನಕ್ಕಿಳಿಸಿದ್ದರು. ಆದರೆ ಈ ಪ್ರಯೋಗ ಯಶಸ್ಸು ಕಾಣಲಿಲ್ಲ.

ನಾಯಕ ರೋಹಿತ್​ ಶರ್ಮಾ ಮತ್ತು ಅನುಭವಿ ಸ್ಟಾರ್​ ಆಟಗಾರ ವಿರಾಟ್​​ ಕೊಹ್ಲಿಗೆ ವಿಶ್ರಾಂತಿ ನೀಡಿ ಉಪನಾಯಕ ಹಾರ್ದಿಕ್​ ಪಾಂಡ್ಯರನ್ನು ಕ್ಯಾಪ್ಟನ್​ ಮಾಡಲಾಯಿತು. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಭಾರತ ಕಿಶನ್​​ ಮತ್ತು ಗಿಲ್​​​ರಿಂದ ಉತ್ತಮ ಆರಂಭ ಕಂಡಿತು. ಆದರೆ, ನಂತರ ಸತತ ಬ್ಯಾಟಿಂಗ್​ ವೈಫಲ್ಯದಿಂದ 40.5 ಓವರ್​​ನಲ್ಲಿ 181 ರನ್​ಗಳಿಗೆ ಸರ್ವಪತನ ಕಂಡಿತು. ಈ ಗುರಿಯನ್ನು ವೆಸ್ಟ್​​ ಇಂಡೀಸ್​ ತಂಡ ಅತ್ಯಂತ ನಿರಾಯಾಸವಾಗಿ ಬೆನ್ನಟ್ಟಿತು. 6 ವಿಕೆಟ್​ಗಳನ್ನು ಉಳಿಸಿಕೊಂಡೇ ತಂಡ ಜಯಭೇರಿ ಭಾರಿಸಿದ್ದಲ್ಲದೇ ಸರಣಿ ಸಮಬಲ ಸಾಧಿಸಿತು.

ಪಂದ್ಯದ ಸೋಲಿನ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಮ್ಯಾನೇಜ್‌ಮೆಂಟ್ ನಿರ್ಧಾರ ತೀವ್ರ ಟೀಕೆಗೆ ಗುರಿಯಾಗಿದೆ. ಆದರೆ ಟೀಂ​ ಇಂಡಿಯಾದಲ್ಲಿ ಮಾಡಿರುವ ಈ ಪ್ರಯೋಗವನ್ನು ರಾಹುಲ್​ ದ್ರಾವಿಡ್​​​ ಸಮರ್ಥಿಸಿಕೊಂಡಿದ್ದಾರೆ. ಏಷ್ಯಾ ಕಪ್​ ಮತ್ತು ವಿಶ್ವಕಪ್​ಗೆ ಮುನ್ನ ತಂಡದಲ್ಲಿ ಪ್ರಯೋಗ ಮಾಡಲು ಈ ಸರಣಿ ಒಂದೇ ಅವಕಾಶ ಎಂದಿದ್ದಾರೆ.

"ನಾವು ಪ್ರತಿ ಪಂದ್ಯ ಮತ್ತು ಪ್ರತಿ ಸರಣಿಯಲ್ಲಿ ದೊಡ್ಡ ಪಂದ್ಯಗಳನ್ನು ನೋಡಲು ಇಚ್ಛಿಸುತ್ತೇವೆ. ಆದರೆ ಅದು ಎಲ್ಲ ಸಮಯದಲ್ಲೂ ಆಗಲು ಸಾಧ್ಯವಿಲ್ಲ. ಏಷ್ಯಾ ಕಪ್​ ಮತ್ತು ವಿಶ್ವಕಪ್​​ಗೆ ಮುನ್ನ ಪ್ರಯೋಗ ನಡೆಸಲು ಕೆಲವು ಪಂದ್ಯಗಳು ಮಾತ್ರ ನಮ್ಮ ಮುಂದಿವೆ. ಹೀಗಿರುವಾಗ ರೋಹಿತ್​ ಮತ್ತು ವಿರಾಟ್​ ಬಿಟ್ಟು ಯುವಕರಿಗೆ ಜವಾಬ್ದಾರಿ ನೀಡಿ ಆಡಿಸಿದ್ದೇವೆ" ಎಂದು​​ ಹೇಳಿದ್ದಾರೆ.

"ನಾವು ಇತರರ ಅಭಿಪ್ರಾಯಗಳ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಇಂದು ಮೈದಾನದಲ್ಲಿ ಆಡಿರುವವರು ನಮ್ಮ ದೇಶದ ಪ್ರತಿಭಾವಂತ ಹುಡುಗರು. ಅವರೆಲ್ಲರೂ ಉತ್ತಮ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದಾರೆ. ಅವಕಾಶ ಸಿಕ್ಕಾಗ ಸದುಪಯೋಗ ಮಾಡಿಕೊಳ್ಳುವುದು ಅವರಿಗೆ ಬಿಟ್ಟದ್ದು. ಈ ಬಗ್ಗೆ ಸ್ವಲ್ಪ ನಿರಾಶೆಯಾಗಿದೆ. ಇದು ಒಂದು ಟ್ರಿಕ್ಕಿ ವಿಕೆಟ್ ಮತ್ತು ಬ್ಯಾಟ್ ಮಾಡಲು ಸುಲಭವಾದ ವಿಕೆಟ್ ಅಲ್ಲ ಎಂದು ಮೊದಲೇ ತಿಳಿದಿತ್ತು. ಹೀಗಾಗಿ ನಾವು ಹೇಗಾದರೂ 230-240ರ ಗುರಿ ನೀಡುವ ಲೆಕ್ಕಾಚಾರ ಹಾಕಿಕೊಂಡಿದ್ದೆವು. ಮಧ್ಯಮ ಕ್ರಮಾಂಕದ ವಿಕೆಟ್​​ ನಷ್ಟದಿಂದ 50-60 ರನ್​ ಕಡಿಮೆಯಾಗಿದೆ. ಇದು ಸೋಲಿಗೆ ಕಾರಣವಾಯಿತು" ಎಂದು ಬ್ಯಾಟಿಂಗ್​ ವೈಫಲ್ಯವನ್ನು ವಿವರಿಸಿದರು.

ಇದನ್ನೂ ಓದಿ: West Indies vs India, 2nd ODI: ಭಾರತ 'ಟಿ20 ತಂಡ'ದ ವಿರುದ್ಧ ವಿಂಡೀಸ್​ಗೆ 6 ವಿಕೆಟ್​ಗಳ ಗೆಲುವು; ಸರಣಿ 1-1ರಲ್ಲಿ ಸಮಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.