ETV Bharat / sports

CSK vs KKR: ಚೆನ್ನೈ ಮಣಿಸಿದ ಕೆಕೆಆರ್... ರಾಣಾ, ರಿಂಕು ಆಟಕ್ಕೆ ಒಲಿದ ಗೆಲುವು

author img

By

Published : May 14, 2023, 7:30 PM IST

Updated : May 15, 2023, 6:23 AM IST

Etv Bharat
Etv Bharat

ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಚೆನ್ನೈ ತಂಡವನ್ನು ಮಣಿಸಿದ ಕೋಲ್ಕತ್ತಾ ನೈಟ್​ ರೈಡರ್ಸ್ ಪ್ಲೇ ಆಫ್​ ಆಸೆ ಇನ್ನೂ ಜೀವಂತವಾಗಿದೆ.

ಚೆನ್ನೈ (ತಮಿಳುನಾಡು): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಯಕ ನಿತೀಶ್ ರಾಣಾ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್​ ರಿಂಕು ಸಿಂಗ್ ಆಕರ್ಷಕ ಅರ್ಧಶತಕಗಳ ನೆರವಿ​ನಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವು ಆರು ವಿಕೆಟ್​ಗಳ ಜಯ ದಾಖಲಿಸಿದೆ. ಸಿಎಸ್​ಕೆ ನೀಡಿದ್ದ 145 ರನ್​ಗಳ ಸಾಧಾರಣ ಗುರಿಯನ್ನು 18.3 ಓವರ್​ಗಳಲ್ಲೇ ತಲುಪಿದ ಕೆಕೆಆರ್​ ಗೆಲುವಿನ ನಗೆ ಬೀರಿದೆ.

ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 144 ರನ್ ಪೇರಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ್ದ ಕೋಲ್ಕತ್ತಾ ತಂಡ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ರಿಂಕು ಸಿಂಗ್ ಹಾಗೂ ನಾಯಕ ನಿತೀಶ್ ರಾಣಾ ಹೋರಾಟದಿಂದ ಗೆದ್ದು ಬೀಗಿತು.

ಸುಲಭದ ಟಾರ್ಗೆಟ್ ಪಡೆದಿದ್ದ ಕೆಕೆಆರ್​ ಪರ ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಜ್ ಕೇವಲ ಒಂದು ರನ್​ ಗಳಿಸಿ ಪೆವಿಲಿಯನ್​ಗೆ ಸೇರಿಕೊಂಡರು. ಇದಾದ ಸ್ವಲ್ಪ ಹೊತ್ತಲ್ಲೇ 9 ರನ್ ಸಿಡಿಸಿದ್ದ ವೆಂಕಟೇಶ್ ಅಯ್ಯರ್ ಸಹ ನಿರ್ಗಮಿಸಿದರು. ಕೆಕೆಆರ್ ತಂಡ ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಜೇಸನ್ ರಾಯ್ ಕೂಡ ಕೇವಲ 12 ರನ್​ಗೆ ವಿಕೆಟ್​ ಒಪ್ಪಿಸಿದರು. ಈ ಮೂಲಕ ಕೋಲ್ಕತ್ತಾ ತಂಡ 4.3 ಓವರ್​ಗಳಲ್ಲಿ 33 ರನ್​ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆದರೆ, ಈ ಸಮಯದಲ್ಲಿ ಒಂದಾದ ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ನಾಲ್ಕನೇ ವಿಕೆಟ್​ಗೆ 99 ರನ್​ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನತ್ತ ಸಾಗಿಸಿದರು. ಅಲ್ಲದೇ, ರಿಂಕು ಸಿಂಗ್ ಹಾಗೂ ನಿತೀಶ್ ರಾಣಾ ಅರ್ಧಶತಕ ಸಿಡಿಸಿ ಮಿಂಚಿದರು. ಅಂತಿಮ 18 ಎಸೆತದಲ್ಲಿ ಕೆಕೆಆರ್ ಗೆಲುವಿಗೆ 13 ರನ್ ಅಗತ್ಯವಿತ್ತು.

ಈ ವೇಳೆ ಅನಗತ್ಯ ರನ್ ಕದಿಯಲು ಯತ್ನಿಸಿದ ರಿಂಕು ಸಿಂಗ್ ರನೌಟ್‌ಗೆ ಬಲಿಯಾದರು. 43 ಎಸೆತಗಳನ್ನು ಎದುರಿಸಿದ ರಿಂಕು ಸಿಂಗ್ ಮೂರು ಸಿಕ್ಸರ್​ ಮತ್ತು ನಾಲ್ಕು ಬೌಂಡರಿ ಸಮೇತ 54 ರನ್ ಬಾರಿಸಿದರು. ಮತ್ತೊಂದೆಡೆ, ನಿತೀಶ್ ರಾಣಾ 44 ಎಸೆತಗಳಲ್ಲಿ ಒಂದು ಸಿಕ್ಸರ್​ ಮತ್ತು ಆರು ಬೌಂಡರಿಗಳೊಂದಿಗೆ ಅಜೇಯ 57 ರನ್​ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿದರು. ಆ್ಯಂಡ್ರೆ ರಸೆಲ್ ಅಜೇಯ 2 ರನ್​ ಗಳಿಸಿದರು. ಅಂತಿಮವಾಗಿ ಕೆಕೆಆರ್​​ 18.3 ಎಸೆತದಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. ಇದರಿಂದ ಕೋಲ್ಕತ್ತಾ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಇದಕ್ಕೂ ಮುನ್ನ ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ಅವರ ಜೊತೆಯಾಟದ ನೆರವಿನಿಂದ ಚೆನ್ನೈ 144 ರನ್​ ಕಲೆ ಹಾಕಿತ್ತು. ಸಿಎಸ್​ಕೆಗೆ ನಿರೀಕ್ಷಿತ ಆರಂಭ ದೊರೆಯಲಿಲ್ಲ. ರುತುರಾಜ್ ಗಾಯಕ್ವಾಡ್ 17 ರನ್​ಗೆ ವಿಕೆಟ್​ ಒಪ್ಪಿಸಿದರೆ, ನಂತರ ಬಂದ ಅಜಿಂಕ್ಯಾ ರಹಾನೆ 16 ರನ್​ಗೆ ಔಟಾದರು. ಇದರ ಬೆನ್ನಲ್ಲೇ 30 ರನ್​ ಗಳಿಸಿದ್ದ ಡೆವೊನ್ ಕಾನ್ವೇ ಕೂಡ ಪೆವಿಲಿಯನ್​ ಸೇರಿದರು. ಅಂಬಾಟಿ ರಾಯುಡು 4 ರನ್​ ಮತ್ತು ಆಲ್​ರೌಂಡರ್​ ಮೋಯಿನ್ ಅಲಿ 1 ರನ್​ಗೆ​ ನಿರ್ಗಮಿಸಿದರು.

ಕೊನೆಯಲ್ಲಿ ರವೀಂದ್ರ ಜಡೇಜಾ ಹಾಗೂ ಶಿವಂ ದುಬೆ ತಂಡಕ್ಕೆ ಆಸರೆಯಾದರು. ಈ ಜೋಡಿ ಆರನೇ ವಿಕೆಟ್​ಗೆ 68 ರನ್​ಗಳ ಜೊತೆಯಾಟ ನೀಡಿತು. 20 ರನ್​ ಗಳಿಸಿದ್ದ ಜಡೇಜಾ ಕೊನೆಯ ಓವರ್​ನಲ್ಲಿ ಔಟಾದರು. ಅಜೇಯ ಆಟ ಆಡಿದ ಶಿವಂ ದುಬೆ ಮೂರು ಸಿಕ್ಸರ್​ ಮತ್ತು ಒಂದು ಬೌಂಡರಿ ಸಮೇತ ಅಜೇಯ 48 ರನ್​ ಗಳಿಸಿದರು. ನಾಯಕ ಧೋನಿ ಮೂರು ಬಾಲ್​ ಎದುರಿಸಿ ಎರಡು ರನ್​ ಕಲೆಹಾಕಿದ್ದರು. ಕೆಕೆಆರ್​ ಪರ ನರೈನ್​ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್​ ಪಡೆದರೆ, ಶಾರ್ದೂಲ್ ಠಾಕೂರ್, ವೈಭವ್ ಅರೋರಾ ತಲಾ ಒಂದು ವಿಕೆಟ್​ ಕಬಳಿಸಿದ್ದರು.

ಇದನ್ನೂ ಓದಿ: ನೋ ಬಾಲ್​ ಗೊಂದಲ: ಹೈದರಾಬಾದ್​ ಅಭಿಮಾನಿಗಳಿಂದ ಲಕ್ನೋ ಮೇಲೆ ನಟ್ ಬೋಲ್ಟ್ ದಾಳಿ

Last Updated :May 15, 2023, 6:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.