ETV Bharat / sports

'ಕೆಟ್ಟ ಅಂಪೈರಿಂಗ್​ಗೆ ಸಜ್ಜಾಗಿಯೇ ಮುಂದಿನ ದಿನಗಳಲ್ಲಿ ಬಾಂಗ್ಲಾಕ್ಕೆ ಬರ್ತೀವಿ': ಅಂಪೈರಿಂಗ್​ ವಿರುದ್ಧ ನಾಯಕಿ ಹರ್ಮನ್​ಪ್ರೀತ್​ ಕೌರ್​ ಕಿಡಿನುಡಿ

author img

By

Published : Jul 23, 2023, 7:09 AM IST

ಅಂಪೈರಿಂಗ್​ ವಿರುದ್ಧ ನಾಯಕಿ ಹರ್ಮನ್​ಪ್ರೀತ್​ ಕೌರ್​ ಕಿಡಿ
ಅಂಪೈರಿಂಗ್​ ವಿರುದ್ಧ ನಾಯಕಿ ಹರ್ಮನ್​ಪ್ರೀತ್​ ಕೌರ್​ ಕಿಡಿ

ಬಾಂಗ್ಲಾದೇಶ-ಭಾರತ ಮಹಿಳೆಯರ ತಂಡಗಳ ನಡುವಿನ ಮೂರನೇ, ಕೊನೆಯ ಏಕದಿನ ಪಂದ್ಯ ಟೈ ಆಗಿದೆ. ಪಂದ್ಯದಲ್ಲಿ ಕೆಟ್ಟ ಅಂಪೈರಿಂಗ್​ ಆರೋಪ ಕೇಳಿ ಬಂದಿದೆ. ನಾಯಕಿ ಹರ್ಮನ್​ಪ್ರೀತ್​​ ಕೌರ್​, ಉಪನಾಯಕಿ ಸ್ಮೃತಿ ಮಂಧಾನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀರ್‌ಪುರ್: ಬಾಂಗ್ಲಾದೇಶ-ಭಾರತ ಮಹಿಳೆಯರ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಅಂಪೈರಿಂಗ್ ವಿರುದ್ಧ ಟೀಕೆ ಕೇಳಿ ಬಂದಿದೆ. ಮೈದಾನದ ಅಂಪೈರ್​ಗಳ ಎಡವಟ್ಟಿಗೆ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​, ಉಪನಾಯಕಿ ಸ್ಮೃತಿ ಮಂಧಾನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇನ್ನು ಮುಂದಿನ ಸರಣಿಯಲ್ಲಿ ತಾವು ಇದಕ್ಕೆಲ್ಲ ಮಾನಸಿಕವಾಗಿ ಸಜ್ಜಾಗಿಯೇ ಬರುತ್ತೇವೆ" ಎಂದು ಗರಂ ಆಗಿದ್ದಾರೆ.

ಮೀರ್​ಪುರ್​​ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲುವ ಹಂತದಲ್ಲಿದ್ದ ಭಾರತ ಮಹಿಳೆಯರು ಕೊನೆಯಲ್ಲಿ ಮಾಡಿಕೊಂಡ ಪ್ರಮಾದದಿಂದಾಗಿ ಪಂದ್ಯ ಟೈ ಆಗಿ, ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮಬಲವಾಯಿತು. ಇದಕ್ಕೆಲ್ಲ ಮೈದಾನದ ಅಂಪೈರ್​ಗಳು ಮಾಡಿದ ತಪ್ಪು ನಿರ್ಧಾರಗಳು ಕಾರಣವಾಗಿವೆ. ಇದು ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​, ಉಪನಾಯಕಿ ಸ್ಮೃತಿ ಮಂಧಾನ ಅವರನ್ನು ಕೆರಳಿಸಿದ್ದು, ಕೆಟ್ಟ ಅಂಪೈರಿಂಗ್​ ವಿರುದ್ಧ ಕಿಡಿಕಾರಿದ್ದಾರೆ.

ಮೊದಲು ಬ್ಯಾಟ್​ ಮಾಡಿದ ಬಾಂಗ್ಲಾದೇಶ 49.3 ಓವರ್​ಗಳಲ್ಲಿ 225 ರನ್‌ಗಳಿಗೆ ಆಲೌಟ್ ಆಯಿತು. ಇದು ಭಾರತದ ವಿರುದ್ಧ ಗಳಿಸಿದ ಅತ್ಯಧಿಕ ಮೊತ್ತ. ಇದಕ್ಕೆ ಪ್ರತಿಯಾಗಿ ಭಾರತ ವನಿತೆಯರು 225 ರನ್​ಗಳಿಸಿದರು. ಇದರಿಂದ ಪಂದ್ಯ ಟೈ ಆಯಿತು. 4 ವಿಕೆಟ್​ಗೆ 191 ಗಳಿಸಿದ್ದ ಭಾರತ ಕೊನೆಯ 34 ರನ್​ ಗಳಿಸುವಷ್ಟರಲ್ಲಿ ದಿಢೀರ್​ ಕುಸಿತ ಕಂಡು 6 ವಿಕೆಟ್​ ಕಳೆದುಕೊಂಡಿತು. ಸ್ಮೃತಿ ಮಂಧಾನ 59, ಹರ್ಲಿನ್​ ಡಿಯೋಲ್​ 77, ಜೆಮಿಮಾ ರೋಡ್ರಿಗಸ್​​ 33 ರನ್​ ಗಳಿಸಿದಾಗ್ಯೂ ಪಂದ್ಯ ಗೆಲ್ಲಲಾಗಲಿಲ್ಲ.

ಅಂಪೈರಿಂಗ್​ ವಿರುದ್ಧ ಆಕ್ರೋಶ: ಪಂದ್ಯದ ಬಳಿಕ ಪ್ರಶಸ್ತಿ ಪ್ರದಾನ ವೇದಿಕೆ ಮೇಲೆಯೇ ಅಂಪೈರಿಂಗ್​ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಾಯಕಿ ಹರ್ಮನ್​ಪ್ರೀತ್​ ಕೌರ್​, "ನಮ್ಮ ಈ ಪ್ರದರ್ಶನದಿಂದ ಸಾಕಷ್ಟು ಕಲಿಯುವ ಅಗತ್ಯವಿದೆ ಎಂದೆನಿಸುತ್ತದೆ. ಕ್ರಿಕೆಟ್‌ನ ಹೊರತಾಗಿ ಅಂಪೈರಿಂಗ್‌ ನನಗೆ ತುಂಬಾ ಆಶ್ಚರ್ಯ ತಂದಿದೆ. ಇದೊಂದು ಕೆಟ್ಟ ಅಂಪೈರಿಂಗ್​" ಎಂದು ಟೀಕಿಸಿದರು.

"ಮುಂದಿನ ಬಾರಿ ಬಾಂಗ್ಲಾದೇಶ ಪ್ರವಾಸಕ್ಕೆ ಬಂದಾಗ ಈ ರೀತಿಯ ಅಂಪೈರಿಂಗ್‌ಗೆ ಸಜ್ಜಾಗಿರುತ್ತೇವೆ. ಅದಕ್ಕೆ ತಕ್ಕಂತೆ ನಮ್ಮನ್ನು ಸಿದ್ಧಪಡಿಸಿಕೊಳ್ಳುತ್ತೇವೆ" ಎಂದು ಫೀಲ್ಡ್‌ ಅಂಪೈರ್‌ಗಳಾಗಿದ್ದ ಮೊಹಮ್ಮದ್ ಕಮ್ರುಜ್ಜಮಾನ್ ಮತ್ತು ತನ್ವಿರ್ ಅಹ್ಮದ್ ಅವರ ವಿರುದ್ಧ ಟೀಕಾಪ್ರಹಾರ ಮಾಡಿದರು.

"ಅಂಪೈರ್‌ಗಳು ನೀಡಿದ ಕೆಲವು ನಿರ್ಧಾರಗಳ ಬಗ್ಗೆ ನಿಜಕ್ಕೂ ನಿರಾಶೆಯಾಗಿದೆ. ಬಾಂಗ್ಲಾದೇಶ ಉತ್ತಮವಾಗಿ ಬ್ಯಾಟ್​​ ಮಾಡಿತು. ನಾವು ಕೂಡ ಪ್ರತ್ಯುತ್ತರ ನೀಡುತ್ತಿದ್ದೆವು. ಆದರೆ, ಪಂದ್ಯ ಫಲಿತಾಂಶ ಕಾಣದಿಲು ಅತಿ ಕೆಟ್ಟ ಅಂಪೈರಿಂಗ್​ ಕಾರಣ" ಎಂದರು.

ಕೋಪದಲ್ಲಿ ವಿಕೆಟ್‌ಗೆ ಬ್ಯಾಟ್‌ನಿಂದ ಹೊಡೆದ ಕೌರ್​: ಪಂದ್ಯದ ವೇಳೆ ತಮ್ಮ ಔಟ್​ನಿಂದ ಕೋಪಗೊಂಡ ನಾಯಕಿ ಕೌರ್​ ವಿಕೆಟ್​ಗೆ ಬ್ಯಾಟ್​ನಿಂದ ಹೊಡೆದು ಅಸಮಾಧಾನ ಹೊರಹಾಕಿದರು. ಎಲ್​ಬಿ ಬಲೆಗೆ ಬೀಳುವ ಮೊದಲು ಚೆಂಡು ಬ್ಯಾಟ್​ಗೆ ತಾಗಿತ್ತು. ಆದರೆ, ಫೀಲ್ಡ್​ ಅಂಪೈರ್​ ಔಟ್​ ನೀಡಿದ್ದರು. ಇದು ನಾಯಕಿಗೆ ಕೋಪ ತರಿಸಿತ್ತು. ಪಂದ್ಯದಲ್ಲಿ ಡಿಆರ್​ಎಸ್​ ನಿಯಮ ಅಳವಡಿಸಿರಲಿಲ್ಲ.

ಸ್ಮೃತಿ ಮಂಧಾನ ಅಸಮಾಧಾನ: ಕಳಪೆ ಅಂಪೈರಿಂಗ್​ ವಿಚಾರ ಕುರಿತು ಮಾತನಾಡಿರುವ ಉಪನಾಯಕಿ ಸ್ಮೃತಿ ಮಂಧಾನ, "ನಾವು ಉತ್ತಮ ಮಟ್ಟದ ಅಂಪೈರಿಂಗ್​ ಬಯಸುತ್ತೇವೆ. ಅಂಪೈರ್​ ತೀರ್ಪು ನೀಡುವಾಗ ಕ್ಷಣಕಾಲ ಯೋಚಿಸಬೇಕು. ಚೆಂಡು ಎಲ್​ಬಿ ಬಲೆಗೆ ಆಗಿದೆಯೇ ಇಲ್ಲವೇ ಎಂಬುದನ್ನೂ ಯೋಚಿಸದೇ ಔಟ್​ ನೀಡುವುದು ಸರಿಯಲ್ಲ" ಎಂದು ಕೌರ್​ ಔಟ್​ ತೀರ್ಪು ಪ್ರಶ್ನಿಸಿದರು.

"ಪಂದ್ಯದಲ್ಲಿ ಅಂಪೈರ್​ಗಳು ತಟಸ್ಥರಾಗಿರಬೇಕು. ಪಂದ್ಯದಲ್ಲಿನ ಅಂಪೈರಿಂಗ್​ ಬಗ್ಗೆ ಐಸಿಸಿ, ಬಿಸಿಬಿ ಮತ್ತು ಬಿಸಿಸಿಐ ಖಂಡಿತವಾಗಿಯೂ ಚರ್ಚೆ ನಡೆಸುತ್ತವೆ" ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತ & ಬಾಂಗ್ಲಾದೇಶ ಮಹಿಳೆಯರ ನಡುವೆ ಕೊನೆಯ ಏಕದಿನ ಪಂದ್ಯ ಡ್ರಾ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.