ETV Bharat / sports

ರಣಜಿ ಟ್ರೋಫಿ ಫೈನಲ್​-4ನೇ ದಿನ: ಸಂಕಷ್ಟದಲ್ಲಿ ಮುಂಬೈ.. ಮಧ್ಯಪ್ರದೇಶಕ್ಕೆ 'ಮುನ್ನಡೆ' ಚಾಂಪಿಯನ್​ ಗುರಿ

author img

By

Published : Jun 25, 2022, 8:19 PM IST

ಸಂಕಷ್ಟದಲ್ಲಿ ಮುಂಬೈ..ಮಧ್ಯಪ್ರದೇಶಕ್ಕೆ 'ಮುನ್ನಡೆ' ಚಾಂಪಿಯನ್​ ಗುರಿ
ಸಂಕಷ್ಟದಲ್ಲಿ ಮುಂಬೈ..ಮಧ್ಯಪ್ರದೇಶಕ್ಕೆ 'ಮುನ್ನಡೆ' ಚಾಂಪಿಯನ್​ ಗುರಿ

ಮಧ್ಯಪ್ರದೇಶ ತಂಡ ಬಲಿಷ್ಠ ಮುಂಬೈಯನ್ನು ಸೋಲಿಸಿ ರಣಜಿ ಟ್ರೋಪಿ ಎತ್ತಿ ಹಿಡಿಯುವ ಅಂಚಿನಲ್ಲಿದೆ. ನಾಳೆ ಕೊನೆಯ ದಿನದಾಟ ಬಾಕಿ ಉಳಿದಿದ್ದು, ಪಂದ್ಯ ಡ್ರಾದಲ್ಲಿ ಅಂತ್ಯ ಕಂಡರೂ ಮಧ್ಯಪ್ರದೇಶ ಮುನ್ನಡೆ ಆಧಾರದ ಮೇಲೆ ಚಾಂಪಿಯನ್​ ಆಗಲಿದೆ.

ಬೆಂಗಳೂರು: 23 ವರ್ಷಗಳ ಬಳಿಕ ರಣಜಿ ಟ್ರೋಫಿ ಫೈನಲ್​ ಪ್ರವೇಶಿಸಿರುವ ಮಧ್ಯಪ್ರದೇಶ 41 ಬಾರಿಯ ಚಾಂಪಿಯನ್​ ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿ ಟ್ರೋಫಿ ಎತ್ತಿ ಹಿಡಿಯಲು ಇನ್ನೊಂದೇ ದಿನ ಬಾಕಿಯಿದೆ. ಕಾರಣ ಮಧ್ಯಪ್ರದೇಶ ತಂಡ ಇನಿಂಗ್ಸ್ ಮುನ್ನಡೆ ಪಡೆದಿದ್ದು, ನಾಳೆಯ ಕೊನೆಯ ದಿನದಾಟದಲ್ಲಿ ಪಂದ್ಯ ಡ್ರಾ ಆದರೂ, ಟ್ರೋಫಿ ಮಧ್ಯಪ್ರದೇಶದ ವಶವಾಗಲಿದೆ.

ಇನ್ನು ಇಂದಿನ 4ನೇ ದಿನದಾಟದ ಮೂರನೇ ಅವಧಿಯಲ್ಲಿ 2ನೇ ಇನಿಂಗ್ಸ್​ ಆರಂಭಿಸಿರುವ ಮುಂಬೈ ತಂಡ 2 ವಿಕೆಟ್​ ಕಳೆದುಕೊಂಡಿದ್ದು 113 ರನ್​ ಗಳಿಸಿದ್ದು, 49 ರನ್​ಗಳಷ್ಟು ಹಿಂದಿದೆ. ಅಲ್ಲದೇ, ಬೃಹತ್ ಮೊತ್ತವನ್ನು ದಾಖಲಿಸಿ ಮಧ್ಯಪ್ರದೇಶಕ್ಕೆ 2ನೇ ಇನಿಂಗ್ಸ್​ ಆಡಲು ಆಹ್ವಾನ ನೀಡಬೇಕಿದೆ.

ರೋಚಕತೆಯತ್ತ ಸಾಗುತ್ತಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್​ ಪಂದ್ಯದ 3ನೇ ದಿನದಾಟದಲ್ಲಿ ಯಶ್​ ದುಬೆ ಮತ್ತು ಶುಭಂ ಶರ್ಮಾ ಅವರ ಶತಕ ಬಲದಿಂದ ಮುಂಬೈ ವಿರುದ್ಧ ಪಾರಮ್ಯ ಮೆರೆದಿದ್ದ ಮಧ್ಯಪ್ರದೇಶ, ನಾಲ್ಕನೇ ದಿನದಾಟದಲ್ಲೂ ಮೇಲುಗೈ ಸಾಧಿಸಿತು.

ರಜತ್​ ಪಾಟೀದಾರ್​ ಶತಕ: ಐಪಿಎಲ್​ನಲ್ಲಿ ಬೆಂಗಳೂರು ರಾಯಲ್​ ಚಾಲೆಂಜರ್ಸ್​ ಪರ ಮಿಂಚಿದ್ದ ರಜತ್​ ಪಾಟೀದಾರ್​ ಇಂದು ಶತಕ ಸಾಧನೆ ಮಾಡಿದರು. 122 ರನ್​ ಗಳಿಸಿದ ಪಾಟೀದಾರ್​ ಮುನ್ನಡೆಯನ್ನು ಇನ್ನಷ್ಟು ಹಿಗ್ಗಿಸಿದರು. ಬೌಲಿಂಗ್​ನಲ್ಲಿ 2 ವಿಕೆಟ್​ ಪಡೆದು ಮಿಂಚಿದ್ದ ಸರನ್​ಶಾ ಜೈನ್​ (57ರನ್​) ಬ್ಯಾಟಿಂಗ್​ನಲ್ಲೂ ಮಿಂಚಿ ಅರ್ಧಶತಕ ಸಿಡಿಸಿದರು.

ನಾಯಕ ಆದಿತ್ಯ ಶ್ರೀವಾಸ್ತವ್​​ 25 ರನ್​ ಗಳಿಸಿ ಔಟಾದರು. ಉಳಿದ ಆಟಗಾರರು ಬೃಹತ್​ ಮೊತ್ತ ಪೇರಿಸುವಲ್ಲಿ ವಿಫಲವಾದ ಕಾರಣ ಮಧ್ಯಪ್ರದೇಶ 536 ರನ್​ಗಳಿಗೆ ಔಟಾಗಿ 162 ರನ್​ಗಳ ಮುನ್ನಡೆ ಪಡೆಯಿತು.

ಆರಂಭಿಕ ಹಿನ್ನಡೆ: ದಿನದಾಟದ ಮೂರನೇ ಅವಧಿಯಲ್ಲಿ 2ನೇ ಇನಿಂಗ್ಸ್ ಆರಂಭಿಸಿದ ಮುಂಬೈ ಬಿರುಸಿನ ಆರಂಭ ಪಡೆದರೂ ನಾಯಕ ಪೃಥ್ವಿ ಶಾ ಮತ್ತು ಹಾರ್ದಿಕ್​ ತಮೋರೆ ಅವರ ವಿಕೆಟ್​ ಕಳೆದುಕೊಂಡಿದ್ದು ಆರಂಭಿಕ ಹಿನ್ನಡೆಗೆ ಸಿಲುಕಿದೆ. ಬಿರುಸಿನ 2 ಸಿಕ್ಸರ್​, 3 ಬೌಂಡರಿಗಳ ಸಮೇತ 44 ರನ್​ ಬಾರಿಸಿದ್ದ ಪೃಥ್ವಿ ಶಾ ಬೃಹತ್​ ಮೊತ್ತದ ಭರವಸೆ ಮೂಡಿಸಿದ್ದರು. ಆದರೆ, ಗೌರವ್​ ಯಾದವ್​ ಎಸೆತದಲ್ಲಿ ಯಶ್​ ದುಬೆಗೆ ಕ್ಯಾಚ್​ ನೀಡಿ ನಿರ್ಗಮಿಸಿದರು.

20 ರನ್​ಗಳ ಅಂತರದಲ್ಲಿ ಇನ್ನೊಬ್ಬ ಆರಂಭಿಕ ಹಾರ್ದಿಕ್​ ತಮೋರೆ 25 ರನ್​ಗಳಿಗೆ ಔಟಾದರು. 30 ರನ್​ ಗಳಿಸಿರುವ ಅರ್ಮಾನ್​ ಜಾಫರ್​, ಸುವೇದ್​ ಪಾರ್ಕರ್​ (9) ನಾಳೆಗೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಇನ್ನು ಮಧ್ಯಪ್ರದೇಶದ ಪರ ಕುಮಾರ್​ ಕಾರ್ತಿಕೇಯ, ಗೌರವ್​ ಯಾದವ್​ ತಲಾ 1 ವಿಕೆಟ್​ ಪಡೆದರು.

ಮಧ್ಯಪ್ರದೇಶಕ್ಕೆ 'ಮುನ್ನಡೆ' ಟ್ರೋಫಿ?: ಇನ್ನು ರಣಜಿ ನಿಯಾಮನುಸಾರದ ಪ್ರಕಾರ ಮುನ್ನಡೆ ಪಡೆದ ತಂಡ ಚಾಂಪಿಯನ್​ ಆಗಲಿದೆ. ಹೀಗಾಗಿ ಪಂದ್ಯದಲ್ಲಿ 158 ರನ್​ಗಳ ಮುನ್ನಡೆ ಪಡೆದಿರುವ ಮಧ್ಯಪ್ರದೇಶ ಟ್ರೋಫಿ ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿದೆ. ಮುಂಬೈ ಈಗಾಗಲೇ 2 ವಿಕೆಟ್​ ಕಳೆದುಕೊಂಡಿದ್ದು, ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಮೂಲಕವೂ ಟ್ರೋಫಿ ಗೆಲ್ಲಬಹುದು.

ನಾಳೆಯ ಕೊನೆಯ ದಿನದಾಟದಲ್ಲಿ ಮುಂಬೈ ಕೂಡ ಅರ್ಧದಿನದಲ್ಲಿ ಬಿರುಸಿನ ಬ್ಯಾಟ್​ ಮಾಡಿ ಮಧ್ಯಪ್ರದೇಶವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿ ಎಲ್ಲ 10 ವಿಕೆಟ್​ ಉರುಳಿಸಿ ಚಾಂಪಿಯನ್​ ಆಗುವ ಅವಕಾಶವೂ ಹೊಂದಿದೆ.

ಓದಿ; 1983ರ ವಿಶ್ವಕಪ್ ವಿಜಯೋತ್ಸವಕ್ಕೆ 39 ವರ್ಷಗಳು: ಇಡೀ ದೇಶಕ್ಕೆ ಯಾವತ್ತೂ ಅಳಿಸಲಾರದ ಇತಿಹಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.